Advertisement

ಪ್ರಪಂಚ ತೊರೆದ ಪಾಪು

10:45 AM Mar 17, 2020 | Suhan S |

ಧಾರವಾಡ: ಹೆಸರು ಮಾತ್ರ ಪಾಪು. ವೃತ್ತಿ ಪತ್ರಿಕೋದ್ಯಮ. ಆದರೆ, ರಾಜಕಾರಣಕ್ಕೆ ಬಂದರೆ ಚಾಣಕ್ಯ ತಂತ್ರ. ಚುನಾವಣೆಯಲ್ಲಿ ಹೇಗೆ ಗೆಲ್ಲಬೇಕು ಎನ್ನುವ ತಂತ್ರಗಾರಿಕೆಯನ್ನು ಅಚ್ಚುಕಟ್ಟಾಗಿ ಮಾಡಿ ಇಟ್ಟಿರುತ್ತಿದ್ದರು ಪಾಪು. ಅದಕ್ಕಾಗಿಯೇ ಇರಬೇಕು ಬರೊಬ್ಬರಿ ಅರ್ಧ ಶತಮಾನಗಳ ಕಾಲ ನಾಡೋಜ ಡಾ|ಪಾಟೀಲ ಪುಟ್ಟಪ್ಪ ಅವರನ್ನು ಕರ್ನಾಟಕ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಗಾದಿಯಿಂದ ಕೆಳಗಿಳಿಸುವುದಕ್ಕೆ ಯಾರಿಂದಲೂ ಸಾಧ್ಯವಾಗಲಿಲ್ಲ.

Advertisement

ಒಂದು ಸಂಘ ಅಥವಾ ಸಂಸ್ಥೆ ಹೆಚ್ಚೆಂದರೆ ಎರಡು ಅವಧಿಗೆ ಚುನಾವಣೆ ಗೆದ್ದು ಮುನ್ನಡೆಸಬೇಕೆಂದರೆ ಅವರ ಕಣ್ಣೀರು ಕಪಾಳಕ್ಕೆ ಬಂದು ಹೋಗಿರುತ್ತವೆ. ಆದರೆ ಇಡೀ ದೇಶದಲ್ಲಿಯೇ ಯಾರೂ ಮಾಡದಂತಹ ಒಂದು ದಾಖಲೆಯನ್ನು ನಾಡೋಜ ಡಾ|ಪಾಟೀಲ ಪುಟ್ಟಪ್ಪ ಮಾಡಿದ್ದು, ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಒಂದಲ್ಲ, ಹತ್ತಲ್ಲ, ಬರೊಬ್ಬರಿ ಅರ್ಧ ಶತಮಾನಗಳ ಕಾಲ ಆಳಿ ಸೈ ಎನಿಸಿಕೊಂಡಿದ್ದು ನಿಜಕ್ಕೂ ಕನ್ನಡ ಸಾಂಸ್ಕೃತಿಕ ಲೋಕದ ಪಾಲಿಗೆ ಒಂದು ಹೆಮ್ಮೆಯ ವಿಷಯ.

ಅವು 1960ರ ದಶಕದ ದಿನಗಳು. ಕರ್ನಾಟಕ ಏಕೀಕರಣವಾದ ನಂತರ ಮುಂಬೈ ಪ್ರಾಂತ್ಯಕ್ಕೆ ಸೇರಿದ್ದ ಧಾರವಾಡ, ಬೆಳಗಾವಿ ಸೇರಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಇನ್ನೂ ಮರಾಠಿಗರು ಮತ್ತು ಮರಾಠಿ ಭಾಷೆಯ ಪ್ರಭಾವ ತಗ್ಗಿರಲಿಲ್ಲ. ಇಂತಿಪ್ಪ ಸಂದರ್ಭದಲ್ಲಿ ಧಾರವಾಡದ ಸಾಂಸ್ಕೃತಿಕ ಲೋಕಕ್ಕೆ ದಾರಿದೀಪವಾಗಿ ನಿಂತಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಆಡಳಿತಕ್ಕೆ ತುಕ್ಕು ಹಿಡಿದಿತ್ತು. ಇಲ್ಲಿ ನಡೆಯುವ ಕಾರ್ಯಕ್ರಮಗಳು ರಾಜ್ಯೋತ್ಸವಕ್ಕೆ ಮಾತ್ರ ಸೀಮಿತವಾಗಿದ್ದವು. ಇದನ್ನರಿತ ಪಾಪು ಕವಿಸಂನ ಅಂಗಳಕ್ಕೆ ಕಾಲಿಟ್ಟರು. ಅಲ್ಲಿ ನಡೆಯುವ ಕಾರ್ಯಕ್ರಮಗಳು ರಾಜ್ಯಮಟ್ಟಕ್ಕೆ ಸುದ್ದಿಯಾಗುವಂತೆ ಅದನ್ನು ವೇದಿಕೆ ಮಾಡಿಕೊಂಡರು. ಮರು ವರ್ಷವೇ ಬಂದ ಚುನಾವಣೆಯಲ್ಲಿ ಅಧ್ಯಕ್ಷ ಗಾದಿಗೆ ಏರಿ ಕುಳಿತರು.

ಸಾಂಸ್ಕೃತಿಕ ಸಚಿವ ಸಂಪುಟ ರಚನೆ: ನಾಡೋಜ ಪಾಪು ಅವರು ತಾವು ಅಧ್ಯಕ್ಷ ಸ್ಥಾನದಲ್ಲಿ ಕೆಲಸ ಮಾಡಿ ಸೈ ಎನಿಸಿಕೊಳ್ಳುವುದರ ಜತೆಗೆ ಸಂಘಕ್ಕೆ ಆಯ್ಕೆಯಾದ ಸಾಹಿತ್ಯ, ಸಂಸ್ಕೃತಿ, ಜಾನಪದ, ಕನ್ನಡದ ಕಟ್ಟಾಳುಗಳ ಸೇವೆಯನ್ನು ಕನ್ನಡ ಕಟ್ಟುವುದಕ್ಕೆ ಬಳಸಿಕೊಂಡ ರೀತಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಯಾವ ರೀತಿ ಸರ್ಕಾರದಲ್ಲಿ ಮುಖ್ಯಮಂತ್ರಿ ತನ್ನ ಸಚಿವ ಸಂಪುಟವನ್ನು ರಚಿಸಿಕೊಳ್ಳುತ್ತಾರೋ ಅದೇ ಮಾದರಿಯಲ್ಲಿ ಸಾಂಸ್ಕೃತಿಕ ಸಚಿವ ಸಂಪುಟವನ್ನು ರಚಿಸಿ ಆ ಮೂಲಕ ಕನ್ನಡ ನಾಡು-ನುಡಿಯ ಕೆಲಸ ಮಾಡಲು ತಮ್ಮ ಸಂಗಡಿಗರನ್ನು ಪ್ರೇರೆಪಿಸುತ್ತಿದ್ದರು. ಕಲಾ ಮಂಟಪ, ಕಾನೂನು ಮಂಟಪ, ಮಕ್ಕಳ ಮಂಟಪ, ಜಾನಪದ ಮಂಟಪ, ಯುವ ಮಂಟಪ, ಸಾಹಿತ್ಯ ಮಂಟಪ, ಮಹಿಳಾ ಮಂಟಪ, ವಿಜ್ಞಾನ ಮಂಟಪ ಮತ್ತು ಸಾಂಸ್ಕೃತಿಕ ಹೀಗೆ ಒಟ್ಟು ಒಂಭತ್ತು ಮಂಟಪಗಳನ್ನು ರಚಿಸಿ, ಪ್ರತಿ ಮಂಟಪಕ್ಕೂ ಒಬ್ಬೊಬ್ಬ ಪದಾಧಿಕಾರಿಯನ್ನು ಅಧ್ಯಕ್ಷರನ್ನಾಗಿ ಮಾಡಿ ಅವರಿಂದ ಆಯಾ ವಿಷಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳು, ಜಾಗೃತಿ ವಿಚಾರ ಸಂಕಿರಣಗಳು ವರ್ಷವಿಡೀ ನಡೆಯುವಂತೆ ನೋಡಿಕೊಂಡಿದ್ದರು ಪಾಪು. ಇನ್ನು ನಾಡಿನ ಇತರ ಜಿಲ್ಲೆಗಳಿಗೂ ತಮ್ಮ ಕಾರ್ಯಕ್ಷೇತ್ರ ವಿಸ್ತರಿಸಿಕೊಂಡು, ಹಚ್ಚೇವು ಕನ್ನಡದ ದೀಪ ಮತ್ತು ಬಾರಿಸು ಕನ್ನಡ ಡಿಂಡಿಮವಾ ಎನ್ನುವ ಕಾರ್ಯಕ್ರಮಗಳ ಮೂಲಕ ಶಾಲೆ, ಕಾಲೇಜುಗಳ ಮಕ್ಕಳಿಗೆ ಕನ್ನಡ ಜಾಗೃತಿ ಮೂಡಿಸುವ ಕೆಲಸ ಮಾಡಿದರು.

ಹೊರನಾಡಲ್ಲಿ ಸಮ್ಮೇಳನ: ಹೊರ ರಾಜ್ಯಗಳಿಗೂ ಹೋಗಿ ಕನ್ನಡ ಕಾರ್ಯಕ್ರಮ ಮಾಡುವ ಮೂಲಕ ಅಲ್ಲಿನ ಕನ್ನಡಿಗರಲ್ಲಿ ಸ್ವಾಭಿಮಾನ ಮತ್ತು ಕನ್ನಡತನ ಬೆಳೆಸುವ ಕೆಲಸ ಮಾಡಿದ್ದು ಪಾಪು. 2013ರಿಂದ ಪ್ರತಿವರ್ಷ ಒಂದೊಂದು ಹೊರ ರಾಜ್ಯಕ್ಕೆ ಹೋಗಿ ಅಲ್ಲಿ ಕನ್ನಡ ನಾಡು-ನುಡಿ ಭಾಷಾ ಪ್ರೇಮ ಬೆಳೆಸುವ ಕಾರ್ಯಕ್ರಮ ಮಾಡಿ ಪಾಪು ಅವರು ಸೈ ಎನಿಸಿಕೊಂಡರು. ಮೊದಲ ಸಮ್ಮೇಳನ ಧಾರವಾಡದಲ್ಲಾದರೆ, 2ನೇ ಸಮ್ಮೇಳನ ಮುಂಬೈ, ನಂತರ ಗುಜರಾತದ ಬರೋಡಾ, ಮಧ್ಯಪ್ರದೇಶದ ಅಮರಕಂಟಕ, ದೆಹಲಿ, ಹೈದರಾಬಾದ ಮತ್ತು ಮಹಾರಾಷ್ಟ್ರದ ಅಕ್ಕಲಕೋಟದಲ್ಲಿಸಮ್ಮೇಳನ ನಡೆದವು. ಮುಂಬೈನಲ್ಲಿ ಕನ್ನಡ ಕಾರ್ಯಕ್ರಮ ಮಾಡುವುದಕ್ಕೆ ಅಲ್ಲಿನ ಶಿವಸೇನೆ ಕಾರ್ಯಕರ್ತರು ಕಾರ್ಯಕ್ರಮಕ್ಕೆ ಅಡ್ಡಿಪಡಿಸಿದರು. ಆದರೆ ಅದನ್ನು ಲೆಕ್ಕಿಸದೇ ಪಾಪು ಮುಂಬೈ ಕನ್ನಡಿಗರು ಮತ್ತು ಅಲ್ಲಿನ ಹಿರಿಯ ರಾಜಕಾರಣಿಗಳ ಸಹಕಾರದಿಂದ ಅಲ್ಲಿ ಕಾರ್ಯಕ್ರಮ ಯಶಸ್ವಿಗೊಳಿಸಿದರು.

Advertisement

ಚಳವಳಿಗೆ ಇಂಧನವಾಗಿದ್ದ ಪಾಟೀಲ ಪುಟ್ಟಪ್ಪ : ಕನ್ನಡ ನಾಡು-ನುಡಿಗೆ ಧಕ್ಕೆಯಾದಾಗ ಮೊದಲು ಸಿಂಹ ಗರ್ಜಣೆ ಕೂಗು ಹೊರಬೀಳುತ್ತಿದ್ದಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘದ್ದು ಅರ್ಥಾರ್ಥ ಪಾಟೀಲ ಪುಟ್ಟಪ್ಪ ಅವರದ್ದು. ಕರ್ನಾಟಕ ಏಕೀಕರಣ, ಮಹಿಷಿ ವರದಿ ಜಾರಿ, ಗೋಕಾಕ ಚಳವಳಿ, ರೈತ ಚಳವಳಿ, ಬಂಡಾಯ ಚಳುವಳಿ, ಹೈಕೋರ್ಟ್‌ ಪೀಠ, ನೈಋತ್ಯ ರೈಲ್ವೆ ವಲಯ ಸ್ಥಾಪನೆ, ಕಳಸಾ-ಬಂಡೂರಿ ಹೋರಾಟ ಹೀಗೆ ನಾಡು-ನುಡಿಯ ಹೋರಾಟಗಳಿಗೆ ನೆಲೆ ಒದಗಿಸಿದ್ದು ಕರ್ನಾಟಕ ವಿದ್ಯಾವರ್ಧಕ ಸಂಘ ಮತ್ತು ಅದರ ಅಧ್ಯಕ್ಷರಾಗಿದ್ದ ನಾಡೋಜ ಪಾಪು ಅವರು. ವಿಶೇಷವಾಗಿ ಗೋಕಾಕ ಚಳವಳಿ ಸಂದರ್ಭದಲ್ಲಿ ವರನಟ ಡಾ.ರಾಜ್‌ಕುಮಾರ್‌ ಅವರು ಹೋರಾಟಕ್ಕೆ ಧುಮುಕುವುದಕ್ಕೆ ಪ್ರೇರೇಪಿಸಿದ್ದು ಪಾಪು ಅವರೇ. ಉತ್ತರ ಕರ್ನಾಟಕ ಭಾಗದಲ್ಲಿ ಕನ್ನಡದ ವಿಚಾರವನ್ನು ಮನೆ ಮನೆಗೆ ತಲುಪುವಂತೆ ಮಾಡಿದ ಈ ಚಳವಳಿಗೆ ಇಂಧನ ತುಂಬಿದ್ದೇ ವಿದ್ಯಾವರ್ಧಕ ಸಂಘ. ಅಂದಿನ ಕಾಲಕ್ಕೆ ಬರೀ ಚಹಾ, ಚುರುಮರಿ ತಿಂದು ಹೋರಾಟ ರೂಪಿಸಿದ ಕೀರ್ತಿ ಪಾಪು ಅವರಿಗೆ ಸಲ್ಲುತ್ತದೆ.

ಸೆಡ್ಡು  ಹೊಡೆದ ಬಿಜೆಪಿಗೆ ಗುದ್ದಿ  ಗೆದ್ದಿದ್ದ ಚಾಣಾಕ್ಷ : ಪಾಪು ಅವರ ರಾಜಕೀಯ ತಂತ್ರಗಾರಿಕೆ ಕೆಲವು ಸಲ ರಾಷ್ಟ್ರೀಯ ಪಕ್ಷಗಳ ಮುಖಂಡರನ್ನು ತಬ್ಬಿಬ್ಬು ಮಾಡಿದ್ದು ಸತ್ಯ. ಕವಿಸಂ ಚುನಾವಣೆಯಲ್ಲಿ ಪಾಪು ಅವರನ್ನು ಸೋಲಿಸುವುದಕ್ಕೆ ಕೊನೆಪಕ್ಷ ಕೊಂಚ ಬಿಸಿ ಮುಟ್ಟಿಸುವುದಕ್ಕಾಗಿ ಬಿಜೆಪಿ ವರಿಷ್ಠರು ಒಂದು ಕಾಲಕ್ಕೆ ಚರ್ಚಿಸಿದ್ದರು. ಹುಬ್ಬಳ್ಳಿ-ಧಾರವಾಡದ ಬಿಜೆಪಿ ಮುಖಂಡರ ವಿಚಾರಗಳನ್ನು ನಾಡೋಜ ಪಾಪು ಅವರು ಬಹಿರಂಗವಾಗಿ ಖಂಡಿಸಿ ಹೋರಾಟಕ್ಕೆ ಇಳಿದಿದ್ದರು. ಇದರಿಂದ ಕೆರಳಿದ ಬಿಜೆಪಿ ಮುಖಂಡರು ಕರ್ನಾಟಕ ವಿದ್ಯಾವರ್ಧಕ ಸಂಘದ ಚುನಾವಣೆಯಲ್ಲಿ ಪರೋಕ್ಷವಾಗಿ ಪಾಲ್ಗೊಂಡು ಪಾಪು ಅವರನ್ನು ಸೋಲಿಸಲು ತಂತ್ರ ಹೆಣೆದರು. ಪರಿಣಾಮವಾಗಿ ಸಂಗೀತ ಪ್ರಾಧ್ಯಾಪಕರಾಗಿದ್ದ ಡಾ|ಮೃತ್ಯುಂಜಯ ಅಗಡಿ ನೇತೃತ್ವದಲ್ಲಿ ಕಣಕ್ಕಿಳಿದ ಇಡೀ ತಂಡವೇ ಧೂಳಿಪಟವಾಗಿ ಹೋಯಿತು. ಹಗಲಿರುಳು ವಿರಮಿಸದೆ ಬಿಜೆಪಿ ಕಾರ್ಯಕರ್ತರ ಪಡೆ ಪಾಪು ವಿರುದ್ಧ ಕೆಲಸ ಮಾಡಿತು. ಆದರೆ ಸಂಘದ ಚುನಾವಣೆ ಫಲಿತಾಂಶ ಬಂದ ದಿನ ಬಿಜೆಪಿ ಮುಖಂಡರಿಗೆ ತೀವ್ರ ಮುಖಭಂಗವಾಯಿತು. ಪಾಪು ಮತ್ತು ಅವರ ಬೆಂಬಲಿಗರು ಪ್ರತಿ ಬಾರಿಯಷ್ಟೇ ಮತಗಳನ್ನು ಪಡೆದು ವಿಜಯಶಾಲಿಯಾದರು.

130 ವರ್ಷ; ಒಂದು ಲಕ್ಷ ಕಾರ್ಯಕ್ರಮದ ಸಂಭ್ರಮ :  ಕರ್ನಾಟಕ ವಿದ್ಯಾವರ್ಧಕ ಸಂಘಕ್ಕೆ ಇದೀಗ ಬರೊಬ್ಬರಿ 130 ವರ್ಷಗಳು ತುಂಬಿವೆ. 1890ರಲ್ಲಿ ಸ್ಥಾಪನೆಯಾದ ಈ ಸಂಘದಿಂದ ಪ್ರತಿದಿನವೂ ಕಾರ್ಯಕ್ರಮಗಳು, ಸಭೆ, ಸಮಾರಂಭ, ಚಿಂತನಗೋಷ್ಠಿ, ವಿಚಾರ ಸಂಕಿರಣ, ಪ್ರತಿಭಟನೆ, ಸಾಂಸ್ಕೃತಿಕ ಕಾರ್ಯಕ್ರಮ ಹೀಗೆ ಒಂದಿಲ್ಲ ಒಂದು ಕಾರ್ಯ ಚಟುವಟಿಕೆಗಳು ನಡೆಯುತ್ತಲೇ ಇರುತ್ತವೆ. ಕಳೆದ 25 ವರ್ಷಗಳಿಂದ ನಾಡೋಜ ಡಾ|ಪಾಪು ಅವರು ವಿದ್ಯಾವರ್ಧಕ ಸಂಘದಲ್ಲಿ ಬರೊಬ್ಬರಿ ಮೂರು ಸಭಾಗೃಹಗಳಲ್ಲಿಯೂ ಕಾರ್ಯಕ್ರಮ ನಡೆಸುವುದಕ್ಕೆ ಅವಕಾಶ ನೀಡಿದರು. ಹೀಗಾಗಿ ಪ್ರತಿದಿನ ಮುಂಜಾನೆ, ಸಂಜೆ ಕಾರ್ಯಕ್ರಮಗಳು ನಡೆಯುತ್ತಲೇ ಇರುತ್ತವೆ. ಸಾಹಿತ್ಯಗೋಷ್ಠಿ, ಜಾನಪದಸಂವಾದ, ಪುಸ್ತಕ ಬಿಡುಗಡೆ, ಸಂಘ ಸಂಸ್ಥೆಗಳ ಇತರ ಕಾರ್ಯಕ್ರಮಗಳು ಒಟ್ಟಿನಲ್ಲಿ ವಿದ್ಯಾವರ್ಧಕ ಸಂಘದವರೇ ಮಾಹಿತಿ ನೀಡುವ ಪ್ರಕಾರ ಅಂದಾಜು ಸಂಘ ಶುರುವಾದಾಗಿನಿಂದ ಈವರೆಗೂ ಇಲ್ಲಿ 1 ಲಕ್ಷಕ್ಕೂ ಅಧಿಕ ಕಾರ್ಯಕ್ರಮಗಳು ನಡೆದಿವೆ. ಇದು ಕೂಡ ವಿಶ್ವ ದಾಖಲೆಯೇ ಸರಿ. ಕಳೆದ 25 ವರ್ಷಗಳಲ್ಲಿಯೇ ಇಲ್ಲಿ 50 ಸಾವಿರ ಕಾರ್ಯಕ್ರಮ ನಡೆದಿವೆ. ಇದಕ್ಕೆ ಪ್ರೇರಕ ಶಕ್ತಿಯಾಗಿ ನಿಂತಿದ್ದು ನಾಡೋಜ ಪಾಪು ಅವರು.

 

-ಬಸವರಾಜ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next