Advertisement

ಸಮಾಜದ ಪ್ರತಿಯೊಬ್ಬರಿಗೂ ಸಿಗಲಿ ನ್ಯಾಯ: ನ್ಯಾ|ಪ್ರೇಮಾವತಿ

03:36 PM Nov 06, 2021 | Team Udayavani |

ಮೊಳಕಾಲ್ಮೂರು: ಸಮಾಜದ ಪ್ರತಿಯೊಬ್ಬರಿಗೂ ಮನೆಬಾಗಿಲಲ್ಲಿ ನ್ಯಾಯ ದೊರೆಯುವಂತೆ ಮಾಡಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಪ್ರೇಮಾವತಿ ಮನಗೊಳಿ ಹೇಳಿದರು.

Advertisement

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಆವರಣದಲ್ಲಿ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಚಿತ್ರದುರ್ಗ ಹಾಗೂ ವಕೀಲರ ಸಂಘ ಮೊಳಕಾಲ್ಮೂರು ಇವುಗಳ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯ ಮತ್ತು ಜೆಎಂಎಫ್‌ಸಿ ಉದ್ಘಾಟನಾ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಬಹುತೇಕ ಎಲಾ ತಾಲೂಕುಗಳಲ್ಲಿ ನ್ಯಾಯಾಲಯಗಳಿವೆ. ಆದರೆ ತಾಲೂಕಿನಲ್ಲಿ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯ ಇಲ್ಲದಿರುವುದನ್ನು ಗಮನಿಸಿ ಕೆಲವು ಪ್ರಕರಣಗಳನ್ನು ಬಳ್ಳಾರಿ ನ್ಯಾಯಾಲಯಕ್ಕೆ ಹೋಗುವುದನ್ನು ಅರಿತು ಕಾಯಂ ನ್ಯಾಯಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ. ತಾಲೂಕಿನ ನಾಗರಿಕರು ಚಳ್ಳಕೆರೆ ತಾಲೂಕಿನ ನ್ಯಾಯಾಲಯಕ್ಕೆ ಹೋಗುವ ಆತಂಕಕ್ಕೀಡಾಗುವ ಅವಶ್ಯಕತೆಯಿಲ್ಲ. ಇಲ್ಲಿನ ವಕೀಲರ ಶ್ರಮದಿಂದ ಬಹುದಿನದ ಕನಸು ಈಡೇರಿದಂತಾಗಿದೆ. ಈಗ ಜನರ ಮನೆಬಾಗಿಲಿಗೆ ನ್ಯಾಯಾಲಯ ಬಂದಂತಾಗಿದೆ. ತಿಂಗಳಿನಲ್ಲಿ 6 ದಿನಗಳು ಮಾತ್ರ ಈ ನ್ಯಾಯಾಲಯ ಕಾರ್ಯನಿರ್ವಹಿಸಲಿದೆ. ಸಣ್ಣ ಪುಟ್ಟ ಪ್ರಕರಣಗಳಿಗೆ ನಾಗರಿಕರು ಕೋರ್ಟ್‌ಗೆ ಹೋಗಲು ದೂರ ಮತ್ತು ಹಣಕಾಸಿನ ತೊಂದರೆ ಇರುವುದರಿಂದ ಈ ನ್ಯಾಯಾಲಯ ಜನರಿಗೆ ಅನುಕೂಲವಾಗಲಿದೆ ಎಂದರು.

ಮೊಳಕಾಲ್ಮೂರು ತಾಲೂಕು ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾ ಧೀಶರಾದ ರೇಷ್ಮಾ ಕೆ. ಗೋಣಿ ಮಾತನಾಡಿ, ಜನಸಾಮಾನ್ಯರಿಗೆ ನ್ಯಾಯ ಸಿಗಲು ಎಲ್ಲರ ಸಹಕಾರ ಅಗತ್ಯವೆಂದು ತಿಳಿಸಿದರು.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ ಸದಸ್ಯ ಎಸ್‌. ಎಫ್‌. ಗೌತಮ್‌ ಚಂದ್‌ ಮಾತನಾಡಿ, ಅತ್ಯಂತ ಹಿಂದುಳಿದ ಪ್ರದೇಶದಲ್ಲಿಯೂ ಜೆಎಂಎಫ್‌ಸಿ ನ್ಯಾಯಾಲಯ ಉದ್ಘಾಟನೆಯಾಗಿರುವುದು ತುಂಬಾ ಪ್ರಯೋಜನಕಾರಿಯಾಗಿದೆ. ಪ್ರಜಾಪ್ರಭುತ್ವದಲ್ಲಿ ದೇವಸ್ಥಾನಕ್ಕಿಂತಲೂ ನ್ಯಾಯಾಲಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕಾಗಿದೆ. ನ್ಯಾಯಾಲಯಗಳು ಜಾತ್ಯತೀತತವಾಗಿ, ಧರ್ಮಾತೀತವಾಗಿ ಸಂವಿಧಾನದ ಪ್ರಕಾರ ನ್ಯಾಯ ಕಲ್ಪಿಸಬೇಕಾಗಿದೆ. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ನ್ಯಾಯ ಸಲ್ಲಿಸುವುದು ಸಂವಿಧಾನದ ಆಶಯವಾಗಿದೆ. ದನಿ ಇಲ್ಲದವರಿಗೆ ದನಿಯಾಗಿ ನಿಲ್ಲಬೇಕಾಗಿರುವುದು ನ್ಯಾಯಾಲಯದ ಮುಖ್ಯ ಧ್ಯೇಯವಾಗಬೇಕೆಂದರು.

Advertisement

ಪ್ರಜಾಪ್ರಭುತ್ವ ರಕ್ಷಣೆಯಲ್ಲಿ ವಕೀಲರ ಕೊಡುಗೆ ಅಪಾರ. ಅದನ್ನು ಉಳಿಸಿಕೊಂಡು ಹೋಗುವುದು ಎಲ್ಲರ ಜವಾಬ್ದಾರಿಯಾಗಿದೆ. ವಕೀಲರ ವೃತ್ತಿ ಜೀವನೋಪಾಯಕ್ಕಾಗಿ ಮಾಡುವ ವೃತ್ತಿಯಲ್ಲ. ಜೀವನ ಮಾಡಲು ಎಷ್ಟು ಸಾಧ್ಯವೋ ಅಷ್ಟು ಶುಲ್ಕವನ್ನು ಕಕ್ಷಿದಾರರಿಂದ ಪಡೆಯಬೇಕು. ಆದರೆ ಇದನ್ನು ದೊಡ್ಡ ವಕೀಲರು ಪಾಲಿಸುತ್ತಿಲ್ಲ ಎಂದು ಹೇಳಿದರು.

ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶರಾದ ಎಸ್‌. ನಿರ್ಮಲಾ ಮಾತನಾಡಿ, ತಾಲೂಕಿನ ವಕೀಲರು 10 ವರ್ಷಗಳ ಕಾಲ ಹೋರಾಟದ ಶ್ರಮದ ಪ್ರತಿಫಲದಿಂದ ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಲಯ ಲಭಿಸಿದೆ. ವಕೀಲರು ಸಹಕರಿಸಿ ಸಾರ್ವಜನಿಕರಿಗೆ ನ್ಯಾಯ ಒದಗಿಸಬೇಕೆಂದು ತಿಳಿಸಿದರು. ಚಳ್ಳಕೆರೆ ತಾಲೂಕು ತಹಶೀಲ್ದಾರ್‌ ಎನ್‌. ರಘುಮೂರ್ತಿ ಮಾತನಾಡಿ, ಸಮಾಜದ ಕಟ್ಟ ಕಡೆಯ ಅಮಾಯಕನಿಗೂ ನ್ಯಾಯ ಸಿಗಬೇಕಾಗಿದೆ. ನ್ಯಾಯಾಧಿಧೀಶರು ನ್ಯಾಯದಾನದ ಜೊತೆಗೆ ಸಾಮಾಜಿಕ ಕಳಕಳಿಯೊಂದಿಗೆ ಮಾನವೀಯತೆ ಮೆರೆಯಬೇಕಾಗಿದೆ. ಚಳ್ಳಕೆರೆ ತಾಲೂಕಿನ ಪರಶುರಾಂಪುರ ಮತ್ತು ತಳಕು ಹೋಬಳಿಯವರು ಈ ನ್ಯಾಯಾಲಯಕ್ಕೆ ಬರಬೇಕಾಗಿರುವುದರಿಂದ ನ್ಯಾಯ ಪಡೆಯುವ ಬಡ ಕಕ್ಷಿದಾರರಿಗೆ ಬಸ್‌ ಸೌಲಭ್ಯ ಕಲ್ಪಿದಬೇಕೆಂದರು.

ಸಮಾರಂಭದಲ್ಲಿ ತಹಶೀಲ್ದಾರ್‌ ಟಿ. ಸುರೇಶ್‌ ಕುಮಾರ್‌, ತಾಪಂನ ಕಾರ್ಯನಿರ್ವಹಣಾಧಿ ಕಾರಿ ಕೆ.ಒ. ಜಾನಕಿರಾಂ, ಸಹಾಯಕ ಸರ್ಕಾರಿ ಅಭಿಯೋಜಕ ಎ.ಕೆ. ತಿಪ್ಪೇಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಜಯಭಾಸ್ಕರ , ವಕೀಲರ ಸಂಘದ ಅಧ್ಯಕ್ಷ ಆರ್‌. ಆನಂದ, ಉಪಾಧ್ಯಕ್ಷ ಡಿ. ಬಸವರಾಜ್‌, ಪ್ರಧಾನ ಕಾರ್ಯದರ್ಶಿ ವಿ.ಡಿ. ರಾಘವೇಂದ್ರ, ಖಜಾಂಚಿ ಜಿ.ವಿ. ಚಾಣಕ್ಯ, ಸಹ ಕಾರ್ಯದರ್ಶಿ ಕೆ.ಎಂ. ರಾಮಾಂಜನೇಯ, ಹಿರಿಯ ವಕೀಲರಾದ ಮುದ್ದಣ್ಣ, ವಿ.ಜಿ. ಪರಮೇಶ್ವರಪ್ಪ, ಆರ್‌. ಎಂ. ಅಶೋಕ, ಬಿ. ಒಳಮs… , ಎಂ.ಎನ್‌. ವಿಜಯಲಕ್ಷ್ಮೀ, ಪಿ.ಜಿ. ವಸಂತಕುಮಾರ್‌, ಅನಸೂಯ ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next