Advertisement

ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ: ಡಾ|ಸಿ.ಎನ್‌.ಅಶ್ವತ್ಥನಾರಾಯಣ

11:18 PM Dec 24, 2022 | Team Udayavani |

ಬೆಂಗಳೂರು: ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಗೌರವಾರ್ಥ ರವಿವಾರ “ಸುಶಾಸನ ದಿನ’ವನ್ನು ಆಚರಿಸುವ ಮೂಲಕ ಉನ್ನತ ಶಿಕ್ಷಣ, ಕೌಶಲಾಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ, ವಿದ್ಯುನ್ಮಾನ, ಐಟಿ-ಬಿಟಿ ಹಾಗೂ ವಿಜ್ಞಾನ ತಂತ್ರಜ್ಞಾನ ಇಲಾಖೆ ವತಿಯಿಂದ ಹತ್ತು ಸಾವಿರ ಯುವಕರಿಗೆ ಉದ್ಯೋಗ ಪತ್ರ ವಿತರಣೆಯಾಗಲಿದೆ.

Advertisement

ಈ ಇಲಾಖೆಗಳ ವತಿಯಿಂದ ಡಿಸೆಂಬರ್‌ ಮಾಸಾದ್ಯಂತ ಸುಶಾಸನ ದಿನ ಆಚರಿಸಿ ಹಲವು ಉಪಯುಕ್ತ ಉಪಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ. ಉನ್ನತ ಶಿಕ್ಷಣ, ಐಟಿ- ಬಿಟಿ, ಕೌಶಲಾಭಿವೃದ್ಧಿ ಇಲಾಖೆಗಳಲ್ಲಿ ಉತ್ತಮ ಆಡಳಿತಕ್ಕೆ ಭದ್ರ ಬುನಾದಿ ಹಾಕಲು “ಸುಶಾಸನ ಮಾಸ: ಸುಂದರ ಸಮಾಜದ ಸಾತ್ವಿಕ ತುಡಿತ’ ಘೋಷವಾಕ್ಯದಡಿ ನಾವು ಡಿ.1ರಂದು ಚಾಲನೆ ನೀಡಿದೆವು ಎಂದು ಉನ್ನತ ಶಿಕ್ಷಣ ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಸುಶಾಸನ ಅಥವಾ ಗುಡ್‌ ಗವರ್ನೆನ್ಸ್‌ ಒಂದು ದಿನಕ್ಕೆ ಸೀಮಿತವಾದ ಔಪಚಾರಿಕ ಆಚರಣೆಯಾಗಿ ಉಳಿಯಬಾರದು. ಪ್ರಧಾನಿ ನರೇಂದ್ರ ಮೋದಿಯವರು ಕೂಡ “ಗರಿಷ್ಠ ಆಡಳಿತ, ಕನಿಷ್ಠ ಸರಕಾರ’ ಎನ್ನುವುದನ್ನೇ ತಮ್ಮ ಚಿಂತನೆಯ ಮೂಲದ್ರವ್ಯವನ್ನಾಗಿ ಮಾಡಿಕೊಂಡಿದ್ದಾರೆ. ವಿಶ್ವವಿದ್ಯಾ ನಿಲಯಗಳಿಗೆ ಸಂಬಂಧಪಟ್ಟ ಪ್ರತಿಯೊಂದು ಮಾಹಿತಿಯನ್ನು ಸಹ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸುವ ಕೆಲಸ ನಾವು “ಸುಶಾಸನ ಮಾಸ’ ಆಚರಣೆಯ ಅಂಗವಾಗಿ ಕಡ್ಡಾಯ ಗೊಳಿಸಲಾಗಿದ್ದು, ಇದು ಡಿ.10ರಿಂದ ಜಾರಿಗೆ ಬಂದಿದೆ ಎಂದರು.

ಅದೇ ರೀತಿ ಉದ್ಯಮಕ್ಕೆ ಬಲ ತುಂಬಲು ಕೌಶಲಕ್ಕೆ ಒತ್ತು ನೀಡಲು “ಸ್ಕಿಲ್‌ ಪೋರ್ಟಲ್‌’ಗೆ ಆಮೂಲಾಗ್ರವಾಗಿ ಹೊಸ ರೂಪ ಕೊಡಲಾಯಿತು. ಬೆಂಗಳೂರಿನಲ್ಲಿ ಉತ್ಕೃಷ್ಟತಾ ಕೇಂದ್ರ ಮತ್ತು ಹುಬ್ಬಳ್ಳಿಯಲ್ಲಿ ಬಹುಕೌಶಲ್ಯ ಕೇಂದ್ರ ಆರಂಭಿಸಲಾಯಿತು.

ಮಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ-ಬೆಳಗಾವಿ ಕ್ಲಸ್ಟರ್‌ ಗಳಲ್ಲಿ ಎಚ್‌ಎನ್‌ಐ ಕಾರ್ಯಾಗಾರಗಳು, ನವೋದ್ಯಮ ಗಳ ಬಲವರ್ಧನೆಗೆ ‘ಎನ್‌ರಿಚ್‌ 2.0’ ಉಪಕ್ರಮ ಯಶಸ್ವಿಯಾಗಿ ನಡೆಸಲಾಯಿತು. ರಾಜ್ಯ ವಿಜ್ಞಾನ ಮತ್ತು ತಂತ್ರಜ್ಞಾನ ಸಮಿತಿಯ ವತಿಯಿಂದ ‘ಪುನೀತ್‌’ ಉಪಗ್ರಹ ಯೋಜನೆಯ ಭಾಗವಾಗಿ ಆನ್‌ಲೈನ್‌ ರಸಪ್ರಶ್ನೆ, ಚಿತ್ರಕಲೆ, ಪ್ರಬಂಧ, ಪೋಸ್ಟರ್‌ ಸ್ಪರ್ಧೆಗಳನ್ನು ಹೈಸ್ಕೂಲ್‌ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ನಡೆಸಲಾಯಿತು ಎಂದು ಹೇಳಿದ್ದಾರೆ.

Advertisement

ಕೆಎಸ್‌ಡಿಸಿಯಿಂದ ಪಾರಂಪರಿಕ ಕೌಶಲಗಳ ಬಲವರ್ಧನೆ, ಸಶಕ್ತೀಕರಣ, ಎನ್‌ಆರ್‌ಎಲ್‌ಎಂ ಅಡಿಯಲ್ಲಿ ಮಾಹಿತಿ ಮತ್ತು ಹಣಕಾಸು ನಿರ್ವಹಣೆಗೆ ಲೋಕೋಸ್‌ ತಂತ್ರಾಂಶ, ಲಿಂಗಾಧಾರಿತ ತಾರತಮ್ಯ ಮತ್ತು ಮಹಿಳಾ ದೌರ್ಜನ್ಯ ಕುರಿತು ಅರಿವು ಮೂಡಿಸಲು ರಾಜ್ಯದ ಎಲ್ಲ 227 ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕಾರ್ಯಕ್ರಮ. ಪ್ರಧಾನಮಂತ್ರಿಗಳ ಆಹಾರ ಕಿರು ಸಂಸ್ಕರಣ ಯೋಜನೆಯಡಿ 2,623 ಫ‌ಲಾನುಭವಿಗಳಿಗೆ 10.13 ಕೋಟಿ ರೂ. ಸಹಾಯಧನ ವಿತರಣೆ, ಕ್ಷೀರ ಸಂಜೀವಿನಿ ಯೋಜನೆಗಳಿಗೆ ಚಾಲನೆ, ಮುದ್ರಾ ಸಾಲ ಪಡೆಯುವ ಬಗ್ಗೆ ವಿಡಿಯೋ ಸಂವಾದ, ಕೃಷಿ ಸಖೀಯರಿಗೆ ತರಬೇಟಿ ಎಲ್ಲವನ್ನೂ ವ್ಯವಸ್ಥಿತಿವಾಗಿ ನಡೆಸಲಾಗಿದೆ ಎಂದು ವಿವರಿಸಿದ್ದಾರೆ.

ಜಗತ್ತಿಗೆ ಭಾರತದ ಶಕ್ತಿ
ತೋರಿಸಿಕೊಟ್ಟವರು ವಾಜಪೇಯಿ
ಸ್ವತಂತ್ರ ಭಾರತದ ಇತಿಹಾಸದಲ್ಲಿ ದಕ್ಷ, ಪಾರದರ್ಶಕ ಮತ್ತು ನಿಷ್ಕಳಂಕ ಆಡಳಿತದ ಮೂಲಕ ದೇಶವನ್ನು ಸಮರ್ಥವಾಗಿ ಮುನ್ನಡೆಸಬಲ್ಲವು ಎಂಬುದನ್ನು ತೋರಿಸಿಕೊಟ್ಟವರು ಅಟಲ್‌ ಬಿಹಾರಿ ವಾಜಪೇಯಿ. ಎನ್‌ಡಿಎ ಮೈತ್ರಿಕೂಟವನ್ನು ಐದು ವರ್ಷಗಳ ಕಾಲ ತಮ್ಮ ರಾಜಕೀಯ ದಾರ್ಶನಿಕತೆ ಮತ್ತು ಮೇರು ವ್ಯಕ್ತಿತ್ವ ಬಲದಿಂದ ಮುನ್ನಡೆಸಿದವರು. ಅಣ್ವಸ್ತ್ರ ಪರೀಕ್ಷೆ ನಡೆಸುವ ಮೂಲಕ ಇಡೀ ಜಗತ್ತಿಗೆ ಭಾರತದ ಶಕ್ತಿ ತೋರಿಸಿಕೊಟ್ಟವರು. ಅವರ ಹುಟ್ಟುಹಬ್ಬವನ್ನು ಸುಶಾಸನ ದಿನವನ್ನಾಗಿ ಆಚರಿಸುತ್ತಿರುವುದು ಸೂಕ್ತ ಎಂದು ಸಚಿವ ಡಾ| ಸಿ.ಎನ್‌.ಅಶ್ವತ್ಥನಾರಾಯಣ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next