Advertisement

ಟೈರ್‌ಗೆ ನೈಟ್ರೋಜನ್‌ ಕಡ್ಡಾಯ?

02:06 AM Jul 09, 2019 | Sriram |

ಹೊಸದಿಲ್ಲಿ:ಟೈರ್‌ ಸ್ಫೋಟದಿಂದ ಆಗುವ ವಾಹನ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಅವುಗಳನ್ನು ತಡೆಗಟ್ಟುವ ಉದ್ದೇಶದಿಂದ ಕೇಂದ್ರ ಸರಕಾರ ಹೊಸ ಮಾರ್ಗಸೂಚಿಗಳನ್ನು ಹೊರಡಿಸಲು ಚಿಂತನೆ ನಡೆಸಿದೆ.

Advertisement

ಟೈರುಗಳ ಬಾಳಿಕೆ ಹೆಚ್ಚಿಸುವ ಉದ್ದೇಶದಿಂದ, ಟೈರ್‌ಗಳ ತಯಾರಿಕೆಗೆ ಬಳಸಲಾಗುವ ರಬ್ಬರ್‌ನ ಜತೆಗೆ ಸಿಲಿಕಾನ್‌ ಮಿಶ್ರಣ ಮಾಡುವಂತೆ ಸೂಚಿಸಲು ಹಾಗೂ ಟೈರುಗಳಿಗೆ ಸಾಮಾನ್ಯ ಗಾಳಿ ತುಂಬಿಸುವ ಬದಲು ಶುದ್ಧ ನೈಟ್ರೋಜನ್‌ (ಸಾರಜನಕ) ಅನಿಲ ತುಂಬಿಸುವುದನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್‌ ಗಡ್ಕರಿ ರಾಜ್ಯಸಭೆಗೆ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ನಿಯಮಗಳಂತೆ, ಟೈರ್‌ಗಳಲ್ಲಿ ಸಿಲಿಕಾನ್‌ ಸೇರಿಸುವಿಕೆ ಹಾಗೂ ನೈಟ್ರೋಜನ್‌ ಅನಿಲ ತುಂಬುವಿಕೆಯಿಂದಾಗಿ, ಉಷ್ಣಾಂಶ ಹೆಚ್ಚಳದಿಂದ ಟೈರುಗಳು ಒಡೆಯುವಂಥ ಘಟನೆಗಳನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಸಚಿವರು ತಿಳಿಸಿದ್ದಾರೆ.

ನೋಯ್ಡಾ-ಆಗ್ರಾ ಯಮುನಾ ಎಕ್ಸ್‌ಪ್ರಸ್‌ ಹೈವೇಯಲ್ಲಿ ಸೋಮವಾರ ಬೆಳಗ್ಗೆ ಬಸ್ಸೊಂದು ಅಪಘಾತಕ್ಕೀಡಾಗಿ 29 ಜನರು ಸಾವಿಗೀಡಾಗಿರುವ ಪ್ರಕರಣಕ್ಕೆ ಸಂಬಂಧಿಸಿ ಕೇಳಲಾದ ಪ್ರಶ್ನೆಗಳಿಗೆ ಗಡ್ಕರಿ ಉತ್ತರಿಸುವಾಗ, ಸಿಲಿಕಾನ್‌, ನೈಟ್ರೋಜನ್‌ ಅನಿಲ ವಿಚಾರಗಳನ್ನು ಉಲ್ಲೇಖೀಸಿದರು.

ದರ ಎಷ್ಟು?: ಒಂದು ಟೈರಿಗೆ ನೈಟ್ರೋಜನ್‌ ಅನಿಲ ತುಂಬಿಸಲು ಭಾರತದಲ್ಲಿ ಸದ್ಯಕ್ಕೆ 200ರಿಂದ 400 ರೂ. ಶುಲ್ಕ ಪಡೆಯಲಾಗುತ್ತದೆ ಎಂದು ಹೇಳಲಾಗಿದೆ. ಟೈರಿನ ನೈಟ್ರೋಜನ್‌ ಪ್ರಮಾಣ ಅಳೆಯಲೂ ಒಂದು ಟೈರಿಗೆ 10 ರೂ. ದರವಿದೆ. ನಗರಗಳಲ್ಲಿ ಇದು ವ್ಯತ್ಯಾಸವಾದರೂ ಆಗಬಹುದು.

Advertisement

ಬುಲೆಟ್ಪ್ರೂಫ್ ಜಾಕೆಟ್:ಸಶಸ್ತ್ರ ಪಡೆಗಳಿಗೆ ಅಗತ್ಯವಾದ ಬುಲೆಟ್ ಪ್ರೂಫ್ ಜಾಕೆಟ್‌ಗಳಿಗೆ ತೀವ್ರ ಕೊರತೆ ಇರುವ ಹಿನ್ನೆಲೆಯಲ್ಲಿ 2020ರ ಎಪ್ರಿಲ್ನೊಳಗೆ 639 ಕೋಟಿ ರೂ. ವೆಚ್ಚದಲ್ಲಿ 1.86 ಲಕ್ಷ ಬುಲೆಟ್ ಪ್ರೂಫ್ ಜಾಕೆಟ್‌ಗಳನ್ನು ಖರೀದಿಸಲು ನಿರ್ಧರಿಸಲಾಗಿದೆ ಎಂದು ರಾಜ್ಯಸಭೆಗೆ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಮಾಹಿತಿ ನೀಡಿದ್ದಾರೆ.

ಶುದ್ಧ ನೈಟ್ರೋಜನ್‌ ಮಹತ್ವವೇನು?
•ಆಮ್ಲಜನಕ, ನೀರಿನ ಕಣ, ಸಾರಜನಕ, ನಿಯಾನ್‌ ಅನಿಲಗಳ ಸಮ್ಮಿಶ್ರಣವಾದ ಸಾಮಾನ್ಯ ಗಾಳಿಯು ಟೈರಿನಿಂದ ಹೊರಹೋಗುತ್ತಲೇ ಇರುತ್ತದೆ. ಆದರೆ, ಸ್ವಚ್ಛ ನೈಟ್ರೋಜನ್‌ ಅನಿಲವು ತುಂಬಾ ದಿನ ಟೈರ್‌ನಲ್ಲಿ ಇರುವ ಮೂಲಕ ಟೈರ್‌ಗಳಿಗೆ ಸ್ಥಿರ ಒತ್ತಡ ನೀಡುತ್ತದೆ.

•ಸಾಮಾನ್ಯ ಗಾಳಿಯಲ್ಲಿನ ನೀರಿನ ಕಣಗಳು ಟೈರಿನ ಒಳಭಾಗದಲ್ಲಿ ತೇವದ ವಾತಾವರಣ ನಿರ್ಮಿಸುತ್ತವೆ. ಟೈರ್‌ನ ರಿಮ್‌ಗಳಿಗೆ ತುಕ್ಕು ಹಿಡಿವಂತೆ ಮಾಡಿ ಚಕ್ರಗಳನ್ನು ದುರ್ಬಲಗೊಳಿಸುತ್ತವೆ. ನೈಟ್ರೋಜನ್‌ನಿಂದ ಈ ಅಪಾಯವಿಲ್ಲ.

•ಟೈರುಗಳ ಘರ್ಷಣೆಯಿಂದ ಹಾಗೂ ಬಾಹ್ಯ ತಾಪಮಾನದಿಂದ ಸಾಮಾನ್ಯ ಗಾಳಿ ತುಂಬಲ್ಪಟ್ಟ ಟೈರುಗಳಲ್ಲಿ ಆಮ್ಲಜನಕ ಹಾಗೂ ರಬ್ಬರ್‌ನ ನಡುವೆ ರಾಸಾಯನಿಕ ಕ್ರಿಯೆ ನಡೆಯಲು ಅವಕಾಶವಿದೆ. ನೈಟ್ರೋಜನ್‌ ಟೈರುಗಳಲ್ಲಿ ಆ ಅಪಾಯವಿಲ್ಲ.

ರಾಷ್ಟ್ರೀಯ ಭದ್ರತೆಗೆ ಧಕ್ಕೆ ಆಗಲ್ಲ

ಸರಕಾರಿ ಸ್ವಾಮ್ಯದ ಬಿಇಎಂಎಲ್ನಿಂದ ಶೇ. 26ರಷ್ಟು ಬಂಡವಾಳ ವಾಪಸ್‌ ಪಡೆಯುವ ನಿರ್ಧಾರದ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಸರಕಾರ, ರಾಷ್ಟ್ರೀಯ ಭದ್ರತೆಗೆ ಯಾವುದೇ ರೀತಿಯಲ್ಲೂ ಧಕ್ಕೆಯಾಗದಂತೆ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತೇವೆ ಎಂಬ ಭರವಸೆ ನೀಡಿದೆ. ರಕ್ಷಣೆ, ರೈಲು ಮತ್ತು ಗಣಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಬಿಇಎಂಎಲ್ನಲ್ಲಿ ಸದ್ಯ ಸರಕಾರ ಶೇ. 54.03 ಷೇರು ಹೊಂದಿದೆ. ಇದೇ ವೇಳೆ, ಸರಕಾರಿ ಸ್ವಾಮ್ಯದ ಕಂಪೆನಿಗಳ ಬಂಡವಾಳ ಹಿಂಪಡೆತ ನಿರ್ಧಾರ ವಿರೋಧಿಸಿ ಟಿಎಂಸಿ ಸದಸ್ಯರು ಸೋಮವಾರ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು.

ಎನ್‌ಐಎ ವಿಧೇಯಕ ಮಂಡನೆ

ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್‌ಐಎ)ಯನ್ನು ಇನ್ನಷ್ಟು ಬಲಪಡಿಸುವ ಎನ್‌ಐಎ ವಿಧೇಯಕವನ್ನು ಸೋಮವಾರ ಲೋಕಸಭೆಯಲ್ಲಿ ಮಂಡಿಸಲಾಗಿದೆ. ಈ ಕಾಯ್ದೆ ಜಾರಿಯಾದರೆ, ವಿದೇಶಿ ನೆಲದಲ್ಲೂ ಭಾರತೀಯರನ್ನು ಹಾಗೂ ಭಾರತದ ಹಿತಾಸಕ್ತಿಯನ್ನು ಗುರಿಯಾಗಿಸಿಕೊಂಡು ನಡೆಯುವ ಉಗ್ರ ಕೃತ್ಯದ ಬಗ್ಗೆ ತನಿಖೆ ನಡೆಸುವ ಅಧಿಕಾರ ಎನ್‌ಐಎಗೆ ಸಿಗುತ್ತದೆ. ಇದೇ ವೇಳೆ, ಶಂಕಿತ ಭಯೋತ್ಪಾದಕನನ್ನು ‘ಭಯೋತ್ಪಾದಕ’ ಎಂದು ಘೋಷಿಸಲು ಅವಕಾಶ ನೀಡುವ ಕಾನೂನುಬಾಹಿರ ಚಟುವಟಿಕೆಗಳ (ನಿಯಂತ್ರಣ) ತಿದ್ದುಪಡಿ ವಿಧೇಯಕವನ್ನೂ ಲೋಕಸಭೆಯಲ್ಲಿ ಮಂಡಿಸಲಾಗಿದ್ದು, ಇದಕ್ಕೆ ಪ್ರತಿಪಕ್ಷಗಳು ತೀವ್ರ ವಿರೋಧ ವ್ಯಕ್ತಪಡಿಸಿವೆ.

ಆಧಾರ್‌ ಮಸೂದೆ ಅಂಗೀಕಾರ

ಬ್ಯಾಂಕ್‌ ಖಾತೆ ತೆರೆಯಲು ಮತ್ತು ಮೊಬೈಲ್ ಸಂಪರ್ಕ ಪಡೆಯಲು ಸ್ವಇಚ್ಛೆಯಿಂದಷ್ಟೇ ಆಧಾರ್‌ ಸಂಖ್ಯೆಯನ್ನು ನೀಡುವುದಕ್ಕೆ ಅವಕಾಶ ಕಲ್ಪಿಸುವ ಆಧಾರ್‌ ತಿದ್ದುಪಡಿ ವಿಧೇಯಕಕ್ಕೆ ಸೋಮವಾರ ಸಂಸತ್‌ನ ಅಂಗೀಕಾರ ಸಿಕ್ಕಿದೆ. ಆಧಾರ್‌ ದತ್ತಾಂಶದ ನಿಯಮ ಉಲ್ಲಂಘಿಸಿದರೆ ಅಂಥ ಖಾಸಗಿ ಕಂಪೆನಿಗಳಿಗೆ 1 ಕೋಟಿ ರೂ. ದಂಡ ಮತ್ತು ಜೈಲು ಶಿಕ್ಷೆ ವಿಧಿಸುವ ಅವಕಾಶವಿರುವ ಈ ವಿಧೇಯಕ ಜು. 4ರಂದು ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು.
Advertisement

Udayavani is now on Telegram. Click here to join our channel and stay updated with the latest news.

Next