Advertisement

ಹೇಳ್ದೆ ಕೇಳ್ದೆ ಹೋಗೋಕೆ ಇದೇನು ಮಾವನ ಮನೆಯಾ?

08:10 PM May 13, 2019 | mahesh |

ಲೆಕ್ಕ ಮಾಡಲು ಬೋರ್ಡ್‌ ಕಡೆ ತಿರುಗಿದಾಗ, ಹಿಂದಿನಿಂದ ಗಲಾಟೆ, ಕೀಟಲೆ ಮಾಡುವ ಕಿಲಾಡಿ ವಿದ್ಯಾರ್ಥಿಗಳನ್ನು, ಬೋರ್ಡ್‌ ಮೇಲೆ ಬರೆಯುತ್ತಲೇ, ಬಲಗೈಗೆ ಕಟ್ಟಿದ ವಾಚ್‌ನ ಗ್ಲಾಸ್‌ನ ಮೂಲಕ ನೋಡಿ, ಗ್ರಹಚಾರ ಬಿಡಿಸುವ ಕಲೆ ಮೇಷ್ಟರಿಗೆ ಕರಗತವಾಗಿತ್ತು.

Advertisement

ನಾನು ಓದಿನಲ್ಲಿ ಆರಕ್ಕೇರದ, ಮೂರಕ್ಕಿಳಿಯದ ಮಧ್ಯಮ ವರ್ಗದ ವಿದ್ಯಾರ್ಥಿ. ಶಿಕ್ಷಕರಿಂದ ಶಹಭಾಷ್‌ಗಿರಿ ಪಡೆದ, ಹೋಂವರ್ಕ್‌ ಮಾಡಿಲ್ಲ, ಓದ್ಕೊಂಡು ಬಂದಿಲ್ಲ ಅಂತ ಉಗಿಸಿಕೊಂಡ ಉದಾಹರಣೆಗಳೂ ಕಡಿಮೆಯೇ. ಆದರೆ, ಟೆರರ್‌ ಶಿಕ್ಷಕ ಎಂಬ ಬಿರುದಿನ, ಮಹಾ ಸಿಟ್ಟಿನ ಎಂ.ಜಿ. ಮೇಷ್ಟ್ರಿಂದ ಹತ್ತನೇ ತರಗತಿಯ ಪ್ರಾರಂಭದಲ್ಲಿ ತಿಂದ ಏಟನ್ನಂತೂ ಮರೆಯಲು ಸಾಧ್ಯವೇ ಇಲ್ಲ.

ನಮಗೆ ಗಣಿತ ಬೋಧಿಸುತ್ತಿದ್ದ ಎಂ. ಗುರುಶಾಂತಪ್ಪ ಮೇಷ್ಟ್ರು, ಎಂ. ಜಿ. ಮೇಷ್ಟ್ರು ಎಂದೇ ಹೆಸರಾಗಿದ್ದರು. ಅವರು, ಹೆಸರಿನಲ್ಲಿ ಮಾತ್ರ ಶಾಂತರು. ವಾಸ್ತವದಲ್ಲಿ ಮಹಾನ್‌ ಸಿಟ್ಟಿನ ಗುರುಗಳು. ಆಗೆಲ್ಲಾ ನಮ್ಮಂಥ ವಿದ್ಯಾರ್ಥಿಗಳ ಪಾಲಿಗೆ ಬಂಗಾರದೊಡವೆಯಷ್ಟೇ ದುಬಾರಿಯಾಗಿದ್ದ ವಾಚ್‌ ಅನ್ನು, ಅವರು ಬಲಗೈಗೆ ಕಟ್ಟುತ್ತಿದ್ದರು. ಬೇರೆ ಸಮಯದಲ್ಲಿ ಎಡಗೈಗೆ ವಾಚ್‌ ಕಟ್ಟುತ್ತಿದ್ದ ಅವರು, ಶಾಲೆಗೆ ಬರುವಾಗ ಮಾತ್ರ ಬಲಗೈಗೆ ವಾಚ್‌ ಕಟ್ಟುತ್ತಿದ್ದುದಕ್ಕೆ ಒಂದು ಕಾರಣವೂ ಇತ್ತು. ಸೀನಿಯರ್ಗಳಿಂದ ಆ ಕಾರಣ ತಿಳಿದಾಗ, ನಮಗೆ ಅಬ್ಟಾ ಅನ್ನಿಸಿತ್ತು. ಅದೇನೆಂದರೆ, ತರಗತಿಯಲ್ಲಿ ಮೇಷ್ಟ್ರು ಲೆಕ್ಕ ಮಾಡಲು ಬೋರ್ಡ್‌ ಕಡೆ ತಿರುಗಿದಾಗ, ಹಿಂದಿನಿಂದ ಗಲಾಟೆ, ಕೀಟಲೆ ಮಾಡುವ ಕಿಲಾಡಿ ವಿದ್ಯಾರ್ಥಿಗಳನ್ನು, ಬೋರ್ಡ್‌ ಮೇಲೆ ಬರೆಯುತ್ತಲೇ ಬಲಗೈಗೆ ಕಟ್ಟಿದ ವಾಚ್‌ನ ಗ್ಲಾಸ್‌ನ ಮೂಲಕ ನೋಡಿ, ಗ್ರಹಚಾರ ಬಿಡಿಸಲು ಅವರು ಬಳಸುತ್ತಿದ್ದ ತಂತ್ರವಾಗಿತ್ತು.

ಅವರು ಹೇಳಿಕೊಟ್ಟ ಲೆಕ್ಕ ಮಾಡಲು ಬರದಿದ್ದರೆ ನಮ್ಮ ಕಥೆ ಅಷ್ಟೇ. ಪ್ರತಿಯೊಬ್ಬ ವಿದ್ಯಾರ್ಥಿಯೂ ತಲೆ ಕೆಡಿಸಿಕೊಳ್ಳುತ್ತಿದ್ದುದು ಗಣಿತ ವಿಷಯದ ಬಗ್ಗೆ ಮತ್ತು ಎಂ.ಜಿ. ಮೇಷ್ಟ್ರ ಬಗ್ಗೆಯೇ. ಆದರೂ, ಗಣಿತ ಅನೇಕರಿಗೆ ಜಗಿಯಲಾರದ ವಸ್ತುವಾಗಿ ಪದೇ ಪದೆ ಮೇಷ್ಟ್ರ ಬೆತ್ತದ ರುಚಿ ನೋಡುವಂತೆ ಮಾಡುತ್ತಿತ್ತು. ಮೊದಲಿನಿಂದಲೂ ಗಣಿತವೆಂದರೆ ಆಸಕ್ತಿಯಿದ್ದ ನನಗೆ ಅವರಿಂದ ದಕ್ಕಿದ ಏಟುಗಳು ಕಡಿಮೆಯೇ. ಆದರೆ, ತಪ್ಪು ಲೆಕ್ಕ ಮಾಡಿದ್ದೇನೆಂದೋ, ಹೋಂವರ್ಕ್‌ ಮಾಡಿಲ್ಲವೆಂದೋ ಒಂದು ದಿನವೂ ಪೆಟ್ಟು ತಿನ್ನದಿದ್ದ ನಾನು, ಅದೊಂದು ದಿನ ಸುಖಾಸುಮ್ಮನೆ ಮುನ್ನೂರಕ್ಕೂ ಹೆಚ್ಚು ವಿದ್ಯಾರ್ಥಿಗಳ ಎದುರು ಪೆಟ್ಟು ತಿಂದು ಅವಮಾನ ಅನುಭವಿಸಬೇಕಾಯ್ತು.

ಚಿಕ್ಕಂದಿನಿಂದಲೂ ಚಿತ್ರಕಲೆಯಲ್ಲಿ ಅತೀವ ಆಸಕ್ತಿಯಿದ್ದ ನನಗೆ, ಯಾವುದೇ ಚಿತ್ರಕಲಾ ಸ್ಪರ್ಧೆಯಿದ್ದರೂ ಪಾಲ್ಗೊಳ್ಳುವ ಹುಚ್ಚು. ಅವತ್ತು, ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆಗೆ ನಮ್ಮ ಶಾಲೆಯಿಂದ ಭಾಗವಹಿಸುವ ಸ್ಪರ್ಧಿಗಳ ಆಯ್ಕೆ ನಡೆಯುತ್ತಿತ್ತು. ಆಸಕ್ತ ವಿದ್ಯಾರ್ಥಿಗಳನ್ನು ಹತ್ತನೇ ತರಗತಿ “ಎ’ ವಿಭಾಗದಲ್ಲಿ ಕೂರಿಸಿ, ಚಿತ್ರ ಬಿಡಿಸಲು ಹೇಳಿದ್ದರು. ಶಾಲಾ ಮಟ್ಟದಲ್ಲಿ ಆಯ್ಕೆಯಾಗಿ, ತಾಲೂಕು ಮಟ್ಟಕ್ಕೆ ಹೋಗಲೇಬೇಕೆಂಬ ಹುಮ್ಮಸ್ಸಿನಲ್ಲಿ ನಾನೂ ಚಿತ್ರ ಬಿಡಿಸುತ್ತಿದ್ದೆ. ಎಷ್ಟು ತಲ್ಲೀನನಾಗಿ ಬಿಡಿಸುತ್ತಿ¨ªೆನೆಂದರೆ ಪಕ್ಕದಲ್ಲಿದ್ದ ಸ್ಪರ್ಧಿಗಳೆಲ್ಲ ಚಿತ್ರ ಬಿಡಿಸಿ, ಶಿಕ್ಷಕರಿಗೆ ಕೊಟ್ಟು, ಅವರವರ ತರಗತಿಗೆ ಹೋದರೂ ನನಗದು ತಿಳಿಯಲೇ ಇಲ್ಲ.

Advertisement

ನಂತರ “ಎ’ ವಿಭಾಗದ ವಿದ್ಯಾರ್ಥಿಗಳಿಗೆ ಎಂ.ಜಿ. ಮೇಷ್ಟ್ರ ತರಗತಿಯಿದ್ದು, ಮೇಷ್ಟ್ರು ತರಗತಿಯೊಳಗೆ ಬಂದಿರುವುದೂ ತಿಳಿಯಲಿಲ್ಲ. ನನ್ನ ಪಾಡಿಗೆ ನಾನು ಚಿತ್ರ ಬಿಡಿಸುತ್ತಿದ್ದೆ. ಮೇಷ್ಟ್ರು ಒಳಗೆ ಬಂದ ಕೂಡಲೇ, ಸುತ್ತಲೂ ನಡೆಯುತ್ತಿದ್ದ ಮಕ್ಕಳ ಚಟುವಟಿಕ ಒಮ್ಮೆಲೇ ನಿಂತುಬಿಟ್ಟಿತು. ಆಗ ನಾನು ತಲೆ ಎತ್ತಿ ನೋಡಿದರೆ ಬೋರ್ಡ್‌ನ ಬಳಿ ಎ ಎಂ.ಜಿ.ಮೇಷ್ಟ್ರು ನಿಂತಿದ್ದಾರೆ!

“ಸಿ’ ವಿಭಾಗದ ನಾನು ಇಲ್ಲಿರುವುದು ತಪ್ಪೆಂದು ತಕ್ಷಣ ನನಗೆ ಅರಿವಾಯ್ತು. ಈಗ ಮೇಷ್ಟ್ರಿಗೆ ಗೊತ್ತಾದರೆ ಹೊಡೆಯುತ್ತಾರೆಂದು, ಚಿತ್ರ ಬಿಡಿಸುವ ಹಡಪಗಳನ್ನೆಲ್ಲಾ ಎತ್ತಿಕೊಂಡು, ಮೇಷ್ಟ್ರಿಗೂ ಕೇಳದೇ ತರಗತಿಯಿಂದ ಹೊರಗೋಡಿಬಿಟ್ಟೆ. ತಕ್ಷಣ ನನ್ನನ್ನು ಗುರುತಿಸಿದ ಮೇಷ್ಟ್ರು ತರಗತಿಯಿಂದ ಹೊರಗೆ ಬಂದು, ನನ್ನನ್ನು ದರದರನೆ ಎಳೆದು ತಂದು ಎಲ್ಲರೆದುರು ನಿಲ್ಲಿಸಿ, “ಹೇಳದೆ, ಕೇಳದೆ ಕ್ಲಾಸಿಂದ ಹೊರಗೋಗ್ತಿಯ? ಇದೇನು ನಿಮ್ಮ ಮಾವನ ಮನೆಯಾ? ‘ ಎಂದು ಕೆನ್ನೆಗೆ ಛಟೀರ್‌ ಎಂದು ಎರಡು ಬಿಟ್ಟರು!

ಅಲ್ಲಿಯವರೆಗೆ ಶಿಕ್ಷಕರಿಂದ ಬೈಸಿಕೊಳ್ಳುವುದೂ ಮಹಾಪಾಪ ಅಂದುಕೊಂಡಿದ್ದ ನನಗೆ ಅವತ್ತು ಭಾರೀ ಅವಮಾನವಾಯ್ತು, ಅದೂ ಬೇರೆ ತರಗತಿಯ ವಿದ್ಯಾರ್ಥಿಗಳ ಎದುರು! ಉರಿಯುತ್ತಿದ್ದ ಕೆನ್ನೆ ಸಂಜೆಗೆ ಸರಿ ಹೋದರೂ, ಎರಡೂರು ದಿನ ಒಳಗೊಳಗೇ ಅಳುತ್ತಿದ್ದೆ. ಕ್ರಮೇಣ ಬೇಜಾರು ಕಡಿಮೆಯಾದರೂ, ಆ ಘಟನೆಯ ನೆನಪು ಮಾತ್ರ ಮಾಸಲಿಲ್ಲ. ಅವಮಾನ ಮಾಡಿದ ಶಿಕ್ಷಕರೆದುರೇ ಸನ್ಮಾನ ಮಾಡಿಸಿಕೊಳ್ಳಬೇಕೆಂಬ ಛಲದಿಂದ ಓದತೊಡಗಿದೆ. ಮುಂದೆ ಎಂ.ಜಿ. ಮೇಷ್ಟರ ಪ್ರೀತಿಯ ಶಿಷ್ಯನಾಗಿ, ಹತ್ತನೇ ತರಗತಿಯ ವಾರ್ಷಿಕ ಪರೀಕ್ಷೆಯಲ್ಲೂ ಗಣಿತದಲ್ಲಿ ಒಳ್ಳೆಯ ಅಂಕಗಳನ್ನು ಪಡೆದೆ. ಆಗ ಮೇಷ್ಟ್ರು ತುಂಬಾ ಖುಷಿಪಟ್ಟರು. ಹೈಸ್ಕೂಲು ಮುಗಿದ ಮೇಲೂ, ಸಿಕ್ಕಿದಾಗೆಲ್ಲ ಅವರು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಎಷ್ಟೇ ಆತ್ಮೀಯವಾಗಿ ಮಾತಾಡಿಸಿದರೂ ಅವರೆಂದರೆ ಈಗಲೂ ಗೌರವಮಿಶ್ರಿತ ಭಯವೇ.

ರಾಘವೇಂದ್ರ ಹೊರಬೈಲು

Advertisement

Udayavani is now on Telegram. Click here to join our channel and stay updated with the latest news.

Next