Advertisement

ಡಿ.24ರಿಂದ ಜಮುರಾ ರಾಷ್ಟ್ರೀಯ ನಾಟಕೋತ್ಸವ

03:23 PM Nov 15, 2021 | Team Udayavani |

ಚಿತ್ರದುರ್ಗ: ನಗರದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದಿಂದ ಪ್ರತಿವರ್ಷದಂತೆ ಈ ಬಾರಿಯ ಜಮುರಾ ರಾಷ್ಟ್ರೀಯ ನಾಟಕೋತ್ಸವ ಡಿ.24ರಿಂದ 28ರವರೆಗೆ ನಡೆಯಲಿದೆ ಎಂದು ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದರು.

Advertisement

ಶ್ರೀಮಠದಲ್ಲಿ ಭಾನುವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮಾತನಾಡಿದ ಶ್ರೀಗಳು, ನಾಟಕಕ್ಕೆ ಪ್ರೇಕ್ಷಕರು ಬಹಳ ಮುಖ್ಯ. ಈ ಹಿಂದೆ ಚಿತ್ರದುರ್ಗ ನಗರದೊಳಗೆ ನಾಟಕೋತ್ಸವ ನಡೆಯುತ್ತಿತ್ತು. ಕೆಲ ವರ್ಷಗಳಿಂದ ಶ್ರೀಮಠದ ಒಳಗಡೆ ಅನುಭವ ಮಂಟಪದಲ್ಲಿ ನಡೆಯುತ್ತಿದೆ. ಸಾರ್ವಜನಿಕರು ಇಲ್ಲಿಗೆ ಆಗಮಿಸಿ ನಾಟಕ ನೋಡುವ ಮೂಲಕ ರಂಗ ಕಲೆಯನ್ನು ಬೆಳೆಸಬೇಕು. ಸದಭಿರುಚಿಯ ನಾಟಕಗಳ ಮೂಲಕ ಉತ್ತಮ ಸಮಾಜ ನಿರ್ಮಾಣವಾಗಬೇಕು ಎಂದರು.

ಸಂಶೋಧಕ ಡಾ| ಬಿ. ರಾಜಶೇಖರಪ್ಪ ಮಾತನಾಡಿ, ಎಚ್‌.ಎಂ.ಚನ್ನಯ್ಯ ಅವರು “ಎಲ್ಲರಂಥವನಲ್ಲ ನನ್ನ ಗಂಡ’ ಎಂಬ ನಾಟಕ ಮತ್ತು ಷೇಕ್ಸ್‌ಪಿಯರ್‌ನ ಹಾಸ್ಯ ಪ್ರಧಾನ ನಾಟಕವನ್ನು ರಾಷ್ಟ್ರೀಯ ನಾಟಕೋತ್ಸವಕ್ಕೆ ಆಯ್ಕೆ ಮಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.

ಎಂ.ಬಿ. ವಿಶ್ವನಾಥ್‌ ಮಾತನಾಡಿ, ರಾಷ್ಟ್ರೀಯ ನಾಟಕೋತ್ಸವ ಆಗಿರುವುದರಿಂದ ಸಹೋಧರ ಭಾಷೆಗಳ ನಾಟಕಗಳನ್ನು ಪ್ರದರ್ಶಿಸಬಹುದು. ಇತರೆ ಭಾಷೆಗಳ ನಾಟಕಗಳು ಹಾಸ್ಯಭರಿತವಾಗಿರಬೇಕು. ಇಂಗ್ಲಿಷ್‌ ನಾಟಕ ರಾಷ್ಟ್ರಪ್ರೇಮದ ಬಗ್ಗೆ ಇರಬೇಕೆಂದರು. ಹಿರಿಯ ಕಲಾವಿದ ನಾಗರಾಜ ಮಾತನಾಡಿ, ಕನ್ನಡ ಭಾಷೆ ನಾಟಕಗಳ ಜೊತೆ ರಾಷ್ಟ್ರೀಯ ನಾಟಕಗಳೂ ಇರಲಿ ಎಂದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಬದರೀನಾಥ್‌, ಉದ್ಯಮಿ ಎಸ್‌.ವಿ. ನಾಗರಾಜಪ್ಪ, ನಗರಸಭಾ ಸದಸ್ಯ ವೆಂಕಟೇಶ್‌ ವೇದಿಕೆಯಲ್ಲಿದ್ದರು. ಎಂ.ಟಿ. ಮಲ್ಲಿಕಾರ್ಜುನಸ್ವಾಮಿ, ಕೆಇಬಿ ಷಣ್ಮುಖಪ್ಪ, ಎಸ್‌ ಜೆಎಂ ಸಂಸ್ಥೆಯ ಶಾಲಾ ಕಾಲೇಜುಗಳ ಮುಖ್ಯಸ್ಥರು ಇದ್ದರು. ಎ.ಜೆ. ಪರಮಶಿವಯ್ಯ ಸ್ವಾಗತಿಸಿದರು. ಪಿ.ವೀರೇಂದ್ರಕುಮಾರ್‌ ನಿರೂಪಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next