Advertisement

ಚರಂಡಿಗಳ ತ್ಯಾಜ್ಯ, ಹೂಳೆತ್ತಲು ಇದು ಸಕಾಲ: ಮೂಡುಬಿದಿರೆಯಲ್ಲಿ ಮಳೆಗೆ ಹಸುರು ನಿಶಾನೆ

03:30 PM May 12, 2023 | Team Udayavani |

ಮೂಡುಬಿದಿರೆ: ಇತ್ತೀಚೆಗೆ ಮೂಡುಬಿದಿರೆಯಲ್ಲಿ ಸುರಿದ ಮಳೆಯಿಂದ ಇಲ್ಲಿನ ಚರಂಡಿಗಳ ದುರಾವಸ್ಥೆ ಎದ್ದು ಕಾಣುವಂತಾಗಿದೆ. ತತ್‌ಕ್ಷಣ ಚರಂಡಿಗಳಲ್ಲಿ ತುಂಬಿರುವ ತ್ಯಾಜ್ಯ, ಹೂಳನ್ನು ಎತ್ತಲು ಇದು ಸಕಾಲ ಎಂದು ಮಳೆರಾಯ ಸೂಚಿಸಿದಂತಾಗಿದೆ.

Advertisement

ಮೂಡುಬಿದಿರೆಯಲ್ಲಿ ಅನೇಕ ಕಡೆ ಚರಂಡಿಯ ಅಸ್ತಿತ್ವ ಕಾಣಿಸುತ್ತಿಲ್ಲ, ಇದ್ದರೂ ಕಸ, ಹೂಳು ತುಂಬಿದೆ. ಇದರ ಬಗ್ಗೆ ಉದಯವಾಣಿ ಯಲ್ಲಿ ಸಚಿತ್ರ ವರದಿಗಳು ಪ್ರಕಟವಾಗಿವೆ. ಆದರೆ ರಾವಣನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತೆ ಎಲ್ಲೋ ಒಂದಿಷ್ಟು ಕೆಲಸ ಆಗಿದೆ, ಹೋಗಿದೆ ಎಂಬುದು ವಿಷಾದಕರ. ಪುರಪಿತೃಗಳ ಉಪೇಕ್ಷೆಯ ಕಾರಣವೋ ಸಂಪನ್ಮೂಲದ ಕೊರತೆಯೋ ಎಂಜಿನಿಯರ್‌ ಇಲ್ಲದಿರುವುದೋ ಗೊತ್ತಿಲ್ಲ. ಜನರಿಗೆ ಕುಂಟು ನೆಪ ಬೇಕಿಲ್ಲ, ಕೆಲಸ ಕೂಡಲೇ ಆಗಬೇಕಿದೆ.

ಮಂಗಳವಾರ (ಮೇ 9)ದ ಮಳೆಗೆ ಮೂಡುಬಿದಿರೆಯ ಮುಖ್ಯ ಬಸ್‌ ನಿಲ್ದಾಣದ ಚರಂಡಿ ಘೋರ ರೂಪ ತೋರಿದೆ. ಈ ಚರಂಡಿಯನ್ನು ಸ್ವತ್ಛಗೊಳಿಸದೆ ಎಷ್ಟು ಸಮಯವಾಯಿತೋ? ಕಸ ತ್ಯಾಜ್ಯ ಎಲ್ಲ ತುಂಬಿಕೊಂಡಿದ್ದ, ಮಳೆ ಸುರಿದಾಗ ಮಲಿನ ನೀರು ಅಲ್ಲಿ ಚರಂಡಿಯೊಳಗೆ ಎಲ್ಲೂ ಹೋಗಲಾಗದೆ ಚರಂಡಿಯ ಸ್ಲ್ಯಾಬ್ ನಲ್ಲಿರುವ ಚಿಕ್ಕ ರಂದ್ರಗಳ ಮೂಲಕ ಹೊರಕಾರುತ್ತಿದೆ. ಇಲ್ಲಿ ಹತ್ತಿರವೇ ಪೇಪರ್‌ ಮಾರುವವರು “ನಮ್ಮ ಕಷ್ಟ ವನ್ನು ಯಾರು ಕೇಳುತ್ತಾರೆ, ಇಲ್ಲೆಲ್ಲ ನೀರು ನುಗ್ಗಿದರೆ ನಾನು ಪೇಪರ್‌ ಮಾರಲು ಇಲ್ಲಿ ಕುಳಿತುಕೊಳ್ಳುವುದಾದರೂ ಹೇಗೆ? ಈ ಚರಂಡಿ ಕ್ಲೀನ್‌ ಮಾಡದಿದ್ದರೆ ನನಗೆ ಕಷ್ಟ, ರಸ್ತೆಯತ್ತ ಹೇಗಾದರೂ ನುಗ್ಗುವ ಮಲಿನ ನೀರಿನ ಮೇಲೆ ವಾಹನಗಳು ಸಾಗಿದಾಗ ಪಾದಚಾರಿಗಳ ಮೇಲೆ ಕೆಸರಿನ ಅಭಿಷೇಕ ಗ್ಯಾರಂಟಿ’ ಎಂದೆನ್ನುತ್ತಾರೆ.

 

Advertisement

Udayavani is now on Telegram. Click here to join our channel and stay updated with the latest news.

Next