ಹಿರೋಶಿಮಾ: ಗ್ರೀನ್ ಹೈಡ್ರೋಡನ್ ಮತ್ತು ಸೆಮಿಕಂಡಕ್ಟರ್ ಕ್ಷೇತ್ರದಲ್ಲಿ ಹೆಚ್ಚಿನ ಸಹಭಾಗಿತ್ವ ಹೊಂದಲು ಭಾರತ ಮತ್ತು ಜಪಾನ್ ಮುಂದಾಗಿವೆ. ಈ ಬಗ್ಗೆ ಜಪಾನ್ನ ಹಿರೋಶಿಮಾದಲ್ಲಿ ಶನಿವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಜಪಾನ್ ಪ್ರಧಾನಿ ಕಿಶಿದಾ ನಡುವಿನ ದ್ವಿಪಕ್ಷೀಯ ಮಾತುಕತೆಯಲ್ಲಿ ಒಪ್ಪಿಕೊಳ್ಳಲಾಗಿದೆ.
ಭಾರತದ ನೇತೃತ್ವದಲ್ಲಿ ಜಿ20 ರಾಷ್ಟ್ರಗಳ ಸಮ್ಮೇನವೂ ನಡೆಯಲಿದ್ದು, ಅದಕ್ಕೆ ಪೂರಕವಾಗಿ ಜಗತ್ತಿನಲ್ಲಿ ಉಂಟಾಗಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಬಗ್ಗೆಯೂ ಎರಡೂ ದೇಶಗಳ ಪ್ರಧಾನಿಗಳು ಚರ್ಚೆ ನಡೆಸಿದ್ದಾರೆ ಎಂದು ಕೇಂದ್ರ ವಿದೇಶಾಂಗ ಸಚಿವಾಲಯ ತಿಳಿಸಿದೆ.
ಅಭಿವೃದ್ಧಿ ಹಣಕಾಸು ವ್ಯವಸ್ಥೆ, ಆಹಾರ ಭದ್ರತೆ, ಹವಾಮಾನ ಬದಲಾವಣೆ, ಇಂಧನ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮೋದಿ ಮತ್ತು ಕಿಶಿದಾ ಐವತ್ತು ನಿಮಿಷಗಳ ಕಾಲ ಮಾತುಕತೆ ನಡೆಸಿದ್ದಾರೆ. ಜಿ20 ರಾಷ್ಟ್ರಗಳು ಮತ್ತು ಜಿ7 ರಾಷ್ಟ್ರಗಳ ನಡುವೆ ಸಮನ್ವಯತೆ ಜಗತ್ತಿನ ದಕ್ಷಿಣ ಭಾಗದಲ್ಲಿ ಉಂಟಾಗಿರುವ ಸವಾಲುಗಳನ್ನು ನಿಯಂತ್ರಿಸುವ ಬಗ್ಗೆಯೂ ಪ್ರಧಾನಿ ಮೋದಿ ಪ್ರಸ್ತಾಪ ಮಾಡಿದ್ದಾರೆ.
ವಿಶ್ವಸಂಸ್ಥೆಯ ಸುಧಾರಣೆ, ಭಯೋತ್ಪಾದನೆ¿ವಿರುದ್ಧ ಸಮರ, ಪ್ರಾದೇಶಿಕ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದರು ಎಂದು ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದೆ.
Related Articles
ಮಹಾತ್ಮಾ ಗಾಂಧಿ ಪುತ್ಥಳಿ ಅನಾವರಣ:
ದ್ವಿಪಕ್ಷೀಯ ಮಾತುಕತೆಗೆ ಮುನ್ನ ಪ್ರಧಾನಿ ನರೇಂದ್ರ ಮೋದಿ ಹಿರೋಶಿಮಾದಲ್ಲಿ ಮಹಾತ್ಮಾ ಗಾಂಧಿ ಅವರ ಪುತ್ಥಳಿಯನ್ನು ಅನಾವರಣಗೊಳಿಸಿದರು. 1945 ಆ.6ರಂದು ಜಗತ್ತಿನಲ್ಲಿಯೇ ಮೊದಲ ಬಾರಿಗೆ ಅಮೆರಿಕ ಅಣುಬಾಂಬ್ ಪ್ರಯೋಗ ಮಾಡಿ ಹಿರೋಶಿಮಾ ನಗರ ಮತ್ತು 14 ಸಾವಿರ ಮಂದಿಯನ್ನು ಕೊಂದು ಹಾಕಿದ ಸ್ಥಳದಲ್ಲಿಯೇ ಪುತ್ಥಳಿ ಸ್ಥಾಪಿಸಲಾಗಿದೆ.
ನಂತರ ಮಾತನಾಡಿದ ಪ್ರಧಾನಿ “ಈಗಿನ ಕಾಲಕ್ಕೂ ಹಿರೋಶಿಮಾ ಎಂದರೆ ಜಗತ್ತು ಹೆದರಿಕೆಯಿಂದಲೇ ನೋಡುತ್ತಿದೆ. ಮಹಾತ್ಮ ಗಾಂಧಿಯವರ ತತ್ವಾದರ್ಶಗಳು ಈಗಿನ ಕಾಲಕ್ಕೂ ಪ್ರಸ್ತುತವಾಗಿದೆ’ ಎಂದರು. ಹಿರೋಶಿಮಾ ಜಪಾನ್ ಪ್ರಧಾನಿ ಕಿಶಿದಾ ಅವರ ಸಂಸದೀಯ ಕ್ಷೇತ್ರವೂ ಹೌದು. ಇದಲ್ಲದೆ, ಜಪಾನ್ನ ಸಾಂಸ್ಕೃತಿಕ ಕ್ಷೇತ್ರದ ಗಣ್ಯರ ಜತೆಗೆ ಕೂಡ ಮೋದಿ ಮಾತುಕತೆ ನಡೆಸಿದ್ದಾರೆ.
ಪ್ರಮುಖರ ಜತೆಗೆ ಭೇಟಿ:
ಪ್ರಧಾನಿ ಮೋದಿಯವರು ಜರ್ಮನಿ ಚಾನ್ಸಲರ್ ಒಲಾಫ್ ಶುಲ್l, ವಿಯೆಟ್ನಾಂ ಪ್ರಧಾನಿ ಫಾಮ್ ಮಿನ್ ಛಿನ್, ದಕ್ಷಿಣ ಕೊರಿಯಾ ಅಧ್ಯಕ್ಷ ಯೂನ್ ಸುಕ್ ಯೋಲ್, ಬ್ರಿಟನ್ ಪ್ರಧಾನಿ ರಿಷಿ ಸುನಕ್, ಇಂಡೋನೇಷ್ಯಾ ಅಧ್ಯಕ್ಷ ಜೊಕೊ ವಿಡೂಡು ಜತೆಗೆ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.
2024ರಲ್ಲಿ ಕ್ವಾಡ್ ಸಮ್ಮೇಳನ ಭಾರತದಲ್ಲಿ
ಕ್ವಾಡ್ ರಾಷ್ಟ್ರಗಳ ಮುಂದಿನ ಸಮ್ಮೇಳನ ಭಾರತದಲ್ಲಿ ನಡೆಯಲಿದೆ. ಈ ಅಂಶವನ್ನು ಪ್ರಧಾನಿ ನರೇಂದ್ರ ಮೋದಿ ಘೋಷಣೆ ಮಾಡಿದ್ದಾರೆ. ಜಿ7 ರಾಷ್ಟ್ರಗಳ ಸಮ್ಮೇಳನದ ಪಾರ್ಶ್ವದಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟನಿ ಅಲೆºನೀಸ್, ಜಪಾನ್ ಪ್ರಧಾನಿ ಫುÂಮಿಯೋ ಕಿಶಿದಾ ಜತೆಗೆ ನಡೆಸಿದ ಸಭೆಯಲ್ಲಿ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ. ಜಗತ್ತಿನ ಶಾಂತಿ, ಅಭ್ಯುದಯಕ್ಕಾಗಿ ಕ್ವಾಡ್ ರಾಷ್ಟ್ರಗಳು ಒಟ್ಟಾಗಿ ಕೆಲಸ ಮಾಡುವುದನ್ನು ಮುಂದುವರಿಸಲಿವೆ ಎಂದೂ ಹೇಳಿದ್ದಾರೆ. ಚೀನಾ ಪ್ರಾಬಲ್ಯ ತಡೆಯುವ ನಿಟ್ಟಿನಲ್ಲಿ ಇಂಡೋ-ಪೆಸಿಫಿಕ್ ವಲಯದಲ್ಲಿ ಮುಕ್ತ ವಾತಾವರಣ ನಿರ್ಮಿಸಲು ಒಕ್ಕೂಟ ಬದ್ಧವಾಗಿಯೂ ಇದೆ. ಹಿಂದೂ ಮಹಾಸಾಗರ ವ್ಯಾಪ್ತಿಯಲ್ಲಿ ಕೂಟ ಈ ಸಹಕಾರ ಮುಂದುವರಿಯಲಿದೆ ಎಂದೂ ನಾಯಕರು ಪ್ರತಿಪಾದಿಸಿದ್ದಾರೆ. ಎಲ್ಲಾ ರೀತಿಯ ಭಯೋತ್ಪಾದನೆಯನ್ನೂ ಖಂಡಿಸುವುದಾಗಿಯೂ ಅವರು ಹೇಳಿದ್ದಾರೆ.
ಸಂಘರ್ಷ ನಿಲ್ಲಿಸಲು ಭಾರತದ ಪ್ರಯತ್ನ
ಉಕ್ರೇನ್ನಲ್ಲಿ ಉಂಟಾಗಿರುವ ಸಂಘರ್ಷ ನಿಲ್ಲಿಸಲು ಭಾರತ ಪ್ರಯತ್ನ ಮಾಡಲಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಆ ದೇಶದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಜತೆಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಮೋದಿ ಈ ಭರವಸೆ ನೀಡಿದ್ದಾರೆ. ಉಕ್ರೇನ್ ಯುದ್ಧ ಕೇವಲ ರಾಜಕೀಯ, ಆರ್ಥಿಕ ಸಮಸ್ಯೆಯಲ್ಲ. ಅದು ಜಗತ್ತಿನ ಮಾನವೀಯ ಸಮಸ್ಯೆಯಾಗಿದೆ ಎಂದರು. ವೈಯಕ್ತಿಕವಾಗಿ ಸಂಘರ್ಷ ನಿಲ್ಲಿಸಲು ಎಲ್ಲಾ ರೀತಿಯಿಂದಲೂ ನೆರವಾಗುವುದಾಗಿ ಹೇಳಿದ್ದಾರೆ. ಝೆಲೆನ್ಸ್ಕಿ ಅವರು ಪ್ರಧಾನಿಯವರಿಗೆ ಕಾಳಗದ ಸದ್ಯದ ಸ್ಥಿತಿಯನ್ನು ವಿವರಿಸಿದರು. ದೇಶದಲ್ಲಿ ಮೊಬೈಲ್ ಆಸ್ಪತ್ರೆಗಳ ಅಗತ್ಯದ ಬಗ್ಗೆ ಝೆಲೆನ್ಸ್ಕಿ ವಿವರಿಸಿದರು. 15 ತಿಂಗಳ ಹಿಂದೆ ದಾಳಿ ಶುರುವಾದ ಬಳಿಕ ಇಬ್ಬರು ನಾಯಕರ ಮೊದಲ ಭೇಟಿ ಇದಾಗಿದೆ.