Advertisement

ಮತ್ತೆ ಹುಟ್ಟುಹಾಕಿದೆ…ಬೂಸ್ಟರ್‌ ಡೋಸ್‌ಗೆ ಈಗ ಕಾಲ ಪಕ್ವವಾಗಿದೆಯೇ?

01:28 PM Dec 06, 2021 | Team Udayavani |

ಕೊರೊನಾ ಎರಡನೇ ಅಲೆಯ ಭೀಕರತೆಯಿಂದ ಈಗಷ್ಟೇ ನಾವು ಹೊರಬಂದು, “ಪರ್ವಾಗಿಲ್ಲ ಕೊರೊನಾ ದೂರವಾಗುತ್ತಿದೆ’ ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೊಮ್ಮೆ ಇದು ಸಾಂಕ್ರಾಮಿಕವಾಗಿಯೇ ನಮ್ಮನ್ನು ಕಾಡಲು ಶುರು ಮಾಡಿದೆ. ಅಂದರೆ ಬಿ.1.1.529 ಅಥವಾ ಒಮಿಕ್ರಾನ್‌ ರೂಪದಲ್ಲಿ ಬಂದಿರುವ ಇದನ್ನು ವಿಶ್ವ ಆರೋಗ್ಯ ಸಂಸ್ಥೆಯೇ ಅತ್ಯಂತ ಕಳವಳಕಾರಿ ತಳಿ ಎಂದು ಹೇಳಿರುವುದು ಇನ್ನಷ್ಟು ಆತಂಕಕ್ಕೆ ಈಡು ಮಾಡಿದೆ. ಕೆಲವೇ ವಾರಗಳ ಹಿಂದೆ ಆಫ್ರಿಕಾ ಖಂಡದಲ್ಲಿ ಪತ್ತೆಯಾಗಿರುವ ಈ ತಳಿ ಈಗಾಗಲೇ 30ಕ್ಕೂ ಹೆಚ್ಚು ದೇಶಗಳಲ್ಲಿ ಹರಡಿದೆ.

Advertisement

ನಿರೀಕ್ಷೆಯಂತೆ ನಮ್ಮ ದೇಶದಲ್ಲೂ ಒಮಿಕ್ರಾನ್‌ ಪ್ರಕರಣಗಳು ಪತ್ತೆಯಾಗಿವೆ. ಇದು ಸಾರ್ವಜನಿಕ ಆರೋಗ್ಯ ಕ್ರಮ ಗಳು, ಹೆಚ್ಚಿನ ಜಾಗರೂಕತೆ, ಕಣ್ಗಾವಲು ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಲಸಿಕೆ ನೀತಿಯನ್ನು ಒಳಗೊಂಡಿರುವ ಕೊರೊನಾವನ್ನು ತಡೆಗಟ್ಟುವ ನಿಯಂತ್ರಣ ಕ್ರಮಗಳ ಮೇಲಿನ ಚರ್ಚೆಗಳಿಗೆ ಪುನರುಜ್ಜೀವ ನೀಡಿದೆ.

ಈ ಹೊಸ ರೂಪಾಂತರದ ಬಗ್ಗೆ ಹೆಚ್ಚು ತಿಳಿದಿಲ್ಲವಾದರೂ ಇದು ಹೆಚ್ಚು ಸಾಂಕ್ರಾಮಿಕವಾಗಿದೆ. ಬಹುಶಃ ಲಸಿಕೆಯಿಂದ ನೀಡಲಾಗುವ ರೋಗನಿರೋಧಕತೆಯಿಂದ ತಪ್ಪಿಸಿಕೊಳ್ಳು ತ್ತದೆ. ಆದರೆ ಅದೃಷ್ಟವಶಾತ್‌ ಇದು ತುಲನಾತ್ಮಕವಾಗಿ ಸೌಮ್ಯ ರೋಗ. ಹಾಗೆಯೇ, ಈ ಹೊಸ ರೂಪಾಂತರವು ಹೆಚ್ಚುವರಿ ಡೋಸ್‌ ಅಥವಾ ನಮ್ಮ ಜನಸಂಖ್ಯೆಯಲ್ಲಿ ಬೂಸ್ಟರ್‌ನ ಅಗತ್ಯದ ಬಗ್ಗೆ ಚರ್ಚೆಯನ್ನು ಮತ್ತೆ ಹುಟ್ಟುಹಾಕಿದೆ.

ಕೊರೊನಾ ನಿರ್ವಹಣೆಯ ಏಕೈಕ ಮಾರ್ಗವೆಂದರೆ ದೃಢವಾದ ಸಾರ್ವಜನಿಕ ಆರೋಗ್ಯ ಕ್ರಮಗಳು, ಕಣ್ಗಾವಲು ಮತ್ತು ಕೊರೊನಾ ನಿಯಮಗಳನ್ನು ಸರಿಯಾಗಿ ಪಾಲನೆ ಮಾಡುವುದು ಮತ್ತು ಲಸಿಕೆ ನೀಡುವುದಾಗಿದೆ.

ಲಸಿಕೆಯನ್ನೇ ಪಡೆದುಕೊಳ್ಳದೇ ಇರುವುದಕ್ಕಿಂತ ಒಂದು ಡೋಸ್‌ ಅನ್ನಾದರೂ ಪಡೆಯುವುದು ಉತ್ತಮ. ಹಾಗೆಯೇ ಒಂದು ಡೋಸ್‌ಗಿಂತ 2 ಡೋಸ್‌ ಹಾಕಿಸಿಕೊಳ್ಳುವುದು ಇನ್ನೂ ಉತ್ತಮ ಎಂಬ ಮಾತು ಇದೆ. ಇದರ ಮಧ್ಯೆ ಈಗ ಆಯ್ದ ಜನಸಂಖ್ಯೆಗೆ ಮತ್ತೂಂದು ಡೋಸ್‌ ನೀಡಬೇಕು ಎಂಬ ಚರ್ಚೆಯೂ ಆರಂಭವಾಗಿದೆ.

Advertisement

ಅಭಿವೃದ್ಧಿಶೀಲ ದೇಶವೊಂದರಲ್ಲಿ ಇನ್ನೂ ಎಲ್ಲ ಅರ್ಹ ಜನರಿಗೆ ಎರಡೂ ಡೋಸ್‌ ಲಸಿಕೆ ನೀಡುವ ಮುನ್ನ ಮತ್ತು ಮಕ್ಕಳಿಗೆ ಲಸಿಕೆ ನೀಡುವ ಮೊದಲೇ ಮೂರನೇ ಅಥವಾ

ಬೂಸ್ಟರ್‌ ಡೋಸ್‌ ನೀಡುವುದು ನೈತಿಕವಾಗಿ ಮತ್ತು ಸೈದ್ಧಾಂತಿಕವಾಗಿ ಸರಿಯೇ ಎಂಬ ಜಿಜ್ಞಾಸೆ ಕಾಡುತ್ತಿದೆ.

ಈಗಾಗಲೇ ಅಮೆರಿಕ, ಇಂಗ್ಲೆಂಡ್‌, ಇಸ್ರೇಲ್‌ ಸೇರಿ ಹಲವು ದೇಶಗಳಲ್ಲಿ 3ನೇ ಡೋಸ್‌ ಲಸಿಕೆಗೆ ಒಪ್ಪಿಗೆ ನೀಡಲಾಗಿದೆ. ನಮ್ಮಲ್ಲಿ 3ನೇ ಡೋಸ್‌ ಲಸಿಕೆಯನ್ನು ಆಯ್ದ ಜನಸಂಖ್ಯೆಯಾದ ಆರೋಗ್ಯ ಹಾಗೂ ಮುಂಚೂಣಿ ಕಾರ್ಯಕರ್ತರು, ವೃದ್ಧರು, ಇತರ ರೋಗಗಳಿಂದ ಬಳಲುತ್ತಿರುವವರಾದ ಟ್ರಾನ್ಸ್‌ಪ್ಲಾಂಟ್‌ ರೋಗಿಗಳು, ಕ್ಯಾನ್ಸರ್‌ ರೋಗಿಗಳು, ಇತರ ಹೈ ರಿಸ್ಕ್ ಗುಂಪಿಗೆ ನೀಡುವ ಕುರಿತಂತೆ ನೋಡಬಹುದಾಗಿದೆ.

ಬೂಸ್ಟರ್‌ ಡೋಸ್‌ ಕುರಿತಾದ ಚರ್ಚೆ: ನಾವು ಇಲ್ಲಿ ಬೂಸ್ಟರ್‌ ಡೋಸ್‌ ಮತ್ತು ಹೆಚ್ಚುವರಿ ಡೋಸ್‌ ನಡುವಿನ ವ್ಯತ್ಯಾಸವನ್ನು ಅರಿಯಬೇಕಾಗಿದೆ. ಬೂಸ್ಟರ್‌ ಡೋಸ್‌ ಅನ್ನು ಆರೋಗ್ಯವಂತ ಜನರಿಗೆ, 2ನೇ ಡೋಸ್‌ ಪಡೆದ ಕೆಲವು ತಿಂಗಳುಗಳ ಅನಂತರ ಅವರಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದ ಬಳಿಕ ನೀಡಲಾಗುತ್ತದೆ. ಅದೇ ಹೆಚ್ಚುವರಿ ಡೋಸ್‌ ಅನ್ನು ಇತರ ರೋಗಗಳಿಂದ ನರಳುತ್ತಿರುವವರಿಗೆ ಅವರ ವೈದ್ಯಕೀಯ ಸ್ಥಿತಿ ಅರಿತು ನೀಡಲಾಗುತ್ತದೆ. ಇಲ್ಲಿ ರೋಗ ಪ್ರತಿರೋಧ ಶಕ್ತಿ ಹೆಚ್ಚಿಸುವ ಸಲುವಾಗಿ ಈ ಹೆಚ್ಚುವರಿ ಡೋಸ್‌ ನೀಡಲಾಗುವುದಿಲ್ಲ.  ಇಲ್ಲಿ ಬೂಸ್ಟರ್‌ ಡೋಸ್‌ ಬೇಕು ಮತ್ತು ಬೇಡಗಳ ಕುರಿತಾಗಿ ನಡೆಯುತ್ತಿರುವ ವಾದ-ಪ್ರತಿವಾದಗಳ ಬಗ್ಗೆ ಗಮನಿಸೋಣ. ಸರಕಾರದಿಂದ ತಜ್ಞರ ಸಮಿತಿ ರಚನೆ ಮಾಡಿ, ಇದರ ಮೇಲೆ ಅವರು ಅಧ್ಯಯನ ಮಾಡಿ ಕೆಲವೇ ದಿನಗಳಲ್ಲಿ ಮಾರ್ಗಸೂಚಿಗಳನ್ನು ತರಲಾಗುತ್ತದೆ. ಈ ಸಂದರ್ಭದಲ್ಲಿ ಈ ಕೆಳಕಂಡ ವಿಷಯಗಳ ಬಗ್ಗೆ ಅವಲೋಕಿಸಬಹುದು.

-ಇತರ ರೋಗಗಳಿಂದ ನರಳುತ್ತಿರುವ ವ್ಯಕ್ತಿಗಳಿಗೆ ಹೆಚ್ಚುವರಿ ಡೋಸ್‌ ಅಗತ್ಯವಿದೆಯೇ?

-ಆರೋಗ್ಯವಂತರಿಗೆ ಬೂಸ್ಟರ್‌ ಡೋಸ್‌ ಬೇಕೇ?

-3ನೇ ಡೋಸ್‌ ಅನ್ನು ಯಾವಾಗ ನೀಡಬೇಕು ಮತ್ತು ಒಂದು ವೇಳೆ ಕೊಡಬೇಕಾದಲ್ಲಿ ಯಾರು ನೀಡಬೇಕು?

-ಎರಡು ಮತ್ತು 3ನೇ ಡೋಸ್‌ ನಡುವಿನ ಅಂತರವೆಷ್ಟು?

ಬೂಸ್ಟರ್‌ ಡೋಸ್‌ ಬೇಡ ಎನ್ನುವವರ ವಾದ

-ಲಸಿಕೆಯ ಕೊರತೆ

-ಸೀಮಿತ ಅವಧಿಯಲ್ಲಿ ಬಹಳಷ್ಟು ಜನರಿಗೆ ಲಸಿಕೆ ನೀಡಬೇಕಾಗಿರುವುದರಿಂದ ಮೂಲಸೌಕರ್ಯ ಮತ್ತು ಸಾಗಾಣಿಕೆಯ ಕೊರತೆ ಕಾಣಬಹುದು.

-ಇನ್ನೂ ದೇಶದ ಬಹುದೊಡ್ಡ ಜನಸಂಖ್ಯೆ ಕನಿಷ್ಠ ಒಂದು ಅಥವಾ 2ನೇ ಡೋಸ್‌ ಪಡೆಯದೆ ಇರುವಾಗ ಬೂಸ್ಟರ್‌ ಡೋಸ್‌ ಕೊಡುವುದು ಎಷ್ಟರ ಮಟ್ಟಿಗೆ ಸರಿ ಎಂಬ ನೈತಿಕ ಮತ್ತು ಸೈದ್ಧಾಂತಿಕ ಪ್ರಶ್ನೆ.

-ಬೂಸ್ಟರ್‌ನಿಂದ ಲಾಭಗಳಾಗುತ್ತವೆ ಎಂದು ನಿರೂಪಿಸುವ ವೈಜ್ಞಾನಿಕ ದಾಖಲೆಗಳ ಕೊರತೆ.

ಬೂಸ್ಟರ್‌ ಡೋಸ್‌ ಬೇಕು ಎಂಬವರ ವಾದ

-ಸದ್ಯ ನಮ್ಮಲ್ಲಿ ಲಸಿಕೆಯ ಕೊರತೆಯಾಗಲಿ, ಮೂಲಸೌಕರ್ಯದ ಕೊರತೆಯಾಗಲಿ ಇಲ್ಲ. ಈಗಾಗಲೇ ದಿನವೊಂದಕ್ಕೆ 1 ಕೋಟಿಯಿಂದ 2.5 ಕೋಟಿಯಷ್ಟು ಡೋಸ್‌ ಲಸಿಕೆ ನೀಡಿದ್ದೇವೆ. ಹೀಗಾಗಿ ಮೊದಲೆರಡು  ಡೋಸ್‌ ಜತೆಗೆ ಬೂಸ್ಟರ್‌ ಡೋಸ್‌ ಅನ್ನೂ ಪರ್ಯಾಯವಾಗಿ ನೀಡಬಹುದು. ಇದರಿಂದ ಇತರರಿಗೆ ತೊಂದರೆಯಾಗುವುದಿಲ್ಲ.

-ಹಲವಾರು ಗುಂಪುಗಳಾದ ಆರೋಗ್ಯ ಕಾರ್ಯಕರ್ತರು, ಮುಂಚೂಣಿ ಕಾರ್ಯಕರ್ತರು, ಹೈ ರಿಸ್ಕ್ ಗುಂಪುಗಳು 2ನೇ ಡೋಸ್‌ ಲಸಿಕೆ ಪಡೆದು 6 ತಿಂಗಳುಗಳಾಗಿವೆ. ಸದ್ಯ ನಮ್ಮಲ್ಲಿ ಇರುವ ಮಾಹಿತಿ ಪ್ರಕಾರ ಇವರ ರೋಗ ನಿರೋಧಕ ಶಕ್ತಿ ಕುಂಠಿತವಾಗಿರುತ್ತದೆ.

-ಹಲವಾರು ಹೈ ರಿಸ್ಕ್ ಗುಂಪುಗಳಾದ  ವಯೋವೃದ್ಧರು, ಇತರ ರೋಗಗಳಿಂದ ನರಳುತ್ತಿರುವವರಾದ ಅಂಗಾಂಗ ಕಸಿ ಮಾಡಿಸಿಕೊಂಡವರು, ಕ್ಯಾನ್ಸರ್‌ ರೋಗಿಗಳು, ತನ್ನಿಂ ತಾನೇ ರೋಗ ನಿರೋಧಕ ಶಕ್ತಿ ಉತ್ಪಾದನೆಯಾಗುವ ಶಕ್ತಿ ಇಲ್ಲದೇ ಇರುವ ರೋಗದಿಂದ ನರಳುತ್ತಿರುವವರಲ್ಲಿ ಸರಿಯಾದ ರೋಗ ನಿರೋಧಕ ಶಕ್ತಿ ಇರುವುದಿಲ್ಲ. ಅಂದರೆ ಮೊದಲ ಎರಡು ಡೋಸ್‌ಗಳಿಂದ ಇವರಿಗೆ ಈ ಪ್ರಮಾಣದ ರೋಗ ನಿರೋಧಕತೆ ಸಿಕ್ಕಿರುವುದಿಲ್ಲ. ಇವರಿಗೆ ಹೆಚ್ಚುವರಿ ಲಸಿಕೆ ನೀಡಬಹುದು.

-ಬೂಸ್ಟರ್‌ ಡೋಸ್‌ನಿಂದ ಭಾರೀ ಪ್ರಮಾಣದ ಪ್ರತಿಕಾಯ ಸೃಷ್ಟಿಯಾಗುತ್ತದೆ ಎಂಬುದಕ್ಕೆ ಸಾಕ್ಷ್ಯಗಳಿವೆ. ಇದು ಗಂಭೀರ ರೋಗದಿಂದಲೂ ಹೆಚ್ಚಿನ ರಕ್ಷಣೆ ನೀಡುತ್ತದೆ.

-ಈಗ ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ನ ಭೀತಿ ಹೆಚ್ಚಾಗಿದೆ. ಡೆಲ್ಟಾಗೆ ಹೋಲಿಕೆ ಮಾಡಿದರೆ ಈ ರೂಪಾಂತರಿ ವಿರುದ್ಧ ಲಸಿಕೆ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಎಂದು ಇನ್ನೂ ಸಾಬೀತಾಗದಿದ್ದರೂ ನಾವು ಗರಿಷ್ಠ ರೀತಿಯಲ್ಲಿ ಲಸಿಕೆಯ ರಕ್ಷಣೆ ನೀಡಬೇಕಾಗುತ್ತದೆ.

nಖಾಸಗಿ ವಲಯದಲ್ಲಿರುವ ಬಹಳಷ್ಟು ಪ್ರಮಾಣದ ಲಸಿಕೆ ಇನ್ನೂ ಬಳಕೆಯಾಗಿಲ್ಲ, ಸದ್ಯದಲ್ಲೇ ಇದರ ಅವಧಿ ಮುಗಿಯುವ ಸಾಧ್ಯತೆ ಇದೆ. ಇದನ್ನು ಬೂಸ್ಟರ್‌ಗೆ ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳಬಹುದು.

ಇವೆೆಲ್ಲದರ ಜತೆಗೆ ನಾವು ಕೊರೊನಾ ವಿರುದ್ಧದ ಹೋರಾಟಕ್ಕೆ ಅನುಗುಣವಾಗಿ ನಮ್ಮ ಸಾರ್ವಜನಿಕ‌ ಆರೋಗ್ಯ ನೀತಿಗಳನ್ನು ಹೆಚ್ಚಳ ಮಾಡಿಕೊಳ್ಳಬೇಕು. ಹೆಚ್ಚಾಗಿ ವಿಚಕ್ಷಣೆ ಮಾಡುವುದು, ಅಂದರೆ ವಂಶವಾಹಿ ಪರೀಕ್ಷೆಯ ವರದಿ ಬೇಗನೆ ಸಿಗುವಂತೆ ಮಾಡುವುದು ಮತ್ತು ಕೊರೊನಾ ನಿಯಂತ್ರಣ ಕ್ರಮಗಳನ್ನು ಅನುಸರಿಸಬೇಕು.

ಇನ್ನೂ ಮೊದಲ 2 ಡೋಸ್‌ ಪಡೆಯದೇ ಇರುವವರಿಗೆ ಬೇಗನೆ ಲಸಿಕೆ ನೀಡಬೇಕು. ಸೋಂಕಿನ ವಿರುದ್ಧ ಹೋರಾಡುವ ಶಕ್ತಿ ಕಡಿಮೆ ಇರುವಂಥ ಆಯ್ದ ಜನಸಂಖ್ಯೆಗೆ ಹೆಚ್ಚುವರಿ ಅಥವಾ ಬೂಸ್ಟರ್‌ ಡೋಸ್‌ ನೀಡಬೇಕು. ಬೂಸ್ಟರ್‌ ಡೋಸ್‌ ಅನ್ನು ಎಲ್ಲರಿಗೂ ಅದರಲ್ಲೂ ವೃದ್ಧರು, ರೋಗ ನಿರೋಧಕತೆ ಶಕ್ತಿ ಕಡಿಮೆ ಇರುವ‌ವರು, ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಈಗ ಕೊಡಬೇಕು ಎಂದು ಹೇಳುವುದು ತೀರಾ ಬೇಗವಾದರೂ ಇದರಿಂದ ಅವರು ಅನುಕೂಲ ಪಡೆದೇ ಪಡೆಯುತ್ತಾರೆ.

ಎಲ್ಲರೂ ಸುರಕ್ಷಿತರಾಗುವವರೆಗೆ ಯಾರೊಬ್ಬರೂ ಸುರಕ್ಷಿತರಲ್ಲ, ಹೀಗಾಗಿ ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುವ ಮೂಲಕ ಜಗತ್ತನ್ನು ಸುರಕ್ಷಿತವಾಗಿಡೋಣ ಎಂಬ ನಾಣ್ಣುಡಿಯಂತೆ ಕೆಲಸ ಮಾಡಬೇಕು.

– ಡಾ| ಸುದರ್ಶನ ಬಲ್ಲಾಳ್‌, ಮಣಿಪಾಲ್‌ ಆಸ್ಪತ್ರೆಗಳ
ಸಮೂಹದ ಅಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next