Advertisement

ಹೆಸರುಕಾಳು ಖರೀದಿ ಮಿತಿ  ಬದಲಿಸಲು ಈಶ್ವರ್‌ ಖಂಡ್ರೆ ಆಗ್ರಹ

06:40 AM Sep 21, 2018 | Team Udayavani |

ಬೆಂಗಳೂರು: ಕೇಂದ್ರ ಸರ್ಕಾರ ಬೆಂಬಲ ಬೆಲೆ ಯೋಜನೆಯಲ್ಲಿ ಹೆಸರುಕಾಳು ಖರೀದಿಯನ್ನು ಹೇರಿರುವ ಮಿತಿಯನ್ನು ತೆಗೆದು ಹಾಕಿ, ಕನಿಷ್ಠ ಒಂದು ಲಕ್ಷ ಮೆಟ್ರಿಕ್‌ ಟನ್‌ ಹೆಸರು ಕಾಳು ಖರೀದಿಗೆ ಅವಕಾಶ ನೀಡಬೇಕೆಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್‌ ಖಂಡ್ರೆ ಆಗ್ರಹಿಸಿದ್ದಾರೆ.

Advertisement

ಕೆಪಿಸಿಸಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ 1 ಲಕ್ಷ ಮೆಟ್ರಿಕ್‌ ಟನ್‌ ಹೆಸರು ಕಾಳು ಖರೀದಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಮನವಿ ಮಾಡಿದೆ.  ರಾಜ್ಯದ ಒಂಭತ್ತು ಜಿಲ್ಲೆಗಳ ಸುಮಾರು 3.87 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹೆಸರುಕಾಳು ಬಿತ್ತನೆಯಾಗಿದೆ. ಈ ವರ್ಷ ಅಂದಾಜು 13 ಲಕ್ಷ ಮೆಟ್ರಿಕ್‌ ಟನ್‌ ಹೆಸರುಕಾಳು ಉತ್ಪಾದನೆಯಾಗಿದೆ. ಆದರೆ, ಕೇಂದ್ರ ಸರ್ಕಾರ ನಫೆಟ್‌ ಮೂಲಕ ಶೇಕಡಾ 18 ರಷ್ಟು ಮಾತ್ರ ಖರೀದಿಗೆ ಕ್ರಮ ಕೈಗೊಂಡಿದ್ದು, ಇದರಿಂದ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಲಿದೆ ಎಂದು ಹೇಳಿದರು.

ಸದ್ಯದ ಮಾರುಕಟ್ಟೆಯಲ್ಲಿ ಹೆಸರುಕಾಳಿನ ಬೆಲೆ 4200 ರೂಗಳಿಂದ 5000 ರೂ. ಒಳಗೆ ಇದೆ. ಕೇಂದ್ರ ಸರ್ಕಾರ 2018-19ನೇ ಸಾಲಿನಲ್ಲಿ ಪ್ರತಿ ಕ್ವಿಂಟಾಲ್‌ಗೆ  5575 ರೂಗಳಿಂದ 6975 ರೂಪಾಯಿಗೆ ಹೆಚ್ಚಿಸಲು ತೀರ್ಮಾನ ಕೈಗೊಂಡಿದೆ. ಮಾರುಕಟ್ಟೆಯ ಬೆಲೆಗೂ ಬೆಂಬಲ ಬೆಲೆಗೂ ಸುಮಾರು ಎರಡೂವರೆ ಮೂರು ಸಾವಿರ ರೂಪಾಯಿ ವ್ಯತ್ಯಾಸ ಇದೆ. ಈಗಾಗಲೇ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿಗೆ ಅನುಮತಿ ನೀಡಲಾಗಿದೆ. ಖರೀದಿ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ 1.4 ಲಕ್ಷ ರೈತರು ಹೆಸರು ಕಾಳು ಖರೀದಿಸುವಂತೆ ಆನ್‌ಲೈನ್‌ ಮೂಲಕ ನೋಂದಣಿ ಮಾಡಿಕೊಂಡಿದ್ದಾರೆ. ಆದರೆ, ಕೇಂದ್ರ ಸರ್ಕಾರ ಖರೀದಿಗೆ ಮಿತಿ ಹೇರಿರುವುದರಿಂದ ರೈತರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.

ಕೇಂದ್ರ ಸರ್ಕಾರ ಬೆಂಬಲ ಬೆಲೆ ಘೋಷಣೆ ಮಾಡಿ ಖರೀದಿಗೆ ಮಿತಿ ಹೇರಿರುವುದರಿಂದ ಸಮಸ್ಯೆಯಾಗಿದ್ದು, ರಾಜ್ಯ ಸರ್ಕಾರವೇ ಖರೀದಿ ಕೇಂದ್ರಗಳನ್ನು ತೆರೆಯುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. ಬೆಂಬಲ ಬೆಲೆಯಲ್ಲಿ ಖರೀದಿ ಪ್ರಕ್ರಿಯೆ ಆರಂಭವಾಗದಿದ್ದರೆ, ಮಾರುಕಟ್ಟೆಯಲ್ಲಿ ಹೆಸರುಕಾಳು ಬೆಲೆ ಹೆಚ್ಚಳವಾಗುವುದಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ತಕ್ಷಣವೇ ಹೆಸರು ಕಾಳು ಖರೀದಿ ಮಿತಿಯನ್ನು ಹೆಚ್ಚಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಅಲ್ಲದೇ ಜಿಲ್ಲೆಗಳಲ್ಲಿ ಅಗತ್ಯವಿರುವಷ್ಟು ಖರೀದಿ ಕೇಂದ್ರಗಳನ್ನು ತೆರೆಯಲು ಅವಕಾಶ ಕಲ್ಪಿಸಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next