Advertisement

ಕಬ್ಬಿನಾಲೆ –ಕಟ್ಟಿನಾಡಿ ಸೇತುವೆ ಕಾಮಗಾರಿಗೆ ಚಾಲನೆ

11:17 AM Nov 14, 2022 | Team Udayavani |

ಕುಂದಾಪುರ: ಹಳ್ಳಿಹೊಳೆ ಗ್ರಾಮದ ಕಟ್ಟಿನಾಡಿ, ಕಬ್ಬಿನಾಲೆ, ದೇವರಬಾಳಿಗೆ ಸಂಪರ್ಕ ಕಲ್ಪಿ ಸುವ ಬಹು ವರ್ಷಗಳ ಬೇಡಿಕೆಯಾದ ಸೇತುವೆ ಕನಸು ಈಡೇರುವ ಕಾಲ ಸನ್ನಿಹಿತವಾಗಿದೆ. ಉದಯವಾಣಿಯ “ಗ್ರಾಮಭಾರತ’ ಸರಣಿಯಲ್ಲಿ ಪ್ರಕಟಗೊಂಡ ಈ ಸೇತುವೆ ಬೇಡಿಕೆ ಬಗ್ಗೆ ಬೆಳಕು ಚೆಲ್ಲಿದ್ದು, ಈಗ 3.48 ಕೋ.ರೂ. ಅನುದಾನ ಮಂಜೂರಾಗಿ, ಕಾಮಗಾರಿಗೆ ಚಾಲನೆ ಸಹ ಸಿಕ್ಕಿದೆ.

Advertisement

ಹಳ್ಳಿಹೊಳೆ ಗ್ರಾ.ಪಂ. ವ್ಯಾಪ್ತಿಯ ಕಬ್ಬಿನಾಲೆ – ಕಟ್ಟಿನಾಡಿ ಸೇತುವೆ ನಿರ್ಮಾಣಕ್ಕೆ ನಬಾರ್ಡ್‌ ಯೋಜನೆ ಯಡಿ ಸಂಸದ ಬಿ.ವೈ. ರಾಘವೇಂದ್ರ ಹಾಗೂ ಬೈಂದೂರು ಶಾಸಕ ಬಿ.ಎಂ. ಸುಕುಮಾರ್‌ ಶೆಟ್ಟಿ ಮುತುವರ್ಜಿಯಲ್ಲಿ 3.48 ಕೋ.ರೂ. ಮಂಜೂರಾಗಿತ್ತು. ಕಳೆದ ವಾರ ಮುಳ್ಳಿಕಟ್ಟೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಶಿಲಾನ್ಯಾಸಗೈದಿದ್ದು, ಶನಿವಾರ ಸಂಜೆ ಶಾಸಕ ಸುಕುಮಾರ್‌ ಶೆಟ್ಟಿ ಅವರು ಸೇತುವೆ ನಿರ್ಮಾಣ ಜಾಗದಲ್ಲಿ ಭೂಮಿಪೂಜೆಯನ್ನು ನೆರವೇರಿಸಿ, ಕಾಮಗಾರಿಗೆ ಚಾಲನೆ ನೀಡಿದರು.

ಶಾಸಕರಿಗೆ ಮನವಿ

ಇದೇ ವೇಳೆ ಅರಣ್ಯ ಇಲಾಖೆಯಿಂದ ಆಗುತ್ತಿರುವ ತೊಂದರೆಗಳನ್ನು ಗ್ರಾಮಸ್ಥರು ಶಾಸಕರಿಗೆ ತಿಳಿಸಿದರು. ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಕಾರ್ಯಕ್ರಮದಲ್ಲಿ ಪ್ರಸ್ತಾವವಾದ ಬೇಡಿಕೆಗಳು, ಹೊಸ ಅಂಗನವಾಡಿ ಬಗ್ಗೆಯೂ ಮನವಿ ಸಲ್ಲಿಸಲಾಯಿತು. ಇಲ್ಲಿನ ನೆಟ್ವರ್ಕ್ ಸಮಸ್ಯೆ, 94ಸಿ ಸಮಸ್ಯೆ ಈಡೇರಿಕೆ ಆದಷ್ಟು ಬೇಗ ಈಡೇರಿಸುವುದಾಗಿ ಶಾಸಕರು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಬೈಂದೂರು ಬಿಜೆಪಿ ಮಂಡಲದ ಅಧ್ಯಕ್ಷ ದೀಪಕ್‌ ಕುಮಾರ್‌ ಶೆಟ್ಟಿ, ಹಳ್ಳಿಹೊಳೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ ಕೊಠಾರಿ, ಉಪಾಧ್ಯಕ್ಷ ಮಂಜುನಾಥ್‌ ಶೆಟ್ಟಿ, ಸದಸ್ಯರಾದ ನೇತ್ರಾವತಿ ನಾೖಕ್‌, ಸುಜಾತ ಬೋವಿ, ಜಿ.ಪಂ. ಮಾಜಿ ಸದಸ್ಯ ರೋಹಿತ್‌ ಕುಮಾರ್‌ ಶೆಟ್ಟಿ, ಗುತ್ತಿಗೆದಾರ ಗೋಕುಲ್‌ ಶೆಟ್ಟಿ ಉಪ್ಪುಂದ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ದುರ್ಗಾದಾಸ್‌ ಮತ್ತಿತರರು ಉಪಸ್ಥಿತರಿದ್ದರು. ಶಂಕರನಾರಾಯಣ ಚಾತ್ರ ಸ್ವಾಗತಿಸಿ, ರಂಜಿತ್‌ ಕುಲಾಲ್‌ ವಂದಿಸಿದರು.

Advertisement

ಗ್ರಾಮಸ್ಥರಿಂದ ಕೃತಜ್ಞತೆ

ಬಹು ವರುಷದ ಬೇಡಿಕೆ ಈಡೇರಿದ ಸಂತೋಷದಲ್ಲಿ ಈ ಭಾಗದ ನೂರಾರು ಜನರು ಭಾಗವಹಿಸಿ ಅನುದಾನ ಮಂಜೂರುಗಾಗಿ ಶ್ರಮಿಸಿದ ಶಾಸಕರು, ಸಂಸದರು ಹಾಗೂ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಅನೇಕ ವರ್ಷಗಳ ಬೇಡಿಕೆಯಿದ್ದರೂ, ಈಡೇರದೇ ನೆನೆಗುದಿಗೆ ಬಿದ್ದಿದ್ದ ಕಬ್ಬಿನಾಲೆ – ಕಟ್ಟಿನಾಡಿ ಸೇತುವೆ ಬಗ್ಗೆ ಬೆಳಕು ಚೆಲ್ಲಿ, ತ್ವರಿತಗತಿಯಲ್ಲಿ ಕಾಮಗಾರಿಗೆ ಚಾಲನೆ ನೀಡುವಂತೆ ಮಾಡಿದ ಉದಯವಾಣಿ ಪತ್ರಿಕೆಗೆ ಹಳ್ಳಿಹೊಳೆ ಗ್ರಾ.ಪಂ. ಅಧ್ಯಕ್ಷ ಪ್ರದೀಪ್‌ ಕೊಠಾರಿ, ಉಪಾಧ್ಯಕ್ಷ ಮಂಜುನಾಥ್‌ ಶೆಟ್ಟಿ ಅವರು ಗ್ರಾಮಸ್ಥರ ಪರವಾಗಿ ಅಭಿನಂದನೆ ಸಲ್ಲಿಸಿದ್ದಾರೆ.

ಉದಯವಾಣಿ ವರದಿ

ಉದಯವಾಣಿಯು ಕಳೆದ ವರ್ಷದ ಜು. 2 ರಂದು “ಗ್ರಾಮಭಾರತ’ ಸರಣಿಯಲ್ಲಿ ಹಳ್ಳಿಹೊಳೆ ಗ್ರಾಮದ ದೇವರಬಾಳು, ಕಟ್ಟಿನಾಡಿ, ಕಬ್ಬಿನಾಲೆ ಯನ್ನು ಸಂಪರ್ಕಿಸುವ ಸೇತುವೆ ಬೇಡಿಕೆ ಬಗ್ಗೆ, ಅಗತ್ಯತೆ, ಸೇತುವೆಯಿಲ್ಲದೆ ಜನ ಅನುಭವಿಸುತ್ತಿರುವ ಬವಣೆ ಕುರಿತಂತೆ ಸಮಗ್ರ ವರದಿ ಪ್ರಕಟಿಸಿ, ಗಮನ ಸೆಳೆದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next