Advertisement

ಜಯಪುರದ ಜಯಸಿಂಹನ ಜಂತರ್‌ಮಂತರ್‌

06:00 AM Jun 10, 2018 | |

ಜಂತರ್‌ಮಂತರ್‌ ಮಾಟವೋ ಅಂತರಂಗದಾ ನೋಟವೋ… ಎಂಬ ಹಾಡೊಂದನ್ನು ನಮ್ಮ ಬಾಲ್ಯದಲ್ಲಿ ಅರ್ಥ ಗೊತ್ತಿಲ್ಲದೆ ಹಾಡಿಕೊಂಡು ಖುಷಿಪಡುತ್ತಿದ್ದುದಿತ್ತು. ಆಗ ಮನದಲ್ಲಿ ಬೇರೂರಿದ “ಜಂತರ್‌ಮಂತರ್‌’ ಎಂಬ ಪದ ಒಂದು ಚುಂಬಕ ಶಕ್ತಿಯಾಗಿ ಗ್ರಹ ನಕ್ಷತ್ರಗಳ ನಡುವಣ ಆಕರ್ಷಣೆಯಂತೆ ಮನಸ್ಸನ್ನು ತನ್ನತ್ತ ಸೆಳೆಯುತ್ತಲೇ ಇತ್ತು. ಪ್ರತಿಯೊಬ್ಬರೂ ನೋಡಲೇಬೇಕಾದ ಒಂದು ಅದ್ಭುತ ಐತಿಹಾಸಿಕ, ಖಗೋಳಶಾಸ್ತ್ರ ಸಂಬಂಧಿತ, ವಾಸ್ತುಶಿಲ್ಪ ನಿರ್ಮಾಣ ಈ ಜಂತರ್‌ ಮಂತರ್‌. ಈ ಬ್ರಹ್ಮಾಂಡ, ಆಕಾಶಕಾಯಗಳ ಸೃಷ್ಟಿಯಾದಂದಿನಿಂದ ಎಣಿಸಲ್ಪಡುತ್ತಿರುವ ಕಾಲದ ಒಂದೊಂದು ಸೆಕೆಂಡ್‌, ಮಿಲಿ ಸೆಕೆಂಡ್‌ಗಳು ಕೂಡ ನಮ್ಮ ಬದುಕಿನ ಓಟದಲ್ಲಿ ತಮ್ಮದೇ ನಿರ್ಣಾಯಕ ಪಾತ್ರ ಹೊಂದಿವೆ. ಇಂತಹ ಕಾಲವನ್ನು ಗಣನೆ ಮಾಡಲು ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಪ್ರಾಚೀನ ಕಾಲದಿಂದಲೂ ಬೇರೆ ಬೇರೆ ಉಪಕರಣಗಳನ್ನು ಕಂಡುಹಿಡಿದಿದ್ದರು. ನೀರು, ಮರಳಿನ ಗಳಿಗೆಬಟ್ಟಲುಗಳ ಬಗ್ಗೆ ಕೇಳಿದ್ದೇವೆ. 1728-1734ರ ಅವಧಿಯಲ್ಲಿ ರಾಜಸ್ತಾನದ ಪ್ರಾಚೀನ ಸಾಂಸ್ಕೃತಿಕ ನಗರಿ ಜೈಪುರದಲ್ಲಿರುವ ರಾಜಾ ಜಯಸಿಂಹ ನಿರ್ಮಿಸಿದ ಜಂತರ್‌ ಮಂತರ್‌ ಬಯಲು ಖಗೋಳವೀಕ್ಷಣಾಲಯವು ಇಂದಿಗೂ ಅತ್ಯಂತ ನಿಖರವಾಗಿ ಸಮಯವನ್ನಳೆಯಬಲ್ಲ ಪ್ರಪಂಚದ ಅತಿ ದೊಡ್ಡ  ಸೂರ್ಯಯಂತ್ರವಾಗಿದೆ. ಸಿಟಿ ಪ್ಯಾಲೇಸ್‌ ಮತ್ತು ಹವಾಮಹಲ್‌ ಬಳಿ ಇರುವ ಇದು ಇಂದು ಯುನೆಸ್ಕೋ ಪಾರಂಪರಿಕ ತಾಣಗಳಲ್ಲಿ ಒಂದು. ಹಲವು ರಹಸ್ಯಗಳನ್ನು ಅನಾವರಣಗೊಳಿಸುವ, ಭೌತಶಾಸ್ತ್ರ ಗಣಿತಶಾಸ್ತ್ರಗಳ ನಿಯಮಗಳನ್ನೊಳಗೊಂಡು ಕೌತುಕಭರಿತ ಖಗೋಳಶಾಸ್ತ್ರ ಪರಿಚಯಕ್ಕೆ ತೆರೆದ ಪುಸ್ತಕದಂತಿದೆ ಈ ಖಗೋಳವೀಕ್ಷಣಾಲಯ. ಇದನ್ನು ನೋಡಿದ, ಇಲ್ಲಿ ಓಡಿಯಾಡಿದ ಯಾರೇ ಆದರೂ ಕಲ್ಲು ಗಾರೆ ಸುಣ್ಣ ಇಟ್ಟಿಗೆ ಕಬ್ಬಿಣದ ಸರಳುಗಳಿಂದ ನಿರ್ಮಿತವಾದ ಈ ಖಗೋಳ ವೀಕ್ಷಣಾಲಯದ ವೈಜ್ಞಾನಿಕ ನಿಖರತೆಗೆ ಬೆಕ್ಕಸ ಬೆರಗಾಗುತ್ತಾರೆ. ರಾಜಾ ಜಯಸಿಂಹ ಇದೇ ವಿಧದ ತಾರಾ ವೀಕ್ಷಣಾಲಯವನ್ನು ದೆಹಲಿಯಲ್ಲಿ ಸಂಸತ್‌ ಭವನದ ರಸ್ತೆಯಲ್ಲಿ ಕನ್ನಾಟ್‌ ವೃತ್ತದ ಸಮೀಪದಲ್ಲಿ ನಿರ್ಮಿಸಿ¨ªಾನಲ್ಲದೆ, ವಾರಾಣಸಿ, ಉಜ್ಜಯಿನಿ, ಮಥುರಾಗಳಲ್ಲಿ ಎಂದು ಒಟ್ಟು ಐದು ಇಂತಹ ವೀಕ್ಷಣಾಲಯಗಳನ್ನು ನಿರ್ಮಿಸಿ¨ªಾನೆ. ದೆಹಲಿಯ ಜಂತರ್‌ ಮಂತರ್‌ ಇಂದು ಕಾರ್ಯನಿರ್ವಹಿಸುತ್ತಿಲ್ಲವಾದರೆ, ಮಥುರಾ ತಾರಾ ವೀಕ್ಷಣಾಲಯ ನಾಶವಾಗಿದೆ. 

Advertisement

ಜಂತರ್‌ ಎಂದರೆ ಯಂತ್ರ, ಮಂತರ್‌ ಎಂದರೆ ಗಣನೆಮಾಡುವುದು ಎಂದರ್ಥ. ದಿಗಂಶ ಯಂತ್ರ, ಕಪಾಲಿಯಂತ್ರ, ಜೈಪ್ರಕಾಶ್‌ ಯಂತ್ರ, ಮಿಶ್ರ ಯಂತ್ರ, ಸಾಮ್ರಾಟ್‌ ಯಂತ್ರ ಮುಂತಾಗಿ ಹತ್ತೂಂಬತ್ತು ಉಪಕರಣಗಳು ಇಲ್ಲಿವೆ. ಗ್ರಹಣಗಳ ಸಂಭಾವ್ಯತೆ ತಿಳಿಯುವುದು, ಪ್ರಮುಖ ನಕ್ಷತ್ರಗಳ ಸ್ಥಾನ, ಗ್ರಹಗಳ ಕೋನಮಾಪನ (ಬಾಗುವಿಕೆ), ಆಕಾಶಕಾಯಗಳ ಅಂತರ ದೂರ ತಿಳಿಯುವುದು, ನಕ್ಷತ್ರಗಳ ಚಲನೆಗಳ ಅಧ್ಯಯನ, ಇವೆಲ್ಲವೂ ಈ ಜಂತರ್‌ ಮಂತರ್‌ನಿಂದ ಸಾಧ್ಯ.

 ಜೈಪ್ರಕಾಶ ಯಂತ್ರ ಎರಡು ನಿಮ್ನ ಅರ್ಧವೃತ್ತಾಕಾರದ ಭಾಗಗಳಿಂದ ಕೂಡಿದೆ. ಈ ಎರಡು ತದ್ರೂಪಿ ಭಾಗಗಳು ಕೂಡ ಪ್ರತಿ ಗಂಟೆಯಲ್ಲೂ ಒಂದರ ನಂತರ ಇನ್ನೊಂದು ಕಾರ್ಯ ನಿರ್ವಹಿಸುತ್ತವೆ. ಸೂರ್ಯ, ಇನ್ನಿತರ ಆಕಾಶಕಾಯಗಳ ಸ್ಥಾನ ಹಾಗೂ ದಿನದ ಸಮಯ ತಿಳಿಯಲು ಇದನ್ನು ಬಳಸಲಾಗುತ್ತದೆ.

ನಾರೀ ವಲಯ ಯಂತ್ರದಲ್ಲಿ ದಕ್ಷಿಣ ಮತ್ತು ಉತ್ತರ ಎಂಬ ಎರಡು ಭಾಗಗಳಿವೆ. ಈ ಭಾಗಗಳಲ್ಲಿ ಡಿಸೆಂಬರ್‌ 22 ಹಾಗೂ ಜೂನ್‌ 21ರಂದು ಸೂರ್ಯನ ಕಿರಣಗಳು ಕರ್ಕಾಟಕಸಂಕ್ರಾಂತಿ ವೃತ್ತ ಹಾಗೂ ಮಕರ ಸಂಕ್ರಾಂತಿ ವೃತ್ತಗಳ ಮೇಲೆ  ನೇರವಾಗಿ ಬೀಳುವುದರ ಪರಿಣಾಮವನ್ನು, ಮಾರ್ಚ್‌ 21 ಮತ್ತು ಸೆಪ್ಟೆಂಬರ್‌ 23ರಂದು ಸೂರ್ಯನ ಕಿರಣಗಳು ಸಮಭಾಜಕ ವೃತ್ತದ ಮೇಲೆ ನೇರವಾಗಿ ಬೀಳುವುದರ ಪರಿಣಾಮದ ಕಾಲಗಣನೆಯನ್ನು ತೋರಿಸುತ್ತದೆ.

ವಿರಾಟ್‌ ಸಾಮ್ರಾಟ್‌ ಯಂತ್ರವು ಭೂಮಿಯ ಅಕ್ಷಕ್ಕೆ ಲಂಬವಾದ ಡಯಲ್‌ ಹೊಂದಿದೆ. ಭೂಮಿಯ ಅûಾಂಶಕ್ಕೆ ಸಮಾನಾಂತರವಾದ ಕರ್ಣವುಳ್ಳ ತ್ರಿಕೋನಾಕಾರದ ಗೋಡೆಯಿದೆ. ಉತ್ತರ ದಕ್ಷಿಣವಾಗಿ ನಿರ್ಮಿಸಿದ ಗೋಡೆಯ ನೆರಳು ಪೂರ್ವ ದಿಕ್ಕಿನಲ್ಲಿ (ಪಾರ್ಟ್‌ ಎ) ಬೆಳಗಿನ ಆರರಿಂದ ಮಧ್ಯಾಹ್ನ ಹನ್ನೆರಡರವರೆಗೆ ಹಾಗೂ ಪಶ್ಚಿಮ ದಿಕ್ಕಿನಲ್ಲಿ (ಪಾರ್ಟ್‌ ಬಿ) ಮಧ್ಯಾಹ್ನ ಹನ್ನೆರಡರಿಂದ ಸಂಜೆ ಆರರವರೆಗೆ ಬೀಳುವಂತೆ ವಿಂಗಡಣೆಗಳಿವೆ. ಪ್ರತಿ ಗಂಟೆಯನ್ನೂ ಹದಿನೈದು ನಿಮಿಷಗಳಿಗೆ ವಿಭಾಗಿಸಲಾಗಿದೆ. ನಂತರ ಇದನ್ನು ಒಂದು ನಿಮಿಷದ ಭಾಗವಾಗಿ ವಿಭಾಗಿಸಿದೆ. ನಿಮಿಷದ ಭಾಗವನ್ನು ಆರು ಸೆಕೆಂಡ್‌ಗಳ ಹತ್ತು ಭಾಗವಾಗಿ ವಿಭಾಗಿಸಲಾಗಿದೆ. ಈ ಆರು ಸೆಕೆಂಡ್‌ಗಳ ಒಂದು ಭಾಗ ಎರಡು ಸೆಕೆಂಡ್‌ಗಳ ಮೂರು ಭಾಗಗಳಾಗಿ ವಿಭಾಗವಾಗಿದೆ. ಈ ಯಂತ್ರವು ಕೇವಲ ಎರಡು ಸೆಕೆಂಡ್‌ಗಳ ವ್ಯತ್ಯಾಸದಲ್ಲಿ ಸ್ಥಳೀಯ ಕಾಲ ತೋರಿಸುತ್ತದೆ. ನಾವು ಇದನ್ನು ನೋಡುತ್ತಿ¨ªಾಗ ಬೆಳಗಿನ ಹತ್ತೂ ಇಪ್ಪತ್ತರ ಸಮಯವಾಗಿತ್ತು. ನಮ್ಮ ಗೈಡ್‌ ಧರಮ್‌ಸಿಂಗ್‌ ಇದರ ಕಾರ್ಯವೈಖರಿ ವಿವರಿಸಿದಾಗ ರೋಮಾಂಚನವಾಗಿತ್ತು.

Advertisement

ಧ್ರುವದರ್ಶಿಕೆ ಪಟ್ಟಿಕೆ ರಾತ್ರಿ ಎಂಟು ಗಂಟೆಯಿಂದ ಬೆಳಗಿನ ಐದು ಗಂಟೆಯವರೆಗೆ ಧ್ರುವ ನಕ್ಷತ್ರ ನೋಡಲು ಹಾಗೂ ಹನ್ನೆರಡು ರಾಶಿ ಚಿಹ್ನೆಗಳ ಸ್ಥಾನ ದಿಕ್ಕು ತಿಳಿಯಲು ಹಾಗೂ ಸೂರ್ಯನು ಸಮಭಾಜಕ ವೃತ್ತದಿಂದ ಎಷ್ಟು ಡಿಗ್ರಿ ಉತ್ತರ ಅಥವಾ ದಕ್ಷಿಣದಲ್ಲಿರುವನೆಂದು ತಿಳಿಯಲು ಬಳಕೆಯಾಗುತ್ತದೆ. 

ಕಾಲ, ಅವಕಾಶ, ಚಲನೆ, ಗುರುತ್ವಾಕರ್ಷಣೆಗಳ ವೈಜ್ಞಾನಿಕ ಸಿದ್ಧಾಂತಗಳಿಗೆ ತಮ್ಮ ಸಾಪೇಕ್ಷ ಸಿದ್ಧಾಂತದಿಂದ ಒಂದು ನಿಯಮ ಗುರಿ ತೋರಿಸಿದ ಆಲ್ಬರ್ಟ್‌ ಐನ್‌ಸ್ಟಿàನ್‌ರವರು ಉದ್ದ, ಅಗಲ, ಎತ್ತರಗಳ ಜೊತೆಗೆ ಕಾಲ ಎನ್ನುವುದು ನಾಲ್ಕನೆಯ ಆಯಾಮವಾಗಿದೆ ಎಂದರು. ಇಂತಹ ಕಾಲಗಣನೆಯ ಪರಿಕರಗಳನ್ನು ಕಾಲಕ್ಕೇ ಸವಾಲೆಸೆಯುವಂತೆ ಕಾಲಾತೀತವಾಗಿ ಉಳಿದುಬರುವಂತೆ ನಿರ್ಮಿಸಿದ ರಾಜಾ ಜಯಸಿಂಹನ ಖಗೋಳಶಾಸ್ತ್ರದ ಒಲವಿಗೆ, ಅವನ ಕಾರ್ಯದಕ್ಷತೆಗೆ ಸಾಕ್ಷಿಯಾಗಿದೆ ಜಂತರ್‌ ಮಂತರ್‌.

ಜಯಶಾಲಿ ಜಯಸಿಂಹ
ಕಚವಾಹ ವಂಶದ ರಾಜಾಜಯಸಿಂಹ ತನ್ನ ಹನ್ನೊಂದನೇ ವಯಸ್ಸಿನಲ್ಲಿ ತಂದೆಯ ಮರಣಾನಂತರ ಅಧಿಕಾರಕ್ಕೆ ಬಂದವನು. ಔರಂಗಜೇಬನ ಅಧಿಕಾರದಲ್ಲಿ ಅವನಿಗೆ ಅಧೀನನಾಗಿ ಹಲವಾರು ಯುದ್ಧಗಳಲ್ಲಿ ಭಾಗವಹಿಸಿ ತನ್ನ ಶೌರ್ಯವನ್ನು ಮೆರೆದು, ಮೊಗಲರ ಪ್ರೀತಿಗೆ ಪಾತ್ರನಾಗಿದ್ದವನು. ಸವಾಯಿ ಎಂಬ ಬಿರುದನ್ನು ಔರಂಗಜೇಬನು ಇವನಿಗೆ ಪ್ರದಾನ ಮಾಡಿದ್ದರೆ, ಮುಂದೆ ರಾಜರಾಜೇಶ್ವರ, ಶ್ರೀಶಂತನುಜಿ, ಸರಾಮದ್‌-ಇ-ರಾಜಾ-ಇ- ಹಿಂದ್‌ ಮುಂತಾದ ಬಿರುದುಗಳೂ ಸಂದಿದ್ದುವಾದರೂ ಸವಾಯಿ ಎಂಬುದು ಇವನ ಹೆಸರಿನೊಂದಿಗೇ ಉಳಿದುಬಂದಿತು. ಮೊದಲು ಇವನ ರಾಜಧಾನಿ ಅಂಬರ್‌ ಆಗಿತ್ತು. ನಂತರದಲ್ಲಿ ಈತ ಯೋಜಿತ ನಗರ ಜಯಪುರವನ್ನು ನಿರ್ಮಿಸಿದ. ಅವನ ನಿರ್ಮಾಣದ ಭವ್ಯ ಅರಮನೆ ಜಯಪುರ ನಗರದ ಮಧ್ಯದಲ್ಲಿರುವ ಚಂದ್ರಮಹಲ್‌. ಇಂದು ಇದನ್ನು ಸಿಟಿ ಪ್ಯಾಲೇಸ್‌ ಎನ್ನಲಾಗುತ್ತದೆ. ಈ ಸಿಟಿ ಪ್ಯಾಲೇಸ್‌ ಇಂದು ವಸ್ತುಸಂಗ್ರಹಾಲಯವಾಗಿದೆಯಾದರೂ, ಇಂದಿಗೂ ಇಲ್ಲಿ ರಾಜಮನೆತನದವರು ವಾಸಿಸುತ್ತಿದ್ದಾರೆ. ಅರಮನೆಯ ಆವರಣದಲ್ಲಿ ಉದ್ಯಾನವನ, ಇನ್ನಿತರ ಹಲವಾರು ಕಟ್ಟಡಗಳೂ ಇವೆ. ಜಯಪುರಕ್ಕೆ ಹೆಸರು ಬಂದಿರುವುದೂ ಜಯಸಿಂಹನಿಂದಾಗಿಯೇ. ಗುಲಾಬಿ ಬಣ್ಣದ ಕಟ್ಟಡಗಳಿಂದಾಗಿ ಜಯಪುರವು ಪಿಂಕ್‌ ಸಿಟಿ ಎಂದೂ ಖ್ಯಾತವಾಗಿದೆ. 

ಜಯಸಿಂಹ ಫಿರಂಗಿಗಳ ಬಳಕೆಯ ಮಹತ್ವ ಅರಿತಿದ್ದ. ಇವನ ಪ್ರಯೋಗಾತ್ಮಕವಾದ ಚಕ್ರಗಳ ಫಿರಂಗಿ ಜೈವಾನ. ಇದು ಪ್ರಪಂಚದ ಅತಿ ದೊಡ್ಡ ಫಿರಂಗಿ ಎನಿಸಿದೆ. ಸದಾ ಯುದ್ಧ ಮಗ್ನನಾಗಿದ್ದಾಗಲೂ ಖಗೋಳಶಾಸ್ತ್ರದ ಮೇಲಿನ ತನ್ನ ಪ್ರೀತಿ ಕಿಂಚಿತ್ತೂ ಮುಕ್ಕಾಗದಂತೆ ಕಾಪಿಟ್ಟುಕೊಂಡು ಬಂದುದರಲ್ಲಿಯೇ ಇವನ ವ್ಯಕ್ತಿತ್ವದ ಹಿರಿಮೆ ವ್ಯಕ್ತವಾಗುತ್ತದೆ. ಯೂಕ್ಲಿಡ್‌ನ‌ ರೇಖಾಗಣಿತದ ಮೂಲತತ್ವದ ಕೃತಿಯನ್ನು, ಜಾನ್‌ ನೇಪಿಯರ್‌ನ ಕೃತಿಯನ್ನು ಸ್ವತಃ ಸಂಸ್ಕೃತಕ್ಕೆ ಅನುವಾದಿಸಿದ್ದ. ಜಂತರ್‌ಮಂತರ್‌ ನಿರ್ಮಾಣಕ್ಕೂ ಮೊದಲು ಯೂರೋಪಿಯನ್‌, ಇಸ್ಲಾಮಿಕ್‌, ಪರ್ಷಿಯನ್‌ ನಾಗರಿಕತೆಗಳ ಖಗೋಳಶಾಸ್ತ್ರ ಸಂಬಂಧಿ ಪುಸ್ತಕಗಳನ್ನು ಅಧ್ಯಯನ ಮಾಡಿದ್ದ.

ಕೆ. ಆರ್‌. ಉಮಾದೇವಿ ಉರಾಳ್‌

Advertisement

Udayavani is now on Telegram. Click here to join our channel and stay updated with the latest news.

Next