Advertisement

ನಮ್ಮ ಕೆಲಸ ಗುರುತಿಸಿ ಜೆಡಿಎಸ್‌ಗೆ ಮತ ಹಾಕುತ್ತಾರೆ : ಮಾಜಿ ಪ್ರಧಾನಿ ದೇವೆಗೌಡ

10:11 PM Oct 12, 2021 | Team Udayavani |

ಸಿಂದಗಿ: ಉಪಚುನಾವಣೆ ಯಾರು ಬಯಸಿದ್ದಲ್ಲ. ಈ ಚುನಾವಣೆಯಲ್ಲಿ ಜೆಡಿಎಸ್ ಯಾವ ಪಕ್ಷವನ್ನು ಗುರಿಯನ್ನಾಗಿಟ್ಟುಕೊಂಡು ಸ್ಪರ್ಧಿಸುತ್ತಿಲ್ಲ. ಗೆಲ್ಲಬೇಕು ಎಂದು ಸ್ಪರ್ಧಿಸಲಾಗುತ್ತಿದೆ ಎಂದು ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ ಅವರು ಹೇಳಿದರು.

Advertisement

ಮಂಗಳವಾರ ಪಟ್ಟಣದಲ್ಲಿ ಉಪಚುನಾಣೆ ನಿಮಿತ್ತ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಂ.ಸಿ. ಮನಗೂಳಿ ಅವರು ಪಕ್ಷ ನಿಷ್ಠಾವಂತರು. ಅವರು ನಮ್ಮನ್ನಗಲಿದ್ದರಿಂದ ಈ ಉಪಚುನಾವಣೆ ಬಂದಿದೆ. ಈ ಕ್ಷೇತ್ರದಲ್ಲಿ ನನ್ನ ಅವಧಿಯಲ್ಲಿ, ಕುಮಾರಸ್ವಾಮಿ ಅವರ ಅವಧಿಯಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿದೆ. ನನ್ನ ಅಭಿಪ್ರಾಯದಂತೆ ಈ ಕ್ಷೇತ್ರದಲ್ಲಿ ಕೆಲಸ ಮಾಡಿರುವುದನ್ನು ಗುರುತಿಸುವವರು ಸಾಕಷ್ಟು ಜನರಿದ್ದಾರೆ. ನಾಮ ಪತ್ರ ಹಿಂದಕ್ಕೆ ಪಡೆಯುವ ದಿನದ ನಂತರ ಕ್ಷೇತ್ರದಲ್ಲಿ 9 ದಿನಗಳ ಕಾಲ ಉಳಿದುಕೊಂಡು ಜೆಡಿಎಸ್ ಪಕ್ಷಕ್ಕೆ ಮತ ನೀಡಬೇಕು ಎಂದು ಮತದಾರರ ಮನೆಗೆ ಹೋಗಿ  ಕೇಳುತ್ತೇನೆ. ಮೊಮ್ಮಗಳ ಸಮಾನವಾಗಿರುವ ನಾಜೀಯಾ ಅಂಗಡಿ ಅವರನ್ನು ಖಂಡಿತವಾಗಿ ಗೆಲ್ಲಿಸಲು ಪ್ರಾಮಾಣಿಕ ಕೆಲಸ ಮಾಡುತ್ತೇನೆ ಎಂದು ಹೇಳಿದರು.

ನಾನು ಸುಮ್ಮನೆ ಯಾರನ್ನು ಟೀಕೆ ಮಾಡುವುದಿಲ್ಲ. ಯಾರ ಬಗ್ಗೆ ಮಾತನಾಡುವುದಿಲ್ಲ. ನನಗೆ ಅವಶ್ಯಕತೆಯಿಲ್ಲ. ಪಕ್ಷಕ್ಕೆ ಯಾರಾದರು ಟೀಕೆ ಮಾಡಿದರೆ ಅದಕ್ಕೆ ಸಮರ್ಥ ಉತ್ತರ ನೀಡಲು ನನಗೆ ಶಕ್ತಿಯಿದೆ. ನನಗೆ ಯಾರ ಭಯವು ಇಲ್ಲ. ಈ ಉಪಚುನಾವಣೆಯಲ್ಲಿ ಪಕ್ಷದ ಎದುರಾಳಿಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ವಿರುದ್ಧ ಹೋರಾಟ ಮಾಡುತ್ತೇವೆ. ಯಾವ ದಾಕ್ಷಣ್ಯಕ್ಕೂ ಗುರಿಯಾಗುವುದಿಲ್ಲ ಎಂದು ಹೇಳಿದರು.

ಮನಗೂಳಿ ಅವರ ನಿಧನದಿಂದ ಸಿಂದಗಿ ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಮುಳಿಗಿ ಹೋಗುತ್ತದೆ ಎಂದು ಪಕ್ಷದ ಮುಖಂಡರು ನನ್ನಬಳಿ ಬಂದರು. ಉಪಚುನಾವಣೆಯಲ್ಲಿ ಸ್ಪರ್ಧಿಸಲು 9 ಜನ ಮುಂದಾದರು. ನಾವು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷ ಬೆಳೆಸುತ್ತೇವೆ ಎಂದರು. ಅವರಲ್ಲಿ ಪಕ್ಷದ ಎಲ್ಲ ಮುಖಂಡರು ಚಿಂತನೆ ಮಾಡಿ ಒಬ್ಬ ಸಮರ್ಥ ಅಲ್ಪಸಂಖ್ಯಾತ ಮುಸ್ಲಿಂ ಮಹಿಳಗೆ ನೀಡಲಾಗಿದೆ. ಅಂಗಡಿ ಕುಟುಂಬ ಎಲ್ಲ ಸಮುದಾಯವನ್ನು ವಿಶ್ವಾಸಕ್ಕೆ ತಗೆದುಕೊಂಡು ಹೋಗುವ ಮನೆತನವಾಗಿದೆ. ಆದ್ದರಿಂದ ಮೊಮ್ಮಗಳ ಸಮಾನಳಾದ ನಾಜೀಯಾ ಅಂಗಡಿ ಅವರಿಗೆ ಟಿಕೆಟ್ ನೀಡಲಾಗಿದೆ. ಅವರ ಗೆಲುವಿಗಾಗಿ ನಾವೆಲ್ಲರೂ ಒಗ್ಗಟ್ಟಾಗಿ ಕಾರ್ಯ ನಿರ್ವಹಿಸೋಣ. ಜೆಡಿಎಸ್ ಪಕ್ಷದ ಶಕ್ತಿ ಪ್ರದರ್ಶನ ಮಾಡೋಣ ಎಂದು ಹೇಳಿದರು.

ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಯಂಡಿಗೇರಿ ಮಾತನಾಡಿ, ಸ್ಥಳಿಯ ಪುರಸಭೆ ಚುನಾವಣೆಯಲ್ಲಿ 6 ಜನ ಪಕ್ಷದಿಂದ ಚುನಾಯಿತರಾಗಿದ್ದಾರೆ. ಅವರಲ್ಲಿ ಡಾ.ಶಾಂತವೀರ ಮನಗೂಳಿ ಅವರು ಒಬ್ಬರು. ಅವರು ಇತ್ತಿಚೇಗೆ ಉಪಚುನಾವಣೆ ಸಂದರ್ಭದಲ್ಲಿ ಜೆಡಿಎಸ್ ಪಕ್ಷ ತೊರೆದು ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಆದರೆ ಇನ್ನುಳಿದ 5 ಜನ ಪಕ್ಷದ ಸದಸ್ಯರು ನಮ್ಮಲ್ಲಿದ್ದಾರೆ. ಅವರ ಜೊತೆಗೆ ಯಾರು ಹೋಗಿಲ್ಲ. ಅವರಿಗೆ ನಾವು ಪಕ್ಷಕ್ಕೆ ರಾಜೀನಾಮೆ ನೀಡಬೇಕು ಎಂದು ನೋಟಿಸ್ ನೀಡಲಾಗಿದೆ ಎಂದು ಹೇಳಿದರು.

Advertisement

ಶಾಸಕ ದೇವಾನಂದ ಚವ್ಹಾಣ ಮಾತನಾಡಿ, ಶಾಸಕ ದಿ.ಎಂ.ಸಿ. ಮನಗೂಳಿ ಅವರು ದೇವೆಗೌಡರ ನಿಷ್ಠಾವಂತರಾಗಿದ್ದರು. ಅವರ ಅಗಲಿಕೆ ದೇವೆಗೌಡರಿಗೆ, ಕುಮಾರಸ್ವಾಮಿ ಹಾಗೂ ಪಕ್ಷದ ಎಲ್ಲರಿಗೂ ನೋವು ಉಂಟುಮಾಡಿದೆ. ಆದರೆ ಅವರ ಮಗ ಕಾಂಗ್ರೆಸ್ ಬಾಗಿಲು ತಟ್ಟಿ ಪಕ್ಷ ಸೇರ್ಪಡೆಯಾಗಿದ್ದು ಎಲ್ಲರಿಗೂ ಅಷ್ಟೇ ನೋವಾಗಿದೆ. ಈ ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಅಭ್ಯರ್ಥಿ ನಾಜೀಯಾ ಅಂಗಡಿ ಅವರು ಸಮರ್ಥ ವ್ಯಕ್ತಿಯಾಗಿದ್ದಾರೆ. ಅವರ ಗೆಲುವಿಗಾಗಿ ನಾವೆಲ್ಲರೂ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇವೆ. ಈ ಉಪಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿ ನಾಜೀಯಾ ಅವರನ್ನು ಗೆಲ್ಲಿಸುವ ಮೂಲಕ ಪಕ್ಷ ತೊರೆದು ಬೇರೆ ಪಕ್ಷದಿಂದ ಸ್ಪರ್ಧಿಸಿದವರಿಗೆ ತಕ್ಕ ಉತ್ತರ ನೀಡುತ್ತೇವೆ ಎಂದು ಹೇಳಿದರು.

ಪಕ್ಷದ ಅಭ್ಯರ್ಥಿ ನಾಜೀಯಾ ಅಂಗಡಿ ಮಾತನಾಡಿ, ಕ್ಷೇತ್ರದ ಅಭಿವೃದ್ಧಿ ಕೆಲಸದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೆಗೌಡ, ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪಾತ್ರ ಹಿರಿಯದಾಗಿದೆ. ಅವರ ಅಧಿಕಾರದ ಅವಧಿಯಲ್ಲಿ ಸಾಕಷ್ಟು ಅನುಧಾನ ಬಿಡುಗಡೆ ಮಾಡಿದ್ದಾರೆ. ಅವರು ಕ್ಷೇತ್ರದಲ್ಲಿ ಸಂಚರಿಸಿದರೆ ಸಾಕು ಜನತೆ ಅವರ ಕಾರ್ಯಗಳನ್ನು ಮೆಚ್ಚಿ ಪಕ್ಷಕ್ಕೆ ಮತ ನೀಡಲಿದ್ದಾರೆ. ಅವರ ಹಾಗೂ ಮತದಾರರ ಆಶೀರ್ವಾದಿಂದ ನನಗೆ ಗೆಲುವು ದೊರಕಲಿದೆ. ಮತದಾರರು ಎಂದಿಗೂ ಕೈ ಬಿಡುವುದಿಲ್ಲ ಎಂದು ನನಗೆ ಆತ್ಮವಿಶ್ವಾಸವಿದೆ ಎಂದು ಹೇಳಿದರು. ಪಕ್ಷದ ಮುಖಂಡ ಜಫ್ರುಲ್ಲಾ ಅವರು ಮಾತನಾಡಿದರು.

ಶಾಸಕ ಬಂಡೆಪ್ಪ ಕಾಶಂಪೂರ, ಮಂಗಳಾದೇವಿ ಬಿರಾದಾರ, ಕೇದಾರಲಿಂಗ ಹಿರೇಮಠ, ಜೆಡಿಎಸ್ ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಹಂಗರಗಿ, ಗೋಲ್ಲಾಳಪ್ಪಗೌಡ ಪಾಟೀಲ ಗೋಲಗೇರಿ, ಜಿಪಂ ಮಾಜಿ ಸದಸ್ಯ ಗುರುರಾಜಗೌಡ ಪಾಟೀಲ ಚಾಂದಕವಠೆ, ಶಿವಾನಂದ ಕೋಟಾರಗಸ್ತಿ, ಅನ್ನಪೂರ್ಣ ಹೊಟಗಾರ ಸೆರಿದಂತೆ ಪಕ್ಷದ ಕಾರ್ಯಕರ್ತರು ಪತ್ರಿಕಾ ಗೋಷ್ಠಿಯಲ್ಲಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next