Advertisement

ಸಿದ್ಧರಾಮೇಶ್ವರ ಪಾತ್ರ ಹಿರಿದು: ಪಾಟೀಲ

03:46 PM Jan 15, 2020 | Naveen |

ಕಲಬುರಗಿ: ಸಿದ್ಧರಾಮೇಶ್ವರ ಆಚಾರ-ವಿಚಾರಗಳನ್ನು ಪ್ರತಿಯೊಬ್ಬ ಸಾಮಾನ್ಯ ವ್ಯಕ್ತಿಯೂ ಅಳವಡಿಸಿಕೊಳ್ಳಬೇಕೆಂದು ಮಾಜಿ ಶಾಸಕ ಅಲ್ಲಮಪ್ರಭು ಪಾಟೀಲ ಹೇಳಿದರು.

Advertisement

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾ ನಗರ ಪಾಲಿಕೆಗಳ ಆಶ್ರಯದಲ್ಲಿ ನಗರದ ಎಸ್‌. ಎಂ. ಪಂಡಿತ್‌ ರಂಗಮಂದಿರದಲ್ಲಿ ಏರ್ಪಡಿಸಿದ್ದ ಶಿವಯೋಗಿ ಸಿದ್ಧರಾಮೇಶ್ವರ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.

ಪ್ರತಿಯೊಬ್ಬ ವ್ಯಕ್ತಿಯೂ ಮಹಾನ್‌ ವ್ಯಕ್ತಿಗಳ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸರ್ಕಾರದ ವತಿಯಿಂದ ಭೋವಿ ಜನಾಂಗಕ್ಕೆ ಸಿಗಬೇಕಾದ ಸಕಲ ಸವಲತ್ತುಗಳು ಸರಿಯಾದ ರೀತಿಯಲ್ಲಿ ನೀಡಬೇಕು. ಕೇವಲ ಅಭಿವೃದ್ಧಿ ಕಚೇರಿ ಸ್ಥಾಪಿಸಿದರೆ ಸಾಲದು, ಜನಾಂಗದ ಅಭಿವೃದ್ಧಿಗಾಗಿ ಸರ್ಕಾರದಿಂದ ಹೆಚ್ಚಿನ ಅನುದಾನ ಬಿಡುಗಡೆಯಾಗಬೇಕು. ಆಗಮಾತ್ರ ಭೋವಿ ಸಮಾಜದ ಅಭಿವೃದ್ಧಿಯಾಗಲು ಸಾಧ್ಯ ಎಂದರು.

ಸಮಾಜದ ಕಟ್ಟಕಡೆಯಲ್ಲಿ ಬದುಕುತ್ತಿರುವ ಜನಾಂಗವೆಂದರೆ ಭೋವಿ ಜನಾಂಗವಾಗಿದ್ದು, ಆರ್ಥಿಕ, ಸಾಮಾಜಿಕ, ರಾಜಕೀಯ, ಶೈಕ್ಷಣಿಕವಾಗಿ ಭೋವಿ ಸಮಾಜದ ಸುಧಾರಣೆಯಾಗುವುದು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಗಮನ ನೀಡಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್‌ ಅಧ್ಯಕ್ಷೆ ಸುವರ್ಣಾ ಹಣಮಂತ್‌ ಮಾಲಾಜಿ, ಕಲಬುರಗಿ ಉತ್ತರ ಕ್ಷೇತ್ರದ ಶಾಸಕಿ ಕನೀಜ್‌ ಫಾತಿಮಾ, ಮಾಜಿ ಶಾಸಕ ಅರುಣಾ ಸಿ. ಪಾಟೀಲ, ಪಾಲಿಕೆ ಮಾಜಿ ಸದಸ್ಯ ಅನೀಲ ವಿ. ಜಾಧವ, ಶ್ರೀ ಸಿದ್ಧರಾಮೇಶ್ವರ ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ರಾಮು ಕೆ. ನಂದೂರ, ಸರ್ಕಾರಿ ಹಾಗೂ ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿದ್ರಾಮಪ್ಪ ದಂಡಗೋಲ್ಕರ್‌, ಜಿಲ್ಲಾ ಭೋವಿ ಸಮಾಜದ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಕುಸ್ತಿ ಉಪಸ್ಥಿತರಿದ್ದರು.

Advertisement

ಈ ಸಂದರ್ಭದಲ್ಲಿ ರಾಜ್ಯ ಮಟ್ಟದ ಭಾಷಣ ಸ್ಪರ್ಧೆಯಲ್ಲಿ ವಿಜೇತ ಮತ್ತು ಅನೇಕ ಪ್ರಶಸ್ತಿ ಪಡೆದ ಕು. ಮೇಘನಾ ಎಂ. ಅವರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕೊಟ್ರೇಶ್‌ ಮರಬನಳ್ಳಿ ಸ್ವಾಗತಿಸಿದರು. ಉಪನ್ಯಾಸಕ ಶಿವಾನಂದ ಅಣಜಗಿ ನಿರೂಪಿಸಿದರು.

ಕಾರ್ಯಕ್ರಮ ನಂತರ ಕಲಾ ತಂಡಗಳೊಂದಿಗೆ ಶ್ರೀ ಶಿವಯೋಗಿ ಸಿದ್ಧರಾಮೇಶ್ವರ ಭಾವಚಿತ್ರದ ಭವ್ಯ ಮೆರವಣಿಗೆ ನಡೆಯಿತು. ನಗರದ ಡಾ| ಎಸ್‌.ಎಂ. ಪಂಡಿತ ರಂಗ ಮಂದಿರದಿಂದ ಆರಂಭವಾದ ಮೆರವಣಿಗೆ ಜಗತ್‌ ವೃತ್ತ, ಗೋವಾ ಹೋಟೆಲ್‌, ಕುಂಬಾರ ಗಲ್ಲಿ, ಶಾಸ್ತ್ರಿ ಚೌಕ್‌, ಭಗತಸಿಂಗ್‌ ಚೌಕ್‌ ಮಾರ್ಗವಾಗಿ ಬ್ರಹ್ಮಪುರದ ವಡ್ಡರಗಲ್ಲಿಯಲ್ಲಿರುವ ಶಿವದಾಸ ಮಹಾರಾಜರ ಮಠದ ವರೆಗೆ ಸಂಚರಿಸಿತು.

Advertisement

Udayavani is now on Telegram. Click here to join our channel and stay updated with the latest news.

Next