Advertisement

ಜೆಡಿಎಸ್‌ ಭದ್ರ ಕೋಟೆಗೆ ಲಗ್ಗೆ ಇಡಲು ಕೈ ಯತ್ನ

12:24 AM Jan 28, 2023 | Team Udayavani |

ಮೈಸೂರು: ಟಾರ್ಗೆಟ್‌ 150 ಎಂದು ಸಾರಿ ಸಾರಿ ಹೇಳಿದ್ದು ಬಿಜೆಪಿ. ಹಳೇ ಮೈಸೂರು ಭಾಗದಲ್ಲಿ ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸುತ್ತೇವೆ ಎಂದು ಪ್ರಾರಂಭದಲ್ಲಿ ಜೆಡಿಎಸ್‌ ಭದ್ರಕೋಟೆಯೊಳಗೆ ಹೆಜ್ಜೆ ಇಟ್ಟಿದ್ದು ಆ ಪಕ್ಷವೇ. ಆದರೆ ಇಂತಹ ಮಾತನ್ನು ಆಡದೇ ಜೆಡಿಎಸ್‌ ಕೋಟೆಯಲ್ಲಿ ಬಿರುಕುಗಳನ್ನು ಮೂಡಿಸುತ್ತಿರುವುದು ಮಾತ್ರ ಕಾಂಗ್ರೆಸ್‌!

Advertisement

ಭಾರತೀಯ ಜನತಾಪಕ್ಷವು ಹಳೇ ಮೈಸೂರು ಪ್ರಾಂತದಲ್ಲಿ ಹೆಚ್ಚು ಸ್ಥಾನ ಗಳಿಸದಿದ್ದರೆ ವಿಧಾನಸಭೆಯಲ್ಲಿ ಬಹುಮತ ಗಳಿಸುವುದು ಕಷ್ಟ ಎಂಬುದನ್ನು ಚುನಾವಣೆಗಳ ಅನಂತರ ತಡವಾಗಿ ಅರಿವಾಯಿತು. ಅದಕ್ಕಾಗಿ ಈ ಬಾರಿ ಹಳೆ ಮೈಸೂರು ಭಾಗದಲ್ಲಿ ತನ್ನ ಗಮನ ಕೇಂದ್ರೀಕರಿಸು ವುದಾಗಿ ಪ್ರಾರಂಭದಲ್ಲಿ ಸಭೆಗಳನ್ನು ನಡೆಸಿತು. ರಾಜ್ಯ ಮಟ್ಟದ ನಾಯಕರೂ ಇಲ್ಲಿ ಸಭೆಗಳನ್ನು ನಡೆಸಿ ತಳಮಟ್ಟದಲ್ಲಿ ಹೂಡಬೇಕಾದ ತಂತ್ರಗಳನ್ನು ಹೆಣೆದರು.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರನ್ನು ಮಂಡ್ಯಕ್ಕೆ ಆಹ್ವಾನಿಸಿ ಸಮಾವೇಶವನ್ನು ನಡೆಸಿದರು. ಆದರೆ ಹಳೆ ಮೈಸೂರು ಭಾಗದಲ್ಲಿ ತಳಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ, ನಾಯಕತ್ವವನ್ನು ರೂಪಿಸುವ ಕಾರ್ಯ ಬಿಜೆಪಿಯಲ್ಲಿ ಹೆಚ್ಚು ಪರಿಣಾಮಕಾರಿಯಾಗಿ ನಡೆದಿಲ್ಲ. ಎರಡು ಬಾರಿ ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದರೂ ಇನ್ನು ಅನೇಕ ಕ್ಷೇತ್ರಗಳಲ್ಲಿ ಆ ಪಕ್ಷಕ್ಕೆ ಸಮರ್ಥ ಅಭ್ಯರ್ಥಿಗಳ ಕೊರತೆ ಇದೆ ಎಂಬುದನ್ನು ಆ ಪಕ್ಷದ ಹಿರಿಯ ನಾಯಕರೇ ಒಪ್ಪಿಕೊಳ್ಳುತ್ತಾರೆ. ಹೀಗಾಗಿಯೇ ಹಳೆ ಮೈಸೂರು ಪ್ರಾಂತದ ಸುಮಾರು 60 ಕ್ಷೇತ್ರಗಳಲ್ಲಿ ಕಳೆದ ಬಾರಿಯೂ ಗಮನ ಸೆಳೆಯುವಂತಹ ಸಾಮರ್ಥ್ಯ ಪ್ರದರ್ಶಿಸಲಿಲ್ಲ. ಈ ಬಾರಿಯೂ ಅಂತಹ ಶಕ್ತಿ ಪ್ರದರ್ಶನದ ಯಾವುದೇ ಸೂಚನೆಗಳೂ ಕಂಡು ಬರುತ್ತಿಲ್ಲ.

ರಾಜ್ಯದಲ್ಲಿ ಜೆಡಿಎಸ್‌ಗೆ ನೆಲೆ ಇರುವುದೇ ಹಳೆ ಮೈಸೂರು ಭಾಗದಲ್ಲಿ. ಇಲ್ಲಿ ಜೆಡಿಎಸ್‌ ಕೋಟೆಯನ್ನು ಭೇದಿಸಿದಾಗ ಮಾತ್ರ ತಾನು ಅಧಿಕಾರ ಸೂತ್ರ ಹಿಡಿಯಲು ಸಾಧ್ಯ ಎಂಬುದನ್ನು ಕಾಂಗ್ರೆಸ್‌ ಚೆನ್ನಾಗಿ ಅರಿತಿದೆ. ಅಷ್ಟಕ್ಕೂ ಕಾಂಗ್ರೆಸ್‌ಗೆ ಹಳೆ ಮೈಸೂರು ಪ್ರದೇಶದಲ್ಲಿ ನೆಲೆ ಇದೆ, ತಳಮಟ್ಟದಲ್ಲಿ ಸ್ಥಳೀಯ ನಾಯಕತ್ವವೂ ಬಲವಾಗಿದೆ. ಕಾಂಗ್ರೆಸ್‌ಗೆ ಸಾಂಪ್ರದಾಯಿಕವಾಗಿ ಮತದಾರರೂ ಇದ್ದಾರೆ. ಹೀಗಾಗಿಯೇ ಹಳೆ ಮೈಸೂರು ಭಾಗದಲ್ಲಿ ನಡೆ ಯು ತ್ತಿರುವ ಕಾಂಗ್ರೆಸ್‌ ಪ್ರಜಾಧ್ವನಿ ಯಾತ್ರೆಯಲ್ಲಿ ಆ ಪಕ್ಷದ ಹಿರಿಯ ನಾಯಕರು ಜೆಡಿಎಸ್‌ ಹಾಗೂ ಆ ಪಕ್ಷದ ನೇತಾ ರರನ್ನು ಗುರಿಯಾಗಿಸಿಕೊಂಡೇ ವಾಗ್ಧಾಳಿ ನಡೆಸಿದ್ದಾರೆ. ಕಾಂಗ್ರೆಸ್‌ಗೆ ಇಲ್ಲಿ ಬಿಜೆಪಿ ಎರಡನೇ ಎದುರಾಳಿ.

ಮೈಸೂರಿನ ಪ್ರಜಾಧ್ವನಿ ರ್‍ಯಾಲಿಯಲ್ಲಿ ಮಾತಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜೆಡಿಎಸ್‌ ಮೇಲೆ ಮುಗಿಬಿದ್ದಿದ್ದಾರೆ. ಹಳೆ ಮೈಸೂರು ಭಾಗದಲ್ಲಿ ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರಿರುವ ಶಾಸಕರು, ಮಾಜಿ ಶಾಸಕರ ಪಟ್ಟಿಯನ್ನೇ ಶಿವಕುಮಾರ್‌ ಮುಂದಿಟ್ಟಿದ್ದಾರೆ. ಜೆಡಿಎಸ್‌ ಬಿಟ್ಟು ಕಾಂಗ್ರೆಸ್‌ ಸೇರಲು ಇವರೆಲ್ಲ ದಡ್ಡರಾ? ಕಾಂಗ್ರೆಸ್‌ ಬೆಂಬಲಿಸಿ ತಮಗೆ ಹಾಗೂ ಸಿದ್ದರಾಮಯ್ಯ ಅವರಿಗೆ ಒಂದು ಅವಕಾಶ ಕಲ್ಪಿಸಿ ಎಂದು ಒಕ್ಕಲಿಗ ಪ್ರಾಬಲ್ಯದ ಮೈಸೂರು ಜಿಲ್ಲೆಯಲ್ಲಿ ಮತದಾರರಿಗೆ ಶಿವಕುಮಾರ್‌ ಮನವಿ ಮಾಡಿದ್ದು ಗಮನ ಸೆಳೆಯಿತು. ತಮ್ಮ ಜತೆ ಸಿದ್ದರಾಮಯ್ಯ ಅವರ ಹೆಸರನ್ನೂ ಪ್ರಸ್ತಾವಿಸಿ ಮುಖ್ಯಮಂತ್ರಿ ಸ್ಥಾನಕ್ಕಾಗಿ ಅವಕಾಶ ಕೇಳಿದ್ದು ಶಿವಕುಮಾರ್‌ ಅವರ ಜಾಣ ನಡೆಯನ್ನು ಪ್ರದರ್ಶಿಸಿತು. ಶಿವಕುಮಾರ್‌ ಶುಕ್ರವಾರ ಮಂಡ್ಯದಲ್ಲಿ ಮಾತಾಡುತ್ತಾ ಪರೋಕ್ಷವಾಗಿ ಮುಖ್ಯಮಂತ್ರಿ ಸ್ಥಾನದ ಆಸೆಯನ್ನು ವ್ಯಕ್ತಪಡಿಸಿದ್ದಾರೆ.

Advertisement

ಹಳೇ ಮೈಸೂರು ಭಾಗದಲ್ಲಿ ವಿಧಾನಸಭಾ ಚುನಾವಣೆಗಳಲ್ಲಿ ಜೆಡಿಎಸ್‌ ಪ್ರಾಬಲ್ಯವನ್ನು ಕಾಂಗ್ರೆಸ್‌ ಹಾಗೂ ಬಿಜೆಪಿ ಚೆನ್ನಾಗಿ ಅರಿತಿವೆ. ಆದರೆ ಈ ವಿಚಾರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿಗೆ ವ್ಯತ್ಯಾಸವಿಷ್ಟೇ. ಅತಂತ್ರ ವಿಧಾನಸಭೆ ರಚನೆಯಾದ ಅನಂತರ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲು ಕಾಂಗ್ರೆಸ್‌ ಪಕ್ಷವು ಜೆಡಿಎಸ್‌ ಜತೆಗೂಡಿ ಸಮ್ಮಿಶ್ರ ಸರಕಾರ ರಚಿಸಲು ಓಡೋಡಿ ಬರುತ್ತದೆ. ಆದರೆ ಬಿಜೆಪಿಯು ಕಾಂಗ್ರೆಸ್‌ ಅಧಿಕಾರಕ್ಕೆ ಏರಬಾರದೆಂದು ತಾನು ದುರ್ಬಲವಾಗಿರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಮಣಿಸಲು ಜೆಡಿಎಸ್‌ಗೆ ತನ್ನ ಸಾಂಪ್ರದಾಯಿಕ ಮತಗಳು ವರ್ಗವಾಗುವಂತೆ ತಂತ್ರಗಳನ್ನು ಹೆಣೆಯುತ್ತದೆ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಇದರಲ್ಲಿ ಯಶಸ್ವಿಯೂ ಆಯಿತು. ಕಾಂಗ್ರೆಸ್‌ ನೆಲಕಚ್ಚಿತು. ಆದರೆ ಅತಂತ್ರ ವಿಧಾನಸಭೆ ರಚನೆಯಾದಾಗ ಬಿಜೆಪಿ ನಿರೀಕ್ಷೆ ಹುಸಿಯಾಯಿತು. ಜೆಡಿಎಸ್‌ ಪಕ್ಷವು ಕಾಂಗ್ರೆಸ್‌ ಬೆಂಬಲದೊಂದಿಗೆ ಅಧಿಕಾರಕ್ಕೆ ಏರಿತ್ತು. ಅನಂತರ ಬಿಜೆಪಿ ಆಪರೇಶನ್‌ ಕಮಲದ ಮೂಲಕ ಸರಕಾರ ರಚಿಸಿದ್ದು ಅನಂತರದ ಇತಿಹಾಸ.

ಜೆಡಿಎಸ್‌ ಅನ್ನು ಎದುರಿಸಲು ಕಾಂಗ್ರೆಸಿಗೆ ಇಲ್ಲಿ ತಳಮಟ್ಟದಲ್ಲಿ ಸಂಘಟನೆಯ ಶಕ್ತಿ, ಒಕ್ಕಲಿಗ ನಾಯಕತ್ವ ಇದೆ. ಆದರೆ ಬಿಜೆಪಿಗೆ ಅಂತಹ ಸಂಘಟನೆಯ ಬಲ ಇಲ್ಲ. ಸ್ಥಳೀಯ ಒಕ್ಕಲಿಗ ನಾಯಕತ್ವವೂ ಇಲ್ಲ. ಆದರೆ ಈ ಬಾರಿ ತಾನೇ ಶಕ್ತಿ ಪ್ರದರ್ಶನಕ್ಕೆ ಬಿಜೆಪಿ ಪ್ರಾರಂಭದಲ್ಲಿ ಮುಂದಾದರೂ ಈಗ ತಳಮಟ್ಟದಲ್ಲಿ ತನ್ನ ಇತಿಮಿತಿಗಳ ಅರಿವು ಆ ಪಕ್ಷದ ನಾಯಕರಿಗೆ ಆಗಿದೆ. ಹೀಗಾಗಿ ಈ ಬಾರಿ ಕಾಂಗ್ರೆಸ್‌ ಮಣಿಸಲು ಹಳೆ ಮೈಸೂರು ಭಾಗದಲ್ಲಿ ಬಿಜೆಪಿ ಹೂಡುವ ತಂತ್ರಗಾರಿಕೆಯೂ ಚುನಾವಣೆ ಮೇಲೆ ಪ್ರಭಾವ ಬೀರುವುದು ಖಚಿತ.

ಮೈಸೂರು ಗ್ರಾಮಾಂತರ, ಹಾಸನ, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಅನೇಕ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್‌ ನೇರ ಪೈಪೋಟಿಯಲ್ಲಿ ಬಿಜೆಪಿಯ ಪಾತ್ರ ಮುಖ್ಯವಾಗಿದೆ.

-ಕೂಡ್ಲಿ ಗುರುರಾಜ

Advertisement

Udayavani is now on Telegram. Click here to join our channel and stay updated with the latest news.

Next