Advertisement

ಐಟಿ ಈಗಲೂ ಉದ್ಯೋಗಿಗಳ ಭಾಗ್ಯದ ಬಾಗಿಲು: ಟಿ.ವಿ. ಮೋಹನದಾಸ್‌ ಪೈ

05:26 PM Aug 29, 2022 | Team Udayavani |

ಧಾರವಾಡ: ಮಾಹಿತಿ ತಂತ್ರಜ್ಞಾನ ಕ್ಷೇತ್ರ ಯುವ ಜನಾಂಗಕ್ಕೆ ಉದ್ಯೋಗ ನೀಡುವ ಭಾಗ್ಯದ ಬಾಗಿಲಾಗಿದೆ. ಇದರ ಪರಿಪೂರ್ಣ ಬಳಕೆಗೆ ಪೂರಕ ಮಾನವ ಸಂಪನ್ಮೂಲವನ್ನು ದೇಶ ಸೃಜಿಸಿಕೊಡಬೇಕಿದೆ ಎಂದು ಐಟಿ ದಿಗ್ಗಜ ಹಾಗೂ ಮಣಿಪಾಲ ಗ್ಲೋಬಲ್‌ ಎಜುಕೇಶನ್‌ ಸಂಸ್ಥೆ ಅಧ್ಯಕ್ಷ ಟಿ.ವಿ. ಮೋಹನದಾಸ್‌ ಪೈ ಹೇಳಿರು. ತಡಸಿನಕೊಪ್ಪ ಬಳಿಯ ಭಾರತೀಯ ಮಾಹಿತಿ ತಂತ್ರಜ್ಞಾನ ಸಂಸ್ಥೆಯ ನಾಲ್ಕನೇ ಘಟಿಕೋತ್ಸವದಲ್ಲಿ ಅವರು ಮಾತನಾಡಿದರು.

Advertisement

140 ಕೋಟಿ ಜನಸಂಖ್ಯೆ ಇರುವ ದೇಶದಲ್ಲಿ ಇಂದಿಗೂ ಐಐಟಿ ಮತ್ತು ಐಐಐಟಿಯಿಂದ ಪದವಿ ಪಡೆಯುವವರ ಸಂಖ್ಯೆ ಬರೀ ಸಾವಿರಗಳಲ್ಲಿದೆ. ಇದು ಇಲ್ಲಿನ ಶಿಕ್ಷಣ ವ್ಯವಸ್ಥೆ ಮತ್ತು ಪ್ರಾಧ್ಯಾಪಕರು ತಲೆತಗ್ಗಿಸುವಂತ ವಿಚಾರ. ಮುಂದಿನ ದಿನಗಳಲ್ಲಿ ಇದನ್ನು ಸರಿದೂಗಿಸಬೇಕು. ಅಮೆರಿಕ ದೇಶವನ್ನು ಹೊರತುಪಡಿಸಿದರೆ ಅತ್ಯಂತ ಹೆಚ್ಚು ಐಟಿ ಕ್ಷೇತ್ರದ ಬೆಳವಣಿಗೆ ಭಾರತದಲ್ಲಿಯೇ ನಡೆಯುತ್ತಿದೆ.

2035ರ ವರೆಗೂ ಐಟಿ ಕ್ಷೇತ್ರದಲ್ಲಿ ಲಕ್ಷ ಲಕ್ಷ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿದ್ದು, ಅದಕ್ಕೆ ತಕ್ಕಂತೆ ನಮ್ಮ ದೇಶ ಮತ್ತು ಕರ್ನಾಟಕ ರಾಜ್ಯದಲ್ಲಿ ಹೆಚ್ಚು ಹೆಚ್ಚು ಯುವಕರಿಗೆ ತಾಂತ್ರಿಕ ಅದರಲ್ಲೂ ಐಟಿ ಶಿಕ್ಷಣ ನೀಡಬಹುದಾಗಿದೆ ಎಂದರು.

ವಿಶ್ವದಲ್ಲಿಯೇ ಇಂದು ಬೆಂಗಳೂರು ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕಣಿವೆ ಎಂಬಂತೆ ಗುರುತಿಸಿಕೊಂಡಿದೆ. ಒಂದು ಕೋಟಿ ಜನಸಂಖ್ಯೆಯ ಈ ನಗರದಲ್ಲಿ 21 ಲಕ್ಷ
ಉದ್ಯೋಗಿಗಳು ಸಾಫ್ಟ್‌ವೇರ್‌ ಎಂಜಿನಿಯರಿಂಗ್‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. 2032ರ ವೇಳೆಗೆ ಇಡೀ ವಿಶ್ವದಲ್ಲಿಯೇ ಅತೀ ಹೆಚ್ಚು ಸಾಫ್ಟ್‌ವೇರ್‌ ಉದ್ಯೋಗಿಗಳು ಭಾರತದಲ್ಲಿರಲಿದ್ದಾರೆ ಎಂದು ಹೇಳಿದರು.

ಮಾನವ ಸಂಪನ್ಮೂಲವೇ ಆಸ್ತಿ: ಭಾರತ ಮತ್ತು ಕರ್ನಾಟಕಕ್ಕೆ ಐಟಿ, ಕೈಗಾರಿಕೆ ಮತ್ತು ಸೇವಾವಲಯದ ಕ್ಷೇತ್ರಗಳಿಗೆ ಬೇಕಾಗುವ ಅತ್ಯಂತ ಉತ್ಕೃಷ್ಟವಾದ ಮಾನವ ಸಂಪನ್ಮೂಲ ಸೃಜಿಸುವ ಶಕ್ತಿ ಇದೆ. ಇದೇ ನಮ್ಮ ದೊಡ್ಡ ಬಂಡವಾಳ. ಇಂದು ಅಮೆರಿಕ, ಚೀನಾ ಸೇರಿದಂತೆ ಎಲ್ಲಾ ರಾಷ್ಟ್ರಗಳಲ್ಲೂ ಸಿಂಹಪಾಲು ಭಾರತೀಯರೇ ಉದ್ಯೋಗದಲ್ಲಿದ್ದಾರೆ ಎಂದರು.

Advertisement

ದೇಶದಲ್ಲಿನ 1100 ವಿಶ್ವವಿದ್ಯಾಲಯಗಳು, 54 ಸಾವಿರ ಉನ್ನತ ಶಿಕ್ಷಣ ಸಂಸ್ಥೆಗಳು ಇದ್ದರೂ ಅಂತಾರಾಷ್ಟ್ರೀಯ ಮಟ್ಟದ ಶಿಕ್ಷಣ ನೀಡಲಾಗುತ್ತಿಲ್ಲ. ಆದರೆ ಇದೀಗ ತಾಂತ್ರಿಕ ಶಿಕ್ಷಣದ ದೃಷ್ಟಿಯಿಂದ ಭಾರತೀಯ ಮಾನವ ಸಂಪನ್ಮೂಲಕ್ಕೆ ವಿಶ್ವದಲ್ಲಿಯೇ ಬೇಡಿಕೆ ಇದ್ದು, ಇದು ದೇಶದ ಅರ್ಥವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸಲು ಸಹಾಯಕವಾಗಲಿದೆ ಎಂದು ಪೈ ಅಭಿಪ್ರಾಯಪಟ್ಟರು.

ಮಹಿಳೆಯರು ದೇಶ ಕಟ್ಟುತ್ತಾರೆ: ಐಟಿ-ಬಿಟಿ ಕ್ಷೇತ್ರದಲ್ಲಿ ಯುವತಿಯರು ಅತ್ಯಂತ ಶ್ರದ್ಧೆಯಿಂದ ಕಲಿಕೆ ಆರಂಭಿಸಿದ್ದು, ಹೆಚ್ಚು ಉದ್ಯೋಗಗಳು ಅವರ ಪಾಲಾಗುತ್ತಿರುವುದು ಖುಷಿಯ ಸಂಗತಿ. ಎಂದಿದ್ದರೂ ಮಹಿಳೆಯಿಂದ ಆಗುವ ಕೆಲಸಗಳು ದಕ್ಷತೆಯಿಂದಲೇ ಕೂಡಿರುತ್ತವೆ. ಈ ನಿಟ್ಟಿನಲ್ಲಿ ಮುಂಬರುವ ದಶಕಗಳು ಮಹಿಳೆಯರದ್ದೇ ಆಗಿರಲಿದ್ದು, ಅವರು ದೇಶ ಕಟ್ಟಬಲ್ಲರು ಎಂದು ಶ್ಲಾಘಿಸಿದರು.

ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ವಿಶ್ರಾಂತ ಕುಲಪತಿ ಪ್ರೊ| ಎಚ್‌.ಪಿ. ಕಿಂಚಾ ಮಾತನಾಡಿ, ಇಂದು ಪದವಿ ಮುಗಿಸಿದ ವಿದ್ಯಾರ್ಥಿಗಳು ನ್ಯಾನೋ ತಂತ್ರಜ್ಞಾನ, ಕಿರು ಉದ್ಯಮ, ದೊಡ್ಡ ಉದ್ಯಮ, ಕಾಗ್ನೇಟಿವ್‌ ವಿಜ್ಞಾನ ಮತ್ತು ಆರ್ಥಿಕತೆ ಈ ಐದು ವಿಷಯಗಳನ್ನು ಗಮನದಲ್ಲಿಡಬೇಕು. ತೈತ್ತರೀಯ ಉಪನಿಷತ್ತಿನಲ್ಲಿ ಹೇಳಿದಂತೆ ಸತ್ಯದ ದಾರಿಯಲ್ಲೇ ನಡೆದು ಧರ್ಮ ಬಿಡದೇ ಬದುಕಬೇಕು ಎಂದು ಸಲಹೆ ನೀಡಿದರು.

ಐಐಐಟಿಯ ರಜಿಸ್ಟ್ರಾರ್‌ ಪ್ರೊ| ಚೆನ್ನಪ್ಪ ಅಕ್ಕಿ ಅವರು ಐಐಐಟಿಯ ಒಂದು ವರ್ಷದ ಸಾಧನೆ ಪಟ್ಟಿ ವಿವರಿಸಿದರು. ಹಿರಿಯ ಪ್ರಾಧ್ಯಾಪಕರಾದ ಪ್ರೊ| ಎಚ್‌.ಎಸ್‌. ಜಮದಗ್ನಿ, ಧಾರವಾಡ ಐಐಟಿ ಮುಖ್ಯಸ್ಥ ಪ್ರೊ| ಪಿ. ಶೇಷು, ಡಾ| ರಾಜೇಂದ್ರ ಹೆಗಡಿ, ಪ್ರೊ| ಕೆ.ಎಂ. ಬಾಲಸುಬ್ರಮಣ್ಯಮೂರ್ತಿ,

ಚಿನ್ನದ ಪದಕ ಪ್ರದಾನ
ಐಐಐಟಿಯ 4ನೇ ಘಟಿಕೋತ್ಸವದಲ್ಲಿ 2021ನೇ ಸಾಲಿನಲ್ಲಿ ಪದವಿ ಪಡೆದ ಒಟ್ಟು 161 ವಿದ್ಯಾರ್ಥಿಗಳು ಕಂಪ್ಯೂಟರ್‌ ವಿಜ್ಞಾನ ಮತ್ತು ಎಂಜಿನಿಯರಿಂಗ್‌ ವಿಷಯದಲ್ಲಿ 47 ವಿದ್ಯಾರ್ಥಿಗಳು ಎಲೆಕ್ಟ್ರಾನಿಕ್ಸ್‌ ಮತ್ತು ಕಮ್ಯೂನಿಕೇಶನ್‌ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದುಕೊಂಡರೆ ನಾಲ್ಕು ಜನ ವಿದ್ಯಾರ್ಥಿಗಳು ಚಿನ್ನದ ಪದಕ ಪಡೆದರು.ಪಾರ್ವತಿ ಜಯಕುಮಾರ್‌ ಅವರು ಹೆಚ್ಚು ಚಿನ್ನದ ಪದಕ ಪಡೆದು ಚಿನ್ನದ ಹುಡುಗಿಯಾಗಿ ಹೊರಹೊಮ್ಮಿದರು. ವೃಷಭ ದ್ವಿವೇದಿ, ಸ್ಮಿತಾ ಸಾಯಿ ಬುಡ್ಡೆ ಮತ್ತು ನೇಹಾ ದೇವಿದಾಸ್‌ ಮಹೇಂದ್ರಕರ್‌ ತಲಾ ಒಂದೊಂದು ಚಿನ್ನದ ಪದಕ ಪಡೆದರು. ಟಿ.ವಿ. ಮೋಹನದಾಸ್‌ ಪೈ ಮತ್ತು ಪ್ರೊ|ಎಚ್‌.ಪಿ. ಕಿಂಚಾ ಚಿನ್ನದ ಪದಕ ಪ್ರದಾನ ಮಾಡಿದರು.

ಸಾಧನೆ ಎಂಬುದು ಸರಳ ಜೀವನ, ಧರ್ಮದ ದಾರಿಯಲ್ಲೇ ಆಗಬೇಕು. ದೊಡ್ಡ ಮತ್ತು ಸುಂದರ ಕನಸುಗಳು ಎಲ್ಲರಿಗೂ ಇರಬೇಕು. ಅವುಗಳನ್ನು ಸಾಕಾರ ಮಾಡುತ್ತಲೇ ಉತ್ತಮ ಬದುಕು ಬದುಕಬೇಕು. ಅಂದಾಗಲೇ ಬದುಕಿಗೆ ಸಾರ್ಥಕತೆ.
ಟಿ.ಮೋಹನದಾಸ್‌ ಪೈ, ಅಧ್ಯಕ್ಷ,
ಮಣಿಪಾಲ ಗ್ಲೋಬಲ್‌ ಎಜುಕೇಶನ್‌ ಸಂಸ್ಥೆ

Advertisement

Udayavani is now on Telegram. Click here to join our channel and stay updated with the latest news.

Next