Advertisement

1.68 ಕೋಟಿ ರೂ. ಮೌಲ್ಯದ ಚಿನ್ನಾಭರಣ ವಶ

12:49 AM Jul 04, 2019 | Team Udayavani |

ಬೆಂಗಳೂರು: ಕಾರು, ಬೈಕ್‌ಗಳ ಕಳವು, ಗಮನ ಬೇರೆಡೆ ಸೆಳೆದು ಕಳ್ಳತನ ಸೇರಿ 59 ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರಾಜ್ಯ ಮತ್ತು ಅಂತಾರಾಜ್ಯದ 10 ಮಂದಿಯನ್ನು ಬಂಧಿಸಿರುವ ಆಗ್ನೇಯ ವಿಭಾಗದ ಪೊಲೀಸರು, 1 ಕೋಟಿ 68 ಲಕ್ಷ ರೂ. ಮೌಲ್ಯದ 800 ಗ್ರಾಂ ಚಿನ್ನಾಭರಣಗಳು, 2,50 ಲಕ್ಷ ರೂ. ನಗದು, 15 ನಾಲ್ಕು ಚಕ್ರ ಮತ್ತು 49 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

Advertisement

ಐವತ್ತೂಂಭತ್ತು ಪ್ರಕರಣಗಳಲ್ಲಿ ಬೊಮ್ಮನಹಳ್ಳಿಯ 13, ಮಡಿವಾಳದ 14, ಆಡುಗೋಡಿಯ 13, ಪರಪ್ಪನ ಅಗ್ರಹಾರ 9, ಎಲೆಕ್ಟ್ರಾನಿಕ್‌ ಸಿಟಿ 10 ಪ್ರಕರಣಗಳು ಪತ್ತೆಯಾಗಿವೆ ಎಂದು ನಗರ ಪೊಲೀಸ್‌ ಆಯುಕ್ತ ಅಲೋಕ್‌ ಕುಮಾರ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಬೊಮ್ಮನಹಳ್ಳಿ ಕಾರು ಖದೀಮರು: ಟ್ಯಾಬ್‌ ಮೂಲಕ ಬೆಂಗಳೂರು ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿವಿಧ ಠಾಣೆಗಳ ವ್ಯಾಪ್ತಿಯಲ್ಲಿ ಮಾರುತಿ ಕಂಪನಿಯ ಕಾರುಗಳನ್ನೇ ಕಳವು ಮಾಡುತ್ತಿದ್ದ ತಮಿಳುನಾಡಿನ ಚೆನ್ನೈಮೂಲದ ಇಬ್ಬರು ಆರೋಪಿಗಳನ್ನು ಬೊಮ್ಮನಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಸದ್ದಾಂ ಹುಸೇನ್‌ ಅಲಿಯಾಸ್‌ ಸದ್ದಾಂ(29) ಮತ್ತು ಬಾಬು (30) ಬಂಧಿತರು. ಆರೋಪಿಗಳಿಂದ 9 ಸ್ವಿಪ್ಟ್, ನಾಲ್ಕು ಸ್ವಿಫ್ಟ್ ಡಿಸೈರ್‌ ಮತ್ತು ಎರಡು ಎರ್ಟಿಗಾ ಕಾರು ಸೇರಿ 15 ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಪ್ರಾಥಮಿಕ ಮಾಹಿತಿ ಪ್ರಕಾರ ಆರೋಪಿಗಳು ಈ ಹಿಂದೆ ಶೋರೂಂನಲ್ಲಿ ಹಾಗೂ ಮೆಕಾನಿಕ್‌ಗಳಾಗಿ ಕೆಲಸ ಮಾಡುತ್ತಿದ್ದು, ಈ ವೇಳೆ ಟ್ಯಾಬ್‌ ಮೂಲಕ ಕಾರುಗಳನ್ನು ಸ್ಟಾರ್ಟ್‌ ಮಾಡುವುದನ್ನು ಕರಗತ ಮಾಡಿಕೊಂಡಿದ್ದರು. ಅದನ್ನೇ ಬಂಡವಾಳವನ್ನಾಗಿ ಮಾಡಿಕೊಂಡಿದ್ದ ಆರೋಪಿಗಳು, ನಗರ, ಗ್ರಾಮಾಂತರ ಹಾಗೂ ತಮಿಳುನಾಡಿನ ನೀಲಗಿರಿ ಠಾಣೆ ವ್ಯಾಪ್ತಿಯಲ್ಲಿ ರಾತ್ರಿ ಹೊತ್ತು ನಿಂತಿದ್ದ ಮಾರುತಿ ಕಂಪನಿಯ ಸ್ವಿಫ್ಟ್ ಕಾರುಗಳನ್ನು ಗುರುತಿಸುತ್ತಿದ್ದರು.

ನಂತರ ಬಾಗಿಲಿನ ಬಿಡ್ಡಿಂಗ್‌ನ್ನು ಬಿಚ್ಚಿ, ಗ್ಲಾಸ್‌ ತೆರೆಯುತ್ತಿದ್ದರು. ಬಳಿಕ ಟ್ಯಾಬ್‌ನಲ್ಲಿರುವ ಆ್ಯಪ್‌ ಅಥವಾ ಯಂತ್ರ(ಸ್ವಿಫ್ಟ್ ಕಾರಿಗೆ ಸಂಬಂಧಿಸಿದ)ಗಳ ಮೂಲಕ ಕೇಬಲ್‌ ಅಳವಡಿಸಿ ಕಾರುಗಳನ್ನು ಸ್ಟಾರ್ಟ್‌ ಮಾಡಿಕೊಂಡು ತಮಿಳುನಾಡಿಗೆ ಕೊಂಡೊಯ್ದು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದ್ದರು. ಇತ್ತೀಚೆಗೆ ಬೊಮ್ಮನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿದ್ದ ಕಾರು ಕಳವು ಪ್ರಕರಣ ಬೆನ್ನತ್ತಿದಾಗ ಆರೋಪಿಗಳ ಕೃತ್ಯ ಬಯಲಾಗಿತ್ತು ಎಂದು ಅವರು ಹೇಳಿದರು.

Advertisement

ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ಸರಗಳವು: ಬಸ್‌ಗಳಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಮೌಲ್ಯಯುತ ವಸ್ತುಗಳನ್ನು ಕಳವು ಮಾಡುತ್ತಿದ್ದ ತಮಿಳುನಾಡಿನ ಜೋಲಾರಪೇಟೆಯ ಒಂದೇ ಕುಟುಂಬದ ಇಬ್ಬರು ಮಹಿಳೆಯರು ನಾಲ್ವರನ್ನು ಎಲೆಕ್ಟ್ರಾನಿಕ್‌ ಸಿಟಿ ಪೊಲೀಸರು ಬಂಧಿಸಿದ್ದಾರೆ. ಶಬರಿ (38), ಬಾಲಾಜಿ(49), ಜ್ಯೋತಿ(44) ಮತ್ತು ಸುಬಾಸ(20) ಬಂಧಿತರು. ಬಸ್‌ ನಿಲ್ದಾಣದಲ್ಲಿ ಪ್ರಯಾಣಿಕರಂತೆ ನಿಂತುಕೊಳ್ಳುವ ಆರೋಪಿಗಳು ಬ್ಯಾಗ್‌ಗಳನ್ನು ಕೊಂಡೊಯ್ಯುವ ಸಹ ಪ್ರಯಾಣಿಕರ ಜತೆ ಬಸ್‌ ಹತ್ತುತ್ತಿದ್ದರು.

ಸ್ವಲ್ಪ ದೂರ ಬಸ್‌ ಹೋಗುತ್ತಿದ್ದಂತೆ ಆ ನಿರ್ದಿಷ್ಟ ಪ್ರಯಾಣಿಕರ ಪಕ್ಕದಲ್ಲೇ ಆರೋಪಿತ ಮಹಿಳೆಯರು ಕುಳಿತುಕೊಳ್ಳುತ್ತಿದ್ದರು. ಇತರೆ ಆರೋಪಿಗಳು ಪಕ್ಕದಲ್ಲೇ ನಿಂತುಕೊಳ್ಳುತ್ತಿದ್ದರು. ಅನಂತರ ಕುಳಿತಿರುವ ಸೀಟಿನ ಕೆಳಗೆ ಚಿಲ್ಲರೆ ಹಣ ಹಾಕಿ, ತೆಗೆದುಕೊಳ್ಳುವಂತೆ ನಟಿಸಿ, ನಿರ್ದಿಷ್ಟ ಪ್ರಯಾಣಿಕರಿಗೆ ಹಣ ತೆಗೆದುಕೊಡುವಂತೆ ಕೇಳುತ್ತಿದ್ದರು.

ಆತ ಕೆಳಗೆ ಬಗ್ಗುತ್ತಿದ್ದಂತೆ, ಪಕ್ಕದಲ್ಲೇ ಇದ್ದ ಇತರೆ ಆರೋಪಿಗಳು ಆ ಪ್ರಯಾಣಿಕನ ಬ್ಯಾಗ್‌ಗೆ ಕೈ ಹಾಕಿ ಚಿನ್ನಾಭರಣ ಮತ್ತು ಹಣ ಕಳವು ಮಾಡಿ ಮುಂದಿನ ನಿಲ್ದಾಣಗಳಲ್ಲಿ ಇಳಿದು ಪರಾರಿಯಾಗುತ್ತಿದ್ದರು. ಈ ಸಂಬಂಧ ವಿಶೇಷ ಕಾರ್ಯಾಚರಣೆ ನಡೆಸಿದ ಎಲೆಕ್ಟ್ರಾನಿಕ್‌ ಸಿಟಿ ಠಾಣೆ ಇನ್‌ಸ್ಪೆಕ್ಟರ್‌ಎಂ.ಮಲ್ಲೇಶ್‌ ನೇತೃತ್ವದ ತಂಡ ಆರೋಪಿಗಳನ್ನು ಬಂಧಿಸಿ, 28 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಎರಡೂವರೆ ಲಕ್ಷ ರೂ. ನಗದು ವಶಕ್ಕೆ ಪಡೆದುಕೊಂಡಿದೆ.

ಮಡಿವಾಳ ದ್ವಿಚಕ್ರವಾಹನ ಕಳವು: ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಮೂವರು ಆರೋಪಿಗಳನ್ನು ಮಡಿವಾಳ ಪೊಲೀಸರು ಬಂಧಿಸಿದ್ದಾರೆ. ಕೇರಳದ ವೈನಾಡು ಜಿಲ್ಲೆಯ ಜೋಸಿನ್‌ ಟಿಟೋಸ್‌(20), ಸಿಮ್‌ಜಿತ್‌ ಶಶಿಕುಮಾರ್‌ (22) ಮತ್ತು ತಮಿಳುನಾಡಿನ ಸೆಲ್ವರಾಜ್‌ (30) ಬಂಧಿತರು. ಅವರಿಂದ 15 ಲಕ್ಷ ರೂ. ಮೌಲ್ಯದ 20 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳ ವಿರುದ್ಧ ಮಡಿವಾಳ ಸೇರಿ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ 20 ದ್ವಿಚಕ್ರ ವಾಹನ ಕಳವು ಪ್ರಕರಣಗಳು ಪತ್ತೆಯಾಗಿದ್ದು, ಐಷಾರಾಮಿ ಜೀವನಕ್ಕಾಗಿ ಕೃತ್ಯ ಎಸಗುತ್ತಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದರು.

ಆಡುಗೋಡಿ, ಪರಪ್ಪನ ಅಗ್ರಹಾರದಲ್ಲೂ ಕಳವು: ಐಷಾರಾಮಿ ಜೀವನಕ್ಕಾಗಿ ದ್ವಿಚಕ್ರ ವಾಹನ ಕಳವು ಮಾಡುತ್ತಿದ್ದ ಕಾನೂನು ಸಂಘರ್ಷಕ್ಕೊಳಗಾದವ ಸೇರಿ ಮೂವರು ಆರೋಪಿಗಳನ್ನು ಆಡುಗೋಡಿ ಮತ್ತು ಪರಪ್ಪನ ಅಗ್ರಹಾರ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಬಂಧಿಸಲಾಗಿದೆ. ದೀಪಕ್‌(18) ಮತ್ತು ಸುಹೇಲ್‌ (23) ಬಂಧಿತರು. ಅವರಿಂದ 25ಲಕ್ಷ ರೂ. ಮೌಲ್ಯದ 29 ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ. ಆರೋಪಿಗಳಿಂದ ನಗರದ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿದ್ದ 20 ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next