Advertisement

ಮಟ್ಟಿಯಲ್ಲಿ ಮದಗಜಗಳಂತೆ ಕಾದಾಡಿದ ಕಲಿಗಳು

01:15 PM Sep 27, 2022 | Team Udayavani |

ಮೈಸೂರು: ಮಟ್ಟಿಯಲ್ಲಿ ನಿಂತು ಎದುರಾಳಿಯನ್ನು ಮಣಿಸಲು ಡಾವು ಹೊಡೆದು ತೋಡು ಹಾಕುತ್ತ ಚಿತ್‌ ಮಾಡಲು ತಲ್ಲೀನರಾಗಿದ್ದ ಪೈಲ್ವಾನರ ಕಾಳಗ ನೋಡುಗರನ್ನು ರೋಮಾಂಚನಗೊಳಿತು. ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ನಗರದ ದೊಡ್ಡಕೆರೆ ಮೈದಾನದ ಡಿ.ದೇವರಾಜ ಅರಸು
ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿರುವ ದಸರಾ ಕುಸ್ತಿ ಪಂದ್ಯಾವಳಿಯ ಮೊದಲ ದಿನ ದೇಶದ ವಿವಿಧ ಭಾಗಗಳಿಂದ ಆಗಮಿಸಿದ್ದ ಪೈಲ್ವಾನರು ಮಟ್ಟಿಯಲ್ಲಿ ನಿಂತು ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು.

Advertisement

ಕುಸ್ತಿ ಪಂದ್ಯಾವಳಿಗೆ ಚಾಲನೆ ಸಿಗುತ್ತಿದ್ದಂತೆ ಮೊದಲ ಪಂದ್ಯದಲ್ಲಿ ಭಾರತೀಯ ಕೇಸರಿಗಳು’ ಬಿರುದಾಕಿಂತ ಭಾರತ ಕೇಸರಿ ಸೀನಿಯರ್‌ಮೆಡಲೀಸ್ಟ್ ವಿಕಾಸ ಕಾಳ ಮತ್ತು ಕೊಲ್ಹಾಪುರದ ಪೈಲ್ವಾನ್‌ ಸಿದ್ದೇಶ್ವರ ಮೌಲಿ ಜಮದಾಳೆ ಕೆಮ್ಮಣ್ಣಿನಲ್ಲಿ ಮದಗಜಗಳಂತೆ ಕಾದಾಡುತ್ತ ದೂಳೆಬ್ಬಿಸಿದರು. ಜಾರುವ ಮೈಗೆ ಮೈ ಕೊಡುವುತ್ತ ಹಾಕುತ್ತಿದ್ದ ಪಟ್ಟುಗಳನ್ನು ಮೊದಲಾರ್ಧದಲ್ಲಿ ಸಡಿಲಿಸುತ್ತಿದ್ದ ಕಾಳೆ ದ್ವಿತೀಯಾರ್ಧದಲ್ಲಿ ಮೇಲುಗೈ ಸಾಧಿಸಿದ್ದಲ್ಲದೆ ಎರಡು ಬಾರಿ ಎದುರಾಳಿಯನ್ನು ಮಣ್ಣಿಗೆ ಕೆಡವಿ ಕುಸ್ತಿಪ್ರಿಯರ ಶಿಳ್ಳೆ ಚಪ್ಪಾಳೆಗಳನ್ನು ಗಿಟ್ಟಿಸಿದರು. ಮೈಸೂರು ಶೈಲಿಯ ಕುಸ್ತಿ ನಿಯಮ ದಂತೆ ಚಿತ್‌ ಮಾಡಬೇಕು. ಆದರೆ, ಕಣದಿಂದ ಆಚೆಗಟ್ಟಿ ಗೆಲ್ಲಲು ಇಬ್ಬರೂ ಪೈಲ್ವಾನರು ನೋಡಿದರು. ನಿಯಮ ಅರಿತ ನಂತರ ಅಂಗಳದಲ್ಲಿಯೇ ಪೈಪೋಟಿ ನಡೆಸಿದರು. ಆದರೆ, ಪಂದ್ಯಾ ಡ್ರಾನಲ್ಲಿ ಅಂತ್ಯಗೊಂಡಿತು.

ಮೊದಲ ಪಂದ್ಯದಲ್ಲಿ ವಾಗ್ವಾದ: ನಿಯಮ ಸರಿಯಾಗಿ ತಿಳಿಯದ ಕೊಲ್ಹಾಪುರದ ಪೈಲ್ವಾನ್‌ ಸಿದ್ದೇಶ್ವರ ಮೌಲಿ ಜಮದಾಳೆ ನಿಯಮದಲ್ಲಿ ಗೊಂದಲದಿಂದ ವಾಗ್ವಾದಕ್ಕೆ ಕಾರಣವಾಗಿತ್ತು. ಜಮದಾಳೆ ತಮ್ಮ ಭಾಗದ ಮಾದರಿಯಲ್ಲಿ ಚಿತ್‌ ಮಾಡಲು ಯತ್ನಿಸಿದರು. ಇದಕ್ಕೆ ತೀರ್ಪುಗಾರರು ಮೈಸೂರಿನ ಮಾದರಿಯಲ್ಲಿಯೇ ಕುಸ್ತಿ ಚಿತ್‌ ಆಗಬೇಕು ಎಂದು ಹೇಳಿದರು. ಇದರಿಂದ ಜಮದಾಳೆ ಗೊಂದಲಕ್ಕಿಡಾದರು. ಅಷ್ಟರಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ವ್ಯಕ್ತಿಯೋರ್ವ ಅವಾಚ್ಯ ಶಬ್ಧದಿಂದ ನಿಂದಿಸಿದ. ಇದರಿಂದ ಕುಪಿತಗೊಂಡ ಜಮದಾಳೆ ನಿಂದಿಸಿದ ವ್ಯಕ್ತಿಯನ್ನು ಅಖಾಡಕ್ಕೆ ಕರೆದ. ಅಷ್ಟರಲ್ಲಿ ಶಾಸಕ ನಾಗೇಂದ್ರ ಪೈಲ್ವಾನನ್ನು ಮೈಸೂರು ಕುಸ್ತಿ ನಿಯಮದ ಬಗ್ಗೆ ಮನವರಿಕೆ ಮಾಡುವ ಪ್ರಯತ್ನ ಮಾಡಿದರು. ಆದರೂ ಪೈಲ್ವಾನ್‌ ದುರ್ವತನೆ ತೋರಿದ್ದರಿಂದ ಪ್ರೇಕ್ಷಕರು ಗದರಿದರು. ಇದರಿಂದ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು. ಬಳಿಕ ಹಿರಿಯ ಉಸ್ತಾದರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಕುಸ್ತಿಗೆ ಸಚಿವ ಚಾಲನೆ: ಇದಕ್ಕೂ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ದಸರಾ ಕುಸ್ತಿ ಪಂದ್ಯಾವಳಿಗೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ನಾನು ಮತ್ತು ನಾರಾಯಣ್‌ ಗೌಡ ಇಬ್ಬರು ಕುಸ್ತಿಗೆ ರೆಡಿ ಇದ್ವಿ. ಆದರೆ ದಸರಾ ಕುಸ್ತಿ ಉಪ ಸಮಿತಿಯ ವಿಶೇಷಾಧಿಕಾರಿ ನಂದಿನಿಯವರು ಅವಕಾಶ ನೀಡಲಿಲ್ಲ ಎಂದು ಹಾಸ್ಯ ಚಟಾಕಿ ಹಾರಿಸಿದರು.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವರಾದ ನಾರಾಯಣಗೌಡ, ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ , ಅಪರ ಪೊಲೀಸ್‌ ವರಿಷ್ಠಾಧಿಕಾರಿ ನಂದಿನಿ, ದಸರಾ ಕುಸ್ತಿ ಉಪಸಮಿತಿಯ ಅಧ್ಯಕ್ಷ ಕೆ.ದೇವರಾಜ್‌, ಉಪಾಧ್ಯಕ್ಷರಾದ ವೇದರಾಜ್‌ ಎಸ್‌.ಹೂಟಗಳ್ಳಿ, ಮಹೇಶ್‌ ರಾಜೇ ಅರಸ್‌, ಎಂ.ಎಂ.ರಾಜೇಗೌಡ, ಕಾರ್ಯಾಧ್ಯಕ್ಷ ಗೋವಿಂದರಾಜು, ಕಾರ್ಯದರ್ಶಿ ಎಸ್‌. ಜೆ.ಹರ್ಷವರ್ಧನ ಸೇರಿದಂತೆ ಹಲವರು ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next