Advertisement

ಘೋಷಣೆಗಷ್ಟೇ ಸೀಮಿತವಾಗುತ್ತಿದೆಯೇ ರಾಜ್ಯ ಬಜೆಟ್? ಜಾರಿಯಾಗದ ಯೋಜನೆಗಳ‌ ಪಕ್ಷಿನೋಟ

03:44 PM Mar 02, 2022 | Team Udayavani |

ಬೆಂಗಳೂರು : ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಇನ್ನೆರಡು ದಿನದಲ್ಲಿ ತಮ್ಮ ಚೊಚ್ಚಲ ಬಜೆಟ್ ಮಂಡಿಸಲಿದ್ದಾರೆ. ಇದು ಚುನಾವಣಾ ವರ್ಷವಾಗಿರುವುದರಿಂದ ಬೊಮ್ಮಾಯಿ ಬರಪೂರು ಜನಪ್ರಿಯ ಯೋಜನೆಗಳ ಘೋಷಣೆ ಮಾಡುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಬಿಜೆಪಿ ಸರಕಾರದ ಕಳೆದ ವರ್ಷದ ಬಜೆಟ್ ಘೋಷಣೆ ಪೈಕಿ ಹಲವು ವಿಚಾರಗಳಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಕೆಲ ಸಣ್ಣಪುಟ್ಟ ವಿಚಾರಗಳಿಗೂ ಹಣಕಾಸು ಕೊರತೆ ಕಾರಣ ನೀಡಿ ಬಾಕಿ ಇಡಲಾಗಿದೆ. ಅವುಗಳ ಅನುಷ್ಠಾನದ ಮಾತಿರಲಿ ಇಂಥದೊಂದು ಪ್ರಸ್ತಾಪವನ್ನು ಮಾಡಲಾಗಿತ್ತೇ? ಎಂಬ ಬಗ್ಗೆಯೂ ಚರ್ಚೆ ನಡೆಸಿಲ್ಲ. ಹೀಗಾಗಿ ಬಜೆಟ್ ಘೋಷಣೆಯ ಪಾವಿತ್ರ್ಯತೆ ಬಗ್ಗೆ ಹಲವು ಪ್ರಶ್ನೆಗಳು ಉದ್ಭವವಾಗಿದೆ.

Advertisement

ಹಾಗೆ ನೋಡಿದರೆ ಬಜೆಟ್ ಘೋಷಣೆಗೆ ಚಾಲನೆ ನೀಡದೇ ಇರುವುದು ವಿಧಾನಮಂಡಲಕ್ಕೆ ಪರ್ಯಾಯವಾಗಿ ರಾಜ್ಯದ ಜನತೆಗೆ ಮಾಡುವ ಘೋರ ಅಪಮಾನ. ಏಕೆಂದರೆ ವಿಧಾನಮಂಡಲದ‌ ಉಭಯ ಸದನದಲ್ಲಿ ಪಕ್ಷಾತೀತವಾಗಿ ಒಪ್ಪಿಕೊಂಡ ವಿಚಾರ ಬಜೆಟ್. ಆದರೆ ಅಧಿಕಾರಿ ವರ್ಗ ಬಜೆಟ್ ಘೋಷಣೆಯನ್ನು ಹಣವಿಲ್ಲ ಎಂಬ ಕಾರಣಕ್ಕೆ ಬಾಕಿ‌ ಇಡುತ್ತಿದ್ದಾರೆ. ಆದರೆ ಬಜೆಟ್ ಹಾಗೂ ಪೂರಕ ಬಜೆಟ್ ನಲ್ಲಿ ಇಲ್ಲದ ಸಾವಿರಾರು ಕೋಟಿ ರೂ. ಯೋಜ‌ನೆಗಳಿಗೆ ವೇಗವಾಗಿ ಮಂಜೂರಾತಿ ಸಿಗುತ್ತಿರುವುದರ ಮರ್ಮವೇನು ? ಎಂಬುದು ಅರ್ಥವಾಗುತ್ತಿಲ್ಲ.

ರಾಜ್ಯವನ್ನು ಇದುವರೆಗೆ ಆಳಿದ ಎಲ್ಲ ಮುಖ್ಯಮಂತ್ರಿಗಳೂ ಬಜೆಟ್ ಪೂರ್ವಭಾವಿ ಸಭೆಗೆ, ಹೊಸ ಬಜೆಟ್ ರಚನೆಗೆ ನೀಡುವ ಆದ್ಯತೆಯನ್ನು ಹಿಂದನ ಆಯವ್ಯಯದ ಜಾರಿ ಪರಿಶೀಲನೆಗೆ ನೀಡುತ್ತಿಲ್ಲ. ಸಿಎಂ ಬೊಮ್ಮಾಯಿ ಅವರಾದರೂ ಈ ದಿಶೆಯಲ್ಲಿ ಕಾರ್ಯೋನ್ಮುಖರಾಗಬಹುದೆಂಬ ನಿರೀಕ್ಷೆಯು ಹುಸಿಯಾಗಿದೆ.

ಕಳೆದ ಬಜೆಟ್ ನಲ್ಲಿ ಘೋಷಣೆಯಾಗಿ ಇನ್ನೂ ಜಾರಿಯಾಗದ ಕೆಲ ಯೋಜನೆಗಳ‌ ಪಕ್ಷಿನೋಟ ಹೀಗಿದೆ

– ರಾಜ್ಯ ಸರಕಾರದ ವಿವಿಧ ಮಂಡಳಿಗಳು, ನಿಗಮಗಳು, ಸ್ಥಳೀಯ ಸಂಸ್ಥೆಗಳ ಆಂತರಿಕ ಸಂಪನ್ಮೂಲ ಕ್ರೋಢೊಕರಣದಿಂದ 23,763 ಕೋಟಿ ರೂ. ಕ್ರೋಢಿಕರಣ ನಿರೀಕ್ಷೆ ಹುಸಿ.

Advertisement

– ಮೂಲ ಗೇಣಿದಾರರು, ಕುಮ್ಕಿ, ಖಾನೇ, ಬಾನೇ, ಡೀಮ್ಡ್ ಅರಣ್ಯ ಸಾಗುವಳಿದಾರರ ಸಮಸ್ಯೆ ಬಗ್ಗೆ ಅಧ್ಯಯನ ನಡೆಸಿ ಪರಿಹಾರ ಕಲ್ಪಿಸಲು ಸಮಿತಿ ರಚನೆ ಆಶ್ವಾಸನೆ ಈಡೇರಿಲ್ಲ.

– ಜಿಲ್ಲಾಧಿಕಾರಿಗಳ ನಡಿಗೆ, ಹಳ್ಳಿಯ ಕಡೆಗೆ ಕಾರ್ಯಕ್ರಮಕ್ಕೆ ಈಗಷ್ಟೇ ಚಾಲನೆ, ಫಲಶೃತಿಯ ಮಾಹಿತಿ ಇಲ್ಲ.

-1000 ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್ ಕೇಂದ್ರ ಸ್ಥಾಪನೆಯಾಗಿಲ್ಲ.

– ಸ್ವಚ್ಚ ಶಕ್ತಿ ಆಧರಿತ ನಿರಂತರ ವಿದ್ಯುತ್ ಸರಬರಾಜಿಗೆ 1000 ಮೆಗಾ ವ್ಯಾಟ್ ಪಂಪ್ಡ್ ಹೈಡ್ರೋ ಸ್ಟೋರೆಜ್ ಪ್ಲಾಂಟ್ ನಿರ್ಮಾಣ ಇನ್ನೂ ಡಿಪಿಆರ್ ಹಂತದಲ್ಲೇ ಇದೆ.

– ಕಲಬುರಗಿ ತಾಲೂಕಿನ ಫಿರೋಜಾಬಾದ್ ನಲ್ಲಿ 1551 ಎಕರೆ ಜಮೀನಿನಲ್ಲಿ ಖಾಸಗಿ ಸಹಭಾಗಿತ್ವದಲ್ಲಿ 500 ಮೆಗಾ ವ್ಯಾಟ್ ಸಾಮರ್ಥ್ಯ ದ ಸೌರಶಕ್ತಿ ಪಾರ್ಕ್ ನಿರ್ಮಾಣದ ಕನಸು ನನಸಾಗಿಲ್ಲ.

– ಬೆಂಗಳೂರು, ಮುಂಬೈ, ಬೆಂಗಳೂರು ಚೆನ್ಬೈ ಕೈಗಾರಿಕಾ ಕಾರಿಡಾರ್ ಸ್ಥಾಪಿಸಿ ಟೌನ್ ಶಿಫ್ ನಿರ್ಮಾಣದ ಮೂಲಕ 10  ಸಾವಿರ ಕೋಟಿ ರೂ. ಖಾಸಗಿ ಬಂಡವಾಳ ಹೂಡಿಕೆ ನಿರೀಕ್ಷೆ ಠುಸ್.

– ಯಾದಗಿರಿ ಜಿಲ್ಲೆ ಕಡಚೂರು ಕೈಗಾರಿಕಾ ಪ್ರದೇಶದ ೧೫೦೦ ಎಕರೆ ಭೂಮಿಯಲ್ಲಿ 1478 ಕೋಟಿ ರೂ. ವೆಚ್ಚದಲ್ಲಿ ಕೇಂದ್ರ ಸರಕಾರದ ನೆರವಿನೊಂದಿಗೆ ವಿಶ್ವ ದರ್ಜೆಯ ಮೂಲಸೌಕರ್ಯ ಹೊಂದಿದ ಬಲ್ಕ್ ಡ್ರಗ್ ಪಾರ್ಕ್ ಸ್ಥಾಪನೆ ಪ್ರಸ್ತಾಪ ಕುಂಟುತ್ತಿದೆ.

– ರಾಜ್ಯದ ರೈಲ್ವೆ ಜಾಲ ವಿಸ್ತರಿಸಲು 50:50 ಅನುಪಾತದಲ್ಲಿ ಕೇಂದ್ರ ಸರಕಾರದ ಜತೆ ಸೇರಿ 1173 ಕಿಮೀ ರೈಲು ಮಾರ್ಗದ ಅಭಿವೃದ್ಧಿಗೆ ಬಾಲಗ್ರಹ.

– ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯಲ್ಲಿ ನಾಲ್ಕು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ, ಕಲಬುರಗಿ, ಬಳ್ಳಾರಿ, ಹಾಸನ, ದಾವಣಗೆರೆ, ಗದಗ ಮತ್ತು ಚಾಮರಾಜನಗರದಲ್ಲಿ ತಲಾ ಒಂದರಂತೆ ಕಾರ್ಮಿಕರಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಪ್ರಸ್ತಾಪ ಈಡೇರಿಲ್ಲ.

4636ಕೋಟಿ ರೂ. ವೆಚ್ಚದಲ್ಲಿ ಹಬ್ ಹಾಗೂ ಸ್ಟ್ರೋಕ್ ಮಾದರಿಯಲ್ಲಿ ಸರಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ನಿರ್ಮಾಣಕ್ಕೆ ಚಾಲನೆ ಸಿಕ್ಕಿಲ್ಲ.

– ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ಖಾಸಗಿ ಜಾಗದಲ್ಲಿ ಖಾಸಗಿ- ಸರಕಾರಿ ಸಹಭಾಗಿತ್ವದಲ್ಲಿ ೧೫೦ ವಿದ್ಯಾರ್ಥಿ ನಿಲಯ ಸ್ಥಾಪನೆಯಾಗಿಲ್ಲ.

– ನಾಲ್ಕು ವಿಭಾಗಗಳಲ್ಲಿ ತಲಾ ಒಂದು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅದ್ವಿತೀಯ ಕ್ರೀಡಾ ಶಾಲೆ ಪ್ರಾರಂಭವಾಗಿಲ್ಲ.

– ರಾಜ್ಯದ ಆಯ್ದ ಮಹಾನಗರ ಪಾಲಿಕೆಗಳಲ್ಲಿ ಪ್ರಾಯೋಗಿಕವಾಗಿ ಸಂಜೆ ಕಾಲೇಜು ಆರಂಭದ ಪ್ರಸ್ತಾಪ ಈಡೇರಿಲ್ಲ.

– ರಾಜ್ಯದ ಎಂಟು ಜ್ಞಾನ ಪೀಠ ಪುರಸ್ಕತರು ಅಧ್ಯಯನ ನಡೆಸಿದ ಶಾಲೆಗಳನ್ನು ಸಮಗ್ರ ಅಭಿವೃಧ್ಧಿ ಪ್ರಸ್ತಾಪ‌ ನನೆಗುದಿಗೆ.

ರಾಘವೇಂದ್ರ ಭಟ್

Advertisement

Udayavani is now on Telegram. Click here to join our channel and stay updated with the latest news.

Next