Advertisement

ಕಾಶ್ಮೀರದಲ್ಲಿ ಅಭಿವೃದ್ಧಿ ಪರ್ವ ಆರಂಭ

11:42 PM Sep 23, 2022 | Team Udayavani |

ಕೆಲವು ದಿನಗಳ ಹಿಂದೆ ಕಣಿವೆ ರಾಜ್ಯದಲ್ಲಿ ಮೊದಲ ಮಲ್ಟಿಪ್ಲೆಕ್ಸ್‌ ಸಿನೆಮಾ ಮಂದಿರವನ್ನು ಉದ್ಘಾಟನೆಗೊಂಡಿತು. ಮುಂದಿನ ದಿನಗಳಲ್ಲಿ ಪ್ರತೀ ಜಿಲ್ಲೆಯಲ್ಲೂ ಮಲ್ಟಿಪ್ಲೆಕ್ಸ್‌ ಸಿನೆಮಾ ಮಂದಿರ ತೆರೆಯಲು ಸ್ಥಳೀಯ ಸರಕಾರ ಮುಂದಾಗಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಅನಂತರ ಇದೇ ಮೊದಲ ಬಾರಿಗೆ ದಕ್ಷಿಣ ಕಾಶ್ಮೀರದಲ್ಲಿ ಸಿನೆಮಾ ಥಿಯೇಟರ್‌ಗಳನ್ನು ತೆರೆಯಲಾಗಿದೆ. ಇನ್ನೊಂದೆಡೆ ರಾಜ್ಯದಲ್ಲಿ ಫಿಲಂ ಸಿಟಿ ನಿರ್ಮಿಸಲು ಸರಕಾರ ಮುಂದಾಗಿದೆ. ಅಲ್ಲದೇ ಇತ್ತೀಚೆಗೆ ಹೆಚ್ಚು ಸಿನೆಮಾಗಳು ಕಾಶ್ಮೀರದಲ್ಲಿ ಚಿತ್ರೀಕರಣಗೊಳ್ಳುತ್ತಿದೆ. ಹಲವಾರು ಕಂಪೆ‌ನಿಗಳು ರಾಜ್ಯದಲ್ಲಿ ಹೂಡಿಕೆ ಮಾಡಲು ಒಲವು ತೋರಿವೆೆ. ಕೇಂದ್ರ ಸರಕಾರ ಕೂಡ ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ಸಂಪೂರ್ಣ ಸಹಕಾರ ನೀಡುತ್ತಿದೆ.

Advertisement

ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ:
ಆಗಸ್ಟ್‌ನಲ್ಲಿ ವಿಶ್ವದ ಅತ್ಯಂತ ಎತ್ತರದ ರೈಲ್ವೆ ಸೇತುವೆ “ಚೇನಬ್‌ ಸೇತುವೆ’ಯನ್ನು ಉದ್ಘಾಟಿಸಲಾಯಿತು. ಈ ರೈಲ್ವೆ ಸೇತುವೆಯು ಐಫೆಲ್‌ ಟವರ್‌ಗಿಂತ 35 ಮೀಟರ್‌ ಎತ್ತರವಿದೆ. ಇದನ್ನು ಮುಂಬೈ ಮೂಲದ ಮೂಲಸೌಕರ್ಯ ದೈತ್ಯ ಕಂಪನಿ “ಅಫಾRನ್ಸ್‌’ ನಿರ್ಮಿಸಿದೆ. ಇದು 28,000 ಕೋಟಿ ರೂ.ಗಳ ಅಂದಾಜು ವೆಚ್ಚದಲ್ಲಿ ಉತ್ತರ ರೈಲ್ವೇಸ್‌ ಕೈಗೊಂಡಿರುವ ಮಹತ್ವಾಕಾಂಕ್ಷೆಯ ಉಧಮ್‌ಪುರ-ಶ್ರೀನಗರ-ಬಾರಾಮುಲ್ಲಾ ರೈಲು ಸಂಪರ್ಕ (ಯುಎಸ್‌ಬಿಆರ್‌ಎಲ್‌) ಯೋಜನೆಯ ಭಾಗವಾಗಿದೆ.

ಕ್ರೀಡೆಗೆ ಉತ್ತೇಜನ:
ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ ಕ್ರೀಡೆಗೆ ಸಂಬಂಧಿಸಿದಂತೆ ಕನಿಷ್ಠ 300 ಮೂಲಸೌರ್ಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದೇ ಮೊದಲ ಬಾರಿಗೆ, “ಹರ್‌ ದಿನ್‌ ಖೇಲ್‌'(ಪ್ರತಿ ದಿನ ಕ್ರೀಡೆ) ಘೋಷಣೆಯೊಂದಿಗೆ ಕ್ರೀಡಾ ನೀತಿ ಅಳವಡಿಸಿಕೊಳ್ಳಲಾಗಿದೆ. ಇದರಿಂದ 20 ಲಕ್ಷ ಯುವಕರಿಗೆ ಉಪಯೋಗವಾಗಲಿದೆ ಎಂದು ಅಂದಾಜಿಸಲಾಗಿದೆ.

ಇಂಧನ ಯೋಜನೆಗಳಿಗೆ ಚಾಲನೆ:
ಲೆಫ್ಟಿನೆಂಟ್‌ ಗರ್ವನರ್‌ ಮನೋಜ್‌ ಸಿನ್ಹಾ ಅವರು 41 ಕೋಟಿ ರೂಪಾಯಿ ವೆಚ್ಚದ 20 ವಿದ್ಯುತ್‌ ಸರಬರಾಜು ಯೋಜನೆಗಳಿಗೆ ಕೆಲವು ದಿನಗಳ ಹಿಂದೆ ಚಾಲನೆ ನೀಡಿದ್ದಾರೆ. ಇದು ಕಣಿವೆ ರಾಜ್ಯದ ಶೀತಲ ಶೇಖರಣಾ ಸೌಲಭ್ಯಗಳನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಿಸಲಿದೆ.

ಪ್ರವಾಸೋದ್ಯಮಕ್ಕೆ ಪ್ರೋತ್ಸಾಹ:
ಗ್ರಾಮೀಣ ಪ್ರವಾಸೋದ್ಯಮವನ್ನು ಉತ್ತೇಜಿಸಲು ಸರ್ಕಾರವು ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ಹಲವು ಗ್ರಾಮಗಳನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ತರಲು ನಿರ್ಧರಿಸಿದೆ. ಉದಾಹರಣೆಗೆ ಪಂಜಾತ್‌ ಕಾಜಿಗುಂಡ್‌ ಗ್ರಾಮವನ್ನು ಪ್ರವಾಸೋದ್ಯಮ ನಕ್ಷೆಯಲ್ಲಿ ಗುರುತಿಸಲಾಗಿದೆ. ಈ ಗ್ರಾಮಗಳಿಗೆ ಪ್ರವಾಸೋದ್ಯಮ ಹಳ್ಳಿಗಳ ಸ್ಥಾನಮಾನ ನೀಡಿರುವುದನ್ನು ಸಾರ್ವಜನಿಕರು ಸ್ವಾಗತಿಸಿದ್ದಾರೆ.

Advertisement

ಹೂಡಿಕೆಗೆ ಹಲವು ಕಂಪನಿಗಳ ಒಲವು
ಹಲವು ದೊಡ್ಡ ಕಂಪನಿಗಳಿಂದ 56,000 ಕೋಟಿ ರೂ.ಗಳ ಹೂಡಿಕೆ ಪ್ರಸ್ತಾವವು ಜಮ್ಮು ಮತ್ತು ಕಾಶ್ಮೀರದ ಕೈಗಾರಿಕಾ ಇಲಾಖೆಗೆ ಬಂದಿದೆ. ಈ ವರ್ಷದ ಏಪ್ರಿಲ್‌ನಲ್ಲಿ 38,080 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಯಿತು. ಆದಾಗ್ಯೂ, ಕಾಶ್ಮೀರದ ಪರಿಸರವನ್ನು ಗಮನದಲ್ಲಿಟ್ಟುಕೊಂಡು ಸಿಮೆಂಟ್‌ ಕಾರ್ಖಾನೆಗಳು, ಇಟ್ಟಿಗೆ ಗೂಡುಗಳು, ಉಕ್ಕು ಮತ್ತು ಕಬ್ಬಿಣದ ಸ್ಥಾವರಗಳು ಹಾಗೂ ಕಲ್ಲು ಪುಡಿ ಮಾಡುವ ಘಟಕಗಳು ಹೆಚ್ಚು ಮಾಲಿನ್ಯ ಉಂಟು ಮಾಡುವುದರಿಂದ ಜಮ್ಮು ಮತ್ತು ಕಾಶ್ಮೀರ ಆಡಳಿತವು ಈ ರೀತಿಯ ಕಾರ್ಖಾನೆಗಳಿಗೆ ಉತ್ತೇಜನ ನೀಡುತ್ತಿಲ್ಲ.

ಶಿಕ್ಷಣಕ್ಕೆ ಮೊದಲ ಆದ್ಯತೆ
ಹೊಸದಾಗಿ ಏಳು ವೈದ್ಯಕೀಯ ಕಾಲೇಜು ಆರಂಭಿಸಲು ಪ್ರಸ್ತಾಪಿಸಲಾಗಿದೆ. ಅಲ್ಲದೇ ಈಗಾಗಲೇ ನಾಲ್ಕು ವೈದ್ಯಕೀಯ ಕಾಲೇಜುಗಳು ಕಾರ್ಯ ನಿರ್ವಹಿಸುತ್ತಿವೆ. 2018-19ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಒಟ್ಟು 500 ಎಂಬಿಬಿಎಸ್‌ ಸೀಟುಗಳು ಲಭ್ಯವಿತ್ತು. ಅದನ್ನು ಸರ್ಕಾರ 2022ಕ್ಕೆ 1,100 ಸೀಟುಗಳಿಗೆ ಹೆಚ್ಚಿಸಿದೆ.

ಸಂಪೂರ್ಣ ಹಸಿರುಮಯಗೊಳಿಸಲು ದಿಟ್ಟ ಕ್ರಮ:
ಸಂಪೂರ್ಣ ಹಿಮಾಲಯ ಪ್ರದೇಶವನ್ನು ಹಸಿರುಮಯ ಮಾಡಲು ಸರ್ಕಾರ ಮುಂದಾಗಿದೆ. ಅಲ್ಲದೇ ಅವಸಾನದ ಅಂಚಿನಲ್ಲಿರುವ ಜಲಮೂಲಗಳನ್ನು ಪುನರುಜ್ಜೀವಗೊಳಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಂಡಿದೆ. ಇದರ ಭಾಗವಾಗಿ, ಜಮ್ಮು ಮತ್ತು ಕಾಶ್ಮೀರ ಆಡಳಿತವು 1927ರ ಭಾರತೀಯ ಅರಣ್ಯ ಕಾಯಿದೆಗೆ ತಿದ್ದುಪಡಿಗಳನ್ನು ತರಲು ಕೇಂದ್ರ ಸರ್ಕಾರವನ್ನು ಸಂಪರ್ಕಿಸಿದೆ. ಇದರಿಂದ ಅರಣ್ಯ ಕಳ್ಳಸಾಗಣೆದಾರರ ವಿರುದ್ಧ ಕಠಿಣ ಸಾರ್ವಜನಿಕ ಸುರಕ್ಷತಾ ಕಾಯಿದೆ(ಪಿಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸಲು ಸಾಧ್ಯವಾಗಲಿದೆ.

ಸಮಗ್ರ ಅಭಿವೃದ್ಧಿಗೆ ಪಣ
ಜಮ್ಮು ಮತ್ತು ಕಾಶ್ಮೀರದ ಸಮಗ್ರ ಅಭಿವೃದ್ಧಿಗೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ. ಪ್ರಧಾನಮಂತ್ರಿ ಅಭಿವೃದ್ಧಿ ಪ್ಯಾಕೇಜ್‌-2015 ಅನ್ನು ಅನುಷ್ಠಾನಗೊಳಿಸಲಾಗಿದೆ. ಇದರ ಅಡಿಯಲ್ಲಿ ಪ್ರಮುಖವಾಗಿ ಇಂಡಿಯನ್‌ ಇನ್ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ(ಐಐಟಿ) ಸ್ಥಾಪನೆ, ಹೊಸದಾಗಿ ಎರಡು ಆಲ್‌ ಇಂಡಿಯಾ ಇನ್ಸ್ಟಿಟ್ಯೂಟ್‌ ಆಫ್ ಮೆಡಿಕಲ್‌ ಸೈನ್ಸಸ್‌(ಏಮ್ಸ್‌) ಸ್ಥಾಪನೆ ಹಾಗೂ ರಸ್ತೆ, ಇಂಧನ ಸೇರಿದಂತೆ ಹಲವು ಕೇತ್ರಗಳ ಮೂಲಸೌಕರ್ಯ ಯೋಜನೆಗಳನ್ನು ತ್ವರಿತಗೊಳಿಸುವುದು ಸೇರಿದೆ.

ಸಿನಿಮಾ ಮಂದಿರಗಳಿಗೆ ಮರುಚಾಲನೆ
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಮತ್ತು ಶೋಫಿಯಾನ್‌ ಜಿಲ್ಲೆಗಳಲ್ಲಿ ಮಲ್ಟಿಪ್ಲೆಕ್ಸ್‌ ಸಿನಿಮಾ ಮಂದಿರಗಳನ್ನು ಕಳೆದ ಭಾನುವಾರ ಲೆಫ್ಟಿನೆಂಟ್‌ ಗರ್ವನರ್‌ ಮನೋಜ್‌ ಸಿನ್ಹಾ ಉದ್ಘಾಟಿಸಿದರು. ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಇದೇ ಮೊದಲ ಬಾರಿಗೆ ದಕ್ಷಿಣ ಕಾಶ್ಮೀರದಲ್ಲಿ ಸಿನಿಮಾ ಥಿಯೇಟರ್‌ಗಳನ್ನು ತೆರೆಯಲಾಗಿದೆ. ಯುವಜನ ಯೋಜನೆಯಡಿ ಕೇಂದ್ರಾಡಳಿತ ಪ್ರದೇಶದ ಪ್ರತಿ ಜಿಲ್ಲೆಯಲ್ಲಿ ಮಲ್ಟಿಪ್ಲೆಕ್ಸ್‌ ಸಿನಿಮಾ ಮಂದಿರಗಳನ್ನು ತೆರೆಯಲು ಸರ್ಕಾರ ತೀರ್ಮಾನಿಸಿದೆ. ಅನಂತ್‌ನಾಗ್‌, ಶ್ರೀನಗರ, ಬಂಡಿಪೋರಾ, ಗಂದರ್ಬಲ್‌, ದೋಡಾ, ರಜೌರಿ, ಪೂಂಚ್‌,  ಮತ್ತು ರಿಯಾಸಿ ಜಿಲ್ಲೆಗಳಲ್ಲಿ ಶೀಘ್ರದಲ್ಲೇ ಸಿನಿಮಾ ಮಂದಿರಗಳು ಉದ್ಘಾ ಟನೆಗೊಳ್ಳಲಿದೆ.

ಫಿಲಂ ಸಿಟಿ ನಿರ್ಮಾಣ
ಇನ್ನೊಂದೆಡೆ, ಜಮ್ಮು ಮತ್ತು ಕಾಶ್ಮೀರದಲ್ಲಿ ಫಿಲಂ ಸಿಟಿ ನಿರ್ಮಿಸಲು ಸರ್ಕಾರ ಮುಂದಾಗಿದೆ. ಇದಕ್ಕಾಗಿ ಈಗಾಗಲೇ ಸ್ಥಳ ಗುರುತಿಸಲಾಗಿದೆ. ಲೆಫ್ಟಿನೆಂಟ್‌ ಗವರ್ನರ್‌ ಮನೋಜ್‌ ಸಿನ್ಹಾ ನೇತೃತ್ವದ ಆಡಳಿತ ಸಿನಿಮಾ ನೀತಿ-2021 ಜಾರಿಗೆ ತಂದ ನಂತರ ಕಾಶ್ಮೀರದಲ್ಲಿ ಹೆಚ್ಚು ಸಿನಿಮಾಗಳ ಚಿತ್ರೀಕರಣ ಕಾರ್ಯ ನಡೆಯುತ್ತಿದೆ. ನೂತನ ಸಿನಿಮಾ ನೀತಿ ಅಡಿ ಯುವ ಸಿನಿಮಾ ನಿರ್ಮಾಪಕರಿಗೆ ಹೆಚ್ಚು ಉತ್ತೇಜನ ನೀಡಲಾಗುತ್ತಿದೆ. ಇದರಿಂದ ಸ್ಥಳೀಯವಾಗಿ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next