Advertisement

ಹಲಸಿನ ಸೀಸನ್‌ ಆರಂಭ

01:00 PM Apr 30, 2022 | Team Udayavani |

ದೊಡ್ಡಬಳ್ಳಾಪುರ: ಹಲಸಿನ ಸೀಸನ್‌ ಆರಂಭವಾಗಿದೆ. ರಸ್ತೆಬದಿಯಲ್ಲಿ ಹಲಸು ಹಣ್ಣುಗಳ ಮಾರಾಟ ಆರಂಭವಾಗಿದ್ದು, ಎರಡು ವರ್ಷದಿಂದ ಕೊರೊನಾದಿಂದ ನಷ್ಟ ಅನುಭವಿಸಿದ್ದ ಹಲಸು ಮಾರಾಟಗಾರರು ಈ ಬಾರಿ ಲಾಭದ ನಿರೀಕ್ಷೆಯಲ್ಲಿದ್ದಾರೆ.

Advertisement

ಹಸಿದು ಹಲಸು ತಿನ್ನು, ಉಂಡು ಮಾವು ತಿನ್ನು ಎಂಬ ಮಾತಿನಂತೆ ಹಲಸು ಹಾಗೂ ಮಾವಿನ ಸೀಸನ್‌ ಆರಂಭವಾಗಿದೆ. ಆದರೆ, ಈ ಬಾರಿ ಮಾವು ತೀರಾ ಕಡಿಮೆಯಾಗುವ ಲಕ್ಷಣಗಳಿವೆ. ತಾಲೂಕಿನಲ್ಲಿ ಈ ಬಾರಿ ಮಳೆಯಾಗಿರುವುದರಿಂದ ಹಲಸು ಇಳುವರಿಗೆ ಸಹಾಯಕವಾಗಿ ಸ್ವಾಧಿಷ್ಟ ಹಣ್ಣುಗಳು ಬರ ತೊಡಗಿವೆ.

ಆದರೆ, ಇಳುವರಿ ಇನ್ನು ನಿರೀಕ್ಷಿತ ಪ್ರಮಾಣದಲ್ಲಿಲ್ಲ. ಬೆಂಗಳೂರು-ಹಿಂದೂಪುರ ಹೆದ್ದಾರಿ ನಗರದ ಹೊರವಲಯದ ಟಿ.ಬಿ ವೃತ್ತದ ಬಳಿಯ ರಸ್ತೆಯ ಬದಿ. ಎಪಿಎಂಸಿ ಮಾರುಕಟ್ಟೆ ಮೊದಲಾದ ಕಡೆಗಳಲ್ಲಿ ಹಲಸಿನ ರಾಶಿ ಕಾಣುತ್ತಿದ್ದು, ಹಲಸಿನ ಹಣ್ಣು ಸ್ಥಳೀಯರಲ್ಲದೇ ನೆರೆಯ ಆಂಧ್ರದಿಂದ ಸಹ ವ್ಯಾಪಾರಸ್ಥರು ಖರೀದಿಸುವುದು ವಿಶೇಷವಾಗಿದೆ.

ಉತ್ತಮ ಇಳುವರಿ: ತಾಲೂಕಿನಲ್ಲಿ ಮಾವಿನಂತೆ ಹಲಸಿನ ತೋಪುಗಳು ಕಡಿಮೆ. ಹೀಗಾಗಿ, ರೈತರು ತಮ್ಮ ತೋಟಗಳಲ್ಲಿ ಬೆಳೆದಿರುವ ಹತ್ತಾರು ಮರಗಳ ಹಣ್ಣುಗಳನ್ನೇ ಮಾರಾಟಗಾರರು ಮುಂಚೆಯೇ ಖರೀದಿಸಲಾಗುತ್ತದೆ. ಈ ಬಾರಿ ಇಳುವರಿ ಪರವಾಗಿಲ್ಲ. ನೀರಾವರಿ ಜಮೀನು ಹಾಗೂ ನೀರಿನ ಆಶ್ರಯವಿರುವ ತೋಟಗಳ ಬಳಿ ಹೆಚ್ಚಿನ ಇಳುವರಿ ಬಂದಿದ್ದು, ಉಳಿದೆಡೆ ಸಾಧಾರಣ ಇಳುವರಿಯಾಗಿದೆ. ಹಲಸಿನ ತೋಪುಗಳು ಕಡಿಮೆಯಾಗುತ್ತಿದ್ದರೂ, ತೋಟ ಗಳಲ್ಲಿ ಬೆಳೆಸಿರುವ ಹಲಸಿನ ಮರಗಳಲ್ಲಿ ಜನವರಿ, ಫೆಬ್ರವರಿಯಲ್ಲಿಯೇ ವ್ಯಾಪಾರ ಮಾಡಿ, ಏಪ್ರಿಲ್‌ ತಿಂಗಳಿನಿಂದ ಖರೀದಿಸಿ ತಂದು ಮಾರಾಟ ಮಾಡಲಾಗುತ್ತದೆ. ಒಂದು ಹುಂಡಿಗೆ (ಗುಡ್ಡೆ)100ರಿಂದ 200 ಕಾಯಿ ಇರುತ್ತವೆ. ಕಾಯಿಗಳ ಗಾತ್ರದ ಮೇಲೆ ಹುಂಡಿಗೆ 2 ಸಾವಿರದಿಂದ 5 ಸಾವಿರ ರೂ.ವರೆಗೆ ಬೆಲೆ ಇರುತ್ತದೆ.

ವೈವಿದ್ಯತೆಗೆ ಅನುಗುಣವಾಗಿ ಮಾರಾಟ: ದೊಡ್ಡ ಗಾತ್ರದ ಹಲಸಿನ ಹಣ್ಣು 100ರಿಂದ 150 ರೂ.ವರೆಗೆ ಮಾರಾಟವಾಗುತ್ತಿವೆ. ಹಲಸಿನ ಸೀಸನ್‌ ಅಂಗವಾಗಿ ಮಾರುಕಟ್ಟೆಯಲ್ಲಿ ಭರದಿಂದ ಮಾರಾಟವಾಗುತ್ತಿರುವ ಹಲಸಿನ ತಳಿಗಳಲ್ಲಿ ಹಳದಿ ಬಣ್ಣದ ತೊಳೆಯ ಹಲಸು, ಕೆಂಪುಬಣ್ಣದ ತೊಳೆಯ ಹೆಬ್ಬಲಸು, ಬೇರು ಹಲಸು ಮೊದಲಾಗಿ ನಾನಾ ವಿಧದ ಹಲಸಿನ ಮಾರಾಟ ನಡೆಯುತ್ತಿದೆ. ಇತರ ಹಲಸಿನ ಹಣ್ಣುಗಳ ಗಾತ್ರ, ಹಣ್ಣಿನ ತಳಿ, ವೈವಿದ್ಯತೆಗಳಿಗನುಗುಣವಾಗಿ ಮಾರಾಟ ಆಗುತ್ತಿವೆ.

Advertisement

ಮರದಲ್ಲಿ ಕಾಯಿ ಕಡಿಮೆ: ನೆರೆಯ ಆಂಧ್ರ ಹಾಗೂ ಸುತ್ತಮುತ್ತಲಿನ ತಾಲೂಕುಗಳಿಂದ ಹಲಸನ್ನು ಖರೀದಿಸಲು ಆಗಮಿಸಬೇಕಿದೆ. ಎರಡು ವರ್ಷಗಳಿಂದ ಕೊರೊನಾ ಕಾರಣದಿಂದ, ಹೆಚ್ಚಿನ ಬೆಳೆ ಬಂದರೂ ನಷ್ಟ ಉಂಟಾಗಿತ್ತು. ಆದರೆ, ಈ ಬಾರಿ ವ್ಯಾಪಾರ ಆರಂಭವಾಗುತ್ತಿದ್ದು, ಇನ್ನು ಮರದಲ್ಲಿ ಹಲಸಿನ ಕಾಯಿ ಕಡಿಮೆಯಿವೆ. ಇನ್ನು ಎರಡು ಹದ ಮಳೆ ಹೊಯ್ದರೆ ಒಳ್ಳೆಯ ಫಸಲು ಸಿಗಲಿದೆ ಎನ್ನುತ್ತಾರೆ ಹಲಸು ಮಾರಾಟಗಾರ ನೆಲ್ಲುಕುಂಟೆ ತಿಮ್ಮರಾಜು.

ಹಣ್ಣುಗಳ ದೊಡ್ಡಣ್ಣ :

ಹಲಸು ಬಡವರ ಹಣ್ಣು ಎಂದೇ ಜನಜನಿತವಾಗಿದೆ. ಮಾವು, ಬಾಳೆಗಳಂತೆ ಹಲಸನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುವುದಿಲ್ಲ. ಇಳುವರಿ ದೃಷ್ಟಿಯಿಂದ ಈ ಹಣ್ಣಿನ ಬೇಸಾಯ ಇತರ ಹಣ್ಣಿಗಿಂತ ಹೆಚ್ಚು ಲಾಭದಾಯಕ. 5ಕೆ.ಜಿ.ಯಿಂದ 50 ಕೆ.ಜಿ.ವರೆಗೆ ತೂಗುವ ಇದು ಗಾತ್ರದಲ್ಲಿ ಹಣ್ಣುಗಳ ದೊಡ್ಡಣ್ಣನೂ ಹೌದು. ತಾಲೂಕಿನ ತೂಬಗೆರೆ ಹಾಗೂ ಕಸಬಾ ಹೋಬಳಿಗಳಲ್ಲಿ ಹೆಚ್ಚು ಹಲಸು ಬೆಳೆಯಲಾಗುತ್ತದೆ. ಉಳಿದ ಹೋಬಳಿಗಳಿಂದಲೂ ಸೀಸನ್‌ನಲ್ಲಿ ಹಣ್ಣುಗಳು ಮಾರುಕಟ್ಟೆಗೆ ಬರುತ್ತವೆ.

ತೂಬಗೆರೆ ಹಲಸು ತಿನಲು ಸ್ವಾಧಿಷ್ಟ : ಬಯಲುಸೀಮೆ ತೂಬಗೆರೆ ಹೋಬಳಿ ಹಲಸಿನ ಹಣ್ಣುಗಳು ಎಂದರೆ ಹಾಗೆಯೇ. ತಿಂದವರು ಮತ್ತೆ ಮತ್ತೆ ಬಯಸುತ್ತಾರೆ. ತೂಬಗೆರೆ ಹೋಬಳಿ ಕಾಚಳ್ಳಿ, ಮೆಳೇಕೋಟೆ, ನೆಲ್ಲುಕುಂಟೆ ಸೇರಿದಂತೆ ಇಲ್ಲಿನ ಸುತ್ತಮುತ್ತ ನೂರಾರು ವರ್ಷಗಳ ಹಳೆಯ ಮರಗಳಿವೆ. ಬೇರೆಡೆ ಹೆಚ್ಚಿನ ಇಳುವರಿಯಾಗಿ ಹಣ್ಣುಗಳು ಮಾರುಕಟ್ಟೆಗೆ ಬಂದು ಬೆಲೆ ಇಳಿಮುಖ ವಾಗಿದ್ದರೂ, ತೂಬಗೆರೆ ಹಲಸು ಮಾತ್ರ ತನ್ನ ಬೆಲೆ ಕಳೆದುಕೊಂಡಿಲ್ಲ ಎನ್ನುವುದು ವಿಶೇಷ. ಇಲ್ಲಿನ ಮಣ್ಣಿನ ಗುಣ ಹಲಸು ಹಣ್ಣುಗಳ ರುಚಿಗೆ ಕಾರಣ ವಾಗಿದ್ದು, ತೂಬಗೆರೆ ಚಂದ್ರ ಹಲಸು ಬಗೆ ಎಂದೇ ರಾಜ್ಯದಲ್ಲಿ ಹೆಸರು ಮಾಡಿವೆ.

ಹಲಸು ಹಣ್ಣುಗಳನ್ನು ಒಟ್ಟಾಗಿ ತಂದು ಮಾರಬೇಕಾಗಿರುವುದರಿಂದ ಸಗಟಾಗಿ ಖರೀದಿಸುವವರು ಹೆಚ್ಚಿನ ಬೆಲೆ ನೀಡುವುದಿಲ್ಲ. ತೋಟಗಳಲ್ಲಿ ಕಾಯಿ ಕೀಳಲು ಕೂಲಿಕಾರರ ಸಮಸ್ಯೆ, ಸಾಗಾಣಿಕೆ ವೆಚ್ಚ ಹೆಚ್ಚು ಇದರಿಂದ ಲಾಭ ಕಡಿಮೆ. ಇದರೊಂದಿಗೆ ರಾತ್ರಿ ಹೊತ್ತು ಕಾಯದಿದ್ದರೆ ಹಣ್ಣು ಕಳ್ಳತನವಾಗುತ್ತವೆ. ಚಿಲ್ಲರೆ ವ್ಯಾಪಾರದಲ್ಲಿ ಹೆಚ್ಚಿನ ಲಾಭವಿದೆ. ಲಾಲ್‌ಬಾಗ್‌ ಹಾಗೂ ಹಲಸು ಮೇಳಗಳಲ್ಲಿ ಹಣ್ಣು ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟರೆ ಅನುಕೂಲ. – ಹನುಮಂತ ರೆಡ್ಡಿ, ಹಲಸು ಮಾರಾಟಗಾರ

 

– ಡಿ. ಶ್ರೀಕಾಂತ

Advertisement

Udayavani is now on Telegram. Click here to join our channel and stay updated with the latest news.

Next