Advertisement

ರಾಜ್ಯಾದ್ಯಂತ ಸಮಗ್ರ ನೀರಾವರಿಗೆ ಜೆಡಿಎಸ್‌ ಸಂಕಲ್ಪ

11:13 AM May 08, 2022 | Team Udayavani |

ಬಾಗಲಕೋಟೆ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷವನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತಂದಲ್ಲಿ ಇಡೀ ರಾಜ್ಯಾದ್ಯಂತ ಸಮಗ್ರ ನೀರಾವರಿ ಮಾಡುವ ಸಂಕಲ್ಪದೊಂದಿಗೆ ಆರಂಭವಾದ ಜನತಾ ಜಲಧಾರೆ ಯಾತ್ರೆ ಮೇ 8ರಂದು ಬಾಗಲಕೋಟೆ ನಗರಕ್ಕೆ ಆಗಮಿಸಲಿದ್ದು, ಮೇ 9ರಂದು ಬಾದಾಮಿಯಲ್ಲಿ ಬೃಹತ್‌ ಸಮಾವೇಶ ನಡೆಯಲಿದೆ ಎಂದು ಜೆಡಿಎಸ್‌ ಜಿಲ್ಲಾ ಯುವ ಘಟಕದ ಅಧ್ಯಕ್ಷ ಗೋಪಾಲ ಲಮಾಣಿ ಹೇಳಿದರು.

Advertisement

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ 15 ಭಾಗಗಳಿಂದ ಜನತಾ ಜಲಧಾರೆ ಯಾತ್ರೆ ಕೈಗೊಂಡಿದ್ದು, ಈ ಯಾತ್ರೆಯುದ್ದಕ್ಕೂ ನದಿ, ಬ್ಯಾರೇಜ್‌ಗಳಿಗೆ ವಿಶೇಷ ಪೂಜೆ ಹಾಗೂ ಜಿಲ್ಲೆಯ ಮೂರು ಪ್ರಮುಖ ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ನದಿಗಳ ಜಲ ಸಂಗ್ರಹ ಮಾಡಲಾಗಿದೆ. ಈ ಜಲವನ್ನು ಬೆಂಗಳೂರಿನ ಪಕ್ಷದ ಕಚೇರಿಯಲ್ಲಿ ಮುಂದಿನ ಚುನಾವಣೆ ವರೆಗೂ ಜೋಪಾನವಾಗಿಟ್ಟು, ನಿತ್ಯ ಜಲಪೂಜೆ ನಡೆಯಲಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದ ಪ್ರತಿಯೊಂದು ನದಿ ಪಾತ್ರದಲ್ಲೂ ನೀರಾವರಿ ಕೈಗೊಳ್ಳುತ್ತೇವೆ ಎಂಬ ಸಂಕಲ್ಪವೇ ಈ ಜನತಾ ಜಲಧಾರೆ ಯಾತ್ರೆಯ ಉದ್ದೇಶವಾಗಿದೆ ಎಂದರು.

ಜಲಧಾರೆ ಯಾತ್ರೆ ಈಗಾಗಲೇ ಬಾಗಲಕೋಟೆ ಜಿಲ್ಲೆಯನ್ನು ಪ್ರವೇಶಿಸಿದ್ದು ಮೇ. 8 ರಂದು ನಗರಕ್ಕೆ ಆಗಮಿಸಲಿದೆ. ಅಂದು ನಗರದ ಅಂಜುಮನ್‌ ಸಂಸ್ಥೆಯ ಹತ್ತಿರ ಅದ್ದೂರಿ ಸ್ವಾಗತದೊಂದಿಗೆ ಬೈಕ್‌ ರ್ಯಾಲಿ ನಡೆಯಲಿದೆ. ಬಾಗಲಕೋಟೆಯ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಸಿದರು. ಅಂದು ಬೆಳಗ್ಗೆ 11ಕ್ಕೆ ಬಾಗಲಕೋಟೆಯ ಅಂಜುಮನ್‌ ಸಂಸ್ಥೆಯ ಆವರಣದಲ್ಲಿ ಜನತಾ ಜಲಧಾರೆ ಯಾತ್ರೆಗೆ ಚಾಲನೆ ನೀಡಲಿದ್ದು ಮಠಾಧೀಶರು, ಮೌಲ್ವಿಗಳು, ಪಾದ್ರಿಗಳು ಹಾಗೂ ಪಕÒ‌ದ ಮುಖಂಡರು, ಕಾರ್ಯಕರ್ತರು ಭಾಗವಹಿಸಲಿದ್ದಾರೆ.ಯಾತ್ರೆಗೆ ಚಾಲನೆ ನೀಡಿದ ನಂತರ ಬೈಕ್‌ ರ್ಯಾಲಿ ಆರಂಭವಾಗಿ ನಗರ, ನವನಗರ ಹಾಗೂ ಬಾಗಲಕೋಟೆಯಲ್ಲಿ ಸಂಚರಿಸಲಿದೆ. ಬಸವೇಶ್ವರ ವೃತ್ತದಲ್ಲಿ ಬಸವೇಶ್ವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದ ನಂತರ, ಈ ಯಾತ್ರೆ ಬಾದಾಮಿಗೆ ತೆರಳಲಿದೆ ಎಂದು ವಿವರಿಸಿದರು.

ಬಾದಾಮಿಗೆ ಎಚ್‌ಡಿಕೆ: ಜೆಡಿಎಸ್‌ ಯುವ ಮುಖಂಡ ವಿಜಯ ತೋಟಣ್ಣವರ ಮಾತನಾಡಿ, ಮೇ. 9 ರಂದು ಬಾದಾಮಿಯಲ್ಲಿ 11ಕ್ಕೆ ಜನತಾ ಜಲಧಾರೆ ಯಾತ್ರೆಯ ಸಮಾವೇಶವು ಜರುಗಲಿದೆ. ಸಮಾವೇಶದಲ್ಲಿ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ, ಮುಖಂಡರಾದ ಸಿ.ಎಂ. ಇಬ್ರಾಹಿಂ, ಬಂಡೆಪ್ಪ ಕಾಶೆಂಪೂರ ಮುಂತಾದವರು ಭಾಗವಹಿಸಲಿದ್ದಾರೆ. ಜಿಲ್ಲೆಯ ಸುಮಾರು 25 ಸಾವಿರಕ್ಕೂ ಹೆಚ್ಚು ಜನರು ಈ ಸಮಾವೇಶದಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ತಿಳಿಸಿದರು.

ಎರಡು ರಾಷ್ಟ್ರೀಯ ಪಕ್ಷ‌ಗಳು ಜನತೆಯ ಆಶಯಕ್ಕೆ ತಕ್ಕಂತೆ ಕಾರ್ಯ ನಿರ್ವಹಿಸದೇ ವಿಫಲವಾಗಿದೆ. ರಾಜ್ಯದ ನೀರಾವರಿ ಯೋಜನೆಗಳು ಸಂಪೂರ್ಣ ನೆನಗುದಿಗೆ ಬಿದ್ದಿವೆ. ಹೀಗಾಗಿ 2023ರ ಚುನಾವಣೆಯಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್‌ಗೆ ಅಧಿಕಾರ ದೊರೆತರೆ ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರ್ಣಗೊ ಳಿಸುವ ಸಂಕಲ್ಪವನ್ನು ಕುಮಾರಸ್ವಾಮಿ ಮಾಡಿದ್ದಾರೆ. ಅದಕ್ಕಾಗಿಯೇ ಜನತಾ ಜಲಧಾರೆ ಯಾತ್ರೆ ಆರಂಭಿಸಲಾಗಿದೆ. ಈ ಸಂಕಲ್ಪಕ್ಕೆ ರಾಜ್ಯದ ಜನತೆ ಬೆಂಬಲಿಸಿ ಶಕ್ತಿ ತುಂಬಬೇಕು ಎಂದು ಮನವಿ ಮಾಡಿದರು. ಪಕ್ಷದ ಮುಖಂಡರಾದ ಎಂ.ಎನ್‌.ನದಾಫ್‌, ಯಾಸೀನ್‌ ಮಿರ್ಜಿ, ರಶೀದ ಬಾಗವಾನ ಮುಂತಾದವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next