Advertisement

ಪಥ್ಯದಡುಗೆಗೆ ಇದು ಸಕಾಲ

10:15 AM Dec 28, 2019 | Team Udayavani |

ಈರುಳ್ಳಿ ಬೆಲೆ ಕೇಳಿ ಹೌಹಾರಿ ಹೆಚ್ಚುವಾಗಲಷ್ಟೇ ಅಲ್ಲದೆ ಕೊಳ್ಳುವಾಗಲೂ ಕಣ್ಣೀರು ಹಾಕುವ ಸ್ಥಿತಿ ಇಂದಿನದು. ತರಕಾರಿ ಅಂಗಡಿಯಲ್ಲಿ ಎಲ್ಲ ತರಕಾರಿ ಎದುರಿಗೆ ರಾಜನಂತೆ ಮೆರೆದು ಅಂಗಡಿಯ ಎದುರಿಗೆ ವಿರಾಜಮಾನವಾಗುತ್ತಿದ್ದ ತರಕಾರಿ ಈಗ ಅಂಗಡಿಯ ಮೂಲೆಯಲ್ಲಿ ಅಡಗಿ ಕುಳಿತು ಯಾವುದೊ ಅತ್ಯಮೂಲ್ಯ ವಸ್ತುವಿನಂತೆ ಭಾಸವಾಗುತ್ತಿದೆ. ಈ ದಿನಗಳಲ್ಲಿ ವಜ್ರದ ಉಂಗುರದ ಬದಲು, ಗುಲಾಬಿಯ ಬದಲು ಒಂದು ಕೆ.ಜಿ. ಈರುಳ್ಳಿ ನೀಡಿದರೆ ಪ್ರೇಮಿ ಬೇಗ ಒಲಿಯಬಹುದೇನೋ.

Advertisement

ಪಕ್ಕದ ಮನೆಯ ಬಸಪ್ಪನಂತೂ, “ಅಯ್ಯೋ ಮೊನ್ನೆ ಮದುವೆ ವಾರ್ಷಿಕೋತ್ಸವಕ್ಕೆ ಅವಳು ಚಿನ್ನ ಕೇಳಿದ್ದು ಕೊಡಿಸಲಾಗದಕ್ಕೆ ದೇವರು ನನಗೆ ನೀಡಿದ ಶಾಪವೇನೋ ಎಂಬಂತೆ, ಈರುಳ್ಳಿಗೆ ಬಂಗಾರದ ಬೆಲೆಯಷ್ಟು ಏರಿಸುತ್ತಿರುವೆಯಲ್ಲ ಭಗವಂತ’ ಎಂದು ಆರತಿ ಎತ್ತುತ್ತ ದೇವರ ಬಳಿ ಸಣ್ಣ ಸ್ವರದಲ್ಲಿ ಬೇಡಿದ್ದ.

ಹೊಸ ಅಡುಗೆ ಪ್ರಯೋಗ ಮಾಡುತ್ತ ಈರುಳ್ಳಿ ಹಾಕದೆ ಮಾಡುವ ಅಡುಗೆಗಳಿಗೆ ಆದ್ಯತೆ ಸಿಕ್ಕಿದೆ. ಯೂಟ್ಯೂಬ್‌ನಲ್ಲಿ “ಈರುಳ್ಳಿ ರಹಿತ ಅಡುಗೆ’ ಎಂಬ ಹೊಸ ಚಾನೆಲ್‌ ಆರಂಭ ಮಾಡುವ ಬಗ್ಗೆ ಸ್ನೇಹಿತೆ ಹೇಳುತ್ತಿದ್ದಳು. “ಈರುಳ್ಳಿ ರಹಿತ ಅಡುಗೆ ವಿಧಾನ’ ಎಂಬ ಪುಸ್ತಕವನ್ನು ಹಣಕಾಸು ಸಚಿವರು ಬಿಡುಗಡೆ ಮಾಡಿದ್ದಾರೆ ಎಂಬ ಸುದ್ದಿ ವಾಟ್ಸಾಪ್‌ನಲ್ಲಿ ಹರಿದಾಡುತ್ತಿತ್ತು. ನಾನೂ ಜಾಲತಾಣಗಳಲ್ಲಿ ಈರುಳ್ಳಿ ಅಲಿಯಾಸ್‌ ಉಳ್ಳಾಗಡ್ಡಿ ಅಲಿಯಾಸ್‌ ನೀರುಳ್ಳಿ ಎಂಬ ಅಸ್ತ್ರ ಉಪಯೋಗಿಸದೆ ಅಡುಗೆ ಮಾಡಲಾದೀತೇ ಎಂದು ಹುಡುಕತೊಡಗಿದೆ. ನನ್ನೊಂದಿಗೆ ಸಾವಿರಾರು ಮಂದಿ ಇದನ್ನು ಹುಡುಕಿದ್ದು ಕಂಡಿತು. ಲಕ್ಷಾಂತರ ಅಡುಗೆ ರೆಸಿಪಿಗಳನ್ನು ಗೂಗಲು ತೆರೆದಿಟ್ಟಿತು.

ಗ್ಯಾಸು, ಎಸಿಡಿಟಿ ಎಂದೆಲ್ಲ ಹೊಟ್ಟೆಯ ಸಮಸ್ಯೆ ಇರುವ ನಮ್ಮ ಮನೆಯಲ್ಲಿ ಸಾಮಾನ್ಯವಾಗಿ ಎಲ್ಲ ಪದಾರ್ಥಗಳಿಗೂ ಒಂದೆರಡು ಜಾಸ್ತಿಯೇ ಈರುಳ್ಳಿ, ಬೆಳ್ಳುಳ್ಳಿ ಹಾಕಿ ಮಾಡುವುದು ರೂಢಿ. ಟೊಮೆಟೊ, ಪನ್ನೀರು, ಪಲ್ಯಗಳಲ್ಲಿ ಈರುಳ್ಳಿ ಮಹಾರಾಜರ ಅಸ್ತಿತ್ವವೇ ಹೆಚ್ಚಿರುತ್ತಿತ್ತು. ಪಲಾವು, ಟೊಮೇಟೊ ಬಾತುಗಳೂ, ಕೆಲವೊಮ್ಮೆ ಈರುಳ್ಳಿ ಬಾತ್‌ನಂತೆ ಭಾಸವಾಗುತ್ತಿತ್ತು.

ರಾತ್ರಿ ಊಟ ಮಾಡುತ್ತಾ ಈರುಳ್ಳಿಯ ವಾಸನೆ ಕಾಣದೆ ಅಡುಗೆಯ ಶೈಲಿಯೇ ಭಿನ್ನ ಅನಿಸಿದರೂ ಯಜಮಾನರು ಸುದ್ದಿ ಎತ್ತದೆ ಊಟ ಮಾಡಿದರು. ನಾಲ್ಕೈದು ದಿನ ಸುಮ್ಮನೆ ಇದ್ದವರು ಐದನೇ ದಿನದಂದು ಭಾನುವಾರ “ಇವತ್ತು ಈರುಳ್ಳಿ ಪಕೋಡ ಮಾಡೇ’ ಎಂದರು. ಇವರಿಗೇನು ಈಗ ವಿಶೇಷ ಬಯಕೆ ಎನ್ನುತ್ತ, “ಯಾಕೇರಿ ಹೋಗಿ ಈರುಳ್ಳಿ ನೀವೇ ತೆಗೆದುಕೊಂಡು ಬನ್ನಿ ನನ್ನ ಸಾಸಿವೆ ಡಬ್ಬಿಯಿಂದ ತೆಗೆದ ಹಣದಲ್ಲಿ ತರಕಾರಿ ತರಲಷ್ಟೇ ದುಡ್ಡಿರುವುದು’ ಅಂದೆ.

Advertisement

ಈರುಳ್ಳಿಯ ಬೆಲೆ ಜಾಸ್ತಿಯಾಗಿರುವುದು ತರಕಾರಿ ತರಲು ಹೋಗುವ ಹೆಂಗಸರ ಸುದ್ದಿಯಲ್ಲವೇ? ಪಾಪ ಅವರಿಗೆಲ್ಲಿಂದ ತಿಳಿದಿರಬೇಕು. ಕೆ.ಜಿ.ಗೆ 120 ರೂಪಾಯಿ ಎಂದಕೂಡಲೇ, ಸರಿ ಇನ್ನೊಂದು ತಿಂಗಳು ಈರುಳ್ಳಿ ಉಸಾಬರಿ ಬೇಡ ಎಂದು.

ಈರುಳ್ಳಿ ರಹಿತ ಅಡುಗೆ ಮಾಡಬೇಕಾದರೆ ಅಮ್ಮನ ಬಳಿ ಮಾತನಾಡಬೇಕು. ಸೋಮವಾರ ವ್ರತ ಮಾಡುವಾಗ ಏನೆಲ್ಲಾ ಅಡುಗೆ ಮಾಡಿದಳು ಎಂದು ತಿಳಿದುಕೊಳ್ಳಬೇಕು. ಈರುಳ್ಳಿ, ಬೆಳ್ಳುಳ್ಳಿ ಕಾಣದೆ ಅವಳು ಮಾಡಿದ ರೆಸಿಪಿಗಳನ್ನು ದಿನಾಲೂ ಫೋನಾಯಿಸಿ ಬರೆದುಕೊಂಡು ಅದನ್ನೇ ಮಾಡತೊಡಗಿದೆ. “ಏನಿದು ದೇವಸ್ಥಾನದ ಅಡುಗೆ ರೆಸಿಪಿ ತರ ಇದೆಯಲ್ಲ’ ಎಂದು ಒಮ್ಮೆ ಅವರು ಕೇಳಿದರೆ, ಮತ್ತೂಂದು ದಿನ ಅಮ್ಮನ ಅಡುಗೆಯನ್ನು ಅನುಸರಿಸಲು ಶುರುಮಾಡಿದ್ದು ಕಂಡು ಮನೆಯವರು “ಏನೇ ಇದು ಮನೆಯೋ, ಪ್ರಯೋಗಶಾಲೆಯೋ’ ಎಂದು ಕೇಳಬೇಕೆ?

ಇಷ್ಟೆಲ್ಲಾ ಪ್ರಯೋಗ ಮಾಡುವಾಗ ಮನೆಯಲ್ಲಿ ಈರುಳ್ಳಿ ಮುಗಿದೇ ಹೋಗಿದೆಯೇನೋ ಎಂದುಕೊಂಡು ಮನೆಯವರು ಕಡಿಮೆ ಬೆಲೆಗೆ ಈರುಳ್ಳಿ ಎಲ್ಲಾದರೂ ಸಿಗುತ್ತಾ ಎಂದು ನೋಡಲು ಶುರುಮಾಡಿದರು. ಕಚೇರಿಯಲ್ಲಿ ಕೆಲಸ ಮಾಡುವ ಅವರ ಸ್ನೇಹಿತರು, “ಊರಿಂದ ನಾನು ಈರುಳ್ಳಿ ತಂದೆ’ ಎಂದು ಯಾವೊದೋ ದೊಡ್ಡ ಸಾಹಸ ಮಾಡಿದ ಶೈಲಿಯಲ್ಲಿ ಹೇಳುವುದ ಕಂಡು “ನನಗೂ ಬೇಕು’ ಎಂದು ಹೇಳಿದೆ.

ಊರಿಂದ ಅಪ್ಪಅಮ್ಮ ಮಗಳ ಮನೆಗೆ ಬರುವಾಗ ಹಪ್ಪಳ, ಸಂಡಿಗೆ, ಇತ್ಯಾದಿ ತರುವುದು ರೂಢಿಯಲ್ಲಿತ್ತು, ಈಗ ಈರುಳ್ಳಿ ತರುವ ರೂಢಿ ಶುರುವಾಯಿತು. ಮನೆಗೆ ಬರುವ ನೆಂಟರಿಗೆ ಸಿಹಿತರುವ ಬದಲು “ಒಂದು ಕೆ.ಜಿ. ಈರುಳ್ಳಿ ತನ್ನಿ’ ಎಂದು ಹೇಳಬಹುದೇನೋ. ಮನೆಯಲ್ಲಿ ಬುಟ್ಟಿಯಲ್ಲಿರುವ ನಾಲ್ಕೈದು ಈರುಳ್ಳಿ ಕಂಡು, “ಇದೇನೇ ಇಷ್ಟಾದ್ರೂ ಇದೆಯಲ್ಲೇ ಇವತ್ತಾದ್ರೂ ಈರುಳ್ಳಿ ಹಾಕಿ ಅಡುಗೆ ಮಾಡೇ. ತಿನ್ನದೇ ನಾಲಿಗೆಯೆಲ್ಲ ಕೆಟ್ಟೋಗಿದೆ’ ಎಂದರು. ಔಷಧಿಗಾದ್ರೂ ಒಂದೆರಡು ಸಾಮಾನು ಇಟ್ಟುಕೋಬೇಕು ಖಾಲಿ ಮಾಡಿ ಬಿಡಬಾರದು ಎಂಬುದು ಅಮ್ಮ ಹೇಳಿದ ಪಾಲಿಸಿ. ಗಂಡನ ಕೋರಿಕೆ ಮನ್ನಿಸಿ ಒಂದೆರಡು ಈರುಳ್ಳಿ ಹಾಕಿ ಅಡುಗೆ ಮಾಡದೇ ವಿಧಿಯಿರಲಿಲ್ಲ.

ಮೈಸೂರುಪಾಕಿನಲ್ಲಿ ಮೈಸೂರು ಇರುತ್ತಾ ಎಂದು ಸಮಜಾಯಿಷಿ ನೀಡುತ್ತ, ಈರುಳ್ಳಿ ಇಲ್ಲದ ಈರುಳ್ಳಿ ದೋಸೆ ಮಾಡಿ ಬಡಿಸಿದೆ. ಮೊನ್ನೆ ಒಂದು ಕಡೆ, ಮದುವೆ ಖರ್ಚನ್ನು ಹುಡುಗನ ಮನೆಯವರೇ ಭರಿಸಿ, ಈರುಳ್ಳಿಯ ಖರ್ಚನ್ನು ಮಾತ್ರ ಹುಡುಗಿ ಮನೆಯವರು ನೋಡಿಕೋಬೇಕು ಎಂದು ಷರತ್ತು ಹಾಕಿದರಂತೆ.

ಹೀಗೆ ನೂರಾರೂ ಈರುಳ್ಳಿ ನಗೆಹನಿಗಳು ಎಲ್ಲರ ಬಾಯಲ್ಲೂ ಓಡಾಡುತ್ತ ಈರುಳ್ಳಿಯ ಪ್ರಚಾರ ಜೋರಾಗೆ ನಡೆಯುತ್ತಿದೆ. ಬೆಲೆ ಜಾಸ್ತಿಯಿದ್ದು, ಅಡುಗೆಯಿಂದ ದೂರವಿದ್ದರೂ ಎಲ್ಲರ ಬಾಯಲ್ಲೂ ನೀರುಣಿಸುತ್ತ, ಎಲ್ಲರ ಮನದಲ್ಲೂ, ಕನಸಲ್ಲೂ ಬರುತ್ತಿರುವ ಇಂದಿನ ತರಕಾರಿ ರಾಜ, ಈರುಳ್ಳಿ.

ಸಾವಿತ್ರಿ ಶ್ಯಾನುಭಾಗ್‌

Advertisement

Udayavani is now on Telegram. Click here to join our channel and stay updated with the latest news.

Next