Advertisement

ಕೋಲ್ಕತಾ ನೈಟ್‌ರೈಡರ್ ಗೆ ರಾಹುಲ್‌ ಬ್ಯಾಟಿಂಗ್‌ ಚಿಂತೆ

11:15 PM May 06, 2022 | Team Udayavani |

ಪುಣೆ: ನಾಯಕ ಕೆ.ಎಲ್‌. ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್‌ ತಂಡವು ಶನಿವಾರದ ದ್ವಿತೀಯ ಪಂದ್ಯದಲ್ಲಿ ಕೋಲ್ಕತಾ ನೈಟ್‌ರೈಡರ್ ತಂಡದ ಸವಾಲನ್ನು ಎದುರಿಸಲಿದೆ.

Advertisement

ತಾನಾಡಿದ 10 ಪಂದ್ಯಗಳಿಂದ ಏಳರಲ್ಲಿ ಗೆದ್ದಿರುವ ಲಕ್ನೋ ತಂಡವು 14 ಅಂಕಗಳೊಂದಿಗೆ ಅಂಕಪಟ್ಟಿದಲ್ಲಿ ದ್ವಿತೀಯ ಸ್ಥಾನದಲ್ಲಿದ್ದು ಪ್ಲೇ ಆಫ್ಗೆ ತೇರ್ಗಡೆಯಾಗುವ ಉತ್ಸಾಹದಲ್ಲಿದೆ. ರಾಹುಲ್‌ ಅವರ ಪ್ರಚಂಡ ಆಟದ ಬಲದಿಂದ ಲಕ್ನೋ ಇಷ್ಟರವರೆಗಿನ ಪಂದ್ಯಗಳಲ್ಲಿ ಗಮನಾರ್ಹ ನಿರ್ವಹಣೆ ನೀಡಿದೆ.

ರಾಹುಲ್‌ ಏಕಾಂಗಿಯಾಗಿ ತಂಡವನ್ನು ಗೆಲ್ಲಿಸಿಕೊಟ್ಟ ಸಾಧನೆಯನ್ನು ಮಾಡಿದ್ದಾರೆ. ಅವರು ತಂಡದ ಬ್ಯಾಟಿಂಗ್‌ನ ಪ್ರಮುಖ ಅಸ್ತ್ರವೂ ಆಗಿದ್ದಾರೆ.

ಇದೇ ವೇಳೆ ಮಾಜಿ ಚಾಂಪಿಯನ್‌ ಆಗಿರುವ ಕೆಕೆಆರ್‌ ತಾನಾಡಿದ 10 ಪಂದ್ಯಗಳಿಂದ ಕೇವಲ ಎಂಟಂಕ ಪಡೆದಿದ್ದು ಎಂಟನೇ ಸ್ಥಾನದಲ್ಲಿದೆ. ಕೇವಲ ನಾಲ್ಕರಲ್ಲಿ ಗೆದ್ದಿರುವ ಕೆಕೆಆರ್‌ ಪ್ಲೇ ಆಫ್ಗೆ ತೇರ್ಗಡೆಯಾಗಬೇಕಾದರೆ ಮುಂದಿನೆಲ್ಲ ಪಂದ್ಯಗಳಲ್ಲಿ ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ.

ಲಕ್ನೋ ತಂಡದ ಇತರ ಆಟಗಾರ ರಾದ ಕ್ವಿಂಟನ್‌ ಡಿ ಕಾಕ್‌, ಆಯುಷ್‌ ಬದೋನಿ, ದೀಪಕ್‌ ಹೂಡಾ ಮತ್ತು ಕೃಣಾಲ್‌ ಪಾಂಡ್ಯ ಅವರು ಜವಾಬ್ದಾರಿ ಅರಿತು ಬ್ಯಾಟಿಂಗ್‌ ಪ್ರದರ್ಶನ ನೀಡಿದರೆ ಲಕ್ನೋ ಉತ್ತಮ ಮೊತ್ತ ಪೇರಿಸುವಲ್ಲಿ ಸಂಶಯವಿಲ್ಲ. ಡೆಲ್ಲಿ ವಿರುದ್ಧ ಆಡಿದ್ದ ಕಾಕ್‌ ಮುಂದಿನ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಬೇಕಾದ ಅಗತ್ಯವಿದೆ. ಹೂಡಾ 52 ರನ್‌ ಹೊಡೆ ದಿದ್ದರೂ ಸ್ಥಿರವಾದ ನಿರ್ವಹಣೆ ನೀಡುವುದು ಅಗತ್ಯವಾಗಿದೆ. ಹಿಟ್ಟರ್‌ಗಳಾದ ಮಾರ್ಕಸ್‌ ಸ್ಟೋಯಿನಿಸ್‌ ಮತ್ತು ಜೇಸನ್‌ ಹೋಲ್ಡರ್‌ ಯಾವ ರೀತಿ ಆಡುತ್ತಾರೆ ಎಂಬುದನ್ನು ನೋಡಬೇಕಾಗಿದೆ.

Advertisement

ಬೌಲಿಂಗ್‌ ಪಾಳಯದಲ್ಲಿ ವೇಗಿ ಮೊಹ್ಸಿನ್‌ ಖಾನ್‌ ಪಂದ್ಯದಿಂದ ಪಂದ್ಯಕ್ಕೆ ಉತ್ತಮ ನಿರ್ವಹಣೆ ನೀಡುತ್ತ ಬಂದಿ ದ್ದಾರೆ. ಕಳೆದ ಪಂದ್ಯದಲ್ಲಿ ಅವರು ನಾಲ್ಕು ವಿಕೆಟ್‌ ಕಿತ್ತ ಸಾಧನೆ ಮಾಡಿದ್ದರು. ಡೆಲ್ಲಿ ಆಟಗಾರರಿಂದ ಬಹಳಷ್ಟು ದಂಡನೆಗೊಳಗಾದ ದುಷ್ಮಂತ ಚಮೀರ, ಹೋಲ್ಡರ್‌ ಎಚ್ಚರ ವಹಿಸಿ ಬೌಲಿಂಗ್‌ ದಾಳಿ ಸಂಘಟಿಸ ಬೇಕಾಗಿದೆ. ಸ್ಪಿನ್ನರ್‌ಗಳಾದ ರವಿ ಬಿಷ್ಣೋಯಿ ಮತ್ತು ಕೆ. ಗೌತಮ್‌ ಅವರಿಂದ ಉತ್ತಮ ದಾಳಿ ನಿರೀಕ್ಷಿಸಲಾಗಿದೆ.

ಆರಂಭಿಕರ ವೈಫ‌ಲ್ಯ
ಆರಂಭಿಕ ಆಟಗಾರರ ವೈಫ‌ಲ್ಯ ಕೆಕೆಆರ್‌ಗೆ ಬಲುದೊಡ್ಡ ಚಿಂತೆ ಯಾಗಿದೆ. ಬೇರೆ ಬೇರೆ ಆಟಗಾರರನ್ನು ಆರಂಭಿಕರಾಗಿ ಕಣಕ್ಕೆ ಇಳಿಸಿದರೂ ಯಾವುದೇ ಪ್ರಯೋಜನ ಆಗಲಿಲ್ಲ. ಆರನ್‌ ಫಿಂಚ್‌ ಮತ್ತು ಬಾಬಾ ಇಂದ್ರಜಿತ್‌ ಅವರನ್ನು ಆರಂಭಿಕರಾಗಿ ಇಳಿಸಿದರೆ ಅವರು ಸ್ಫೋಟಕ ಆರಂಭ ಒದಗಿಸುವ ಅಗತ್ಯವಿದೆ. ನಾಯಕ ಶ್ರೇಯಸ್‌ ಅಯ್ಯರ್‌ 324 ರನ್‌ ಪೇರಿಸಿದ್ದಾರೆ. ಅವರ ಸಾಮರ್ಥ್ಯಕ್ಕೆ ಹೋಲಿಸಿದರೆ ಇದೊಂದು ಸಾಧಾರಣ ನಿರ್ವಹಣೆ ಎಂದು ಹೇಳಬಹುದು. ಇಷ್ಟರವರೆಗೆ ಅವರಿಂದ ಎರಡು ಅರ್ಧಶತಕ ದಾಖಲಾಗಿದೆ. ತಂಡ ಉತ್ತಮ ಮೊತ್ತ ಪೇರಿಸಬೇಕಾದರೆ ಶ್ರೇಯಸ್‌ ಸಿಡಿಯುವುದು ಅತ್ಯಗತ್ಯವಾಗಿದೆ.

ಮಧ್ಯಮ ಕ್ರಮಾಂಕದಲ್ಲಿ ನಿತೀಶ್‌ ರಾಣಾ ಮತ್ತು ರಿಂಕು ಸಿಂಗ್‌ ಅವರ ಆಟವು ಕೆಕೆಆರ್‌ ಆಡಳಿತಕ್ಕೆ ಸಮಾಧಾನ ತಂದಿದೆ. ಅವರಿಬ್ಬರ ಸಹಿತ ಆ್ಯಂಡ್ರೆ ರಸೆಲ್‌ ಲಕ್ನೋ ಬೌಲಿಂಗ್‌ ದಾಳಿಗೆ ಸಮಸ್ಯೆ ತರುವ ಸಾಧ್ಯತೆಯಿದೆ. ಅಗ್ರ ಮತ್ತು ಮಧ್ಯಮ ಕ್ರಮಾಂಕದ ಆಟಗಾರರು ಬಿರುಸಿನ ಆಟ ಆಡಿದರೆ ಕೆಕೆಆರ್‌ ಬೃಹತ್‌ ಮೊತ್ತ ಪೇರಿಸುವ ಸಾಧ್ಯತೆಯಿದೆ.

ಕೆಕೆಆರ್‌ ತಂಡವು ಸ್ಪಿನ್ನರ್‌ ಅಂಕುಲ್‌ ರಾಯ್‌ ಅವರನ್ನು ತಂಡದಲ್ಲಿ ಉಳಿಸಿ ಕೊಳ್ಳುವ ಸಾಧ್ಯತೆಯಿದೆ. ಅವರು ಈ ಹಿಂದಿನ ಪಂದ್ಯದಲ್ಲಿ ಉತ್ತಮ ನಿರ್ವಹಣೆ ನೀಡಿದ್ದರು. ಇದರಿಂದಾಗಿ ಕೆಕೆಆರ್‌ ಐದು ಪಂದ್ಯಗಳ ಸೋಲಿನ ಸರಪಳಿಗೆ ಅಂತ್ಯ ಹಾಡಲು ಸಾಧ್ಯವಾಗಿತ್ತು.

ರಾಹುಲ್‌ ಬ್ಯಾಟಿಂಗ್‌ ಶಕ್ತಿ
ಲಕ್ನೋ ತಂಡದ ಬ್ಯಾಟಿಂಗ್‌ ಶಕ್ತಿಯಾಗಿರುವ ರಾಹುಲ್‌ ಇಷ್ಟರವರೆಗಿನ ಪಂದ್ಯಗಳಿಂದ 451 ರನ್‌ ಪೇರಿಸಿದ್ದಾರೆ. ಎರಡು ಶತಕ ಮತ್ತು ಎರಡು ಅರ್ಧಶತಕ ದಾಖಲಿಸಿರುವ ಅವರು ಈ ಋತುವಿನ ಗರಿಷ್ಠ ರನ್‌ ಪೇರಿಸಿದವರಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಡೆಲ್ಲಿ ವಿರುದ್ಧ 6 ರನ್ನುಗಳ ರೋಚಕ ಗೆಲುವಿನ ವೇಳೆ ರಾಹುಲ್‌ ಅಮೋಘ ಬ್ಯಾಟಿಂಗ್‌ ಪ್ರದರ್ಶನ ನೀಡಿದ್ದರು. ಅವರ 77 ರನ್ನುಗಳ ಸಾಧನೆ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ರಾಹುಲ್‌ ಅವರು ಕೆಕೆಆರ್‌ನ ಉಮೇಶ್‌ ಯಾದವ್‌, ಟಿಮ್‌ ಸೌಥಿ, ಶಿವಂ ಮಾವಿ ಮತ್ತು ಸುನೀಲ್‌ ನಾರಾಯಣ್‌ ಅವರ ದಾಳಿಯನ್ನು ಹೇಗೆ ನಿಭಾಯಿಸುತ್ತಾರೆ ಎಂಬುದನ್ನು ನೋಡಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next