Advertisement

ಕದ್ರಿ ದೇಗುಲ: ಶಾಶ್ವತ ಭದ್ರತಾ ವ್ಯವಸ್ಥೆಗೆ ನಿರ್ಧಾರ; ಭಯೋತ್ಪಾದಕರ ದಾಳಿ ಬೆದರಿಕೆ ಮಾಹಿತಿ ಹಿನ್ನೆಲೆ

01:08 AM Nov 28, 2022 | Team Udayavani |

ಮಂಗಳೂರು: ಭಯೋತ್ಪಾದಕರು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆ ಎಂಬ ಮಾಹಿತಿಗಳ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಶಾಶ್ವತ ಭದ್ರತಾ ವ್ಯವಸ್ಥೆ ಅಳವಡಿಸಲು ತೀರ್ಮಾನಿಸಲಾಗಿದೆ.

Advertisement

ರವಿವಾರ ದೇಗುಲದಲ್ಲಿ ಶಾಸಕ ವೇದವ್ಯಾಸ ಕಾಮತ್‌ ಅವರ ಅಧ್ಯಕ್ಷತೆಯಲ್ಲಿ ಈ ಕುರಿತು ಸಭೆ ಜರಗಿತು. ಭಕ್ತರಿಗೆ ಒಂದೇ ದ್ವಾರದಲ್ಲಿ ದೇವಳ ಪ್ರವೇಶಕ್ಕೆ ಅವಕಾಶ ನೀಡುವುದು, ಲೋಹ ಪರಿಶೋಧಕ ಯಂತ್ರ, ಬ್ಯಾಗ್‌ಗಳ ಸ್ಕ್ರೀನಿಂಗ್‌ ಯಂತ್ರ ಅಳವಡಿಸುವುದು, ಪಾರ್ಕಿಂಗ್‌ ಸ್ಥಳದಲ್ಲಿಯೂ ಸುರಕ್ಷತೆಗೆ ಪೂರಕ ವ್ಯವಸ್ಥೆ ಮಾಡುವುದು ಮೊದಲಾದವುಗಳ ಬಗ್ಗೆ ಪೊಲೀಸ್‌ ಅಧಿಕಾರಿಗಳು ಸಲಹೆ ನೀಡಿದರು. ಪೊಲೀಸರ ಸಲಹೆಯನ್ನು ಅನುಷ್ಠಾನಗೊಳಿಸುವುದಾಗಿ ದೇವಸ್ಥಾನ ಆಡಳಿತ ಮಂಡಳಿಯವರು ತಿಳಿಸಿದರು.

ಸಭೆಯಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಡಾ| ಎ.ಜೆ.ಶೆಟ್ಟಿ, ದೇವಳದ ಕಾರ್ಯನಿವಾಹಣಾಧಿಕಾರಿ ಪಿ. ಜಯಮ್ಮ, ಟ್ರಸ್ಟಿಗಳು, ಸಾರ್ವಜನಿಕರು ಪಾಲ್ಗೊಂಡಿದ್ದರು.

ದೇಗುಲದ ಭದ್ರತೆ, ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಪೊಲೀಸರು ನೀಡುವ ಸಲಹೆಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ವೇದವ್ಯಾಸ ಕಾಮತ್‌ ತಿಳಿಸಿದ್ದಾರೆ. ಅಲ್ಲದೆ ದೇಗುಲದಲ್ಲಿ ಪೊಲೀಸರು ವಿಶೇಷ ನಿಗಾ ವಹಿಸುತ್ತಿರಬೇಕು. ವಿಶೇಷವಾಗಿ ಸೋಮವಾರ ಮತ್ತು ಶನಿವಾರ ಜನದಟ್ಟಣೆ ಇರುವ ದಿನಗಳಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಬೇಕು. ರಾತ್ರಿ ಕೂಡ ರೌಂಡ್ಸ್‌ ಮಾಡಬೇಕು ಎಂದು ಶಾಸಕ ಕಾಮತ್‌ ಸೂಚನೆ ನೀಡಿದರು.

ಕದ್ರಿ ದಾಳಿ ಉಲ್ಲೇಖಿಸಿದ್ದ ಐಆರ್‌ಸಿ
“ನಮ್ಮ ಮುಜಾಹಿದ್‌ ಸಹೋದರ ಮಹಮ್ಮದ್‌ ಶಾರೀಕ್‌ ಕದ್ರಿ ದೇವಸ್ಥಾನದ ಮೇಲೆ ದಾಳಿ ಮಾಡಲು ಯತ್ನಿಸಿದ್ದ. ಆದರೆ ಅದರಲ್ಲಿ ಯಶಸ್ಸು ಸಾಧ್ಯವಾಗಿಲ್ಲ. ವೈಫ‌ಲ್ಯವಾಗಿರುವುದಕ್ಕೆ ಕೆಲವರು ಸಂಭ್ರಮ ಪಡುತ್ತಿದ್ದು ಇದು ತಾತ್ಕಾಲಿಕವಾದದ್ದು’ ಎಂಬುದಾಗಿ ಮಂಗಳೂರಿನಲ್ಲಿ ನ.19ರಂದು ಕುಕ್ಕರ್‌ ಪ್ರಕರಣಗೊಂಡ ಅನಂತರ “ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌'(ಐಆರ್‌ಸಿ) ಸಾಮಾಜಿಕ ಜಾಲತಾಣಗಳ ಮೂಲಕ ಪ್ರಕಟನೆ ಹೊರಡಿಸಿತ್ತು.

Advertisement

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next