Advertisement

ಕಡೇಶಿವಾಲಯ ಕುಶಲಕರ್ಮಿ ಕೈಗಾರಿಕಾ ತರಬೇತಿ ಕೇಂದ್ರ ಪುನರಾರಂಭ ಸಾಧ್ಯವೇ?

08:37 PM Aug 21, 2019 | mahesh |

ಬಿ.ಸಿ. ರೋಡ್‌: ಗ್ರಾಮೀಣ ಯುವಕರಿಗೆ ಕೈಗಾರಿಕಾ ಉದ್ಯೋಗ ಒದಗಿಸುವ ಚಿಂತನೆಯೊಂದಿಗೆ 1989ರಲ್ಲಿ ಜಿ.ಪಂ. ಕೈಗಾರಿಕಾ ವಿಭಾಗವು ಕಡೇಶಿವಾಲಯ ಗ್ರಾಮದಲ್ಲಿ ತೆರೆದಿದ್ದ ಕುಶಲಕರ್ಮಿ ತರಬೇತಿ ಕೇಂದ್ರ (Artisam Training Center)ವು ಮುಚ್ಚುಗಡೆಯಾಗಿ 2 ದಶಕಗಳು ಸಂದಿವೆ. ಹೊಸ ಸರಕಾರವಾ ದರೂ ಇತ್ತ ಗಮನಹರಿಸಿ ಕೇಂದ್ರವನ್ನು ಪುನರಾರಂಭಿಸುವುದೇ ಎಂಬ ನಿರೀಕ್ಷೆಯಲ್ಲಿ ಸ್ಥಳೀಯರಿದ್ದಾರೆ.

Advertisement

ತರಬೇತಿ ಕೇಂದ್ರ ಉಪಯೋಗ ಶೂನ್ಯ ವಾಗಿ ಸುತ್ತಲೂ ಮರ-ಗಿಡ- ಬಳ್ಳಿ- ಪೊದೆಗಳು ತುಂಬಿಕೊಂಡಿವೆ. ಸರಕಾರಿ ಸೊತ್ತಿಗೆ ಹೇಳುವವರು ಕೇಳುವವರು ಇಲ್ಲ ಎಂಬಂತಾಗಿದೆ. ದ.ಕ. ಜಿ.ಪಂ. ಆಡಳಿತಕ್ಕೆ ಇದೊಂದು ಕಪ್ಪುಚುಕ್ಕೆಯಂತೆ ಕಾಣುತ್ತಿದೆ. ಗ್ರಾಮಾಂತರ ಮಟ್ಟದಲ್ಲಿ ಯುವಕರಿಗೆ ಕೈಗಾರಿಕೆ ತರಬೇತಿ ಕೇಂದ್ರ ಉದ್ಯೋಗ ಸೃಷ್ಟಿಯ ತಾಣವಾಗಿದ್ದರೂ ವ್ಯವಸ್ಥೆಯ ಲೋಪದಿಂದ ಮಣ್ಣಾಗಿ ಹೋಗುತ್ತಿದೆ.

1989ರಲ್ಲಿ ಉದ್ಘಾಟನೆ
1989ರಲ್ಲಿ ಜಿ.ಪಂ. ಅಧ್ಯಕ್ಷ ಸಂಕಪ್ಪ ರೈ ಅವರ ಸೇವಾ ಅವಧಿಯಲ್ಲಿ ಈ ತರಬೇತಿ ಕೇಂದ್ರ ಉದ್ಘಾಟನೆಯಾಗಿತ್ತು. ತರಬೇತಿಯನ್ನು ಅತ್ಯಂತ ಉತ್ತಮವಾಗಿ ನೀಡುತ್ತಿತ್ತು. ಹಲವಾರು ಬ್ಯಾಚ್‌ಗಳ ವಿದ್ಯಾರ್ಥಿಗಳು ತರಬೇತಿ ಪಡೆದು ಉದ್ಯೋಗಕ್ಕೂ ಸೇರ್ಪಡೆ ಆಗಿದ್ದರು.

ತಾ.ಪಂ. ಕೈಗಾರಿಕಾ ಇಲಾಖೆಯ ಅಧಿಕಾರಿ ಸುಬ್ರಹ್ಮಣ್ಯ ತಂತ್ರಿ, ಸಹಾಯಕ ಬಾಲಕೃಷ್ಣ ರಾವ್‌ ಅವರ ಮುತುವರ್ಜಿಯಿಂದ ವೇಣೂರು ಮಂಜುನಾಥೇಶ್ವರ ಐಟಿಐಯ ಶಿಕ್ಷಕ ಜಾಕೋಬ್‌ ಮತ್ತು ವಿನ್ಸಿ ಡಿ’ಸೋಜಾ ಅವರ ತಂಡ ಪ್ರಥಮ ಬ್ಯಾಚ್‌ನ 30 ವಿದ್ಯಾರ್ಥಿಗಳಿಗೆ ತರಬೇತಿ ನೀಡಿತ್ತು.
ಈ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆಯುವ ವಿದ್ಯಾರ್ಥಿಗಳಿಗೆ ಇಲ್ಲೇ ಉಚಿತ ವಾಗಿ ಹಾಸ್ಟೆಲ್‌ ಕೂಡ ನಿರ್ಮಿಸಿದ್ದರು.

ಅದು ಕೂಡ ನಿರ್ವಹಣೆ ಇಲ್ಲದೆ ಬಿದ್ದು ಹೋಗಿದೆ. ತರಬೇತಿ ಕೇಂದ್ರ ಕಾರ್ಯ ಚಟುವಟಿಕೆ ನಿಲ್ಲುತ್ತಿದ್ದಂತೆ ಈ ಕೇಂದ್ರದಲ್ಲಿ ಇದ್ದಂತಹ ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ. ವರ್ಕ್‌ಶಾಪ್‌ನಲ್ಲಿ ಅರಣ್ಯ ಇಲಾಖೆಯವರು ದುರಸ್ತಿಗಾಗಿ ನೀಡಿರುವ ಜೀಪ್‌ ತುಕ್ಕು ಹಿಡಿದಿದೆ. ಅದರ ಬಿಡಿಭಾಗಗಳು ಕಳವಾಗಿವೆ.

Advertisement

ಕಟ್ಟಡವು ಗುಜರಿ ಸಾಮಗ್ರಿ ಸಂಗ್ರಹಕ್ಕೆ, ಭಿಕ್ಷುಕರ, ನಿರ್ಗತಿಕರ, ಕುಡುಕರ ವಸತಿಯಾಗಿ ಬೇಕಾಬಿಟ್ಟಿ ಎಂಬಂತಾಗಿದೆ. ರಾತ್ರಿ ಹೊತ್ತಿಗೆ ಅಕ್ರಮ ಕೂಟಕ್ಕೆ, ಜುಗಾರಿ ಅಡ್ಡೆಯಾಗಿಯೂ ಬಳಕೆ ಆಗುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ.

ಭಾವಚಿತ್ರ ವಿವಾದ
ಈ ಸಂಸ್ಥೆಯಲ್ಲಿ ವಾಹನ ದುರಸ್ತಿ, ಜನರಲ್‌ ಎಂಜಿನಿಯರಿಂಗ್‌ ಹಾಗೂ ಪಂಪ್‌ ದುರಸ್ತಿ ವಿಭಾಗದಲ್ಲಿ ತರಬೇತಿ ನೀಡಲಾಗುತ್ತಿತ್ತು. 5 ಬ್ಯಾಚ್‌ಗಳು ಹೊರ ಬಂದಿದ್ದವು. ತರಬೇತಿ ಕೇಂದ್ರದ ಗೋಡೆಯಲ್ಲಿ ಶಿಕ್ಷಕರೋರ್ವರು ಭಾವಚಿತ್ರವನ್ನು ಹಾಕಿದ್ದಾರೆ ಎಂಬ ವಿವಾದ ಉಂಟಾಗಿ ಸ್ಥಳೀಯರ ಹಾಗೂ ತರಬೇತಿ ಕೇಂದ್ರದ ನಡುವೆ ಗಲಾಟೆಗಳು ನಡೆದು ಈ ಕೇಂದ್ರ ಸ್ಥಗಿತಗೊಂಡಿತ್ತು.

 ಸ್ಥಳೀಯರಲ್ಲಿ ಸಮಾಲೋಚನೆ
ಕಡೇಶಿವಾಲಯ ಕುಶಲಕರ್ಮಿ ಕೈಗಾರಿಕಾ ತರಬೇತಿ ಕೇಂದ್ರ
ಪುನಃ ಆರಂಭಿಸಲು ಸ್ಥಳೀಯವಾಗಿ ಸಾಕಷ್ಟು ವಿದ್ಯಾರ್ಥಿಗಳು ಸಿಗುವುದು ಕಷ್ಟ. ರೈತರಿಗೆ ಪೂರಕ ನಿರ್ದಿಷ್ಟ ಉದ್ಯಮ ಯೋಜನೆ ರೂಪಿಸಿ ಅದಕ್ಕೆ ಸದ್ರಿ ಕೇಂದ್ರವನ್ನು ಬಳಸಬಹುದು. ಈ ಹಿಂದೆ ಸದ್ರಿ ಕೇಂದ್ರದ ಪರಿಶೀಲನೆ ಮಾಡಿದ್ದೆ. ಸ್ಥಳೀಯರಲ್ಲಿ ಸಮಾಲೋಚನೆ ಮಾಡಿ ಅರ್ಹ ಕ್ರಮವನ್ನು ಕೈಗೊಳ್ಳಬೇಕಿದೆ.
– ರಾಜೇಶ್‌ ನಾೖಕ್‌ ಉಳಿಪ್ಪಾಡಿಗುತ್ತು
ಶಾಸಕರು

 ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದರೆ ತೆರೆಯಬಹುದು
ಮುಚ್ಚಿರುವ ತರಬೇತಿ ಕೇಂದ್ರವನ್ನು ತೆರೆಯಲು ಸಾಕಷ್ಟು ಸಿಬಂದಿ ನಮ್ಮಲ್ಲಿಲ್ಲ. ಸರಕಾರ ಯಾವುದೇ ಹೊಸ ಆಯ್ಕೆಗೆ ಅನುಮತಿ ನೀಡುವುದಿಲ್ಲ. ಸ್ಥಳೀಯ ಶಾಸಕರು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ ಸೂಕ್ತ ಕ್ರಮಕ್ಕೆ ಮುಂದಾದಲ್ಲಿ ಕೇಂದ್ರ ತೆರೆಯಬಹುದು. ಸದ್ಯದ ಸ್ಥಿತಿಯಲ್ಲಿ ಸಂಪನ್ಮೂಲ, ಅರ್ಹ ತರಬೇತಿದಾರರನ್ನು ವಿಭಾಗ ಹೊಂದಿಲ್ಲ. ಅಲ್ಲಿದ್ದ ಸರಕಾರಿ ಸೊತ್ತುಗಳನ್ನು ಬನ್ನಡ್ಕ ಕೇಂದ್ರಕ್ಕೆ ಸ್ಥಳಾಂತರಿಸಿ ದಶಕಗಳು ಕಳೆದಿವೆ. ಜಮೀನು ಇಲಾಖೆಯ ಹೆಸರಲ್ಲಿದೆ.
 - ಮಂಜುನಾಥ ಹೆಗ್ಡೆ, ಉಪ ನಿರ್ದೇಶಕರು
ಖಾದಿ ಮತ್ತು ಗ್ರಾಮೋದ್ಯೋಗ, ಜಿ.ಪಂ. ಕೈಗಾರಿಕಾ ವಿಭಾಗ

 ಮರು ಸ್ಥಾಪನೆಯಾಗಲಿ
ಈ ತರಬೇತಿ ಕೇಂದ್ರವನ್ನು ಗ್ರಾ.ಪಂ.ಗೆ ಹಸ್ತಾಂತರ ಮಾಡಿ ಮರು ಸ್ಥಾಪಿಸಲಿ. ಜಿ.ಪಂ. ಕೈಗಾರಿಕಾ ಎಂಜಿನಿಯರಿಂಗ್‌ ವಿಭಾಗದಿಂದ ಯಾವುದಾದರೂ ಒಂದು ಕ್ರಮ ಆದರೆ ಗ್ರಾಮಕ್ಕೆ ಒಂದು ವರವಾಗುವುದು. ಸರಕಾರ ಈ ನಿಟ್ಟಿನಲ್ಲಿ ಮುತುವರ್ಜಿ ವಹಿಸಬೇಕು. ಸುಮಾರು 1 ಎಕ್ರೆಗಳಿಗಿಂತಲೂ ಹೆಚ್ಚು ಜಮೀನು ಈ ಕೇಂದ್ರಕ್ಕೆ ಇದೆ. ಸರಕಾರ ಮನಸ್ಸು ಮಾಡಿ ತರಬೇತಿ ಕೇಂದ್ರವನ್ನು ನಡೆಸಬೇಕು.
 - ವೀರಪ್ಪ ನಾಯ್ಕ, ಗಂಡಿಬಾಗಿಲು (ಸ್ಥಳೀಯರು)

-  ರಾಜಾ ಬಂಟ್ವಾಳ

Advertisement

Udayavani is now on Telegram. Click here to join our channel and stay updated with the latest news.

Next