Advertisement

ಪುನರಾವರ್ತನೆಯಾದೀತೇ ದಶಕದ ಇತಿಹಾಸ?

10:27 AM Aug 04, 2022 | Team Udayavani |

ದಾವಣಗೆರೆ: ಸರಿಯಾಗಿ ಹತ್ತು ವರ್ಷಗಳ ಹಿಂದೆ ಅಂದರೆ 2012ರಲ್ಲಿ ದಾವಣಗೆರೆಯಲ್ಲೇ ನಡೆದ ಹಾಲುಮತ ಮಹೋತ್ಸವ ಸಿದ್ದರಾಮಯ್ಯ ಅವರನ್ನು ಮುಖ್ಯಮಂತ್ರಿ ಪಟ್ಟಕ್ಕೆ ಕೊಂಡೊಯ್ದಿತ್ತು. ಈಗ 2022ರ ಅಮೃತ ಮಹೋತ್ಸವ ಅಂತಹ ಅವಕಾಶವನ್ನು ಮತ್ತೂಮ್ಮೆ ತಂದುಕೊಡಲಿದೆಯೇ ಎಂಬ ನಿರೀಕ್ಷೆ ಅವರ ಅಭಿಮಾನಿಗಳಲ್ಲಿ ಗರಿಗೆದರಿದೆ.

Advertisement

ಇದನ್ನೂ ಓದಿ:ಉಡುಪಿ :ತಡರಾತ್ರಿ ಸಂತೆಕಟ್ಟೆ ಜಂಕ್ಷನ್ ನಲ್ಲಿ ರಸ್ತೆ ಅಪಘಾತ: ಮಣಿಪಾಲದ ವಿದ್ಯಾರ್ಥಿನಿಗೆ ಗಾಯ

ಸಿದ್ದರಾಮಯ್ಯ ಎಂದೆಂದಿಗೂ ಜನ್ಮದಿನ ಆಚರಿಸಿಕೊಂಡವರಲ್ಲ. ಆದರೆ 75ನೇ ಜನ್ಮದಿನದ ಅಂಗವಾಗಿ ನಡು ಕರ್ನಾಟಕದ ಕೇಂದ್ರ ಬಿಂದು ದಾವಣಗೆರೆಯಲ್ಲೇ ಅಮೃತ ಮಹೋತ್ಸವ ನಡೆಸಿಯೇ ತೀರಬೇಕು ಎಂಬ ಅತ್ಯಾಪ್ತರ ಒತ್ತಾಯಕ್ಕೆ ಮಣಿದು ಕೊನೆಗೂ ಒಪ್ಪಿ ಲಕ್ಷಾಂತರ ಜನರ ಮಧ್ಯದಲ್ಲಿ ಜನ್ಮದಿನ ಆಚರಿಸಿಕೊಂಡಿದ್ದಾರೆ.

ಅಮೃತಮಹೋತ್ಸವದಲ್ಲಿ ಪಾಲ್ಗೊಂಡಿದ್ದ ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಸಿದ್ದರಾಮಯ್ಯ ಅವರ ಐದು ವರ್ಷದ ಆಡಳಿತ, ಸರ್ಕಾರ ನಡೆಸಿದ ವೈಖರಿ, ದೂರದೃಷ್ಟಿತ್ವದ ಬಗ್ಗೆ ಮನಸಾರೆ ಹೊಗಳಿದರು. ಯಾರ ಜನ್ಮದಿನ ಸಮಾರಂಭದಲ್ಲೂ ಭಾಗವಹಿಸದ ತಾವು ಸಿದ್ದರಾಮಯ್ಯ ಜತೆ ಹೊಂದಿರುವ ವಿಶೇಷ ಬಾಂಧವ್ಯದ ಕಾರಣಕ್ಕಾಗಿಯೇ ಭಾಗವಹಿಸಿದ್ದಾಗಿ ಹೇಳಿರುವುದು ಸಿದ್ದರಾಮಯ್ಯ ಅಭಿಮಾನಿಗಳಲ್ಲಿ ಪುಳಕವನ್ನುಂಟು ಮಾಡಿದೆ.

ಸಿದ್ದರಾಮಯ್ಯ ಜನ್ಮದಿನದ ಅಮೃತ ಮಹೋತ್ಸವದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸಿಟ್ಟಾಗಿದ್ದಾರೆ. ಹಾಗಾಗಿ ಅವರು ಭಾಗವಹಿಸುವುದು ಅನುಮಾನ ಎಂಬ ಮಾತುಗಳನ್ನು ಡಿಕೆಶಿ ಸುಳ್ಳಾಗಿಸಿದ್ದಾರೆ. ಸಮಾರಂಭದಲ್ಲಿ ಭಾಗವಹಿಸಿದ್ದೇ ಅಲ್ಲದೆ ಸಿದ್ದರಾಮಯ್ಯ ಅವರನ್ನು ಆಲಂಗಿಸಿಕೊಂಡು ಜನ್ಮದಿನದ ಶುಭ ಕೋರಿ ವಿಶೇಷವಾಗಿ ಸತ್ಕರಿಸಿದರು. ಸಿದ್ದರಾಮಯ್ಯ ನಾಯಕತ್ವ ಮತ್ತು ಸಾಮೂಹಿಕ ನಾಯ ಕತ್ವದಡಿ ಸಾಗೋಣ. ಸಿದ್ದರಾಮಯ್ಯ ಅವರನ್ನು ಬರೀ ಹಿಂದುಳಿದ ವರ್ಗಗಳ ನಾಯಕ ಎಂದು ಬಿಂಬಿಸದೆ ಸರ್ವ ಧರ್ಮಗಳ ನಾಯಕರಂತೆ ಬಿಂಬಿಸುವಂತೆ ಕರೆ ನೀಡಿರುವುದು ಸಹ ಸಿದ್ದರಾಮಯ್ಯ ಆಪ್ತ ವಲಯದಲ್ಲಿ ಸಂಚಲನ ಮೂಡಿಸಿದೆ. ಸಿದ್ದರಾಮಯ್ಯ ಅವರು ತಮ್ಮ ಹಾಗೂ ಡಿ.ಕೆ.ಶಿವಕುಮಾರ್‌ ನಡುವೆ ಯಾವುದೇ ಒಡಕು ಇಲ್ಲ.

Advertisement

ನಾವಿಬ್ಬರೂ ಒಟ್ಟಾಗಿಯೇ ಇದ್ದೇವೆ. ಎಲ್ಲವೂ ವಿಪಕ್ಷಗಳ ಕುತಂತ್ರ ಎನ್ನುವ ಮೂಲಕ ಅನುಮಾನಗಳಿಗೆ ಸದ್ಯಕ್ಕೆ ತೆರೆ ಎಳೆದಿದ್ದಾರೆ. ಸಿದ್ದ ರಾಮಯ್ಯ 2023ರ ಚುನಾವಣೆ ತಮ್ಮ ಕೊನೆಯ ಚುನಾವಣೆ ಎಂಬ ದಾಳ ಉರುಳಿಸಿದ್ದಾರೆ. ದೈಹಿಕ ಮತ್ತು ಮಾನಸಿಕವಾಗಿ ಸದೃಢವಾಗಿರುವ ತನಕ ಸಕ್ರಿಯ ರಾಜಕಾರಣದಲ್ಲಿ ಇರುವುದಾಗಿಯೂ ಹೇಳುವ ಮೂಲಕ ರಾಜ್ಯ ರಾಜಕಾರಣದಿಂದ ಹಿಂದಡಿ ಇಡುವುದಿಲ್ಲ ಎಂಬ ಸಂದೇಶವನ್ನೂ ನೀಡಿದ್ದಾರೆ. ಊಹೆ-ನಿರೀಕ್ಷೆಗೂ ಮೀರಿದ ಅಮೃತ ಮಹೋತ್ಸವದ ಅಭೂತ ಪೂರ್ವ ಯಶಸ್ಸು, ಸಿದ್ದರಾಮಯ್ಯ ಮತ್ತವರ ಬಳಗ, ಅಭಿಮಾನಿಗಳಲ್ಲಿ ದಶಕಗಳ ಹಿಂದಿನ ಇತಿಹಾಸ ಪುನರಾವರ್ತನೆ ಆಗುವ ಸಾಧ್ಯತೆಯ ಹೊಸ ಭರವಸೆಯನ್ನು ಮೂಡಿಸಿದೆ.

ಒಗ್ಗಟ್ಟಿನ ಮಂತ್ರ ಪಠಿಸಲು ಕಿವಿಮಾತು
ಅಮೃತ ಮಹೋತ್ಸವಕ್ಕೆ ನಾಡಿನ ಮೂಲೆ ಮೂಲೆಯಿಂದ ಆಗಮಿಸಿದ್ದ ಲಕ್ಷಾಂತರ ಜನರನ್ನು ನೋಡಿ ರಾಹುಲ್‌ ಗಾಂಧಿಯವರಿಗೆ ಮತ್ತೂಮ್ಮೆ ಸಿದ್ದರಾಮಯ್ಯ ಅವರ ಅಗಾಧ ಜನ ಶಕ್ತಿಯ ಪರಿಚಯವಾಗಿದೆ. ಸಿದ್ದರಾಮಯ್ಯ ಏಕಾಂಗಿಯಾಗಿಯೇ ಲಕ್ಷಾಂತರ ಜನರನ್ನು ಕರೆ ತರಬಲ್ಲ ಸಾಮರ್ಥ್ಯವುಳ್ಳ ನಾಯಕ ಎಂಬುದು ರುಜುವಾತಾಗಿದೆ. ಹಾಗಾಗಿಯೇ ರಾಹುಲ್‌ ಗಾಂಧಿ, ಕರ್ನಾಟಕದಲ್ಲಿ ಮತ್ತೆ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದೆ. ಸ್ವಚ್ಛ, ಪಾರದರ್ಶಕ ಆಡಳಿತ ನೀಡುವ ಜೊತೆಗೆ ಶಾಂತಿ-ಸಾಮರಸ್ಯ ನೆಲೆಯೂರುವಂತೆ ಮಾಡಲಿದೆ ಎಂಬ ತುಂಬು ವಿಶ್ವಾಸದ ಮಾತುಗಳಾಡಿದ್ದಾರೆ. ಡಿ.ಕೆ.ಶಿವಕುಮಾರ್‌ -ಸಿದ್ದರಾಮಯ್ಯ ಆಲಿಂಗನವನ್ನು ವಿಶೇಷವಾಗಿ ಪ್ರಸ್ತಾಪಿಸುವ ಮೂಲಕ ಇಬ್ಬರು ನಾಯಕರು ಮುಂದೆಯೂ ಇದೇ ರೀತಿ ಇರಬೇಕು ಎಂಬ ಸಂದೇಶವನ್ನು ವೇದಿಕೆಯಲ್ಲೇ ನೀಡಿದ್ದಾರೆ.
●ರಾ. ರವಿಬಾಬು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next