ಸಂಕ್ರಾಂತಿಯ ಬಳಿಕ ರಾಜ್ಯ ರಾಜಕೀಯದಲ್ಲಿ ಚುನಾವಣೆ ಚಟುವಟಿಕೆ ಬಿರುಸುಗೊಳ್ಳುತ್ತಿದೆ. ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ನಲ್ಲಿ ವಿಧಾನಸಭೆ ಚುನಾವಣೆಗಾಗಿ ಭರದ ಸಿದ್ಧತೆ ನಡೆಯುತ್ತಿದೆ. ಸೋಮವಾರ ಮತ್ತು ಮಂಗಳವಾರ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದ್ದು, ಇದರಲ್ಲಿ ಭಾಗಿಯಾಗಲು ರಾಜ್ಯ ಬಿಜೆಪಿ ನಾಯಕರು ದಿಲ್ಲಿಗೆ ತೆರಳಲಿದ್ದಾರೆ. ಮಹಿಳೆಯರಿಗಾಗಿ ಸೋಮವಾರ ಕಾಂಗ್ರೆಸ್ “ನಾ ನಾಯಕಿ’ ಸಮಾವೇಶ ಏರ್ಪಡಿಸಿದ್ದು, ಪ್ರಿಯಾಂಕಾ ವಾದ್ರಾ ಭಾಗವಹಿಸಲಿದ್ದಾರೆ. “ರೈತ ಚೈತನ್ಯ’ ಕಾರ್ಯಕ್ರಮ ಹಮ್ಮಿಕೊಂಡಿರುವ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ “ರೈತ ಸಂಕ್ರಾಂತಿ’ ಎಂಬ ರೈತರ ಸಂವಾದ ಕಾರ್ಯಕ್ರಮ ನಡೆಸಲಿದ್ದಾರೆ.
ಬಿಜೆಪಿ ಕಾರ್ಯಕಾರಿಣಿ ಚುನಾವಣೆ ಬಗ್ಗೆ ಚರ್ಚೆ
ಎಪ್ರಿಲ್-ಮೇ ತಿಂಗಳಲ್ಲಿ ನಡೆಯಬಹುದಾದ ವಿಧಾನಸಭೆ ಚುನಾವಣೆಗಾಗಿ ಬಿಜೆಪಿ ತಯಾರಿ ಆರಂಭಿಸಿದೆ. ಈ ಮಧ್ಯೆ ರಾಷ್ಟ್ರೀಯ ಕಾರ್ಯಕಾರಿಣಿ ನಡೆಯಲಿದೆ. ವಿಧಾನಸಭೆ ಹೊಸ್ತಿಲಲ್ಲೇ ಈ ಸಭೆ ಮಹತ್ವ ಪಡೆದಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಡಿ.ವಿ. ಸದಾನಂದ ಗೌಡ,ಜಗದೀಶ್ ಶೆಟ್ಟರ್, ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ರಾಜ್ಯ ಸಂಘಟನ ಕಾರ್ಯದರ್ಶಿ ರಾಜೇಶ್, ಸಚಿವ ಕೋಟ ಶ್ರೀನಿವಾಸ ಪೂಜಾರಿ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಇದರಲ್ಲಿ ಭಾಗವಹಿಸಲಿದ್ದಾರೆ ಎಂದು ಮೂಲಗಳು ಹೇಳಿವೆ.
ರಾಷ್ಟ್ರ ಮಟ್ಟದ ಈ ಸಭೆಯಲ್ಲಿ ಕರ್ನಾಟಕ ಕೇಂದ್ರಿತ ಚರ್ಚೆ ನಡೆಯುವ ಸಾಧ್ಯತೆಯಿದ್ದು, ಚುನಾವಣೆ ಗೆಲ್ಲುವ ಗುರಿ, ಪಕ್ಷ ಸಂಘಟನೆ ಕುರಿತಾದ ತಂತ್ರಗಾರಿಕೆ ಬಗ್ಗೆ ಪ್ರಸ್ತಾವವಾಗಲಿದೆ. ಪ್ರಧಾನಿ ಮೋದಿ, ಅಮಿತ್ ಶಾ ಸೇರಿದಂತೆ ರಾಷ್ಟ್ರೀಯ ನಾಯಕರನ್ನು ಚುನಾವಣೆ ಪ್ರಚಾರಕ್ಕೆ ಬಳಸಿಕೊಳ್ಳುವ ಬಗ್ಗೆ ರಾಜ್ಯ ನಾಯಕರು ಬೇಡಿಕೆ ಸಲ್ಲಿಸಬಹುದು. ಚುನಾವಣೆ ದೃಷ್ಟಿಯಲ್ಲಿ ಇರಿಸಿಕೊಂಡು ರಾಷ್ಟ್ರೀಯ ನಾಯಕರು ರಾಜ್ಯ ನಾಯಕರೊಂದಿಗೆ ಸಭೆ ನಡೆಸುವಂತೆ ಮನವಿ ಮಾಡಬಹುದು ಎನ್ನಲಾಗಿದೆ.
ಪ್ರಿಯಾಂಕಾ “ನಾ ನಾಯಕಿ’ಕೈ ಮಹಿಳಾ ಸಮಾವೇಶ
ರಾಜ್ಯ ಕಾಂಗ್ರೆಸ್ನಲ್ಲಿಯೂ ಸಿದ್ಧತೆ ಬಿರುಸುಗೊಂಡಿದ್ದು,ಮಹಿಳೆಯರ “ನಾ ನಾಯಕಿ’ ಸಮಾವೇಶಕ್ಕಾಗಿ ಸೋಮವಾರ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಆಗಮಿಸಲಿದ್ದಾರೆ. ಇದು ವಿಶಿಷ್ಟ ಕಾರ್ಯಕ್ರಮವಾಗಿದ್ದು, ಮಹಿಳೆಯರನ್ನು ಸೆಳೆಯಲು ಕಾಂಗ್ರೆಸ್ ಮುಂದಾಗಿದೆ. ಸೋಮವಾರ ಅರಮನೆ ಮೈದಾನದಲ್ಲಿ ಈ ಬೃಹತ್ ಕಾರ್ಯಕ್ರಮ ನಡೆಯಲಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಮಹಿಳೆಯರು ಭಾಗವಹಿಸುವ ನಿರೀಕ್ಷೆಯಿದೆ.
Related Articles
ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಹಿಳಾ ಮತದಾರರನ್ನು ಸೆಳೆಯಲು ಕಾಂಗ್ರೆಸ್ “ಲಡಿRà ಹೂ, ಲಡ್ ಸಕ್ತೀ ಹೂ’ ಅಭಿಯಾನ ನಡೆಸಿತ್ತು. 2023ರ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕ ಕಾಂಗ್ರೆಸ್ “ನಾ ನಾಯಕಿ’ ಕಾರ್ಯಕ್ರಮ ಹಮ್ಮಿಕೊಳ್ಳಲು ಮುಂದಾಗಿದ್ದು, ಎಲ್ಲ ಕ್ಷೇತ್ರಗಳಲ್ಲಿರುವ ಮಹಿಳೆಯರನ್ನು ತಲುಪುವ ಪ್ರಯತ್ನಕ್ಕೆ ತಂತ್ರ ರೂಪಿಸಿದೆ. ಜತೆಗೆ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ರೂಪಿಸುವ ಆಲೋಚನೆಯಲ್ಲಿದೆ.
ಬೆಳಗ್ಗೆ 11ಕ್ಕೆ ಸಮಾವೇಶ ನಡೆಯಲಿದ್ದು, ಪ್ರಿಯಾಂಕಾ ಗಾಂಧಿ ಅವರ ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುಜೇìವಾಲ, ವಿಪಕ್ಷ ನಾಯಕ ಸಿದ್ದರಾಮಯ್ಯ, ಬಿ.ಕೆ. ಹರಿಪ್ರಸಾದ್, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷ ಪುಷ್ಪಾ ಅಮರನಾಥ್, ಮಾಜಿ ಸಚಿವೆ ಉಮಾಶ್ರೀ, ರಾಣಿ ಸತೀಶ್, ಲಕ್ಷ್ಮೀ ಹೆಬಾಳ್ಕರ್, ಸೌಮ್ಯಾ ರೆಡ್ಡಿ ಸೇರಿದಂತೆ ಮಹಿಳಾ ಘಟಕಗಳ ಪದಾಧಿಕಾರಿಗಳು ಹಾಲಿ, ಮಾಜಿ ಶಾಸಕಿಯರು ಭಾಗವಹಿಸಲಿದ್ದಾರೆ.
ಕುಮಾರಸ್ವಾಮಿಯಿಂದ ರೈತರಿಗಾಗಿ ರೈತ ಸಂಕ್ರಾಂತಿ
ಜೆಡಿಎಸ್ನಲ್ಲಿಯೂ ಸಿದ್ಧತೆ ಬಲವಾಗಿದೆ. ರೈತರ ಸಮಗ್ರ ಸಶಕ್ತೀಕರಣಕ್ಕಾಗಿ ಪಂಚರತ್ನ ಯೋಜನೆಗಳಲ್ಲಿ “ರೈತ ಚೈತನ್ಯ’ ಕಾರ್ಯಕ್ರಮವನ್ನು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ರೂಪಿಸಿದ್ದಾರೆ. ಅದಕ್ಕೆ ಪೂರಕವಾಗಿ ಕೃಷಿ ಸಮಸ್ಯೆಗಳ ಬಗ್ಗೆ ರೈತರ ಜತೆ ಮುಕ್ತವಾಗಿ ಚರ್ಚಿಸಲು ಸೋಮವಾರ “ರೈತ ಸಂಕ್ರಾಂತಿ’ ಆನ್ಲೈನ್ ಸಂವಾದ ಹಮ್ಮಿಕೊಂಡಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಈ ಸಂವಾದದಲ್ಲಿ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಸಂದೇಶ ನೀಡಲಿದ್ದು, ಚರ್ಚೆಯನ್ನು ಅವರೂ ಆಲಿಸಲಿದ್ದಾರೆ ಎಂದಿದ್ದಾರೆ.
ಬಿಡದಿಯ ನನ್ನ ತೋಟದಲ್ಲಿ ರೈತ ಸಂಕ್ರಾಂತಿ ಸಂವಾದ ಹಮ್ಮಿಕೊಳ್ಳಲಾಗಿದೆ. ಅಪರಾಹ್ನ 3.30ರಿಂದ ಸಂಜೆ 5 ಗಂಟೆಯವರೆಗೆ ಸುಮಾರು 50ಕ್ಕೂ ಹೆಚ್ಚು ವಿಧಾನಸಭಾ ಕ್ಷೇತ್ರಗಳ ರೈತರ ಜತೆ ಆನ್ಲೈನ್ ವೇದಿಕೆ ಮೂಲಕ ನೇರ ಸಂವಾದ ನಡೆಸುತ್ತೇನೆ. ಯಾವುದೇ ಭಾಗದ ರೈತರು ಈ ಸಂವಾದದಲ್ಲಿ ಭಾಗಿಯಾಗಬಹುದು ಹಾಗೂ ಸಮಸ್ಯೆಗಳು, ಪರಿಹಾರಗಳನ್ನು ತಿಳಿಸಬಹುದು ಎಂದು ಅವರು ಮಾಹಿತಿ ನೀಡಿದ್ದಾರೆ.