Advertisement

ನಿಗದಿತ ಅವಧಿಯಲ್ಲಿ ಜನನ, ಮರಣ ಪತ್ರ ನೀಡಿ; ಡೀಸಿ ಆರ್‌.ಲತಾ

05:37 PM Jun 30, 2022 | Team Udayavani |

ಚಿಕ್ಕಬಳ್ಳಾಪುರ: ಜನನ ಮತ್ತು ಮರಣ ಪ್ರಕರಣಗಳ ನೋಂದಣಿಯು ನಿಗದಿತ ಕಾಲಮಿತಿ ಯೊಳಗೆ ನಿಗದಿತ ತಂತ್ರಾಂಶಗಳಲ್ಲಿ ನೋಂದಣಿ ಯಾಗಿ ಪ್ರಮಾಣ ಪತ್ರಗಳು ಸಮರ್ಪಕವಾಗಿ ಕಾಲಮಿತಿಯೊಳಗೆ ವಿತರಿಸುವ ಸುವ್ಯವಸ್ಥೆ ಆಗಬೇಕು. ಆ ನಿಟ್ಟಿನಲ್ಲಿ ನಗರ, ಗ್ರಾಮಾಂತರ ಪ್ರದೇಶಗಳಲ್ಲಿ ನೋಂದಣಿ ಮಾಡುವ ಸಕ್ಷಮ ಅಧಿಕಾರಿ ಮತ್ತು ಸಿಬ್ಬಂದಿ ಕಾರ್ಯ ವೈಖರಿ ಪರಿಶೀಲಿಸಿ, ಕಾಲ ಕಾಲಕ್ಕೆ ವರದಿ ನೀಡಬೇಕು ಎಂದು ಡೀಸಿ ಆರ್‌.ಲತಾ ಜಿಲ್ಲಾ ಸಾಂಖ್ಯಿಕ
ನೋಂದಣಾಧಿಕಾರಿಗೆ ಸೂಚನೆ ನೀಡಿದರು.

Advertisement

ಬುಧವಾರ ಡೀಸಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜನನ, ಮರಣ ನೋಂದಣಿಯ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಘಟಿಸುವ ಜನನ, ಮರಣ ಪ್ರಕರಣಗಳನ್ನು ಸಂಬಂಧಪಟ್ಟ ತಂತ್ರಾಂಶಗಳಲ್ಲಿ ನಮೂದಿಸಿ, ಸ್ಥಳೀಯಾಡಳಿತ ಸಂಸ್ಥೆಗಳಿಗೆ ಆನ್‌ಲೈನ್‌ ಮೂಲಕ ವಿವರ ರವಾನಿಸಬೇಕು. ಸದರಿ ವಿವರವನ್ನು ಸ್ಥಳೀಯ ಆಡಳಿತ ಸಂಸ್ಥೆಗಳ ಸಂಬಂಧಪಟ್ಟ ಅಧಿಕಾರಿ, ಗ್ರಾಮಲೆಕ್ಕಿಗರು ಪರಿಶೀಲಿಸಿ ಪ್ರಮಾಣ ಪತ್ರಗಳನ್ನು ನಿಗದಿತ ಕಾಲ ಮಿತಿಯೊಳಗೆ ವಿತರಿಸಬೇಕು ಎಂದರು.

ಸಮರ್ಪಕವಾಗಿ ಕೆಲಸ ನಿರ್ವಹಿಸಿ: ಆಸ್ಪತ್ರೆ ಗಳನ್ನು ಹೊರತುಪಡಿಸಿ ಘಟಿಸುವ ಜನನ, ಮರಣ ಪ್ರಕರಣಗಳನ್ನು ಸ್ಥಳೀಯ ಆಡಳಿತದ ಅಧಿಕಾರಿಗಳು, ಗ್ರಾಮ ಲೆಕ್ಕಿಗರು ತಮ್ಮ ಕಾರ್ಯವ್ಯಾಪ್ತಿಯ ಘಟನೆಗಳ ಮಾಹಿತಿ ಪಡೆದು ಪರಿಶೀಲಿಸಿ, ತಂತ್ರಾಂಶದಲ್ಲಿ ನೋಂದಣಿ ಜೊತೆಗೆ ಪ್ರಮಾಣ ಪತ್ರ ವಿತರಿಸುವ ಕೆಲಸವನ್ನು ಸಮರ್ಪಕವಾಗಿ ನಿರ್ವಹಿಸಬೇಕು. ಈ ನಿಯಮ ಉಲ್ಲಂಘಿಸುವವರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಬೇಕು. ವಿಶೇಷವಾಗಿ ಖಾಸಗಿ ಆಸ್ಪತ್ರೆಗಳಲ್ಲಿನ ನಮೂದು ಪ್ರಕ್ರಿಯೆ ಮೇಲೆ ನಿಗಾವಹಿಸಬೇಕು.ಈ ಎಲ್ಲಾ ಕಾರ್ಯಗಳ ಉಸ್ತುವಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

ಮಹಾಲನೋಬಿಸ್‌ ಮಹಾನ್‌ ಸಂಖ್ಯಾಶಾಸ್ತ್ರಜ್ಞ: ಜಿಪಂ ಯೋಜನಾ ನಿರ್ದೇಶಕಿ ಧನುರೇಣುಕ ಮಾತನಾಡಿ, ಮಹಾಲನೋಬಿಸ್‌ ಅವರು ಭಾರತ ಕಂಡ ಮಹಾನ್‌ ಸಂಖ್ಯಾಶಾಸ್ತ್ರಜ್ಞರಾಗಿದ್ದರು. ಸ್ವಾತಂತ್ರ ಭಾರತದ ಪ್ರಥಮ ಯೋಜನಾ ಆಯೋಗದ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಇಂಡಿಯನ್‌ ಸ್ಟ್ಯಾಟಿಸ್ಟಿಕಲ್‌ ಇನ್ಸಿಟ್ಯೂಟ್‌ ಸ್ಥಾಪನೆ ಮಾಡಿ, ದೊಡ್ಡ ಪ್ರಮಾಣದ ಮಾದರಿ ಸಮೀಕ್ಷೆಗಳ ವಿನ್ಯಾಸಗಳ ಬಗ್ಗೆ, ಕೃಷಿ ಕ್ಷೇತ್ರದಲ್ಲಿ ಬೆಳೆ ಇಳುವರಿ ಅಂದಾಜು ಪದ್ಧತಿ, ಬೆಳೆ ಸಮೀಕ್ಷೆ, ಬೆಳೆ ಕಟಾವು ಪ್ರಯೋಗಳ ಕುರಿತು ವೈಜ್ಞಾನಿಕ ತಿಳುವಳಿಕೆ ನೀಡಿದ್ದರು. 2ನೇ ಪಂಚವಾರ್ಷಿಕ ಯೋಜನೆಗೆ ಅವರ ಪಾತ್ರ ಪ್ರಮುಖವಾಗಿತ್ತು. ಇವರ ಸೇವೆಯನ್ನು ಗುರ್ತಿಸಿದ ಭಾರತ ಸರ್ಕಾರ ಪದ್ಮ ವಿಭೂಷಣ ಪ್ರಶಸ್ತಿ ನೀಡಿ ಗೌರವಿಸಿದೆ. ಇವರ ಜನ್ಮ ದಿನಾಚರಣೆಯನ್ನು ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆಯ ಎಂದು ಆಚರಿಸಲಾಗುತ್ತಿದೆ ಎಂದು ಹೇಳಿದರು.

ಕಾರ್ಯಯೋಜನಾ ಪಟ್ಟಿ ಬಿಡುಗಡೆ: ಸಭೆಯಲ್ಲಿ 2020-21ನೇ ಸಾಲಿನ ಜಿಲ್ಲಾ ಅಂಕಿ-ಅಂಶಗಳ ನೋಟ ಹಾಗೂ ಸಾಮಾಜಿಕ ಮತ್ತು ಆರ್ಥಿಕ ಅವಲೋಕನ ಪುಸ್ತಕವನ್ನು ಹಾಗೂ 2022-23ನೇ ಸಾಲಿನ ಪ್ರಧಾನ ಮಂತ್ರಿ ಫಸಲ್‌ ಭಿಮಾ ಯೋಜನೆಯ ಬೆಳೆ ಅಂದಾಜು ಸಮೀಕ್ಷೆಯ ಕಾರ್ಯಯೋಜನಾ ಪಟ್ಟಿ ಬಿಡುಗಡೆಗೊಳಿಸಿದರು. ಪ್ರೊ.ಪಿ.ಸಿ. ಮಹಾಲನೋಬಿಸ್‌ ಜನ್ಮದಿನಾಚರಣೆ, 16ನೇ ವರ್ಷದ ರಾಷ್ಟ್ರೀಯ ಸಾಂಖ್ಯಿಕ ದಿನಾಚರಣೆ ಅಂಗವಾಗಿ ಪ್ರೊ.ಪಿ.ಸಿ.ಮಹಾಲನೋಬಿಸ್‌ ಭಾವಚಿತ್ರಕ್ಕೆ ಡೀಸಿ ಪುಷ್ಪನಮನ ಸಲ್ಲಿಸಿದರು.

Advertisement

ಸಭೆಯಲ್ಲಿ ಜಿಪಂ ಸಿಇಒ ಪಿ.ಶಿವಶಂಕರ್‌, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್‌.ಎಸ್‌.ಮಹೇಶ್‌ ಕುಮಾರ್‌, ಜಿಲ್ಲಾ ಅಪರ ಜನನ, ಮರಣ ನೋಂದಣಾಧಿಕಾರಿ ಪ್ರಕಾಶ್‌ ರಾಯ್ಕರ್‌, ಸಹಾಯಕ ನಿರ್ದೇಶಕ ಶಿವಕುಮಾರ್‌ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next