Advertisement

ಯುವಕನ ಕೊಲೆ ಪ್ರಕರಣ: ಇಬ್ಬರ ಬಂಧನ

12:08 PM May 28, 2022 | Team Udayavani |

ವಾಡಿ: ಅನ್ಯ ಕೋಮಿನ ಯುವತಿಯೊಬ್ಬಳನ್ನು ಪ್ರೀತಿಸಿದ ಕಾರಣಕ್ಕೆ ಕಳೆದ ಬುಧವಾರ ವಿಜಯ ಕಾಂಬಳೆ ಎನ್ನುವ ಯುವಕನ ಕೊಲೆ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಶುಕ್ರವಾರ ಬಂಧಿಸಿದ್ದಾರೆ.

Advertisement

19 ವರ್ಷದ ಮಹ್ಮದ್‌ ಶಾಹಾಬುದ್ದಿನ್‌ ಹಾಗೂ ಮಹ್ಮದ ನವಾಜ್‌ ಬಂಧಿತ ಆರೋಪಿಗಳಾಗಿದ್ದಾರೆ. ವಿಜಯ ಕಾಂಬಳೆ ದಲಿತ ಯುವಕನಾಗಿದ್ದು, ಈತನ ಕತ್ತನ್ನು ಆರೋಪಿಗಳು ಕೊಯ್ದು ತಲೆಮರೆಸಿಕೊಂಡಿದ್ದರು.

ವಿಜಯ ಕಾಂಬಳೆ ಆರೋಪಿ ಶಾಬುದ್ದಿನ್‌ನ ಸಹೋದರಿಯನ್ನು ಕಳೆದ ಎರಡು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ. ಹಲವು ಬಾರಿ ಈತನಿಗೆ ತಿಳಿ ಹೇಳಿದರೂ ಪ್ರೀತಿ ಮಾಡುವುದನ್ನು ನಿಲ್ಲಿಸಿರಲಿಲ್ಲ. ಪರಿಣಾಮ ವಾಡಿ ಪಟ್ಟಣದ ರೈಲ್ವೆ ನಿಲ್ದಾಣ ಬಳಿ ವಿಜಯನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಆರೋಪಿಗಳು ಕೊಲೆ ಮಾಡಿದ್ದರು. ಕೊಲೆ ಮಾಡಿದ ನಂತರ ಕಲಬುರಗಿಯಲ್ಲಿ ತಲೆ ಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಮಾಡಿದ ಪೊಲೀಸರು, ಇಬ್ಬರನ್ನು ಬಂಧಿದ್ದಾರೆ. ವಾಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಿಯಾಂಕ್ಖರ್ಗೆ ಸಾಂತ್ವನ

ಹತ್ಯೆಗೀಡಾದ ಯುವಕನ ಮನೆಗೆ ಶುಕ್ರವಾರ ಭೇಟಿ ನೀಡಿದ ಶಾಸಕ ಪ್ರಿಯಾಂಕ್‌ ಖರ್ಗೆ, ಮೃತನ ತಾಯಿಗೆ ಸಾಂತ್ವನ ಹೇಳಿದರು. ಸಮಾಜ ಕಲ್ಯಾಣ ಇಲಾಖೆಯಿಂದ ಈಗಾಗಲೇ 4ಲಕ್ಷ ರೂ. ಪರಿಹಾರ ವಿತರಿಲಾಗಿದೆ. ಹತ್ಯೆಗೀಡಾದ ಯುವಕ ತನ್ನ ಕುಟುಂಬದಲ್ಲಿ ದುಡಿಯುವ ಏಕೈಕ ವ್ಯಕ್ತಿಯಾಗಿದ್ದ. ಇಬ್ಬರು ಸಹೋದರಿಯರು ಹಾಗೂ ತಾಯಿಯ ಜವಾಬ್ದಾರಿ ಹೊತ್ತಿದ್ದ ಎನ್ನುವ ವಿಷಯ ಅರಿತು ಶಾಸಕರು ಮರುಗಿದರು.

Advertisement

ಕಾಂಬಳೆ ತಾಯಿಯನ್ನು ಸಮಾಧಾನಪಡಿಸಿದ ಶಾಸಕರು, ಈ ಘಟನೆ ನಡೆಯಬಾರದಾಗಿತ್ತು. ಇದರಿಂದ ತಮಗೂ ನೋವಾಗಿದೆ. ಹತ್ಯೆಗೆ ಕಾರಣರಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು. ಕುಟುಂಬ ವರ್ಗದವರಿಗೆ ವಾಸಿಸಲು ಮನೆ ಹಾಗೂ ಸರ್ಕಾರಿ ಸೌಲಭ್ಯ ಒದಗಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.

ಮೃತನ ತಾಯಿಗೆ ಚೆಕ್

ಕೊಲೆಯಾದ ಯುವಕ ವಿಜಯ ಕಾಂಬಳೆ ಮನೆಗೆ ಭೇಟಿ ನೀಡಿದ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿನಾಥ ಅವರು 4.11ಲಕ್ಷ ರೂ. ಮೊತ್ತದ ಚೆಕ್‌ನ್ನು ಮೃತನ ತಾಯಿಗೆ ವಿತರಿಸಿದರು. ಇನ್ನುಳಿದ ಎರಡನೇ ಕಂತಿನ ಹಣವನ್ನು ಚಾರ್ಜ್‌ ಸೀಟ್‌ ಸಲ್ಲಿಸಿದ ನಂತರ ವಿತರಣೆ ಮಾಡಲಾಗುವುದು ಎಂದರು.

ಡಿವೈಎಸ್ಪಿ ಬಸವೇಶ್ವರ ಹೀರಾ, ಕ್ರೈಂ ಪಿಎಸ್‌ಐ ಶಿವಕಾಂತ ಕಮಲಾಪುರ, ಎಸ್‌ಸಿ ಹಾಗೂ ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಸಮಿತಿ ಸದಸ್ಯ ಮಲ್ಲಪ್ಪಾ ಹೊಸಮನಿ, ವಕೀಲ ಶ್ರವಣಕುಮಾರ ಮೊಸಲಗಿ, ಮುಖಂಡರಾದ ಇಂದ್ರಜಿತ್‌ ಸಿಂಗೆ, ಸೂರ್ಯ ಕಾಂತ ರದ್ದೇವಾಡಗಿ, ಶರಣಬಸು ಸಿರೂರಕರ, ವಿಜಯ ಸಿಂಗೆ, ಮಲ್ಲಿಕಾರ್ಜುನ ಕಟ್ಟಿ ಮತ್ತಿತರರು ಇದ್ದರು.

ಆಂದೋಲಾ ಶ್ರೀ ವಾಪಸ್

ಕೊಲೆಯಾದ ಯುವಕನ ಮನೆಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಲು ಪಟ್ಟಣಕ್ಕೆ ಆಗಮಿಸುತ್ತಿದ್ದ ಆಂದೋಲಾ ಶ್ರೀ ಸಿದ್ದಲಿಂಗ ಸ್ವಾಮೀಜಿ ಅವರನ್ನು ಪೊಲೀಸರು ರಾವೂರ ಗ್ರಾಮದಲ್ಲೇ ತಡೆದು ಪ್ರವೇಶ ನಿರಾಕರಿಸಿದರು. ಆಂದೋಲಾ ಶ್ರೀ ನಗರ ಪ್ರವೇಶಿಸುವ ಕುರಿತು ದಲಿತ ಮುಖಂಡ ಶ್ರವಣಕುಮಾರ ಹೊಸದಾಗಿ ಆತಂಕ ವ್ಯಕ್ತಪಡಿಸಿದ್ದರು. ಇದರಿಂದ ಎಚ್ಚೆತ್ತ ವಾಡಿ ಪೊಲೀಸರು ಸ್ವಾಮೀಜಿಯನ್ನು ತಡೆದು ಹೊರ ವಲಯದಿಂದಲೇ ವಾಪಸ್‌ ಕಳಿಸಿದ ಪ್ರಸಂಗ ನಡೆಯಿತು.

ದಲಿತ ಯುವಕ ವಿಜಯ ಕಾಂಬಳೆ ಹತ್ಯೆ ಪೂರ್ವನಿಯೋಜಿತ ಸಂಚಾಗಿದೆ. ಸಾರ್ವಜನಿಕ ಸ್ಥಳದಲ್ಲಿ ಆರೋಪಿಗಳು ನಿರ್ಭಯವಾಗಿ ಬರ್ಬರವಾಗಿ ಕೊಲೆ ಮಾಡಿರುವುದಕ್ಕೆ ಬಾಹ್ಯ ಶಕ್ತಿಗಳ ಬೆಂಬಲವಿದೆ ಎನ್ನುವ ಅನುಮಾನ ವ್ಯಕ್ತವಾಗಿದೆ. ಕೊಲೆ ಹಿಂದೆ ಇರುವ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕು. ನಗರದಲ್ಲಿ ತಲೆ ಎತ್ತಿರುವ ಗೂಂಡಾ ಯುವಕರ ಗುಂಪುಗಳ ವಿಚಾರಣೆ ನಡೆಸಬೇಕು. ಅಮಾಯಕರ ಪ್ರಾಣಕ್ಕೆ ಕುತ್ತಾಗಿರುವ ರೌಡಿ ಪಡೆಗಳ ಹೆಡೆಮುರಿ ಕಟ್ಟಬೇಕು. ಸಮಾಜ ಸೇವೆ ಹೆಸರಿನಲ್ಲಿ ಸಮಾಜದಲ್ಲಿ ಅಶಾಂತಿ ಮೂಡಿಸುತ್ತಿರುವ ಯುವಕ ಸಂಘಗಳನ್ನು ರದ್ದುಪಡಿಸಬೇಕು. ಶ್ರವಣಕುಮಾರ ಮೊಸಲಗಿ. ದಲಿತ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next