Advertisement

ಕೋನಾಹಿಪ್ಪರಗಿ-ಸರಡಗಿ ಸೇತುವೆಗೆ ಗ್ರಹಣ

06:12 PM Dec 27, 2019 | Naveen |

„ವಿಜಯಕುಮಾರ ಎಸ್‌. ಕಲ್ಲಾ
ಜೇವರ್ಗಿ:
ತಾಲೂಕಿನ ಕೋನಾಹಿಪ್ಪರಗಿ- ಸರಡಗಿ ನಡುವೆ ಭೀಮಾನದಿಗೆ ನಿರ್ಮಿಸಲಾಗಿರುವ 54 ಕೋಟಿ ರೂ. ವೆಚ್ಚದ ಸೇತುವೆ ಉಪಯೋಗಕ್ಕೆ ಇನ್ನೂ ಗ್ರಹಣ ಹಿಡಿದಂತಾಗಿದೆ. ತಾಲೂಕಿನ ಕೋಳಕೂರ ಜಿಪಂ ವ್ಯಾಪ್ತಿಯ ಕೂಡಿ, ಕೋಬಾಳ, ಬಣಮಿ, ಮಂದ್ರವಾಡ, ಕೋನಾಹಿಪ್ಪರಗಿ, ಹಂದನೂರ, ರಾಸಣಗಿ, ಗೌನಳ್ಳಿ, ಜನಿವಾರ, ಹರವಾಳ ಸೇರಿದಂತೆ ಹತ್ತಾರು ಗ್ರಾಮಗಳ ಜನರ ಬೇಡಿಕೆಯಾಗಿದ್ದ ಸೇತುವೆ ಕಳೆದ ಎರಡು ದಶಕಗಳ ಬಳಿಕ
ನಿರ್ಮಾಣವಾಗಿದೆ. ಆದರೆ ಸೇತುವೆಗೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಹದಗೆಟ್ಟು ಹೋಗಿದ್ದರಿಂದ ಈ ಭಾಗದ ಜನರಿಗೆ ಸೇತುವೆಯಿಂದ ಯಾವುದೇ ಪ್ರಯೋಜನವಿಲ್ಲದಂತಾಗಿದೆ.

Advertisement

ಕೆಆರ್‌ಡಿಸಿಎಲ್‌ ವತಿಯಿಂದ 54 ಕೋಟಿ ರೂ.ವೆಚ್ಚದಲ್ಲಿ ಸೇತುವೆ ನಿರ್ಮಿಸಲಾಗಿದೆ. ಕಡಿಮೆ ಸಮಯದಲ್ಲಿ ಕಲಬುರಗಿಗೆ ತೆರಳಲು ಅನುಕೂಲವಾಗಲಿದೆ. ಇದರ ಜತೆಗೆ 20 ಕಿಮೀ ಅಂತರ ಕಡಿಮೆಯಾಗಲಿದೆ ಎನ್ನುವ ಸದುದ್ದೇಶದಿಂದ ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ಕೂಡಿ ದರ್ಗಾದಿಂದ ಕೋನಾಹಿಪ್ಪರಗಿ ಸೇತುವೆವರೆಗೆ ತೆರಳುವ ಮೂರು ಕಿಮೀ ರಸ್ತೆ ತಗ್ಗುಗಳಿಂದ ಕೂಡಿದ್ದು, ವಾಹನ ಸವಾರರು ಪರದಾಡುವಂತಾಗಿದೆ. ರೇವನೂರ ಕ್ರಾಸ್‌ ದಿಂದ ಕೋನಾಹಿಪ್ಪರಗಿವರೆಗೆ ರಸ್ತೆ ಸಹ ತೀರಾ ಹದಗೆಟ್ಟು ಹೋಗಿದೆ, ಕನಿಷ್ಠ ತೇಪೆ ಹಾಕುವ ಕೆಲಸ ಮಾಡದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬಹುತೇಕ ಕಡೆ ಡಾಂಬರ್‌ ಕಿತ್ತು ಹೋಗಿ ಜಲ್ಲಿ ಕಲ್ಲುಗಳು ಎದ್ದಿದೆ. ಇನ್ನು ಕೆಲವು ಕಡೆ ಬೃಹತ್‌ ಗಾತ್ರದ ಹೊಂಡಗಳು ರಸ್ತೆಯಲ್ಲಿ ಬಿದ್ದಿವೆ. ಒಂದು ಹೊಂಡ ತಪ್ಪಿಸಲು ಹೋದರೆ ಮತ್ತೊಂದು ಹೊಂಡಕ್ಕೆ ವಾಹನ ಇಳಿಯುತ್ತದೆ. ಇದರಿಂದ ವಾಹನ ಸವಾರರಿಗೆ ತೊಂದರೆಯಾಗುತ್ತಿದೆ. ರೇವನೂರ ಕ್ರಾಸ್‌ ಬಳಿ ರಾಷ್ಟ್ರೀಯ ಹೆದ್ದಾರಿ-50ರಿಂದ ಸರಡಗಿ ಬಳಿ ಹೆದ್ದಾರಿಗೆ ಸಂಪರ್ಕ ಕಲ್ಪಿಸಿದರೆ ಮಾತ್ರ ಈ ಭಾಗದ ಜನರಿಗೆ ಇದರಿಂದ ಲಾಭ. ಕಲಬುರಗಿಯಿಂದ ವಿಜಯಪುರಕ್ಕೆ ಈ ಸೇತುವೆ ಮಾರ್ಗವಾಗಿ ಹೋದರೇ ಕನಿಷಷ್ಠ 15 ಕಿಮೀ ಅಂತರ ಕಡಿಮೆಯಾಗಲಿದೆ. ಸರಡಗಿ ಕ್ರಾಸ್‌ದಿಂದ ಸೇತುವೆ ವರೆಗೆ ರಸ್ತೆ ನಿರ್ಮಾಣ ಮಾಡಲಾಗಿದೆ. ಅದೇ ರೀತಿ ರೇವನೂರ ಕ್ರಾಸ್‌ ವರೆಗೆ ದ್ವಿಪಥದ ರಸ್ತೆ ನಿರ್ಮಾಣ ಮಾಡಬೇಕು ಎಂದು ಈ ಭಾಗದ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಬಗ್ಗೆ ಹಲವು ಬಾರಿ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 15ಕ್ಕೂ ಹೆಚ್ಚು ಗ್ರಾಮಸ್ಥರಿಗೆ ಅನುಕೂಲವಾಗುವ ಈ ರಸ್ತೆ ಅಭಿವೃದ್ಧಿಗೆ ಶಾಸಕ ಡಾ| ಅಜಯಸಿಂಗ್‌ ಒತ್ತು ನೀಡುವರೆ ಕಾದು ನೋಡೋಣ.

Advertisement

Udayavani is now on Telegram. Click here to join our channel and stay updated with the latest news.

Next