Advertisement

ಮನೆ ಬಾಗಿಲಿಗೆ ಆಡಳಿತ: ತಹಶೀಲ್ದಾರ್‌

02:26 PM Sep 18, 2022 | Team Udayavani |

ಮಧುಗಿರಿ: ಸರ್ಕಾರದ ಯಶಸ್ವಿ ಕಾರ್ಯಕ್ರಮವಾದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದಲ್ಲಿ ತಾಲೂಕು ಆಡಳಿತವೇ ಗ್ರಾಮದ ಮನೆ ಬಾಗಿಲಿಗೆ ಬಂದಿದ್ದು, ಯಶಸ್ವಿಯಾಗಿದೆ ಎಂದು ತಹಶೀಲ್ದಾರ್‌ ಸುರೇಶಾಚಾರ್‌ ತಿಳಿಸಿದರು.

Advertisement

ತಾಲೂಕಿನ ಪುರವರ ಹೋಬಳಿಯ ಅಗ್ರಹಾರದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಕಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ರಸ್ತೆ, ಕುಡಿಯುವ ನೀರಿಗೆ ಯಾವುದೇ ಸಮಸ್ಯೆಯಿಲ್ಲ. ವಿವಿಧ ಮಾಸಾಶನಗಳು ಈಗಾಗಲೇ ಶೇ.90 ರಷ್ಟು ತಲುಪಿದ್ದು, ದಾಖಲೆಗಳ ಕೊರತೆಯಿಂದ ತಡವಾಗಿದ್ದ ಕೆಲವರಿಗೆ ಇದೀಗ ಮಾಸಾಶನ ನೀಡಿದ್ದೇವೆ. ಉಳಿದಂತೆ ಮನೆ ನಿರ್ಮಿಸಿಕೊಳ್ಳಲು ಆದೇಶಪತ್ರ ವಿತರಿಸಿದ್ದು ಮೀನುಗಾರರಿಗೆ ದೋಣಿ ನೀಡಲಾಗಿದೆ ಎಂದರು.

ಶಾಲೆಯ ಜಮೀನು ಗುತ್ತಿಗೆ ನೀಡಿದ ಮುಖ್ಯಶಿಕ್ಷಕ: ಸದರಿ ಬ್ಯಾಲ್ಯ ಗ್ರಾ.ಪಂ.ವ್ಯಾಪ್ತಿಯ ಹನುಮಂತಪುರ ಗ್ರಾಮದ ಸರ್ಕಾರಿ ಶಾಲೆಗೆ 3.3 ಎಕರೆ ದಾನದ ಜಮೀನಿದ್ದು ಅದನ್ನು ಮುಖ್ಯಶಿಕ್ಷಕ ರವಿ ಹಾಗೂ ಎಸ್‌ಡಿಎಂಸಿ ಅಧ್ಯಕ್ಷರು ಶಾಮೀಲಾಗಿ ಲಕ್ಷಾಂತರ ಹಣ ಪಡೆದು ಅಕ್ರಮವಾಗಿ ಗುತ್ತಿಗೆ ನೀಡಿದ್ದಾರೆಂದು ಗ್ರಾಮದ ತಿಮ್ಮರಾಜು ಎಂಬುವವರು ದೂರು ನೀಡಿದ್ದಾರೆ. ಅಲ್ಲದೇ ಇತರೆ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲಿದ ದೂರುಗಳು ಸಹ ಬಂದಿದ್ದು, ಈ ಬಗ್ಗೆ ಕೂಲಂಕುಶವಾಗಿ ಪರಿಶೀಲಿಸಿ ವರದಿ ಬಂದ ನಂತರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್‌ ಭರವಸೆ ನೀಡಿದರು.

ಸದರಿ ಕಾರ್ಯಕ್ರಮದಲ್ಲಿ ಶಾಸಕ ಡಾ.ಜಿ. ಪರಮೇಶ್ವರ್‌ ಸದನದ ಕಾರಣದಿಂದ ಗೈರಾಗಿದ್ದು, ಜಿಲ್ಲಾಧಿಕಾರಿ ಕಾರ್ಯಕ್ರಮದ ನಿಮಿತ್ತ ಉಪ ವಿಭಾಗಾಧಿಕಾರಿ ಅನುಪಸ್ಥಿತಿಯಲ್ಲಿ ತಹಶೀಲ್ದಾರ್‌ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳಿಂದ ತಾಲೂಕು ಮಟ್ಟದ ಯೋಜನೆಗಳ ಬಗ್ಗೆ ಬೆಳಕು ಚೆಲ್ಲಲಾಯಿತು. ಗ್ರಾಪಂ ಅಧ್ಯಕ್ಷೆ ಗಂಗರತ್ನಮ್ಮ, ಗ್ರೇಡ್‌ 2 ತಹಶೀಲ್ದಾರ್‌ ತಿಪ್ಪೇಸ್ವಾಮಿ, ಉಪ ತಹಶೀಲ್ದಾರ್‌ ಜಯಲಕ್ಷ್ಮಮ್ಮ, ಕಂದಾಯಾಧಿಕಾರಿ ಜಯರಾಮಯ್ಯ, ವಿ.ಎಗಳಾದ ಶಿವರಾಮಯ್ಯ, ಶ್ರೀಧರ್‌, ಶ್ರೀನಿವಾಸ್‌, ನಟರಾಜ್‌ ಹಾಗೂ ಎಲ್ಲ ಇಲಾಖೆಗಳ ಅಧಿಕಾರಿಗಳು, ನೌಕರರು, ಗ್ರಾಮಸ್ಥರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next