ಬೆಂಗಳೂರು: ಏಡ್ಸ್ನಂತಹ ಮಹಾಮಾರಿಗೂ ಗೋವಿನಲ್ಲಿ ಪರಿಹಾರವಿದೆ ಎನ್ನುವುದನ್ನು ಅಮೆರಿಕದ ಟೆಕ್ಸಾಸ್ ಎಎನ್ಎಂ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡು ಹಿಡಿದಿದ್ದಾರೆ. ಹೀಗಿರುವಾಗ ಗೋವಿನ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದ್ದಾರೆ.
ಶನಿವಾರ ಬನ್ನೇರುಘಟ್ಟ ರಸ್ತೆಯ ವಿಜಯಾಬ್ಯಾಂಕ್ ಕಾಲೋನಿಯ ಆಟದ ಮೈದಾನದಲ್ಲಿ ನಡೆದ ಅಭಯಾಕ್ಷರ- ಹಾಲುಹಬ್ಬ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದ ಶ್ರೀಗಳು, ಟೆಕ್ಸಾಸ್ ಎಎನ್ಎಂ ಇಂಟರ್ ನ್ಯಾಷನಲ್ ಏಡ್ಸ್ ಪ್ರಿವೆನನ್ ಇನೀಶಿಯೇಟಿವ್ ವಿವಿ ಸಂಶೋಧನಾ ಕೇಂದ್ರದ ಸಂಶೋಧಕರು ಈ ಕುರಿತ ನಿರ್ಧಾರಕ್ಕೆ ಬಂದಿದ್ದಾರೆ.
ಕರುವಿನ ಶರೀರಕ್ಕೆ ಏಡ್ಸ್ ವೈರಸ್ಗಳನ್ನು ನೀಡಿದಾಗ, ಅದು ಕರುವಿನ ಶರೀರದಲ್ಲಿ ಬದುಕುವುದಿಲ್ಲ ಎನ್ನುವುದನ್ನು ಸಂಶೋಧನೆ ಮೂಲಕ ದೃಢಪಡಿಸಿದ್ದಾರೆ. ಈ ಪ್ರತಿರೋಧವನ್ನು ಹಸುವಿನ ಶರೀರದಿಂದ ಪ್ರತ್ಯೇಕಿಸಿ, ಲಸಿಕೆ ರೂಪದಲ್ಲಿ ನೀಡಬಹುದು ಎಂದು ಸಾಬೀತುಪಡಿಸಿದ್ದಾರೆ ಎಂದು ವಿವರಿಸಿದರು.
ಏಡ್ಸ್ ನಿಯಂತ್ರಿಸುವ ರೋಗ ನಿವಾರಕ ಶಕ್ತಿ ಗೋಮೂತ್ರ, ಗೋಮಯ, ಗೋವಿನ ಹಾಲಿನಲ್ಲಲ್ಲ, ಗೋವಿನ ಶರೀರದಲ್ಲಿದೆ. ನಮ್ಮ ದೇಶದ ಅತ್ಯುತ್ತಮ ತಳಿಗಳ ಮೇಲೆ ಈ ಪರೀಕ್ಷೆ ಮಾಡಿದರೆ ನೂರು ಪಟ್ಟು ಉತ್ತಮ ಫಲಿತಾಂಶ ಪಡೆಯಬಹುದು. ಅಂತಹ ಗೋವುಗಳನ್ನು ಉಳಿಸಿಕೊಳ್ಳುವುದು ಕೋಮುವಾದ, ಅಂದಾಭಿಮಾನ ಅಥವಾ ಮೂಢನಂಬಿಕೆಯೇ ಎಂದು ಪ್ರಶ್ನಿಸಿದರು.
ಶಾಸಕ ಸತೀಶ್ ರೆಡ್ಡಿ ಮಾತನಾಡಿ, ವ್ಯವಸಾಯ ಬೆಂಗಳೂರಿನಿಂದ ನಶಿಸಿದ್ದು, ಬೆಂಗಳೂರು ಐಟಿ-ಬಿಟಿ ಹಬ್ಆಗಿ ಬೆಳೆಯುತ್ತಿದೆ. ಆದರೆ, ಎಲ್ಲರೂ ಹಳ್ಳಿಗಳಿಂದ ಬಂದವರೇ. ಎಲ್ಲರೂ ಗೋವಿನ ಹಾಲು ಕುಡಿದು ಬೆಳೆದವರು. ಆದ್ದರಿಂದ ಗೋಸಂರಕ್ಷಣೆ ಎಲ್ಲರ ಕರ್ತವ್ಯವಾಗಬೇಕು ಎಂದ ಅವರು, ಸರ್ಕಾರಗಳು ಗೋರಕ್ಷಣೆಗೆ ಒತ್ತು ನೀಡುವ ಬದಲು ಕಸಾಯಿಖಾನೆಗೆ ಕಳುಹಿಸುವ ಕಾರ್ಯಕ್ಕೆ ಕುಮ್ಮಕ್ಕು ನೀಡುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಹಾಲುಹಬ್ಬದಲ್ಲಿ ಪಾಲ್ಗೊಂಡ ಸಾವಿರಾರು ಮಂದಿಗೆ ಪರಿಶುದ್ಧ ದೇಸಿಹಾಲಿನ ಅಮೃತವನ್ನು ಉಚಿತವಾಗಿ ವಿತರಿಸಲಾಯಿತು. ಗಾಯಕ ಶಶಿಧರ ಕೋಟೆ ಗೋವಿನ ಬಗ್ಗೆ ಸ್ವರಚಿತ ಗೀತೆ ಹಾಡಿದರು. ಕಾರ್ಯಕ್ರಮಕ್ಕೆ ಮುನ್ನ ಸುತ್ತಮುತ್ತಲ ಪ್ರದೇಶಗಳಲ್ಲಿ ಎತ್ತಿನಗಾಡಿಗಳ ಮೆರವಣಿಗೆಮತ್ತು ಗೋರಥ ಸಂಚರಿಸಿ ಗೋಜಾಗೃತಿ ಮೂಡಿಸಿತು. ಹಾಲುಹಬ್ಬ ಸಂಚಾಲನಾ ಸಮಿತಿ ಕಾರ್ಯಾಧ್ಯಕ್ಷ ಸುಖಾನಂದ ಶೆಟ್ಟಿ, ಶ್ರೀಧರ ಹೆಗಡೆ ಗೋಸಂದೇಶ ನೀಡಿದರು.