Advertisement

ಹುಡುಗರ ಆಸೆ ತಡೆಯೋರಿಲ್ಲ! ಭವಿಷ್ಯವಷ್ಟೇ ಅಲ್ಲ, ವರ್ತಮಾನವೂ ಮುಖ್ಯ

12:52 PM Jul 19, 2018 | Sharanya Alva |

ಸಿನಿಮಾನೇ ಹಾಗೆ. ಇಲ್ಲಿ ವಯಸ್ಸಿನ ಅಂತರವಿರುವುದಿಲ್ಲ. ಇಲ್ಲೇನಿದ್ದರೂ ಉತ್ಸಾಹ, ಪ್ರತಿಭೆ ಮಾತ್ರ ವರ್ಕೌಟ್ ಆಗೋದು. ಆಗಾಗ ಕನ್ನಡದಲ್ಲಿ ಹೊಸಬರೆಲ್ಲ ಸೇರಿ ಹೊಸದೊಂದು ಪ್ರಯೋಗಕ್ಕೆ ಕೈ ಹಾಕುತ್ತಲೇ ಇರುತ್ತಾರೆ. ಈಗ ಇಲ್ಲೊಂದು ಹೊಸಬರ ತಂಡ ಸೇರಿಕೊಂಡು “ಕಾಲವನ್ನು ತಡೆಯೋರು ಯಾರು ಇಲ್ಲ’ ಎಂಬ ಹೆಸರಿನ ಚಿತ್ರಕ್ಕೆ ಕೈ ಹಾಕಿದೆ. ವಿಶೇಷವೆಂದರೆ, ಇಲ್ಲಿ ನಿರ್ದೇಶಕ, ನಾಯಕ, ನಿರ್ಮಾಪಕ ಎಲ್ಲರೂ ಇಪ್ಪತ್ತ ವರ್ಷ ವಯಸ್ಸಿನ ಒಳಗಿನವರು ಅನ್ನೋದು. ಇವರೆಲ್ಲರಿಗೂ ಸಿನಿಮಾ ಮೇಲೆ ಪ್ರೀತಿ ಮತ್ತು ಆಸಕ್ತಿ. ಅದೇ ಕಾರಣಕ್ಕೆ ಅವರೆಲ್ಲಾ ಸೇರಿ ಚಿತ್ರ ಮಾಡೋಕೆ ಅಣಿಯಾಗಿದ್ದಾರೆ.

Advertisement

ಶೀರ್ಷಿಕೆ ಕೇಳಿದಾಗ, “ಕಿಟ್ಟು-ಪುಟ್ಟು’ ಚಿತ್ರದ ಸೂಪರ್‌ಹಿಟ್‌ ಸಾಂಗ್‌ ನೆನಪಾಗುತ್ತೆ. ಅದೇ ಶೀರ್ಷಿಕೆ ಇಟ್ಟು ಮಾಡುತ್ತಿರುವ ಚಿತ್ರ ಕೂಡ ಗೆಲ್ಲುತ್ತೆ ಎಂಬ ವಿಶ್ವಾಸ ಈ ಹೊಸ ತಂಡದ್ದು. ಅಂದಹಾಗೆ, ಈ ಚಿತ್ರಕ್ಕೆ ಸಲ್ಮಾನ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಅಲ್ತಾಫ್ ಹೀರೋ ಕಮ್‌ ನಿರ್ಮಾಪಕ. ಅವರ ಚಿಕ್ಕಪ್ಪ ವನ್ನೂರ್‌ ಅಲಿ ಕೂಡ ನಿರ್ಮಾಣದಲ್ಲಿ ಸಾಥ್‌ ಕೊಡುತ್ತಿದ್ದಾರೆ. ಎಂಜಿನಿಯರಿಂಗ್‌ ಓದುತ್ತಿರುವ ಅಮೃತ ನಾಯರ್‌ ನಾಯಕಿಯಾಗಿ ನಟಿಸುತ್ತಿದ್ದಾರೆ. ಇನ್ನು, ಕಿರುತೆರೆ ನಟಿ ಶ್ರೀನಿಧಿ ಅವರಿಗಿಲ್ಲಿ ಮುಖ್ಯಪಾತ್ರವಿದೆ. ಪತ್ರಕರ್ತ ಮಂಜುನಾಥ್‌ ಖಳನಟರಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

ಈಗಿನ ಕಾಲದ ಬಗ್ಗೆ ಹೆಚ್ಚು ಗಮನಿಸದೇ ಇದ್ದರೆ, ಭವಿಷ್ಯದಲ್ಲಿ ಏನೆಲ್ಲಾ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಎಂಬ ಕಥೆ ಇಲ್ಲಿದೆ. ತಾಯಿ-ಮಗನ ಭಾವನಾತ್ಮಕ ಸಂಬಂಧಗಳೂ ಇಲ್ಲಿವೆ. ಎಂಜಿನಿಯರಿಂಗ್‌ ಕಾಲೇಜ್‌ ಕ್ಯಾಂಪಸ್‌ನಲ್ಲಿ ಚಿತ್ರದ ಮೊದಲ ಹಂತ ಶುರುವಾಗಲಿದೆ. ಕೊಡಗು, ಬೆಂಗಳೂರು ಮತ್ತು ಗಂಗಾವತಿ ಭಾಗದಲ್ಲಿ ಚಿತ್ರೀಕರಣ ನಡೆಯಲಿದೆ. ಚಿತ್ರಕ್ಕೆ ಕಾರ್ತಿಕ್‌ ವೆಂಕಟ್‌ ಸಂಗೀತವಿದೆ. ಅಪ್ಪು ವೆಂಕಟೇಶ್‌ ಸಾಹಸವಿದೆ. ಚಿತ್ರದ ಮುಹೂರ್ತ ನಡೆದಿದ್ದು, ಸಂಚಾರಿ ವಿಜಯ್‌ ಮೊದಲ ದೃಶ್ಯಕ್ಕೆ ಕ್ಲಾಪ್‌ ಮಾಡಿ ಶುಭ ಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next