Advertisement

ಜೀಪ್‌ ಈಸ್‌ ಗ್ರೇಟ್‌! ಗುಡ್ಡಪ್ರದೇಶಗಳ ಜೀವನಾಡಿ

08:38 PM Nov 10, 2019 | Sriram |

ಅಡಕೆ ತೋಟ, ಕಾಫಿ ಎಸ್ಟೇಟು, ರಬ್ಬರ್‌ ಪ್ಲಾಂಟೇಷನ್ನುಗಳು ಮುಂತಾದ ಗುಡ್ಡ ಪ್ರದೇಶಗಳಲ್ಲಿ ವಾಸಿಸುವವರಿಗೆ ಜೀಪು ಕೇವಲ ವಾಹನವಷ್ಟೇ ಅಲ್ಲ, ಅಲ್ಲಿನ ಜೀವನಾಡಿ. ತೋಟದ ಕೆಲಸಗಾರರನ್ನು ಕರೆದೊಯ್ಯಲು, ಕೃಷಿ ಸಲಕರಣೆಗಳನ್ನು ಸಾಗಿಸಲು, ಕೃಷಿ ಉತ್ಪನ್ನಗಳನ್ನು ಮಾರುಕಟ್ಟೆಗೆ ಸರಬರಾಜು ಮಾಡಲು ಮತ್ತಿತರ ವ್ಯವಹಾರಗಳಿಗೆಲ್ಲಾ ಹೇಳಿಮಾಡಿಸಿದ್ದು ಜೀಪು. ಭಾರತಕ್ಕೆ ಜೀಪನ್ನು ಪರಿಚಯಿಸಿದ್ದು ಮಹೀಂದ್ರಾ ಸಂಸ್ಥೆ. ಅದು ಇತ್ತೀಚಿಗಷ್ಟೆ 75 ವರ್ಷಾಚರಣೆಯನ್ನು ಆಚರಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ, ಮಳೆ, ಬಿಸಿಲೆನ್ನದೆ, ಎಂಥಹುದೇ ರಸ್ತೆಯಲ್ಲೂ ಮುನ್ನುಗ್ಗುತ್ತಿದ್ದ ಜೀಪು. ತಮ್ಮ ಬಾಲ್ಯದ, ಕುಟುಂಬದ ಅವಿಬಾಜ್ಯ ಅಂಗವಾಗಿದ್ದನ್ನು ಲೇಖಕರು ಇಲ್ಲಿ ಬರೆದುಕೊಂಡಿದ್ದಾರೆ…

Advertisement

ಚಿಕ್ಕಂದಿನಿಂದಲೇ ನನಗೆ ಜೀಪ್‌ ಎಂದರೆ ಏನೋ ಪ್ರೀತಿ. ನಾನು ಹುಟ್ಟಿದ್ದು 1990ರಲ್ಲಿ. ಆಗ ಈಗಿನ ಥರ ಐಷಾರಾಮಿ ಕಾರುಗಳು ಎಲ್ಲರ ಮನೆಯಲ್ಲಿ ಇರಲಿಲ್ಲ. ಅಲ್ಲದೇ ರಸ್ತೆ ಸೌಕರ್ಯಗಳೂ ಅಷ್ಟೇ. ಈಗಿನಷ್ಟು ಚೆನ್ನಾಗಿರಲಿಲ್ಲ. ನಮ್ಮ ಮನೆಯಲ್ಲಿ ಇದ್ದಿದ್ದು ಸ್ಕೂಟರ್‌ ಮಾತ್ರ. ನಮ್ಮ ಪ್ರಯಾಣ ಎಷ್ಟೇ ಇದ್ದರೂ ಅದರಲ್ಲೇ ಸಾಗುತ್ತಿತ್ತು. ನಮ್ಮದು ಕೂಡು ಕುಟುಂಬ. ಮದುವೆ, ನಾಮಕರಣ ಹೀಗೆ ಮನೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ನಮ್ಮ ಸಹಾಯಕ್ಕೆ ಬರುತ್ತಿದ್ದದ್ದು ಜೀಪ್‌. ಅದರಲ್ಲಿ ಪ್ರಯಾಣಿಸುತ್ತಿದ್ದ ಖುಷಿಯೇ ಬೇರೆ. ಆ ಜೀಪ್‌ನ ಮಾಡೆಲ್‌ ಮಹೀಂದ್ರಾ ಎಂಎಂ540. ಮಾವ ಅದನ್ನು ಡ್ರೈವ್‌ ಮಾಡಿಕೊಂಡು ಹಾರ್ನ್ ಹಾಕಿಕೊಂಡು ಬರುತ್ತಿದ್ದರೆ, ಅದನ್ನು ನೋಡಲು ನಮಗಾಗ ಎರಡು ಕಣ್ಣುಗಳೂ ಸಾಲದು. ಆ ಜೀಪ್‌ಅನ್ನು ಮೂರೂವರೆ ಲಕ್ಷ ನೀಡಿ ಖರೀದಿಸಿದ್ದ ನೆನಪು.

ದಕ್ಷಿಣಕನ್ನಡದ ಕಡೆ ಎಲ್ಲಾ ಹಳ್ಳಿಮನೆಗಳು ಪ್ರಪಾತದ ಅಂಚಿನಲ್ಲಿ ಇರುತ್ತವೆ. ಏನೇ ಕೆಲಸಕ್ಕೆ ಹೋಗಬೇಕಿದ್ದರೂ ತುಂಬಾ ದೂರದವರೆಗೆ ನಡೆದೇ ಹೋಗಬೇಕಿರುತ್ತಿತ್ತು. ಬಸ್ಸುಗಳು ಹಾದುಹೋಗುತ್ತಿದ್ದ ರಸ್ತೆ, ತುಂಬಾ ದೂರದಲ್ಲಿ ಇರುತ್ತಿತ್ತು. ಈ ಎತ್ತರ- ತಗ್ಗಿನ ಪ್ರದೇಶಗಳಲ್ಲಿ ಜೀಪು ಬಿಟ್ಟರೆ ಬೇರಾವ ವಾಹನಗಳೂ ಸರಾಗವಾಗಿ ಓಡಾಡುವ ಹಾಗಿರಲಿಲ್ಲ. ಹೀಗಾಗಿ, ನಮಗೆ ಜೀಪ್‌ ಆಪದಾºಂಧವನೂ ಹೌದು. ಈಗಲೂ ನಮ್ಮ ಕಡೆ ಅದೆಷ್ಟೋ ಮನೆಗಳು, ಹತ್ತಿರದ ಪ್ರಯಾಣಕ್ಕೆ ಜೀಪನ್ನು ಅವಲಂಬಿಸಿವೆ. ಜೀಪು, ಎಲ್ಲಾ ರೀತಿಯ ರಸ್ತೆಗಳಿಗೂ ಹೊಂದಿಕೊಂಡು ಹೋಗುವುದೇ, ಎಲ್ಲರೂ ಅದನ್ನು ಇಷ್ಟಪಡುವುದಕ್ಕೆ ಕಾರಣ. ರಸ್ತೆ ಚೆನ್ನಾಗಿದ್ದರೆ ಆರಾಮ ಪ್ರಯಾಣ, ಹಳ್ಳ ದಿಣ್ಣೆಗಳಿಂದ ಕೂಡಿದ್ದರೆ ಜೀಪು ಕೂಡಾ ರಸ್ತೆಯ ತಾಳಕ್ಕೆ ಕುಣಿಯುತ್ತಾ ಸಾಗುವುದು. ನಮ್ಮ ಜೀಪಿನಲ್ಲಿ 8 ಮಂದಿ ಆರಾಮವಾಗಿ ಕುಳಿತುಕೊಳ್ಳಬಹುದಿತ್ತು. ಅಂದರೆ, 8 ಮಂದಿ ಕೂರುವ ಮಾದರಿಯಲ್ಲೇ ಅದರ ವಿನ್ಯಾಸವನ್ನು ಮಾಡಲಾಗಿತ್ತು. ಕೆಲವೊಮ್ಮೆ 10 ಮಂದಿಯನ್ನೂ, ಇನ್ನೂ ಕೆಲವೊಮ್ಮೆ ಅದಕ್ಕಿಂತ ಹೆಚ್ಚಿನ ಮಂದಿಯನ್ನೂ ತುಂಬಿಕೊಂಡು ಹೋಗಿದ್ದೂ ಉಂಟು. ನಾನಂತೂ ಕುಳಿತುಕೊಂಡು, ನಿಂತುಕೊಂಡೆಲ್ಲಾ ಹೋಗಿದ್ದೇನೆ. ಅವೆಲ್ಲವೂ ವಿನೂತನ ಅನುಭವ.

ಜೀಪಿನಲ್ಲಿ ಕಂಪನಿ ಕೊಡುತ್ತಿದ್ದ ಕೆಲಸಗಾರರ ಜೊತೆ, ಮನೆ ಮಂದಿ ಜೊತೆ ಹಲವು ವಿಷಯಗಳ ಬಗ್ಗೆ ಮಾತನಾಡುತ್ತಾ ಹೊತ್ತು ಕಳೆಯುತ್ತಿದ್ದಿದ್ದೇ ಗೊತ್ತಾಗುತ್ತಿರಲಿಲ್ಲ. ಇವೆಲ್ಲದರ ಜೊತೆ ಮಾವ ಜೀಪಿನ ಕಾರ್ಯಕ್ಷಮತೆಯ ಬಗ್ಗೆ ಹೇಳಿದ್ದನ್ನೂ ಹೇಗೆ ಮರೆಯುವುದು?! ನಮ್ಮ ಜೀಪು ಕೊಡುತ್ತಿದ್ದ ಮೈಲೇಜು 12 ಕಿ.ಮೀ. ಎಂ.ಎಂ. 540 ಮಾಡೆಲ್‌ ಜೀಪು ಬರುವುದಕ್ಕೆ ಮೊದಲು ನಮ್ಮಲ್ಲಿ ಎಂ.ಎಂ. ಸಿ3500 ಮಾಡೆಲ್‌ ಇದ್ದಿತು. ಅದಕ್ಕೆ ಹೋಲಿಸಿದರೆ ಹೊಸ ಮಾಡೆಲ್‌ ಸುಧಾರಿತವಾಗಿತ್ತು. ಅದರ ಎಂಜಿನ್‌ ಶಬ್ದ ಕೂಡಾ ಕಡಿಮೆ. ಅದಕ್ಕಿಂತ ಹೆಚ್ಚಾಗಿ ಹಳೆಯ ಜೀಪಿನಲ್ಲಿ ಬಿಡಿಭಾಗಗಳು ಬಹಳ ಬೇಗ ಬಿಸಿಯಾಗುತ್ತಿದ್ದವು, ಹೊಸತರಲ್ಲಿ ಆ ಸಮಸ್ಯೆ ಇರಲಿಲ್ಲ. ನಮ್ಮ ಜೀಪಿನ ವಾರ್ಷಿಕ ನಿರ್ವಹಣಾ ಖರ್ಚು ಏನಿಲ್ಲವೆಂದರೂ ಸುಮಾರು 20,000 ರೂ. ತಗುಲುತ್ತಿತ್ತು. ಮಾವ, ಜೀಪನ್ನು ಮನೆಯ ಸದಸ್ಯನಂತೆಯೇ ನೋಡಿಕೊಳ್ಳುತ್ತಿದ್ದರು. ಜೀಪು ಕೃಷಿಕರ ಆಪತಾºಂಧವ ಎನ್ನುವುದಂತೂ ನಿಜ. ಅದೇನೇ ಕಷ್ಟಕರ ಕೆಲಸವಿರಲಿ, ಸಾಗಾಟವಿರಲಿ; ನಮ್ಮ ಜೀಪು- ಬಂದದ್ದೆಲ್ಲವನ್ನೂ ಸ್ವೀಕರಿಸಿ ಮುನ್ನುಗ್ಗುತ್ತಿತ್ತು. ಅಡಕೆ, ತೆಂಗು, ರಾಸಾಯನಿಕ ಗೊಬ್ಬರ ದನಕರುಗಳ ಹಿಂಡಿ ಇತ್ಯಾದಿ ವಸ್ತುಗಳನ್ನು ಒಂದೇ ಟ್ರಿಪ್ಪಿನಲ್ಲಿ ಕೊಂಡೊಯ್ಯುವಷ್ಟು ಸಾಮರ್ಥ್ಯ ಅದಕ್ಕಿತ್ತು.

ನಮ್ಮ ಊರಿನಲ್ಲಿ ಬಹುತೇಕರು ಕೃಷಿಯನ್ನೇ ಅವಲಂಬಿಸಿದ್ದರು. ಆದರೆ, ಎಲ್ಲರ ಬಳಿಯೂ ಜೀಪು ಇರಲಿಲ್ಲ. ಜೀಪು ಇಲ್ಲದವರು ಅದನ್ನು ಬಾಡಿಗೆಗೆ ಪಡೆದು ತಮ್ಮ ಕೆಲಸಗಳನ್ನು ಪೂರೈಸಿಕೊಳ್ಳುತ್ತಿದ್ದರು. ಜೀಪ್‌ ಅದೆಷ್ಟು ಕಷ್ಟಸಹಿಷ್ಣು, ಅದೆಷ್ಟು ಉಪಕಾರಿ ಎನ್ನುವುದನ್ನು ತಿಳಿಯಲು ಮಳೆಗಾಲದಲ್ಲಿ ಅದರ ಕಾರ್ಯಚಟುವಟಿಕೆಗಳನ್ನು ನೋಡಬೇಕು. ನಮ್ಮ ಹಳ್ಳಿಗಾಡಿನ ಬೆಟ್ಟಗುಡ್ಡಗಳ ಪ್ರದೇಶದಲ್ಲಿ ಭೋರ್ಗರೆಯುವಂತೆ ಸುರಿಯುತ್ತಿರುವ ಮಳೆಯ ನಡುವೆ, ಕೆಸರನ್ನು ಲೆಕ್ಕಿಸದೆ ಸಾಗುವ ಜೀಪನ್ನು ನೋಡಿದರೆ ಎಂಥವರಿಗಾದರೂ ಮೈಜುಮ್ಮೆನ್ನದೇ ಇರದು. ಈ ಕಾರಣಗಳಿಂದಾಗಿಯೇ ಜೀಪುಗಳು ಕರಾವಳಿ ಮತ್ತು ಮಲೆನಾಡು ಭಾಗಗಳಲ್ಲಿ ಪ್ರಸಿದ್ದಿ ಪಡೆದಿದ್ದು. ಅದೆಷ್ಟೋ ಜನರ ಸಂಕಷ್ಟಗಳಿಗೆ ಹೆಗಲು ನೀಡಿದೆ ಜೀಪ್‌. ಕುಟುಂಬದ ಪ್ರಯಾಣಕ್ಕಾಗಿಯೂ, ತೋಟದ ಕೆಲಸಗಾರರ ಸಾಗಾಟಕ್ಕಾಗಿಯೂ, ಮಾರುಕಟ್ಟೆಗೆ, ಮಂಡಿಗೆ ತೆರಳುವಾಗಲೂ ಜೀಪ್‌ ಸಹಕಾರಿ ಎನ್ನುವುದು ಸಾಬೀತಾಗಿದೆ.

Advertisement

ಭಾರತದಲ್ಲಿ ಮಹೀಂದ್ರಾ ಹೆಜ್ಜೆ
ಮಹೀಂದ್ರಾ ಸಂಸ್ಥೆ, 1945ರಲ್ಲಿ ಸ್ಥಾಪನೆಗೊಂಡಿತ್ತು. ಸಹೋದರರಾದ ಕೈಲಾಶ್‌ಚಂದ್ರ ಮಹೀಂದ್ರಾ, ಜಗದೀಶ್‌ಚಂದ್ರ ಮಹೀಂದ್ರಾ ಮತ್ತು ಗುಲಾಮ್‌ ಮೊಹಮ್ಮದ್‌ ಸಂಸ್ಥೆಯ ಸ್ಥಾಪಕರು. ಆಗಿನ್ನೂ ಅದು ಅಟೋಮೊಬೈಲ್‌ ಕ್ಷೇತ್ರಕ್ಕೆ ಕಾಲಿಟ್ಟಿರಲಿಲ್ಲ. ಅದು ಕೇವಲ ಸ್ಟೀಲ್‌ ಉದ್ಯಮದಲ್ಲಿ ತೊಡಗಿಕೊಂಡಿತ್ತು. 1947ರಲ್ಲಿ ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಾಗ, ಗುಲಾಮ್‌ ಮೊಹಮ್ಮದ್‌ ಪಾಕಿಸ್ತಾನಕ್ಕೆ ಹೋದರು. ಮುಂದೆ 1948ರಲ್ಲಿ ಅಲ್ಲಿ ಕೇಂದ್ರ ಆರ್ಥಿಕ ಸಚಿವ ಸ್ಥಾನವನ್ನೂ ಅಲಂಕರಿಸಿದರು. ಇತ್ತ ಮಹೀಂದ್ರಾ ಸಂಸ್ಥೆ ತನ್ನ ವಿಸ್ತಾರವನ್ನು ಹೆಚ್ಚಿಸಿಕೊಳ್ಳಲು ರೂಪುರೇಷೆಯನ್ನು ಸಿದ್ಧಪಡಿಸಿಕೊಳ್ಳುತ್ತಿತ್ತು. ಎರಡನೇ ವಿಶ್ವ ಮಹಾಯುದ್ಧದಲ್ಲಿ ಬಳಕೆಯಾದ ವಾಹನಗಳಲ್ಲಿ “ವಿಲ್ಲಿಸ್‌ ಜೀಪ್‌’ಗೆ ಅಗ್ರಸ್ಥಾನ. ಅಮೆರಿಕ, ಸುಮಾರು 6,50,000 ಯೂನಿಟ್‌ಗಳನ್ನು ಬಳಸಲಾಗಿತ್ತು. ರಫ್ ಬಳಕೆಗೆ ಹೆಸರುವಾಸಿಯಾದ ವಿಲ್ಲಿಸ್‌ ಜೀಪುಗಳನ್ನು ಭಾರತದಲ್ಲಿ ಪರಿಚಯಿಸಲು ಮಹೀಂದ್ರಾ ನಿರ್ಧರಿಸಿತು. ಆ ಮೂಲಕ ಒಪ್ಪಂದ ಮಾಡಿಕೊಂಡು ಜೀಪುಗಳ ಬಿಡಿಭಾಗಗಳನ್ನು ಆಮದು ಮಾಡಿಕೊಂಡು ಭಾರತದಲ್ಲಿ ಅವುಗಳನ್ನು ಅಸೆಂಬಲ್‌(ಜೋಡಿಸಿ) ಮಾಡಿ ಮಾರುಕಟ್ಟೆಗೆ ಪರಿಚಯಿಸಿತು. ಅಲ್ಲಿಂದ ಮುಂದೆ, ನೇರ ಒಪ್ಪಂದ ಮಾಡಿಕೊಂಡು ಜೀಪುಗಳನ್ನು ಭಾರತದಲ್ಲೇ ತಯಾರಿಸಲು ಅನುಮತಿ ಪಡೆದುಕೊಂಡಿತು. ಹೀಗೆ ಶುರುವಾದ ಮಹೀಂದ್ರಾ ಕಂಪನಿ, ಇಂದು ತನ್ನ ವಾಹನಗಳನ್ನು ನಾನಾ ದೇಶಗಳಿಗೆ ರಫ್ತು ಮಾಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ. ಪ್ರಸ್ತುತ, ಸಂಸ್ಥೆಯ ಚೇರ್‌ಮನ್‌ ಆಗಿರುವ ಆನಂದ್‌ ಮಹೀಂದ್ರಾ, ಸಂಸ್ಥೆಯ ಸಹಸ್ಥಾಪಕ ಜಗದೀಶ್‌ ಚಂದ್ರ ಮಹೀಂದ್ರಾ ಅವರ ಮೊಮ್ಮಗ.

ಇಂದು ಜಗತ್ತಿನ ಅತಿ ದೊಡ್ಡ ಟ್ರ್ಯಾಕ್ಟರ್‌ ತಯಾರಕ ಸಂಸ್ಥೆ ಎಂಬ ಹೆಸರಿಗೆ ಪಾತ್ರವಾಗಿರುವ ಮಹೀಂದ್ರಾ- ಟ್ರ್ಯಾಕ್ಟರ್‌, ಜೀಪು, ಎಸ್‌ಯುವಿ ಇಷ್ಟಕ್ಕೇ ಸೀಮಿತವಾಗಿಲ್ಲ. ಏರೋಸ್ಪೇಸ್‌, ಕೃಷಿ, ದೋಣಿ, ಕಟ್ಟಡ ಕಾಮಗಾರಿ ಉಪಕರಣ, ಸೇನೆ, ರೆಸಾರ್ಟ್‌, ಐ.ಟಿ, ಲಾಜಿಸ್ಟಿಕ್ಸ್‌, ಇನುÒರೆನ್ಸ್‌, ರಿಯಲ್‌ ಎಸ್ಟೇಟ್‌ ಸೇರಿದಂತೆ 22 ಕ್ಷೇತ್ರಗಳಲ್ಲಿ ಸಂಸ್ಥೆ ತೊಡಗಿಕೊಂಡಿದೆ!

– ಶ್ರೀಶ ಭಟ್‌, ಪುತ್ತೂರು

Advertisement

Udayavani is now on Telegram. Click here to join our channel and stay updated with the latest news.

Next