ಪುತ್ತೂರು: ನಗರದ ದರ್ಬೆ ಸಣ್ಣ ಕೈಗಾರಿಕಾ ಅಭಿವೃದ್ಧಿ ಸಹಕಾರಿ ಸಂಘದ ಸಭಾಭವನದಲ್ಲಿ ಜ. 5ರಂದು ಬೆಳಗ್ಗೆ 10 ಗಂಟೆಗೆ ‘ಅಡ್ಡಬೋರು ಅರಿಯ ಬನ್ನಿ’ ಸಂವಾದ ಕಾರ್ಯಕ್ರಮ ನಡೆಯಲಿದೆ.
ಅರೆಯಾಂತ್ರಿಕ ಅಡ್ಡಬೋರು ಕೊರೆಯುವ ತಂತಜ್ಞಾನ ರಾಜಸ್ಥಾನದಲ್ಲಿ ಎರಡು ದಶಕಗಳಿಂದ ಬಳಕೆಯಾಗುತ್ತಿದೆ. ಅಲ್ಲಿ ಬಾವಿಯೊಳಗಿಂದ 300 ಅಡಿ ದೂರದವರೆಗೂ ಕಿರು ಕೊಳವೆಬಾವಿ ಕೊರೆಯುವುದಿದೆ. ಗೋವಿಂದ ಭಾಯಿ ರಾಜಸ್ಥಾನದ ಹಿರಿಯ ಅಡ್ಡ ಬೋರು ತಂತ್ರಜ್ಞರಲ್ಲಿ ಒಬ್ಬರು. ಇವರು ಕೃಷಿಕರ ಮಾಧ್ಯಮ ಅಡಿಕೆ ಪತ್ರಿಕೆಯ ಆಹ್ವಾನದ ಮೇರೆಗೆ ಜಿಲ್ಲೆಗೆ ಆಗಮಿಸುತ್ತಿದ್ದು, ಈ ಸಂದರ್ಭ ‘ಅಡ್ಡಬೋರು ಅರಿಯಬನ್ನಿ’ ಸಂವಾದ ಕಾರ್ಯಕ್ರಮ ಆಯೋಜಿಸಲಾಗಿದೆ.
ಜಿಲ್ಲೆಯಲ್ಲಿ ಹಿಂದೆ ಮಾನವಶಕ್ತಿಯಿಂದ ಅಡ್ಡಬೋರು ಕೊರೆಯುವ ವಿಟ್ಲ ಮಹಮ್ಮದ್ ಅವರ ತಂಡ ಇತ್ತು. ಅದೀಗ ಅಷ್ಟು ಸಕ್ರಿಯವಾಗಿಲ್ಲ. ಅಡ್ಡಬೋರು ಕೊರೆಯುವ ಯಂತ್ರದಿಂದ ಬಾವಿಯ ಒಳಗಡೆ ಮತ್ತು ಗುಡ್ಡಕ್ಕೆ ಅಡ್ಡವಾಗಿ ಸುಲಭವಾಗಿ ಕಿರು ಕೊಳವೆಬಾವಿ ತೋಡಬಹುದು. ಬಾವಿ, ಕೆರೆಗಳ ನೀರನ್ನು ಬತ್ತಿಸಿಯೂ ಕೊರೆತ ಸಾಧ್ಯ. ಗಟ್ಟಿಕಲ್ಲು ಸಿಗದಿದ್ದರೆ 100 ಅಡಿವರೆಗೂ ಕೊರೆಯುವ ವ್ಯವಸ್ಥೆ ಇದೆ.
ಲಂಬವಾಗಿ ಕೊರೆಯುವ ಕೊಳವೆಬಾವಿಗಿಂತ ಇದು ಸುಸ್ಥಿರ ಮತ್ತು ಮರುಪೂರಣ ಮಾಡುವುದು ಸುಲಭ. ಮಲೆನಾಡಿನ ಹಲವೆಡೆ ಈ ತಂತ್ರಜ್ಞಾನ ಬಳಸಿ ಅಡ್ಡ ಬೋರು ಕೊರೆಯುವುದರ ಜತೆಗೆ ಅದರ ಜಲಾನಯನ ಪ್ರದೇಶದಲ್ಲಿ
ಮಳೆ ನೀರಿಂಗಿಸಿ ಕೊಟ್ಟರೆ ಜಲ ಲಭ್ಯತೆ ಸುಧಾರಿಸಲು ಸಾಧ್ಯವಿದೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಚಿ ಶ್ರೀನಿವಾಸ ಆಚಾರ್ ವಹಿಸಲಿದ್ದಾರೆ. ಈ ತಂತ್ರಜ್ಞಾನದ ಸಾಧ್ಯಾಸಾಧ್ಯತೆಗಳ ಬಗ್ಗೆ ಸಂವಾದ ನಡೆಯಲಿದೆ. ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ, ಫಾರ್ಮರ್ ಫಸ್ಟ್ ಟ್ರಸ್ಟ್, ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನ, ಗಿಡ ಗೆಳೆತನ ಸಂಘ ‘ಸಮೃದ್ಧಿ’, ಅರೆಕಾನಟ್ ವಾಟ್ಸ್ಆ್ಯಪ್ ಹಾಗೂ ಫೇಸ್ ಬುಕ್ ಬಳಗ ಮುಂತಾದ ಸಂಸ್ಥೆಗಳ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.