Advertisement

ಸಿದ್ದರಾಮಯ್ಯ ಮಣಿಸಲು ಜೆಡಿಎಸ್‌, ಬಿಜೆಪಿ ರಣತಂತ್ರ

06:35 PM Jan 24, 2023 | Team Udayavani |

ಕೋಲಾರ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧಿಸು ವುದು ಖಚಿತ ಎಂದು ಘೋಷಿಸಿ ಹೋದಾಗಿನಿಂದಲೂ ಕೋಲಾರ ವಿಧಾನಸಭಾ ಕ್ಷೇತ್ರ ಇಡೀ ದೇಶದ ಗಮನ ಸೆಳೆಯುತ್ತಿದೆ. ರಾಜಕೀಯ ವಲಯದ ಚರ್ಚೆಗೆ ಅಗ್ರಗಣ್ಯ ಕ್ಷೇತ್ರವಾಗಿ ಪರಿಣಮಿಸಿದೆ.

Advertisement

ಸಿದ್ದರಾಮಯ್ಯ ವಿರುದ್ಧ ಜೆಡಿಎಸ್‌ ಮತ್ತು ಬಿಜೆಪಿ ಒಂದಾಗಿ ಅಥವಾ ಗೆಲ್ಲುವ ಪಕ್ಷದ ಅಭ್ಯರ್ಥಿಗೆ ಪರೋಕ್ಷವಾಗಿ ಬೆಂಬಲಿಸುವ ಅಭ್ಯರ್ಥಿ ಹಾಕುವ ಚಿಂತನೆ ತೆರೆಮರೆಯಲ್ಲಿ ನಡೆದಿದೆಯಾದರೂ ಇನ್ನೂ ಅಂತಿಮ ನಿರ್ಧಾರವಾಗಿಲ್ಲ.

ಈ ಮಧ್ಯೆ, ಬಿಜೆಪಿಯಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಂತೋಷ್‌ ಕೋಲಾರಕ್ಕೆ ಆಗಮಿಸಿ ಬೂತ್‌ ಮಟ್ಟದ ಸಮಿತಿ ಕಾರ್ಯ ಕರ್ತರ ಸಭೆ ನಡೆಸಿ ಹೋದ ಅನಂತರ ಚಟುವಟಿಕೆ ಚುರುಕು ಗೊಂಡಿದೆ. ಅಭ್ಯರ್ಥಿ ಯಾಗಿ ಪಕ್ಷ ಯಾರನ್ನೇ ಆಯ್ಕೆ ಮಾಡಿದರೂ ಗೆಲ್ಲಿಸಲು ಪಣ ತೊಡಬೇಕು, ಅಶಿಸ್ತು ಬಣ ರಾಜಕೀ ಯವನ್ನು ಸಹಿಸಲ್ಲ ಎಂದು ಎಚ್ಚರಿಕೆ ಸಹ ನೀಡಿದ್ದಾರೆ.

ಇನ್ನು ಕೆಲ ದಲಿತ ಮುಖಂಡರು ಸಿದ್ದರಾಮಯ್ಯರಿಂದ ಯಾರೆಲ್ಲಾ ದಲಿತ ಮುಖಂಡರಿಗೆ ಅನ್ಯಾಯವಾಗಿದೆ, ಸೋತಿದ್ದಾರೆ ಎಂಬಿತ್ಯಾದಿ ಮಾಹಿತಿಯ ಕರಪತ್ರಗಳ ಹಂಚಿಕೆ ಅಭಿಯಾನ ನಡೆಯುತ್ತಿದ್ದು ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ದಲಿತ ಸಮುದಾಯದ ಅಭಿವೃದ್ಧಿಗೆ ಕೈಗೊಂಡ ಕಾರ್ಯಕ್ರಮಗಳ ಬಗ್ಗೆ ಕರಪತ್ರ ಹಾಗೂ ಸಾಮಾಜಿಕ ಜಾಲತಾಣಗಳಲ್ಲೂ ಪೋಸ್ಟ್‌ಗಳು ರವಾನೆಯಾಗುತ್ತಿದೆ.

ಸಿದ್ದರಾಮಯ್ಯ ದಲಿತ ವಿರೋಧಿ ಎಂಬ ಕರಪತ್ರದ ಅಸ್ತ್ರಕ್ಕೆ ಪ್ರತ್ಯಸ್ತ್ರವಾಗಿ ಸಿದ್ದರಾಮಯ್ಯ ಆಡಳಿತಾವಧಿಯಲ್ಲಿ ದಲಿತರಿಗೆ ಮಾಡಿರುವ ಕಾರ್ಯಕ್ರಮಗಳ ಕುರಿತಂತೆ ಕಿರು ಹೊತ್ತಿಗೆಯನ್ನು ಕಾಂಗ್ರೆಸ್‌ ತಯಾರಿಸುತ್ತಿದ್ದು, ಪ್ರತಿ ದಲಿತರ ಮನೆಗೆ ತಲುಪಿಸಲು ಸಜ್ಜಾಗುತ್ತಿದೆ.

Advertisement

ಕ್ಷೇತ್ರಕ್ಕೆ ಬರುವ ಮುನ್ನ ನನ್ನ ಜತೆ ಚರ್ಚಿಸಲಿಲ್ಲ, ರಮೇಶ್‌ ಕುಮಾರ್‌ ತಂಡದ ಮಾತು ಕೇಳಿ ನಿರ್ಧಾರ ಕೈಗೊಂಡರು ಎಂದು ಮುನಿಸಿಕೊಂಡಿದ್ದ ಕೆ.ಎಚ್‌.ಮುನಿಯಪ್ಪ ಅವರ ಕೋಪ ತಣ್ಣಗಾಗಿದೆ. ಸಿದ್ದರಾಮಯ್ಯ ಅವರು ಕೆ.ಎಚ್‌.ಮುನಿಯಪ್ಪ ಅವರ ಮನೆಗೆ ತೆರಳಿ ಮಾತುಕತೆ ನಡೆಸಿದ್ದು ಕಾರ್ಯಕರ್ತರ ಸಭೆಯಲ್ಲಿ ಕೆ.ಎಚ್‌.ಮುನಿಯಪ್ಪ ಭಾಗಿಯಾಗಿದ್ದು ಒಂದು ರೀತಿಯಲ್ಲಿ ಸಿದ್ದರಾಮಯ್ಯ ಬೆಂಬಲಿಗರಿಗೆ ಸಮಾಧಾನ ತಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿದ್ದರಾಮಯ್ಯ ವಿರುದ್ಧ ಕ್ಷೇತ್ರದಲ್ಲಿ ಸಾಕಷ್ಟು ಬೆಳವಣಿಗೆಗಳು ನಡೆಯುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ಬಣ ರಾಜಕೀಯ, ಗುಂಪುಗಾರಿಕೆ ಶಮನ ಮಾಡುವ ಪ್ರಯತ್ನಗಳು ನಡೆದಿವೆ. ಹಲವು ತಿಂಗಳುಗಳಿಂದಲೂ ನೆನೆಗುದಿಗೆ ಬಿದ್ದಿದ್ದ ಕೋಲಾರ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ಮಾಲೂರಿನ ಲಕ್ಷ್ಮೀ ನಾರಾಯಣರನ್ನು ಹೊಂದಾಣಿ ಕೆಯ ಅಭ್ಯರ್ಥಿಯಾಗಿ ಅಂತಿಮಗೊಳಿಸ ಲಾಗಿದೆ. ರಮೇಶ್‌ ಕುಮಾರ್‌ ಮತ್ತು ಕೆ.ಎಚ್‌.ಮುನಿಯಪ್ಪ ಮುಖಾಮುಖೀ ಮಾತುಕತೆ ನಡೆಸಿ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಬೇಕೆಂಬ ಬೇಡಿಕೆ ಮುಖಂಡರಿಂದಲೇ ಕೇಳಿ ಬಂದಿತು. ಇದಕ್ಕೆ ವೇದಿಕೆ ಇನ್ನೂ ಸಜ್ಜಾಗಬೇಕಿದೆ.

ತಮ್ಮ ಪರವಾಗಿ ಪ್ರಚಾರ ನಡೆಸಲು ಸಮರ್ಥ ತಂಡವೊಂದನ್ನು ಕಟ್ಟಲು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಸಭೆ ನಡೆಸಿದ್ದಾರೆಂದು ತಿಳಿದು ಬಂದಿದೆ. ಹಲವು ಪ್ರಭಾವಿ ಮುಖಂಡರು ಕೋಲಾರ ವಿಧಾನಸಭಾ ಕ್ಷೇತ್ರದ ನಗರ, ಹೋಬಳಿವಾರು ಜವಾಬ್ದಾರಿಗಳನ್ನು ಹೊತ್ತುಕೊಳ್ಳಲು ಮುಂದೆ ಬಂದಿದ್ದಾರೆ ಎಂದು ಹೇಳಲಾಗಿದೆ.
ಕೋಲಾರ ಮಟ್ಟದಲ್ಲಿ ಸಿದ್ದರಾಮಯ್ಯರ ಅಭಿಮಾನಿಗಳು ಬೂತ್‌ ಮಟ್ಟದ ನಿಷ್ಠಾವಂತ ಹಾಗೂ ಸಿದ್ದರಾಮಯ್ಯರ ಮೇಲೆ ಅಭಿಮಾನವುಳ್ಳ ಮುಖಂಡರ ದೂರವಾಣಿ ಸಂಖ್ಯೆ ಮತ್ತು ಹೆಸರುಗಳನ್ನು ಸಂಗ್ರಹಿಸಿ ಪಟ್ಟಿ ಮಾಡುತ್ತಿದ್ದಾರೆ. ಕಾಂಗ್ರೆಸ್‌ ಬೂತ್‌ ಮಟ್ಟದ ಸಮಿತಿಯನ್ನು ಪುನಾರಚಿಸಲಾಗುತ್ತಿದೆ.

ಒಟ್ಟಾರೆ, ಅಹಿಂದ ಮುಖಂಡ ಸಿದ್ದರಾಮಯ್ಯರನ್ನು ಅದೇ ಕೋಲಾರದ ಅಹಿಂದ ನೆಲದಲ್ಲಿ ಕಟ್ಟಿ ಹಾಕುವ ತಂತ್ರಗಾರಿಕೆಗಳು ಯೋಜನೆ ಪ್ರತಿ ಯೋಜನೆಗಳ ನೀಲಿ ನಕ್ಷೆಗಳು ಬಿಜೆಪಿ, ಜೆಡಿಎಸ್‌ ರಾಜಕೀಯ ವಲಯದಲ್ಲಿ ಸಿದ್ಧವಾಗುತ್ತಿವೆ. ಅದಕ್ಕೆ ತಕ್ಕಂತೆ ಕಾಂಗ್ರೆಸ್‌ನಿಂದಲೂ ಪ್ರತಿತಂತ್ರ ರೂಪಿಸಲಾಗುತ್ತಿದೆ. ಅಂತಿಮವಾಗಿ ಮತದಾರನ ಒಲವು ಯಾರ ಪರ ಎಂಬುದು ಕಾದು ನೋಡಬೇಕಾಗಿದೆ.

ಬದಲಾಗಬಹುದೇ ಬಿಜೆಪಿ-ಜೆಡಿಎಸ್‌ ಅಭ್ಯರ್ಥಿ?
ಸಿದ್ದರಾಮಯ್ಯ ಸ್ಪರ್ಧಿಸುವುದು ಖಚಿತವಾದರೆ ಕೋಲಾರ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ಒಂದಾಗಿ ಗೆಲ್ಲುವ ಅಭ್ಯರ್ಥಿಗೆ ಅನುಕೂಲವಾಗುವಂತೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತದೆ. ಆದ್ದರಿಂದ ಹಾಲಿ ಜೆಡಿಎಸ್‌ ಮತ್ತು ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳು ಬದಲಾಗಬಹುದು ಎಂಬ ಮಾತುಗಳು ಕೇಳಿ ಬರತೊಡಗಿವೆ.

ಸಿದ್ದು ಘೋಷಣೆಯೊಂದಿಗೆ ರಂಗೇರಿತು
ಕೋಲಾರದಿಂದ ಸ್ಪರ್ಧಿಸುವ ಸಲುವಾಗಿಯೇ ಹಲವಾರು ಸುತ್ತುಗಳ ಸಮೀಕ್ಷೆ ನಡೆಸಿರುವ ಸಿದ್ದರಾಮಯ್ಯ ಅಂತಿಮವಾಗಿ 2022ರ ನ.13ರಂದು ಕೋಲಾರ ಕ್ಷೇತ್ರಕ್ಕೆ ಆಗಮಿಸಿ ಇಡೀ ದಿನ ಕ್ಷೇತ್ರ ಪ್ರವಾಸ ನಡೆಸಿದ್ದರು. ದೇವಾಲಯ, ಚರ್ಚ್‌, ಮಸೀದಿಗ ಳಿ ಗೆ ಸುತ್ತಾಡಿದ್ದರು. ಜ.9ರಂದು ಮತ್ತೆ ಕೋಲಾರಕ್ಕೆ ಆಗಮಿಸಿದ ಸಿದ್ದರಾಮಯ್ಯ ಕೋಲಾರ ವಿಧಾನಸಭಾ ಕ್ಷೇತ್ರದಿಂದಲೇ ಸ್ಪರ್ಧಿಸಲು ತೀರ್ಮಾನಿಸಿದ್ದೇನೆ ಆದರೆ ಹೈಕಮಾಂಡ್‌ ಒಪ್ಪಿಗೆ ಅಗತ್ಯ ಎಂಬ ಹೇಳಿದ್ದರು. ಆ ಕ್ಷಣದಿಂದಲೇ ಕೋಲಾರ ವಿಧಾನಸಭಾ ಕ್ಷೇತ್ರ ರಾಜಕೀಯವಾಗಿ ರಂಗೇರಿತು.

-ಕೆ.ಎಸ್‌.ಗಣೇಶ್‌

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next