ದೇವನಹಳ್ಳಿ: ಸಂಪೂರ್ಣ ಬಹುಮತ ಸಾಧಿಸಿ ಅಧಿಕಾರ ಹಿಡಿಯು ವುದೇ ಪಂಚರತ್ನ ಯೋಜನೆಯ ಬಹುಮುಖ್ಯ ಉದ್ದೇಶವಾಗಿದೆ ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.
ಪಟ್ಟಣದ ಶಾಸಕರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಹಮ್ಮಿಕೊಂಡಿರುವ ‘ಪಂಚರತ್ನ’ ರಥಯಾತ್ರೆ ನ.28 ರಂದು ದೇವನಹಳ್ಳಿ ತಾಲೂಕು ಪ್ರವೇಶಿಸಲಿದೆ. ಕಾರಹಳ್ಳಿ ಕ್ರಾಸ್ ನಲ್ಲಿ ಚಿಕ್ಕಬಳ್ಳಾಪುರದಿಂದ ಬರುತ್ತಿರುವ ರಥಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತ ಮಾಡಲಾಗುವುದು ಎಂದರು.
ರಥಯಾತ್ರೆಯಲ್ಲಿ ಸಾರ್ವಜನಿಕರು ಸ್ವಯಂಪ್ರೇರಿತರಾಗಿ ಭಾಗ ವಹಿಸಲಿದ್ದು, ಹಣ ಕೊಟ್ಟು ಯಾರನ್ನು ಕರೆಯಿಸುವುದಿಲ್ಲ. ರಸ್ತೆಯ ಇಕ್ಕೆಲ್ಲಗಳಲ್ಲಿ ಗ್ರಾಪಂ ವ್ಯಾಪ್ತಿಯ ಮುಖಂಡರು, ಕಾರ್ಯಕರ್ತರು, ಅಭಿಮಾನಿಗಳನ್ನು ಎಚ್.ಡಿ.ಕುಮಾರಸ್ವಾಮಿ ಮಾತನಾಡಿಸಲಿದ್ದಾರೆ. ಅವರ ಜನಪ್ರಿಯತೆಯಿಂದಲೇ ಸಾವಿರಾರು ಜನರು ಸೇರುತ್ತಾರೆ. ಜನರ ಬಳಿಗೆ ಕುಮಾರಣ್ಣ ಬಂದು ವಾಸ್ತವಾಂಶದ ಅರಿತುಕೊಳ್ಳಲಿದ್ದಾರೆ. ದೇವನಹಳ್ಳಿಯೂ ರೇಷ್ಮೆ, ಹಾಲು ಉತ್ಪಾದನೆ, ದ್ರಾಕ್ಷಿ ಕೃಷಿಗೆ ಹೆಸರು ವಾಸಿಯಾಗಿದ್ದು, ಇಲ್ಲಿನ ನಿವಾಸಿಗಳ ಕಷ್ಟ-ಸುಖಗಳ ಬಗ್ಗೆ ಅವರೇ ಭೇಟಿ ನೀಡಿ ಮಾಹಿತಿ ಪಡೆಯುವ ಒಂದು ಸದುದ್ದೇಶದ ಕಾರ್ಯ ಕ್ರಮ ಇದಾಗಿದೆ ಎಂದರು.
ಎಲ್ಲ ಸಮುದಾಯದ ಏಳಿಗೆ: ತಾಲೂಕಾದ್ಯಂತ ಹಬ್ಬದ ವಾತಾವರಣ ದಲ್ಲಿ ಪಂಚರತ್ನ ಯಾತ್ರೆಯನ್ನು ಸ್ವಾಗತಿಸಲು ಸಜ್ಜುಗೊಳಿಸಲಾಗಿದೆ. ಶಿಕ್ಷಣ, ಆರೋಗ್ಯ, ರೈತ, ವಸತಿ, ಯುವಕರು ಹಾಗೂ ಮಹಿಳಾ ಸಬಲೀಕರಣಕ್ಕೆ ವಿಶಿಷ್ಟವಾದಂತಹ ಯೋಜನೆ ಹೊತ್ತು “ಪಂಚರತ್ನ’ ರಥವೂ ತಾಲೂಕಿಗೆ ಬರುತ್ತಿದೆ. ನಿವೃತ್ತ ಐಎಎಸ್ ಅಧಿಕಾರಿಗಳು, ವಿಚಾರಶೀಲರು, ತಜ್ಞರು, ಪ್ರಗತಿಪರರೊಂದಿಗೆ ಚರ್ಚೆ ನಡೆಸಿ ಈ ಯೋಜನೆ ರೂಪಗೊಂಡಿದೆ. ಎಲ್ಲ ಧರ್ಮಿಯರು, ಎಲ್ಲ ಸಮು ದಾಯಗಳ ಏಳಿಗೆಯ ಬಗ್ಗೆ ವಿಶೇಷ ಕಾಳಜಿ ‘ಪಂಚರತ್ನ’ ಯೋಜನೆ ಯಲ್ಲಿದೆ ಎಂದರು.
Related Articles
ಗ್ರಾಮವಾಸ್ತವ್ಯದಲ್ಲಿ ರೈತರೊಂದಿಗೆ ಸಂವಾದ: ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಮುನೇಗೌಡ ಮಾತನಾಡಿ, ದೊಡ್ಡಬಳ್ಳಾಪುರದ ಗಡಿಗೆ ಹೊಂದಿಕೊಂಡಿರುವ ಆಲೂರು ದುದ್ದನಹಳ್ಳಿ ಗ್ರಾಮದಲ್ಲಿ ಸೋಮ ವಾರ ರಾತ್ರಿ ಎಚ್.ಡಿ.ಕುಮಾರಸ್ವಾಮಿ ಗ್ರಾಮವಾಸ್ತವ್ಯ ಮಾಡಲಿದ್ದು, ಅಂದು ರಾತ್ರಿ 100 ಪ್ರಗತಿ ಪರ ಹಾಲು ಉತ್ಪಾದಕರೊಂದಿಗೆ ವಿಶೇಷ ಸಂವಾದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದಲಿತರು, ಅಲ್ಪ ಸಂಖ್ಯಾತರೊಂದಿಗೂ ಚರ್ಚೆ ನಡೆಸಲಿದ್ದಾರೆ ಎಂದು ತಿಳಿಸಿದರು.
ಜೆಡಿಎಸ್ ಪ್ರಧಾನ ಕಾರ್ಯದರ್ಶಿ ಜಿ.ಎ.ರವೀಂದ್ರ, ಹಾಪ್ ಕಾಮ್ಸ್ ಮಾಜಿ ನಿರ್ದೇಶಕ ಹುರುಳುಗುರ್ಕಿ ಶ್ರೀನಿವಾಸ್, ಮುಖಂಡ ವೆಂಕಟಗಿರಿಕೊಟೆ ಲೋಕೇಶ್, ಎಂ.ಆನಂದ್, ಮತ್ತಿತರರು ಇದ್ದರು.