Advertisement

Environmental ನಮ್ಮೆಲ್ಲರ ಪರಿಸರ ಕಾಳಜಿ ಜಾಗೃತಗೊಳ್ಳಲು ಇದು ಸಕಾಲ

11:46 PM Sep 11, 2023 | Team Udayavani |

ವನಮಹೋತ್ಸವ ಸಪ್ತಾಹದ ಹಿನ್ನೆಲೆಯಲ್ಲಿ “ಉದಯವಾಣಿ’ಯು “ನಮ್ಮ ಪರಿಸರ, ನಮ್ಮ ಭವಿಷ್ಯ’ ವಿಷಯದ ಕುರಿತಂತೆ ಪ್ರೌಢಶಾಲೆ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಲೇಖನ ಸ್ಪರ್ಧೆಗೆ ಸಾವಿರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಲೇಖನಗಳನ್ನು ಕಳುಹಿಸಿಕೊಟ್ಟಿದ್ದರು. ಇವೆಲ್ಲವುಗಳನ್ನು ನಮ್ಮ ತೀರ್ಪುಗಾರರ ತಂಡ ಪರಿಶೀಲಿಸಿ, ವಿಜೇತರನ್ನು ಆಯ್ಕೆ ಮಾಡಿದೆ. ಈ ದಿನ ಪ್ರಥಮ ಮತ್ತು ದ್ವಿತೀಯ ಬಹುಮಾನ ಪಡೆದ ಲೇಖನಗಳನ್ನು ಪ್ರಕಟಿಸಲಾಗಿದೆ.

Advertisement

ನಿಸರ್ಗದ ಜತೆ ಬೆರೆತು
ಬಾಳಿದರೆ ಪರಿಸರ ಸುಭದ್ರ
ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಇದು ಮಾನವರು, ಸಸ್ಯಗಳು, ಪ್ರಾಣಿಗಳು, ನೀರು, ಗಾಳಿ ಇತ್ಯಾದಿಗಳನ್ನು ಒಳಗೊಂಡಂತೆ ನಮ್ಮ ಸುತ್ತಮುತ್ತಲಿನ ಪ್ರತಿಯೊಂದು ಜೀವಂತ ಮತ್ತು ನಿರ್ಜೀವ ಘಟಕಗಳನ್ನು ಒಳಗೊಂಡಿದೆ. ನಾವು ಬದುಕಲು ಬೇಕಾದ ಎಲ್ಲವನ್ನು ನಮ್ಮ ಪರಿಸರ ನಮಗೆ ಒದಗಿಸುತ್ತದೆ. ನಮ್ಮ ಪರಿಸರವನ್ನು ಉಳಿಸುವ ಮತ್ತು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು.

ಪ್ರಕೃತಿಯು ನಮ್ಮ ಪರಿಸರ ವ್ಯವಸ್ಥೆಯನ್ನು ನಿಖರವಾಗಿ ವಿನ್ಯಾಸಗೊಳಿಸಿದೆ. ಮನುಷ್ಯ ತನ್ನ ವೈಯಕ್ತಿಕ ಪ್ರಯೋ ಜನಕ್ಕಾಗಿ ಪರಿಸರದ ಮೇಲೆ ನಿರಂತರ ವಾಗಿ ದಾಳಿ ನಡೆಸು ತ್ತಲೇ ಬಂದಿದ್ದಾನೆ. ಪರಿಸ್ಥಿತಿ ಹೀಗೆ ಮುಂದುವರಿದರೆ ನಮ್ಮ ಸರ್ವನಾಶ ನಮ್ಮ ಕಣ್ಣೆದುರೇ ನಡೆಯಲಿದೆ. ಇದು ನಡೆಯಬಾರದೆಂದರೆ ಪರಿಸರ ಸಂರಕ್ಷಣೆ ಬಗ್ಗೆ ನಾವೆಲ್ಲರೂ ಕಾಳಜಿ ವಹಿಸುವುದು ಅತೀಮುಖ್ಯ. ಪರಿಸರ ಸಂರಕ್ಷಣೆಗಾಗಿ ನಮ್ಮ ದೈನಂದಿನ ಜೀವನದಲ್ಲಿ ಕೆಲವೊಂದು ಕ್ರಮ ಅನುಸರಿಸಿದರೆ ಅದೇ ಪರಿಸರ ಉಳಿವಿಗೆ ಸಹಾಯಕವಾಗುತ್ತದೆ.

ನಿಸರ್ಗದ ಜತೆ ಬೆರೆತು ಬಾಳಿದರೆ ಪರಿಸರದ ಮೇಲೆ ದುಷ್ಪರಿಣಾಮ ಬೀರುವ, ಪರಿಸರ ಉಳಿವಿಗೆ ಪೂರಕ ವಾಗುವ ವಿಷಯಗಳ ಬಗ್ಗೆ ನಮ್ಮ ಸಾಮಾನ್ಯ ಜ್ಞಾನ ತಾನಾಗಿಯೇ ಬೆಳೆಯುತ್ತದೆ. ಆದರೆ ಅದು ಅಷ್ಟು ಸುಲಭವಲ್ಲ. ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನ ಆವಿಷ್ಕಾರ ದಿಂದ ಇಂದಿನ ಮಾನವ ಜೀವನ ಹಾಗೂ ಚಟುವಟಿಕೆ ಗಳು ಅತ್ಯಂತ ಸಂಕೀರ್ಣವಾಗಿವೆ. ಇದರಿಂದ ಹೆಚ್ಚಿನ ಮನುಷ್ಯರು ಪ್ರಕೃತಿಯಿಂದ ದೂರವಾಗಿ ವಿವಿಧ ಅನೈಸರ್ಗಿಕ ಚಟುವಟಿಕೆಗಳಲ್ಲಿ ಕಾಲ ಕಳೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಮನುಷ್ಯನ ಉದಾಸೀನತೆ, ತಿಳಿ ಗೇಡಿತನದಿಂದ ನಿಸರ್ಗ ಬಸವಳಿಯುತ್ತಾ ಸಾಗುತ್ತಿದೆ. ಈ ಪ್ರಕ್ರಿಯೆಯಲ್ಲಿ ನಾವೆಲ್ಲರೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಭಾಗೀದಾರರು ಎಂಬುದು ನಮಗೆಲ್ಲ ರಿಗೂ ಚೆನ್ನಾಗಿ ಗೊತ್ತಿರುವ ಸತ್ಯ. ಪರಿಸರ ನಾಶಕ್ಕೆ ಪ್ರಮುಖ ಕಾರಣಗಳೆಂದರೆ ವಾಯುಮಾಲಿನ್ಯ, ಅರಣ್ಯ ನಾಶ, ಅಧಿಕ ಜನಸಂಖ್ಯೆ, ಅಸಮರ್ಪಕ ಘನ ತ್ಯಾಜ್ಯ ವಿಲೇವಾರಿ, ಶಬ್ದ ಮಾಲಿನ್ಯ, ಓಝೋನ್‌ ಪದರದ ಹಾನಿ… ಇತ್ಯಾದಿಗಳ ಬಗ್ಗೆ ನಮಗೆ ಚಿಕ್ಕ ವಯಸ್ಸಿನಿಂದಲೂ ಶಾಲಾಕಾಲೇಜುಗಳಲ್ಲಿ ತಿಳಿಸುತ್ತಲೇ ಬಂದಿದ್ದಾರೆ. ಆದರೆ ಇತ್ತ ನಾವ್ಯಾರು ಹೆಚ್ಚು ತಲೆಕೆಡಿಸಿಕೊಳ್ಳದಿರುವುದರಿಂದ ಪರಿಸರ ನಾಶ ಹೆಚ್ಚುತ್ತಲೇ ಸಾಗಿದೆ. ಹಾಗೆಂದು ಕಾಲ ವಿನ್ನೂ ಮಿಂಚಿಲ್ಲ. ನಾವೆಲ್ಲರೂ ಒಗ್ಗೂಡಿ ಕಾರ್ಯೋನ್ಮುಖರಾದರೆ ನಮ್ಮ ಪರಿಸರವನ್ನು ಉಳಿಸಬಹುದು. ಹೇಗೆಂದರೆ
– ಓಝೋನ್‌ ಪದರ ಹಾನಿಯಾಗಲು ಮುಖ್ಯ ಕಾರಣವಾಗಿರುವ ಕ್ಲೋರೋ ಫ್ಲೋರೋ ಕಾರ್ಬನ್‌ ಬಳಕೆಯನ್ನು ಕಡಿಮೆ ಮಾಡುವುದು.
– ಮರಗಳನ್ನು ಕಡಿಯುವುದನ್ನು ಸಾಧ್ಯವಾದಷ್ಟು ಕಡಿಮೆ ಮಾಡಿ ಅರಣ್ಯಗಳನ್ನು ಸಂರಕ್ಷಿಸುವುದು.
– ಕಾಡಿಗೆ ಕಿಚ್ಚಿಡುವುದು ಮತ್ತು ಕಸ ಸುಡುವುದನ್ನು ತಪ್ಪಿಸುವುದು.
– ಕೊಳಚೆ ನೀರು ಮತ್ತು ಕೈಗಾರಿಕೆ ತ್ಯಾಜ್ಯಗಳಿಂದ ನೀರು ಮಾಲಿನ್ಯಗೊಳ್ಳುವುದನ್ನು ನಿಯಂತ್ರಿಸುವುದು.
– ಮರುಬಳಕೆ ಮತ್ತು ಪರಿಸರ ಸ್ನೇಹಿ ಉತ್ಪನ್ನವನ್ನು ಮಾತ್ರ ಬಳಸುವುದು.
-ಜೀವವೈವಿಧ್ಯದ ಸಂರಕ್ಷಣೆ.
-ಸೈಕಲ್‌, ಎಲೆಕ್ಟ್ರಾನಿಕ್‌ ವಾಹನ ಮತ್ತು ಇತರ ಪರಿಸರಸ್ನೇಹಿ ಸಾರಿಗೆ ವ್ಯವಸ್ಥೆಯ ಬಳಕೆಗೆ ಪ್ರೋತ್ಸಾಹ.
-  ಕೈಗಾರಿಕ ತ್ಯಾಜ್ಯಗಳನ್ನು ಸಂಸ್ಕರಿಸದೆ ನೇರವಾಗಿ ಜಲಮೂಲಗಳಿಗೆ ಬಿಡುವು ದನ್ನು ತಡೆಯುವುದು.
– ಅಪಾಯಕಾರಿ ತ್ಯಾಜ್ಯಗಳನ್ನು ಜಾಗ್ರತೆಯಿಂದ ವಿಲೇವಾರಿ ಮಾಡುವುದು.
– ಒಣ ಮತ್ತು ಹಸಿ ತ್ಯಾಜ್ಯಗಳನ್ನು ವಿಂಗಡಣೆ ಮಾಡಿ ಸಮರ್ಪಕ ವಿಲೇವಾರಿ.
– ಸಂಚಾರಕ್ಕೆ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅವಲಂಬನೆ.
– ಸಾಧ್ಯವಾದಷ್ಟು ರಾಸಾಯನಿಕ ಮುಕ್ತ, ಸಾವಯವ ಮತ್ತು ಸಸ್ಯಮೂಲದ ಆಹಾರ ಪದಾರ್ಥಗಳ ಸೇವನೆ.
– ಮಳೆಯ ನೀರನ್ನು ಇಂಗಿಸಲು ಇಂಗುಗುಂಡಿಗಳ ನಿರ್ಮಾಣ.
– ಜನಸಂಖ್ಯೆ ನಿಯಂತ್ರಣಕ್ಕೆ ಸೂಕ್ತ ಕ್ರಮ.
– ನಮ್ಮ ಜನಪ್ರತಿನಿಧಿಗಳನ್ನು ಪರಿಸರ ಪ್ರೇಮಿಗಳಾಗಿ ಪರಿವರ್ತಿಸುವುದು.
ನಮ್ಮ ವಾತಾವರಣವನ್ನು ಮಾಲಿನ್ಯ ಮುಕ್ತವಾಗಿಸುವುದು, ನಮ್ಮ ಸುತ್ತ ಮುತ್ತಲಿನ ಸ್ವತ್ಛತೆ ಮತ್ತು ನೈರ್ಮಲ್ಯ ವನ್ನು ಕಾಪಾಡಿಕೊಳ್ಳುವುದು ಹಾಗೂ ಆರೋಗ್ಯಕರ ಪರಿಸರ ವ್ಯವಸ್ಥೆಗಾಗಿ ಆತ್ಮಸಾಕ್ಷಿಯಾಗಿ ಕೆಲಸ ಮಾಡುವ ಮೂಲಕ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ.
“ಪರಿಸರದ ಸಮಸ್ಯೆಗಳನ್ನು ನಾವು ಪರಿಹರಿಸಿದರೆ, ನಮ್ಮ ನೂರು ಸಮಸ್ಯೆಗಳು ಪರಿಹಾರ ವಾದಂತೆ ಮತ್ತು ಉತ್ತಮ ಭವಿಷ್ಯಕ್ಕಾಗಿ ಈಗ ಜಾಗೃತರಾಗಿರಿ, ಈಗ ಪರಿಸರವನ್ನು ಉಳಿಸಿ ನಾಳೆ ಸಂಪಾದಿಸಿ’
-ವಿದ್ಯಾ,
ದ್ವಿ.ಪಿಯುಸಿ,ವಿಜ್ಞಾನ ವಿಭಾಗ ಸರಕಾರಿ ಪ.ಪೂ.ಕಾಲೇಜು, ಕಬಕ

ಇನ್ನೊಬ್ಬರಿಗಾಗಿ ಅಲ್ಲ, ನಮಗಾಗಿ ಪರಿಸರ ರಕ್ಷಿಸೋಣ
ಪರಿಸರ.. ನಾವು ನೀವೆಲ್ಲ ವಾಸಿಸುತ್ತಿರುವ ಈ ಭೂಮಿಯೇ ಸುಂದರ ಪರಿಸರ. ಪರಿಸರವನ್ನು “ಪ್ರಕೃತಿ ಮಾತೆ’ ಎಂದು ಪೂಜಿಸುವ ಪದ್ಧತಿಯು ತಲೆತಲಾಂತರ ಗಳಿಂದ ನಡೆದುಕೊಂಡು ಬಂದಿದೆ. ಮಾನವನು ಪರಿಸರದ ಶಿಶು. ಪರಿಸರ ವಿಲ್ಲದೇ ಮಾನವನ ಜೀವನಕ್ಕೆ ಯಾವುದೇ ಬೆಲೆಯಿರುವುದಿಲ್ಲ. ಈ ಗ್ರಹದಲ್ಲಿ ನಮ್ಮ ಜೀವನದ ಅಸ್ತಿತ್ವ ಮತ್ತು ಸುಸ್ಥಿರತೆಯು ನಮ್ಮ ಪರಿಸರದಿಂದ ಮಾತ್ರ ಸಾಧ್ಯ. ಗಾಳಿ, ಆಹಾರ, ನೀರು ಮತ್ತು ವಾಸಿಸುವ ಸ್ಥಳ ಸೇರಿದಂತೆ ನಾವು ಬದುಕಲು ಬೇಕಾದ ಎಲ್ಲವನ್ನೂ ನಮ್ಮ ಭೂಮಿ ನಮಗೆ ಒದಗಿಸುತ್ತದೆ. ಬೆಟ್ಟ, ಗುಡ್ಡ, ನದಿ, ವನ, ಕಾಡು, ಗಿಡ-ಮರ, ಮನುಷ್ಯ, ಜಲಚರಗಳು, ಸಸ್ತನಿಗಳು ಹೀಗೆ ಒಂದಾ? ಎರಡಾ? ಕೋಟಿ ಕೋಟಿ ಜೀವರಾಶಿಗಳಿಗೆ ತನ್ನ ಒಡಲಲ್ಲಿ ಆಶ್ರಯ ನೀಡಿದೆ ಈ ಪರಿಸರ. ಪರಿಸರ ಎಂಬುದು ತಾನಾಗಿಯೇ ಹುಟ್ಟಿಕೊಂಡ ನೈಜ ಸೃಷ್ಟಿ.
ಆಧುನಿಕತೆ ಬೆಳೆದು ನಿಂತಿದೆ. ಸಮಾಜವು ವಿಸ್ತಾರಗೊಂಡಿದೆ. ತ್ವರಿತ ಅಭಿವೃದ್ಧಿಯ ಧಾವಂತದಲ್ಲಿ ಮಾನವರು ಪರಿಸರ ಸಂಪನ್ಮೂಲಗಳ ಮೇಲೆ ನಿರಂತರವಾಗಿ ದೌರ್ಜನ್ಯ ಎಸಗುತ್ತಿದ್ದಾರೆ. ಮಾನವನ ಈ ಬುದ್ಧಿಹೀನ ಮತ್ತು ಬೇಜವಾಬ್ದಾರಿಯ ವರ್ತನೆಗಳಿಂದಾಗಿ ಪರಿಸರ ತನ್ನ ಸಮತೋ ಲನವನ್ನು ಕಳೆದುಕೊಳ್ಳುವಂತಾಗಿದೆ. ಪರಿಸರ ಪ್ರಕ್ರಿಯೆಗಳಲ್ಲಿ ಮಾನವನ ಹಸ್ತಕ್ಷೇಪಗಳು ಮಿತಿಮೀರಿರುವ ಪರಿಣಾಮ ಪರಿಸರ ವ್ಯಾಪಕವಾಗಿ ಹಾನಿಗೀಡಾಗಿದೆ. ತತ್ಪರಿಣಾಮವಾಗಿ ಪ್ರಾಕೃತಿಕ ವಿಕೋಪಗಳು ಹೆಚ್ಚುತ್ತಿದ್ದು ಮಾನವನ ಮಾತ್ರವಲ್ಲದೆ ಭೂಮಿಯ ಮೇಲಣ ಇಡೀ
ಜೀವ ಸಂಕುಲಕ್ಕೇ ಕುತ್ತು ಬಂದೊದಗಿದೆ.

Advertisement

ಆಧುನಿಕ ಜಗತ್ತಿನಲ್ಲಿ ತಂತ್ರಜ್ಞಾನದ ಆವಿಷ್ಕಾರದಿಂದ ಮಾನವನ ಜೀವನ ಹಾಗೂ ಚಟುವಟಿಕೆಗಳು ಅತ್ಯಂತ ಸಂಕೀರ್ಣವಾಗಿವೆ. ಇದ ರಿಂದ ನಾವು ಪ್ರಕೃತಿಯಿಂದ ದೂರ ವಾಗಿದ್ದೇವೆ. ಕ್ಲೋರೋಫ್ಲೋರೋ ಕಾರ್ಬನ್‌ನ ಬಳಕೆ ಹೆಚ್ಚಿರುವುದರಿಂದ ಭೂಮಿಯ ವಾತಾ ವರಣದ ಸಂರಕ್ಷಕನಂತಿರುವ ಓಝೋನ್‌ ಪದರ ದಿನೇದಿನೆ ಸವೆಯುತ್ತಿದೆ. ಭೂಮಿಯ ತುಂಬೆಲ್ಲ ಪ್ಲಾಸ್ಟಿಕ್‌ ಆವರಿಸಿದ್ದು ಇಡೀ ಪರಿಸರವನ್ನು ಕುಲಗೆಡಿಸಿದೆ. ನೆಲ, ಜಲ, ವಾಯು ಮಾಲಿನ್ಯದಿಂದ ನಮ್ಮ ಇಡೀ ಪರಿಸರ ಸಂಪೂರ್ಣ ಮಲಿನಗೊಂಡಿದೆ. ಪರಿ ಸರ ನಾಶದಿಂದ ನಮ್ಮ ಜೀವನ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ. ಪರಿಸರ ಮಾಲಿನ್ಯದ ಪರಿಣಾಮ ಜಗತ್ತಿನಾದ್ಯಂತ ಹವಾಮಾನದ ಮಾದರಿಗಳಲ್ಲಿ ಬದಲಾವಣೆ ಸ್ಪಷ್ಟವಾಗಿ ಕಂಡು ಬರುತ್ತಿದೆ. ನಾವು ಪರಿಸರವನ್ನು ಹದೆಗೆಡಿಸಲು ಪ್ರಯತ್ನಿಸಿದರೆ, ಅದರ ಪ್ರತಿಕೂಲ ಪರಿ ಣಾಮವನ್ನು ನಾವು ಎದುರಿಸಲೇ ಬೇಕಾಗು ತ್ತದೆ. ಈ ಎಲ್ಲ ಕಾರಣಗಳಿಂದಾಗಿ ನಾವು ಪರಿಸರವನ್ನು ಸಂರಕ್ಷಿಸಲೇಬೇಕು. ಇದು ಸಮಾಜದ ಪ್ರತಿಯೋರ್ವರ ಹೊಣೆಗಾರಿಕೆಯಾಗಿದೆ. ನಮ್ಮ ಆಡಳಿತ ವ್ಯವಸ್ಥೆ ಕೂಡ ಸಾಧ್ಯವಾದಷ್ಟು ಪರಿಸರಸ್ನೇಹಿ ಯೋಜನೆಗಳ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡಬೇಕು.
ನಮ್ಮ ವಾತಾವರಣವನ್ನು ಮಾಲಿನ್ಯ ಮುಕ್ತವಾಗಿಡುವುದು, ಸ್ವತ್ಛತೆ ಹಾಗೂ ನೈರ್ಮಲ್ಯವನ್ನು ಕಾಪಾಡಿಕೊಳ್ಳುವುದು ಮತ್ತು ಆರೋಗ್ಯಕರ ಪರಿಸರ ವ್ಯವಸ್ಥೆಗಾಗಿ ಆತ್ಮಸಾಕ್ಷಿಯಾಗಿ ಕೆಲಸ ಮಾಡುವ ಮೂಲಕ ನಮ್ಮ ಪರಿಸರವನ್ನು “ನಮಗಾಗಿಯೇ’ ಸಂರಕ್ಷಿಸುವುದು ನಮ್ಮದೇ ಜವಾಬ್ದಾರಿಯಾಗಿದೆ. ನಮಗಾಗಿ ಮತ್ತು ಭವಿಷ್ಯದ ಪೀಳಿಗೆಗಾಗಿ ನಾವು ನಮ್ಮ ಪರಿಸರವನ್ನು ರಕ್ಷಿಸಬೇಕು. “ನಾವು ಯಾವ ಬೀಜ ಬಿತ್ತುತ್ತೇವೋ, ಅದೇ ಫ‌ಲವನ್ನು ಪಡೆಯುತ್ತೇವೆ’ ಎಂಬಂತೆ ಪರಿಸರ ಚೆನ್ನಾಗಿದ್ದರೆ, ನಾವು ಚೆನ್ನಾಗಿರುತ್ತೇವೆ.
-ನಾಗೇಂದ್ರ ಕುಡ್ವ
ದ್ವಿತೀಯ ಪಿಯುಸಿ
ಶ್ರೀ ಭುವನೇಂದ್ರ ಪದವಿಪೂರ್ವ ಕಾಲೇಜು, ಕಾರ್ಕಳ

ಪರಿಸರ ಕಾಳಜಿ ನಮ್ಮ ದಿನಚರಿಯ ಭಾಗವಾಗಲಿ
“ಪ್ರಕೃತಿ ಮಾನವನ ಆಸೆಯನ್ನು ಪೂರೈಸು ತ್ತದೆ. ಅಷ್ಟೇ ಹೊರತು ದುರಾಸೆಯನ್ನಲ್ಲ’ ಎಂದು ಗಾಂಧೀಜಿ ಹೇಳಿದ್ದರು. ಹೌದು ಪ್ರಕೃತಿ ಮಾನವನ ಜೀವನಕ್ಕೆ ಎಲ್ಲವನ್ನೂ ಕೊಟ್ಟಿದೆ. ಆದರೆ ಮಾನವನು ತನ್ನ ದುರಾಸೆ ಯಿಂದ ಈ ಸುಂದರವಾದ ಪ್ರಕೃತಿಯ ಮೇಲೆ ದೌರ್ಜನ್ಯ ಎಸಗುತ್ತಲೇ ಬಂದಿದ್ದಾನೆ. ಈಗಾ ಗಲೇ ಇದರ ಪರಿಣಾಮಗಳನ್ನು ಅನುಭವಿಸುತ್ತಿದ್ದರೂ ನಮ್ಮಲ್ಲಿ ಪರಿಸರ ಕಾಳಜಿ ಮೂಡಿಲ್ಲ. ಮಾನವ ಇನ್ನಾದರೂ ಪರಿಸರದ ಮೇಲಣ ತನ್ನ ಕ್ರೌರ್ಯವನ್ನು ನಿಲ್ಲಿಸ ದಿದ್ದಲ್ಲಿ ಮಾನವ ಸಹಿತ ಈ ಭೂಮಿಯ ಮೇಲಣ ಎಲ್ಲ ಜೀವಜಂತುಗಳ ಪ್ರಾಣಕ್ಕೇ ಸಂಚಕಾರ ಬಂದೊದಗಲಿರು ವುದು ನಿಶ್ಚಿತ. ಹಾಗೆಂದು ಕಾಲ ಮಿಂಚಿ ಹೋಯಿತು ಎಂದು ತಲೆ ಮೇಲೆ ಕೈಹೊತ್ತು ಕುಳಿತುಕೊಳ್ಳುವ ಪರಿಸ್ಥಿತಿಯೇನೂ ಬಂದೊದಗಿಲ್ಲ. ಈಗಿನಿಂದಲೇ ನಮ್ಮ ಸುತ್ತಮುತ್ತಲಿನ ಪರಿಸರವನ್ನು ರಕ್ಷಿಸುವ ದಿಸೆಯಲ್ಲಿ ಕ್ರಿಯಾಶೀಲರಾಗಬೇಕಿದೆ.

ನಾವು ಆರೋಗ್ಯಕರ ಮತ್ತು ನೆಮ್ಮದಿಯ ಜೀವನ ವನ್ನು ನಡೆಸಲು ನಮ್ಮ ಪರಿಸರವನ್ನು ಸ್ವತ್ಛವಾಗಿರಿಸಿ ಕೊಳ್ಳುವುದು ಬಹಳ ಆವಶ್ಯಕವಾಗಿದೆ. ಕೈಗಾರಿಕೆಗಳು ಮತ್ತು ವಾಹನಗಳು ಹೊರಸೂಸುವ ಹೊಗೆ, ಪಳೆ ಯುಳಿಕೆ ಇಂಧನಗಳ ದಹನ, ಕ್ಲೋರೋಫ್ಲೋರೋ ಕಾರ್ಬನ್‌ಗಳು… ಹೀಗೆ ಹಲವಾರು ವಿನಾಶಕಾರಿ ಅನಿಲಗಳ ಪರಿಣಾಮಗಳಿಂದ ಭೂಮಿಯ ಮೇಲಿನ ತಾಪಮಾನ ಹೆಚ್ಚಳವಾಗುತ್ತದೆ. ಓಝೋನ್‌ ಪದರವು ಪ್ರಕೃತಿಯು ನಮಗೆ ನೀಡಿದ ಉಡುಗೊರೆಯಾಗಿದೆ. ಇದನ್ನು ನಾವು ಕೈಗಾರಿಕೆ, ಫ್ರಿಡ್ಜ್, ಎಸಿ ಮತ್ತಿತರ ಗೃಹೋಪಯೋಗಿ ಎಲೆಕ್ಟ್ರಾನಿಕ್‌ ಉಪಕರಣಗಳಿಂದ ಬಿಡುಗಡೆಯಾಗುವ ಸಿಎಚ್‌ಎಫ್ಸಿ ಅನಿಲಗಳಿಂದ ಓಝೋನ್‌ ಪದರದಲ್ಲಿ ರಂಧ್ರಗಳು ಉಂಟಾಗುತ್ತದೆ. ಇದರಿಂದ ಸೂರ್ಯನ ವಿಕಿರಣಗಳು ಮನುಷ್ಯನನ್ನು ನೇರವಾಗಿ ತಲುಪಿ ಕ್ಯಾನ್ಸರ್‌, ಚರ್ಮರೋಗಗಳಿಗೆ ಕಾರಣವಾಗಬಹುದು. ವಾಯುಮಾಲಿನ್ಯದಿಂದಾಗಿ ಅಸ್ತಮಾ, ಶ್ವಾಸಕೋಶದ ಕಾಯಿಲೆ, ಅಲರ್ಜಿಯಂ ತಹ ರೋಗಗಳು ಮನುಷ್ಯನನ್ನು ಕಾಡಬಹುದು. ಇನ್ನು ಜಲಮಾಲಿನ್ಯ ಕೂಡ ನಮ್ಮ ಆರೋಗ್ಯದ ಮೇಲೆ ಹಲವಾರು ಪರಿಣಾಮಗಳನ್ನುಂಟು ಮಾಡುತ್ತದೆ.

ನಮ್ಮ ದೈನಂದಿನ ಜೀವನದಲ್ಲಿ ಕೆಲವು ಅಭ್ಯಾಸ ಗಳನ್ನು ರೂಢಿಸಿಕೊಳ್ಳುವ ಮೂಲಕ ನಮ್ಮ ಪರಿಸರ
ವನ್ನು ಸಂರಕ್ಷಿಸಬಹುದು. ಪ್ಲಾಸ್ಟಿಕ್‌ಗಳ ಬಳಕೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು. ನವೀಕರಿ ಸಬಹುದಾದ ಇಂಧನವನ್ನು ಬಳಸಲು ಹೆಚ್ಚಿನ ಒತ್ತು ನೀಡಬೇಕು. ಹಾಗೆಯೇ ರಾಸಾಯನಿಕ ಮುಕ್ತ ಸಸ್ಯ ಮೂಲದ ಆಹಾರ ಸೇವನೆ ಕೇವಲ ನಮ್ಮ ಆರೋಗ್ಯಕ್ಕೆ ಮಾತ್ರವಲ್ಲ ಪರಿಸರಕ್ಕೂ ಪೂರಕ. ಪರಿಸರ ಸ್ನೇಹಿ ವಾಹನಗಳ ಬಳಕೆಗೆ ಇನ್ನಷ್ಟು ಉತ್ತೇಜನ ನೀಡಬೇಕು. ಮರಗಿಡ ಕಡಿಯುವುದನ್ನು ಕಡಿಮೆ ಮಾಡುವುದರ ಜತೆಯಲ್ಲಿ ಇನ್ನಷ್ಟು ಗಿಡಗಳನ್ನು ನೆಟ್ಟು ಬೆಳೆಸು ವುದರಿಂದ ಅಂತರ್ಜಲ ಮಟ್ಟ ಹೆಚ್ಚುವುದಲ್ಲದೆ ಕಾಲ ಕಾಲಕ್ಕೆ ಮಳೆಯಾಗುತ್ತದೆ.
ಪರಿಸರ ಸಂರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ ವಾಗಿದೆ. ಪರಿಸರ ಉಳಿಸುವ ಜವಾಬ್ದಾರಿ ಪ್ರತಿ ಯೊ ಬ್ಬರ ಮೇಲಿದೆ. ನಮ್ಮ ಅವಶ್ಯಕತೆಗಳನ್ನು ಪೂರೈಸುವ ಈ ಪರಿಸರವನ್ನು ಮುಂದಿನ ಪೀಳಿಗೆಗೆ ಸಂರಕ್ಷಿ ಸುವುದು ನಮ್ಮೆಲ್ಲರ ಹೊಣೆ. ಹೀಗಾಗಿ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಕೈಯ್ಯಲ್ಲಿದೆ.
-ಸಂಧ್ಯಾಶ್ರೀ ,
10ನೇ ತರಗತಿ , ಸಂಜಯ ಗಾಂಧಿ ಪ್ರೌಢಶಾಲೆ ,
ಅಂಪಾರು

Advertisement

Udayavani is now on Telegram. Click here to join our channel and stay updated with the latest news.

Next