Advertisement

ಶಿಥಿಲಾವಸ್ಥೆಯ ಕೊಠಡಿಯಲ್ಲೇ ಪಾಠ ಮಾಡುವ ಅನಿವಾರ್ಯ

09:15 PM Sep 17, 2021 | Team Udayavani |

ಉಪ್ಪುಂದ: ಕಂಚಿಕಾನ್‌ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿನ ಸಾಲಿಗಿಂತ ಈ ಭಾರೀ ಗರಿಷ್ಠ ಸಂಖ್ಯೆಯಲ್ಲಿ ಹೊಸ ವಿದ್ಯಾರ್ಥಿಗಳು ಸೇರ್ಪಡೆಗೊಂಡಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಳವಾದಂತೆ ಅಲ್ಲಿನ ಮೂಲ ಸೌಕರ್ಯಗಳ ವೃದ್ಧಿಗೂ ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಪ್ರಮುಖ ಆದ್ಯತೆ ನೀಡಬೇಕಿದೆ.

Advertisement

46 ಮಕ್ಕಳ ದಾಖಲಾತಿ
ಬಿಜೂರು ಗ್ರಾ.ಪಂ. ವ್ಯಾಪ್ತಿಯ 2ನೇ ವಾರ್ಡ್‌ನ ಕಂಚಿಕಾನ್‌ನಲ್ಲಿ 1955ರಲ್ಲಿ ಶಿಕ್ಷಣ ಸಂಸ್ಥೆಯು ಆರಂಭ ಗೊಂಡಿದೆ. ಕಳೆದ ಸಾಲಿನಲ್ಲಿ 193 ವಿದ್ಯಾರ್ಥಿಗಳು ಇದ್ದರೆ ಪ್ರಸ್ತುತ ವರ್ಷ 100 ಹುಡುಗರು, 99 ಹುಡುಗಿಯರನ್ನೊಳಗೊಂಡಂತೆ 199 ವಿದ್ಯಾರ್ಥಿಗಳಿದ್ದಾರೆ. ಇಲ್ಲಿನ ಗುಣಮಟ್ಟದ ಶಿಕ್ಷಣ ಹಾಗೂ ಹಳೆ ವಿದ್ಯಾರ್ಥಿಗಳು, ಎಸ್‌ಡಿಎಂಸಿಯ ವಿಶೇಷ ಕಾಳಜಿಯಿಂದಾಗಿ ಒಟ್ಟು 46 ಮಕ್ಕಳು ಹೊಸದಾಗಿ ಸೇರ್ಪಡೆಯಾಗಿದ್ದಾರೆ. 1ನೇ ತರಗತಿಗೆ 27 ಮಕ್ಕಳು ದಾಖಲಾಗಿರುವುದು ವಿಶೇಷವಾಗಿದೆ.

ಶಿಕ್ಷಕರ ಕೊರತೆ
ನಲಿಕಲಿ ತರಗತಿಗೆ 76 ವಿದ್ಯಾರ್ಥಿಗಳಿದ್ದು ನಿಯಮಗಳ ಪ್ರಕಾರ 3 ವಿಭಾಗಗಳನ್ನು ಮಾಡಬೇಕಿದೆ. ಶಿಕ್ಷಕರ ಹಾಗೂ ಕೊಠಡಿಗಳ ಕೊರತೆ ಯಿಂದಾಗಿ ಎರಡು ವಿಭಾಗಗಳಲ್ಲಿ ಮಾತ್ರ ಶಿಕ್ಷಣ ನೀಡಲಾಗುತ್ತಿದೆ. ಎಲ್‌ಕೆಜಿ, ಯುಕೆಜಿಯಲ್ಲಿ 20 ಮಕ್ಕಳಿದ್ದಾರೆ. ಎಸ್‌ಡಿಎಂಸಿ ಮತ್ತು ಹೆತ್ತ ವರ ಆರ್ಥಿಕ ನೆರವಿನಿಂದ ಇಬ್ಬರು ಗೌರವ ಶಿಕ್ಷಕರನ್ನು ನಿಯೋಜಿಸಲಾಗಿದೆ. 199 ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಶಿಕ್ಷಕರು ಸೇರಿ 4 ಶಿಕ್ಷಕರ ಕೊರತೆ ಇದೆ.

ಇದನ್ನೂ ಓದಿ:ಮೂರನೇ ಅಲೆ ಭೀತಿ : ಮುಂಬೈನಲ್ಲಿ ಅನಧಿಕೃತ “3ನೇ ಡೋಸ್‌’ ದರ್ಬಾರ್‌

ಮೂಲ ಸೌಕರ್ಯ ಸಮಸ್ಯೆ
ಶಾಲೆಯ ಒಂದು ಕೊಠಡಿಯಲ್ಲಿರುವ ಬಿಜೂರು ಗ್ರಾ.ಪಂ. ಗ್ರಂಥಾಲಯ ಸ್ಥಳಾಂತರವಾಗುವ ಸಾಧ್ಯತೆ ಇದೆ. ಹಾಗಾಗಿ ಶಾಲೆಗೆ ಗ್ರಂಥಾಲಯದ ಆವಶ್ಯಕತೆ ಇದೆ. ಕ್ರೀಡಾ ಸಾಮಗ್ರಿಗಳು ಬರದೆ ಸುಮಾರು 10 ವರ್ಷಗಳೇ ಕಳೆದಿವೆ. ಶಾಲೆಯಲ್ಲಿ 2 ಶೌಚಾಲಯಗಳು ಮಾತ್ರ ಇವೆ. ಬಿಜೂರು ಗ್ರಾ.ಪಂ. ನರೇಗಾ ಯೋಜನೆಯಡಿಯಲ್ಲಿ ಒಂದು ಶೌಚಾಲಯ ನಿರ್ಮಿಸಿಕೊಡುವ ಭರವಸೆ ನೀಡಿದೆ. ಪ್ರಯೋಗಾಲಯ, ಕುರ್ಚಿ, ಯಂತ್ರೋಪಕರಣಗಳು, ಕಂಪ್ಯೂಟರ್‌, ಮೇಜು, ಪ್ರಾಜೆಕ್ಟರ್‌ಗಳ ಆವಶ್ಯಕತೆ ಇದೆ. 8-10 ಕಿ.ಮೀ. ದೂರದ ಗ್ರಾಮೀಣ ವಿದ್ಯಾರ್ಥಿಗಳು ಆಗಮಿಸುತ್ತಿರುವುದರಿಂದ ವಾಹನದ ಅಗ ತ್ಯವೂ ಇದೆ ಎನ್ನುತ್ತಾರೆ ಹೆತ್ತವ‌ರು. ಶಾಲಾವರಣಕ್ಕೆ ಪಂ., ತಾ.ಪಂ. ಅನುದಾನದಲ್ಲಿ 3 ಲಕ್ಷ ರೂ. ವೆಚ್ಚದಲ್ಲಿ ಇಂಟರ್‌ಲಾಕ್‌ ಅಳವಡಿಸಲಾಗಿದೆ.

Advertisement

ತರಗತಿ ಕೊಠಡಿಗಳ ಕೊರತೆ
1955ರಲ್ಲಿ ನಿರ್ಮಿಸಿರುವ ದೊಡ್ಡ ಕೊಠಡಿ ಇದ್ದು ಗೋಡೆಗಳು ಬಿರುಕು ಬಿಟ್ಟಿವೆ. ತರಗತಿ ಕೊಠಡಿಗಳ ಕೊರತೆಯಿಂದಾಗಿ ಇದರಲ್ಲೇ ಪಾಠ ಮಾಡುವುದು ಅನಿವಾರ್ಯ. ಶಾಲೆಯಲ್ಲಿ ಒಟ್ಟು 5 ತರಗತಿ ಕೋಣೆಗಳಿದ್ದು ಇನ್ನೂ 7 ಕಟ್ಟಡಗಳ ಕೊರತೆ ಇದೆ. ಆಂಗ್ಲ ಮಾಧ್ಯಮ, ಕನ್ನಡ ಮಾಧ್ಯಮ ತರಗತಿಗಳನ್ನು ಪ್ರತ್ಯೇಕವಾಗಿ ನಡೆಸಲು 50-60 ಬೆಂಚ್‌ ಹಾಗೂ ಡೆಸ್ಕ್ ಗಳ ಕೊರತೆ ಇದೆ. ಇರುವ ಬೆಂಚ್‌, ಡೆಸ್ಕ್ಗಳು ಹಾಳಾಗಿರುವುದರಿಂದ ನಲಿ-ಕಲಿ ವಿದ್ಯಾರ್ಥಿಗಳು ನೆಲದ ಮೇಲೆ ಕುಳಿತು ಕಲಿಯುತ್ತಿದ್ದಾರೆ.

ಶಿಕ್ಷಕರ ಕೊರತೆ
ಶಾಲೆಯಲ್ಲಿ ಉತ್ತಮ ಬೋಧಕರಿದ್ದು ಗುಣಮಟ್ಟದ ಶಿಕ್ಷಣ ಸಿಗುವುದರಿಂದ ವರ್ಷದಿಂದ ವರ್ಷಕ್ಕೆ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಎಸ್‌ಡಿಎಂಸಿ ಮತ್ತು ಹೆತ್ತ ವರ ಸಹಕಾರದಿಂದ ಇದು ಸಾಧ್ಯವಾಗಿದೆ. ನಾಲ್ಕು ಶಿಕ್ಷಕಿಯರಿದ್ದು ಒಬ್ಬರು ಮಾತ್ರ ದೈಹಿಕ ಶಿಕ್ಷಣ ಶಿಕ್ಷಕರಿದ್ದಾರೆ. ಇವರ ಕೊರತೆಯಿಂದ ನಮ್ಮ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ.
– ಸಾವಿತ್ರಿ ಹೆಗ್ಡೆ, ಪ್ರಭಾರ ಮುಖ್ಯ ಶಿಕ್ಷಕಿ

ಭರವಸೆ ಈಡೇರಿಲ್ಲ
ಮಕ್ಕಳ ಸಂಖ್ಯೆ ಹೆಚ್ಚುತ್ತಿರುವುದರಿಂದ ಕೊಠಡಿಗಳ ಕೊರತೆಯಿಂದ ರಂಗಮಂದಿರ, ಶಿಥಿ ಲಾವಸ್ಥೆಯಲ್ಲಿ ಇರುವ ಹಳೆಯ ಕಟ್ಟಡದಲ್ಲಿ ಮಕ್ಕಳು ಕುಳಿತುಕೊಳ್ಳುತ್ತಿದ್ದಾರೆ. ಜನಪ್ರತಿನಿಧಿಗಳಿಗೆ ಮಾಡ ಲಾಗಿರುವ ಮನವಿ ಭರವಸೆ ಆಗಿಯೇ ಉಳಿದಿದೆ.
– ಪ್ರಭಾಕರ ದೇವಾಡಿಗ, ಎಸ್‌ಡಿಎಂಸಿ ಅಧ್ಯಕ್ಷ

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next