Advertisement

ಶೆಟ್ಟರ್‌ ಸಿಟ್ಟು, ಹಿರಿಯರ ನಡೆ: ನೂತನ ಸಿಎಂ ಬೊಮ್ಮಾಯಿಗೆ ಸಂಕಟ

10:25 AM Jul 31, 2021 | Team Udayavani |

ಬೆಂಗಳೂರು: ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ತಮ್ಮನ್ನು ಪರಿಗಣಿಸದೆ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನಕ್ಕೆ ಘೋಷಿಸಿರುವುದಕ್ಕೆ ಯಡಿಯೂರಪ್ಪ ವಿರುದ್ಧ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಮುನಿಸಿಕೊಂಡಿದ್ದಾರೆ. ಅದೇ ಕಾರಣಕ್ಕೆ ನೈತಿಕತೆಯ ಅಸ್ತ್ರ ಪ್ರಯೋಗಿಸಿ ಸಂಪುಟದಿಂದ ದೂರ ಉಳಿಯುವ ಸಂದೇಶ ರವಾನಿಸಿದ್ದಾರೆ.

Advertisement

ನಾಯಕತ್ವ ಬದಲಾವಣೆ ಸಂದರ್ಭದಲ್ಲಿ ಹಿರಿತನ ಹಾಗೂ ಅನುಭವದ ಆಧಾರದಲ್ಲಿ ತಮ್ಮನ್ನು ಸಿಎಂ ಸ್ಥಾನಕ್ಕೆ ಪರಿಗಣಿಸಲಾಗುತ್ತದೆ ಎಂಬ ವಿಶ್ವಾಸದಲ್ಲಿದ್ದ ಶೆಟ್ಟರ್‌ ಹೆಸರನ್ನು ಈ ಬಾರಿಯೂ ಪ್ರಸ್ತಾಪಿಸದೇ ಇರುವುದಕ್ಕೆ ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ನೂತನ ಶಾಸಕಾಂಗ ಪಕ್ಷದ ನಾಯಕನ ಆಯ್ಕೆಯ ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಶೆಟ್ಟರ್‌ ತಮ್ಮ ಅಸಮಾಧಾನ ಹೊರ ಹಾಕಿದ್ದಾರೆ ಎನ್ನಲಾಗಿದೆ.

2011ರಲ್ಲಿಯೂ ತಮ್ಮನ್ನು ಸಿಎಂ ಸ್ಥಾನಕ್ಕೆ ಪರಿಗಣಿಸದೇ ಸದಾನಂದ ಗೌಡ ಅವರಿಗೆ ಅವಕಾಶ ದೊರೆಯುವಂತೆ ಮಾಡಲಾಗಿತ್ತು. ಈಗಲೂ ತಮ್ಮನ್ನು ಕಡೆಗಣಿಸಿ ಬೊಮ್ಮಾಯಿ ಅವರ ಹೆಸರನ್ನು ಸೂಚಿಸಿದ್ದೀರಿ ಎಂದು ನೇರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಸಂಪುಟದಿಂದ ದೂರ ಉಳಿಯುವ ತಂತ್ರ: ತಮಗಿಂತ ಕಿರಿಯರಾದ ಬೊಮ್ಮಾಯಿ ಅವರನ್ನು ಸಿಎಂ ಮಾಡಿದ್ದು ತಮಗೆ ಅವಮಾನ ಮಾಡಿದಂತಾಗಿದೆ ಎಂದು ಶೆಟ್ಟರ್‌, ಬೊಮ್ಮಾಯಿ ಸಂಪುಟದಲ್ಲಿ ಸಚಿವನಾಗುವುದಿಲ್ಲ ಎಂದು ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎನ್ನಲಾಗಿದೆ. ಆದರೆ, ಅವರ ಈ ನಿರ್ಧಾರದ ಹಿಂದೆ ರಾಜಕೀಯ ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳು ಕೇಳಿ ಬಂದಿದ್ದು, ಮುಖ್ಯಮಂತ್ರಿಯಾಗಿ ತಾವು ಹೊಂದಿದ್ದಅನುಭವ ಹಾಗೂ ಹಿರಿತನ ಕಡೆಗಣಿಸಲಾಗಿದೆ. ಬೊಮ್ಮಾಯಿಯವರ ಆಯ್ಕೆಯಿಂದ ಹಿರಿಯರಿಗೆ ಮುಜುಗರವಾಗಿದೆ ಎಂಬ ಸಂದೇಶ ರವಾನಿಸುವ ಲೆಕ್ಕಾಚಾರ ಅಡಗಿದೆ ಎಂಬ ಮಾತುಗಳುಕೇಳಿ ಬರುತ್ತಿವೆ.

ಮುಜುಗರ ತಪ್ಪಿಸಲು ತಂತ್ರ?: ಬಸವರಾಜ ಬೊಮ್ಮಾಯಿ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಹಿರಿಯರಿಗೆ ಅವಕಾಶ ದೊರೆಯುವುದು ಅನುಮಾನ ಎಂಬ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿ ಬರುತ್ತಿರುವುದರಿಂದ ತಮ್ಮನ್ನು ಸಂಪುಟದಿಂದ ಹೊರಗಿಡುವ ಸಾಧ್ಯತೆಯ ಮುಜುಗರದಿಂದ ತಪ್ಪಿಸಿಕೊಳ್ಳಲು ಶೆಟ್ಟರ್‌ ಈ ರೀತಿಯ ಕಾರ್ಯತಂತ್ರ ರೂಪಿಸಿದ್ದಾರೆ ಎಂಬ ಮಾತುಗಳಿವೆ. ಆದರೆ, ಇದರ ಹಿಂದೆ ಧಾರವಾಡ ಜಿಲ್ಲೆಯಲ್ಲಿ ತಮ್ಮ ವಿರುದ್ಧ ಪರೋಕ್ಷವಾಗಿ ಅರವಿಂದ ಬೆಲ್ಲದ್‌ ಅವರಿಗೆ ಪ್ರಾಶಸ್ತ್ಯ ನೀಡಲಾಗುತ್ತಿದೆ ಎಂಬ ಅಸಮಾಧಾನವೂ ಶೆಟ್ಟರ್‌ಗೆ ಮೂಡಿದೆ ಎಂಬ ಮಾತುಗಳುಕೇಳಿ ಬರುತ್ತಿವೆ.

Advertisement

ಇದನ್ನೂ ಓದಿ:ಬಿಜೆಪಿಗೆ “ಸಿಡಿ’ ಸಂಕಟ : ಶಾಸಕರಿಗೆ ಆತಂಕ; ಕೋರ್ಟ್‌ ಮೊರೆ ಹೋದ ರೇಣುಕಾಚಾರ್ಯ

ಜಿಲ್ಲೆಯ ಯಾವುದೇ ನಾಯಕರ ನೆರವು ಪಡೆಯದೇ ಅರವಿಂದ ಬೆಲ್ಲದ್‌ ದೆಹಲಿ ಹಾಗೂ ಸಂಘ ಪರಿವಾರದ ಮಟ್ಟದಲ್ಲಿ ವರ್ಚಸ್ಸು ಬೆಳೆಸಿಕೊಂಡು ಸಿಎಂ ಸ್ಥಾನದ ಆಕಾಂಕ್ಷಿಯಾಗಿದ್ದರಿಂದ ಭವಿಷ್ಯದಲ್ಲಿ ತಮಗೆ ಬೆಲ್ಲದ ಪೈಪೋಟಿ ನೀಡುತ್ತಾರೆ ಎಂಬ ಲೆಕ್ಕಾಚಾರದಲ್ಲಿ ಶೆಟ್ಟರ್‌ ಇದ್ದಾರೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಬೊಮ್ಮಾಯಿ ಸಂಪುಟದಲ್ಲಿ ಧಾರವಾಡ ಜಿಲ್ಲೆಯಲ್ಲಿ ಬೆಲ್ಲದ ಬದಲು ನವಲಗುಂದ ಶಾಸಕ ಶಂಕರ ಪಾಟೀಲ್‌ ಮುನೇನಕೊಪ್ಪ ಅವರನ್ನು ಸಚಿವರನ್ನಾಗಿ ಮಾಡಿಸಲು ಕೆಲ ನಾಯಕರು ತೆರೆ ಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳುಕೇಳಿ ಬರುತ್ತಿವೆ.

ಜಗದೀಶ್‌ ಶೆಟ್ಟರ್‌ ಹೇಳಿಕೆ ನೂತನ ಸಿಎಂ ಬೊಮ್ಮಾಯಿಗೆ ಒಂದು ರೀತಿಯ ಸವಾಲಾದಂತಾಗಿದೆ. ಸಂಪುಟದಿಂದ ಹಿರಿಯರನ್ನು ಕೈಬಿಡುತ್ತಾರೆ ಎಂಬ ಆತಂಕ ಕೆಲವು ಹಿರಿಯ ಶಾಸಕರಲ್ಲಿದ್ದು, ಬಹುತೇಕರು ಸಂಪುಟದಿಂದ ದೂರ ಉಳಿಯುವ ಬಗ್ಗೆ ಚಿಂತಿಸುತ್ತಿದ್ದಾರೆ ಎನ್ನಲಾಗಿದೆ. ವಿ.ಸೋಮಣ್ಣ ಕೂಡ, ತಾವೂ ಬೊಮ್ಮಾಯಿ ಸಂಪುಟದಲ್ಲಿ ಸೇರದಿರುವ ಬಗ್ಗೆ ಆಪ್ತರ ಬಳಿ ಹೇಳಿಕೊಂಡಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಶಂಕರ ಪಾಗೋಜಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next