ಕಲಬುರಗಿ: ಉರಿ ಬಿಸಿಲಿನಿಂದ ಕಾದ ಕಾವಲಿಯಂತಾಗಿದ್ದ ಸೂರ್ಯ ನಗರಿಗೆ ಶುಕ್ರವಾರ ಭಾರೀ ಗಾಳಿ ಸಹಿತ ಸುರಿದ ಮಳೆ ತಂಪೆರೆಯಿತು. ಮಹಾನಗರ ಸೇರಿದಂತೆ ಹಲವೆಡೆ ಧಾರಾಕಾರ ಮಳೆ ಆಗಿದ್ದರಿಂದ ಬಿಸಿಲಿನ ಧಗೆಗೆ ಬೇಸತ್ತಿದ್ದ ಜನರು ನಿರಾಳರಾದರು.
ಕಳೆದ ನಾಲ್ಕೈದು ದಿನಗಳಿಂದ ರಾಜ್ಯದಲ್ಲೇ ಅತ್ಯಧಿಕ ಉಷ್ಣಾಂಶ ದಾಖಲಾಗಿತ್ತು. ಪ್ರತಿ ದಿನ 42, 43 ಡಿಗ್ರಿ ಸೆಲ್ಸಿಯಸ್ ಬಿಸಿಲಿಗೆ ಜನತೆ ಕಂಗೆಟ್ಟು ಹೋಗಿದ್ದರು. ಅದರಲ್ಲೂ ಕೊರೊನಾ ಸೋಂಕಿನ ಪರಿಣಾಮ ಲಾಕ್ಡೌನ್ ಜಾರಿ ಇರುವುದರಿಂದ ಮನೆಗಳಲ್ಲೇ ಸೇರಿಕೊಂಡಿರುವ ಜನರು ಬಿಸಿಲಿನ ಆರ್ಭಟಕ್ಕೆ ಕಂಗಾಲಾಗಿ ಹೋಗಿದ್ದರು.
ಶುಕ್ರವಾರವೂ ಜಿಲ್ಲೆಯಲ್ಲಿ ಅತ್ಯಧಿಕ ಉಷ್ಣಾಂಶ ದಾಖಲಾಗಿತ್ತು. ಕನಿಷ್ಠ ಉಷ್ಣಾಂಶ 28.1 ಡಿಗ್ರಿ ಸೆಲ್ಸಿಯಸ್ ಇದ್ದರೆ, ಗರಿಷ್ಠ ಉಷ್ಣಾಂಶ 43.1 ಡಿಗ್ರಿ ಸೆಲ್ಸಿಯಸ್ನಷ್ಟು ಇತ್ತು. ಸೆಖೆಯಿಂದ ಜನತೆ ಬಸವಳಿದು ಹೋಗಿದ್ದರು. ಸಂಜೆ 5ಗಂಟೆ ಆಗುತ್ತಿದ್ದಂತೆ ಭಾರಿ ಗಾಳಿ ಬೀಸತೊಡಗಿತ್ತು. ಗಾಳಿಯೊಂದಿಗೆ ಸತತ ಒಂದು ಗಂಟೆ ಸಸತವಾಗಿ ಕಾಲ ಜೋರು ಮಳೆ ಸುರಿಯಿತು. ಕೆಲವೆಡೆ ಆಲ್ಲಿಕಲ್ಲು ಸಹಿತ ಮಳೆಯೂ ಆಯಿತು.
ಬಿಸಿಲಿನ ಧಗೆಯಿಂದ ಬೇಸತ್ತಿದ್ದ ಜನರು ಮಳೆಯಿಂದ ಸಂತಸಗೊಂಡರು. ಮಳೆಯಲ್ಲೂ ವಾಹನಗಳು ಸಹಜವಾಗಿ ಸಂಚರಿಸಿದವು. ಕೆಲವರು ಮಳೆಯಲ್ಲಿ ನೆನೆದು ಆನಂದಿಸಿದರು. ಮಳೆ ಮತ್ತು ಗಾಳಿಗೆ ರಸ್ತೆಯಲ್ಲಿ ಅಡ್ಡಲಾಗಿ ನಿಲ್ಲಿಸಲಾಗಿದ್ದ ಬ್ಯಾರಿಕೇಡ್ಗಳು ಉರುಳಿ ಬಿದ್ದವು. ಹಳೆ ಜೇವರ್ಗಿ ರಸ್ತೆಯ ಕೆಳ ಸೇತುವೆ ಸೇರಿದಂತೆ ಕೆಲ ಸೇತುವೆಗಳಲ್ಲಿ ನೀರು ತುಂಬಿಕೊಂಡು ಕೆಲ ಕಾಲ ವಾಹನ ಸಂಚಾರ ಸ್ಥಗಿತವಾಗಿತ್ತು. ತೆಗ್ಗು ಪ್ರದೇಶಗಳಿಗೆ ಮಳೆ ನೀರು ನುಗ್ಗಿ ಸಾರ್ವಜನಿಕರು ತೊಂದರೆ ಅನುವಿಸುವಂತೆ ಆಯಿತು.