Advertisement

ಜ್ವರವಾಗಿ ಬದಲಾಗುತ್ತಿದೆಯೇ ಕೋವಿಡ್‌?

02:30 PM Jan 20, 2022 | Team Udayavani |

ಈಗ ನಮಗೆ ಬಂದಿರುವುದು, ಕೊರೊನಾವಾ ಅಥವಾ ಜಸ್ಟ್‌ ಜ್ವರವಾ? ಇಂಥದ್ದೊಂದು ಗೊಂದಲ ಕೇವಲ ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತನ್ನೇ ಕಾಡುತ್ತಿದೆ. ಒಮಿಕ್ರಾನ್‌ ಹರಡುತ್ತಿರುವ ರೀತಿ, ಅದು ಜನರ ಮೇಲೆ ಬೀರುತ್ತಿರುವ ಪರಿಣಾಮವನ್ನು ಗಮನಿಸಿ ಈಗಾಗಲೇ ಒಮಿಕ್ರಾನ್‌ ಅಂಥ ಅಪಾಯ ತಂದೊಡ್ಡುವ ರೂಪಾಂತರಿಯೇನಲ್ಲ ಎಂದು ತಜ್ಞರು ಹೇಳುತ್ತಿದ್ದಾರೆ. ಹಾಗಾದರೆ ಇದನ್ನು ಕೇವಲ ಜ್ವರ ಎಂದೇ ಪರಿಗಣಿಸುವುದಾ ಎಂಬ ಬಗ್ಗೆ ಈಗಾಗಲೇ ಐರೋಪ್ಯ ಒಕ್ಕೂಟದಲ್ಲಿ ಚರ್ಚೆಯಾಗುತ್ತಿದೆ. ಅದರ ಮೇಲೊಂದು ನೋಟ ಇಲ್ಲಿದೆ..

Advertisement

ಕೊರೊನಾ Vs ಜ್ವರ
2019ರಲ್ಲಿ ಕೊರೊನಾ ಆರಂಭವಾದಾಗ ಇದರ ಲಕ್ಷಣ ಗಳು ಜ್ವರ, ತಲೆನೋವು, ಶೀತ, ಗಂಟಲು ಕೆರೆತಗಳಾಗಿ ದ್ದವು. 2ನೇ ಅಲೆಯಲ್ಲಿ ಉಸಿರಾಟ ಸಮಸ್ಯೆ, ಮೈಕೈ ನೋವು ಇತ್ಯಾದಿ ಹಿಂದಿನ ಲಕ್ಷಣಗಳ ಜತೆಗೆ ಸೇರಿ ಕೊಂಡವು. ಈಗ ಜ್ವರ, ಶೀತ, ಗಂಟಲು ಕೆರೆತ, ಕೆಮ್ಮು, ತಲೆನೋವು, ಸುಸ್ತು, ಮೈಕೈನೋವು ಒಮಿಕ್ರಾನ್‌ನ ಲಕ್ಷಣಗಳಾಗಿವೆ. ವಿಶೇಷವೆಂದರೆ ಒಮಿಕ್ರಾನ್‌ ಕಾಣಿಸಿ ಕೊಂಡಿದ್ದೇ ಡಿಸೆಂಬರ್‌ ಆರಂಭದಲ್ಲಿ. ಈ ಅವಧಿ ಭಾರತವೂ ಸೇರಿ ಜಗತ್ತಿನ ಹಲವು ಭಾಗಗಳಲ್ಲಿ ಶೀತ ಬಾಧಿಸುವಂಥದ್ದು. ಅಲ್ಲದೆ ದಿಢೀರನೇ ಮಳೆಗಾಲದಿಂದ ಚಳಿಗಾಲಕ್ಕೆ ಜನ ಹೊಂದಿಕೊಳ್ಳುವಾಗ ಇಂಥ ಶೀತ, ಜ್ವರ, ಕೆಮ್ಮು ಕಾಣಿಸಿಕೊಳ್ಳುವುದು ಮಾಮೂಲಿ. ಈಗ ಒಮಿಕ್ರಾನ್‌ ಲಕ್ಷಣಗಳೂ ಇದೇ ರೀತಿಯಲ್ಲೇ ಇವೆ. ವಾಸಿಯಾಗಲೂ ಹೆಚ್ಚು ದಿನ ತೆಗೆದುಕೊಳ್ಳುತ್ತಿಲ್ಲ.

ಇದು ಜ್ವರವಷ್ಟೇ..
ಇದು ಐರೋಪ್ಯ ಒಕ್ಕೂಟದ ಸ್ಪೇನ್‌ನ ಪ್ರಧಾನಿಯ ಘೋಷಣೆ. ಅಲ್ಲದೆ ಇಡೀ ಯೂರೋಪ್‌ನಲ್ಲಿ ಕೊರೊನಾವನ್ನು ಜ್ವರವಾಗಿ ಪರಿಗಣಿಸಬೇಕು ಎಂಬ ವಾದ ಬಲವಾಗಿ ಏಳುತ್ತಿದೆ. ಇದಕ್ಕೆ ಪೂರಕವಾಗಿಯೇ ಸ್ಪೇನ್‌ ಪ್ರಧಾನಿ ಪೆಡೊ›à ಸ್ಯಾಂಚೇಜ್‌ ಕೊರೊನಾವನ್ನು ಜ್ವರವಾಗಿ ಪರಿಗಣಿಸೋಣ ಎಂದು ಹೇಳಿದ್ದಾರೆ. ಪ್ರತಿ ಬಾರಿಯೂ ಕೊರೊನಾ ಬಂದಾಗ, ಹೆದರುವುದು, ಲಾಕ್‌ಡೌನ್‌ ಮಾಡುವುದು ಮುಂದುವರಿದೇ ಇದೆ. ಇನ್ನು ಈ ರೀತಿ ಮಾಡುವುದು ಬೇಡ. ಜ್ವರದ ರೀತಿ ಪರಿಗಣಿಸಿ ಇದಕ್ಕೆ ಚಿಕಿತ್ಸೆ ನೀಡೋಣ ಎಂದಿದ್ದಾರೆ. ಇದಕ್ಕೆ ಐರೋಪ್ಯ ಒಕ್ಕೂಟದ ಬೇರೆ ಬೇರೆ ದೇಶಗಳೂ ಸಹಮತ ವ್ಯಕ್ತಪಡಿಸುತ್ತಿವೆ. ಉದಾಹರಣೆ ಎಂದರೆ, ಫ್ರಾನ್ಸ್‌, ಜರ್ಮನಿಯಂಥ ದೇಶಗಳಲ್ಲಿ ದಿನಕ್ಕೆ 1 ಲಕ್ಷ ದಿಂದ 3 ಲಕ್ಷದ ವರೆಗೆ ಕೊರೊನಾ ಪಾಸಿಟಿವ್‌ ಪ್ರಕರಣ ಕಂಡು ಬಂದರೂ ನಿರ್ಬಂಧ, ಲಾಕ್‌ಡೌನ್‌ ಅಥವಾ ಇತರ ಪ್ರತಿಬಂಧಕ ಕ್ರಮಗಳನ್ನು ಅನುಸರಿಸಿಲ್ಲ.

ಐದೇ ದಿನಕ್ಕೇ ಹೋಂ ಐಸೊಲೇಶನ್‌ ಅಂತ್ಯ?
ಬ್ರಿಟನ್‌ನಲ್ಲಿ ಕಳೆದ ವರ್ಷವೇ ಅಲ್ಲಿನ ಪ್ರಧಾನಿ ಬೋರಿಸ್‌ ಜಾನ್ಸನ್‌, ಜನ ಕೊರೊನಾದ ಜತೆ ಬದುಕುವುದನ್ನು ಕಲಿಯಬೇಕು ಎಂದು ಹೇಳಿದ್ದರು. ಈಗಲೂ ಅಲ್ಲಿ ಭಾರೀ ಪ್ರಮಾಣದಲ್ಲಿ ಕೇಸುಗಳು ಕಂಡು ಬಂದಿವೆ. ಆದರೆ ಈ ಹಿಂದೆ ಘೋಷಿಸಿದಂತೆ ಕಠಿನ ಲಾಕ್‌ಡೌನ್‌ ಘೋಷಿಸದೇ ಕೆಲವೇ ಕೆಲವು ನಿಯಮಗಳನ್ನು ಅನುಸರಿಸಲಾಗಿತ್ತು. ಜತೆಗೆ 10 ದಿನಗಳ ಹೋಂ ಐಸೊಲೇಶನ್‌ ಅವಧಿಯನ್ನು ಏಳು ದಿನಕ್ಕೆ ಇಳಿಸಲಾಯಿತು. ಈಗ ಇದನ್ನು 5 ದಿನಕ್ಕೆ ಇಳಿಸುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅಂದರೆ ಈಗ ಒಮ್ಮೆ ಕೊರೊನಾ ಬಂದರೆ, 5 ದಿನದಲ್ಲೇ ಹೋಗುತ್ತಿದೆ ಎಂಬುದು ಖಚಿತವಾದಂತೆ ಆಗಿದೆ. ಅಷ್ಟೇ ಅಲ್ಲ, ಬ್ರಿಟನ್‌ನ ಶಿಕ್ಷಣ ಸಚಿವರೂ ಕೊರೊನಾ ಪ್ಯಾಂಡೆಮಿಕ್‌ ಅನ್ನು ಎಂಡೆಮಿಕ್‌ ಆಗಿ ಪರಿಗಣಿಸಬೇಕು ಎಂದೇ ಹೇಳಿದ್ದಾರೆ.

ಈಗಲೇ ಜ್ವರವೆಂದು ಘೋಷಿಸಬಹುದೇ?
ಒಮಿಕ್ರಾನ್‌ ಅಷ್ಟೇನೂ ಪ್ರಭಾವ ಹೊಂದಿಲ್ಲ ಎಂದಿರುವ ವಿಶ್ವ ಆರೋಗ್ಯ ಸಂಸ್ಥೆ ಮಾತ್ರ ಇದನ್ನು ಸಾಮಾನ್ಯ ಜ್ವರದಂತೆ ಪರಿಗಣಿಸಬೇಕು ಎಂಬ ವಿಚಾರದಲ್ಲಿ ಸಹಮತ ತೋರುತ್ತಿಲ್ಲ. ಇದು ತೀರಾ ಅವಸರದ ಕ್ರಮ ಎಂದಾಗುತ್ತದೆ, ಈಗಲೇ ಈ ರೀತಿ ಪರಿಗಣಿಸುವುದು ಬೇಡ ಎಂದೇ ಹೇಳುತ್ತಿದೆ. ಒಮಿಕ್ರಾನ್‌ ರೂಪಾಂತರಿ ಶುರುವಾಗಿ ಇನ್ನೂ ಒಂದೂವರೆ ತಿಂಗಳಾಗಿದೆ. ಈಗಲೇ ಇದು ಹೇಗೆ ವರ್ತಿಸುತ್ತಿದೆ ಎಂಬುದನ್ನು ನಿರೀಕ್ಷೆ ಮಾಡುವುದು ತಪ್ಪಾಗುತ್ತದೆ. ಒಂದು ವೇಳೆ ಆರೋಗ್ಯ ವ್ಯವಸ್ಥೆ ಸರಿಯಾಗಿಲ್ಲದ ದೇಶಗಳಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ಕಾಣಿಸಿಕೊಂಡರೆ ಕಷ್ಟವಾಗುತ್ತದೆ ಎಂದೇ ಹೇಳುತ್ತಿದೆ.

Advertisement

ಬಿಲ್‌ಗೇಟ್ಸ್ ವಾದವೂ ಅದೇ
ಜಗತ್ತಿನ ತಾಂತ್ರಿಕ ದೈತ್ಯ, ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕರಯೊಬ್ಬರಾದ ಬಿಲ್‌ಗೇಟ್ಸ್‌ ಕೂಡ ಕೊರೊ ನಾವನ್ನು ಸಾಮಾನ್ಯ ಜ್ವರ ದಂತೆ ಟ್ರೀಟ್‌ ಮಾಡಬ ಹುದು ಎಂದಿದ್ದಾರೆ. ಎಡಿನ್‌ಬರ್ಗ್‌ ವಿವಿಯ ಜಾಗತಿಕ ಸಾರ್ವಜನಿಕ ಆರೋಗ್ಯ ವಿಭಾಗದ ಮುಖ್ಯಸ್ಥರಾದ ದೇವಿ ಶ್ರೀಧರ್‌ ಜತೆ ಸಂವಾದದ ವೇಳೆ ಈ ಅಂಶ ಪ್ರಸ್ತಾವವಾಗಿದೆ. ಸದ್ಯ ಒಮಿಕ್ರಾನ್‌ ಪಸರಿಸುತ್ತಿ ದ್ದರೂ ಲಸಿಕೆ ಪಡೆಯದವ ರಲ್ಲಿ ಮಾತ್ರ ಹೆಚ್ಚಿನ ಪರಿಣಾಮ ಬೀರುತ್ತಿದೆ. ಒಮ್ಮೆ ಎಲ್ಲರಿಗೂ ಬಂದು ಹೋದರೆ ಅನಂತರ ಅದನ್ನು ಜ್ವರದಂತೆ ಪರಿಗಣಿಸ ಬಹುದು ಎಂದಿದ್ದಾರೆ.

ಬಡದೇಶಗಳಲ್ಲೇ ಸಂಕಷ್ಟ
ಕೊರೊನಾದ ಹೊಸ ರೂಪಾಂತರಿ ಒಮಿಕ್ರಾನ್‌ ಹರಡುವಿಕೆಯಲ್ಲಿ ವೇಗ ಪಡೆದಿರಬಹುದು, ಆದರೆ ಇದು ಈ ಬಾರಿ ಹೆಚ್ಚು ಕಡಿಮೆ ಎಲ್ಲರಿಗೂ ಬಂದು ಹೋಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದು ಕೆಲವು ವೈದ್ಯರು ಹೇಳುತ್ತಿದ್ದಾರೆ. ಜತೆಗೆ ಕೊರೊನಾ ನಿರ್ಮೂಲನೆಯಲ್ಲಿ ಲಸಿಕೆ ಪಾತ್ರ ದೊಡ್ಡದು ಎಂಬುದು ಇವರ ಅಭಿಪ್ರಾಯ. ಆದರೆ ಲಸಿಕೆ ವಿಚಾರದಲ್ಲಿ ಸಿರಿವಂತ ಮತ್ತು ಬಡದೇಶಗಳ ಮಧ್ಯೆ ಅಜ ಗಜಾಂತರವಿದೆ. ಸದ್ಯಕ್ಕೆ ಅಂದರೆ ಈ ವರ್ಷ ಸರಿಪಡಿ ಸುವುದು ಅಸಾಧ್ಯ. ಇದಕ್ಕೆ ಕಾರಣವೂ ಇದೆ. ಸಿರಿವಂತ ದೇಶಗಳಲ್ಲಿ ಎರಡೂ ಡೋಸ್‌ ಮುಗಿಸಿ,   ಕೆಲವರು ಮೂರನೇ, ಇನ್ನೂ ಕೆಲವರು 4ನೇ ಡೋಸ್‌ ನೀಡುತ್ತಿದ್ದಾರೆ. ಆದರೆ ಬಡ ದೇಶಗಳ ಶೇ.8.9 ಮಂದಿ ಮಾತ್ರ ಈವರೆಗೆ ಸಿಂಗಲ್‌ ಡೋಸ್‌ ಲಸಿಕೆ ಪಡೆದಿದ್ದಾರೆ. ಇವರೆಲ್ಲರೂ ಲಸಿಕೆ ಪಡೆದ ಮೇಲೆ ಕೊರೊನಾ ಅಂತ್ಯದ ಬಗ್ಗೆ ಹೇಳಬಹುದು ಎನ್ನುತ್ತಾರೆ.

ಹಾಗಾದರೆ ಮಾಡಬೇಕಾದ್ದು ಏನು?
ಕೊರೊನಾಗೆ ಅಂತ್ಯ ಹಾಡಬೇಕಾದರೆ ಸಿರಿವಂತ ದೇಶಗಳು, ಬಡದೇಶಗಳಿಗೆ ನೆರವು ನೀಡಬೇಕು. ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ಮೂರು ಮತ್ತು ನಾಲ್ಕು ಅಥವಾ ಐದನೇ ಡೋಸ್‌ ನೀಡುತ್ತಿರುವುದು ಉತ್ತಮ ಕೆಲಸವಲ್ಲ. ಇದರಿಂದ ಉಪಯೋಗವಾಗುತ್ತದೆ ಎಂದು ಎಲ್ಲಿಯೂ ಹೇಳಿಲ್ಲ. ಮುಂದುವರಿದ ದೇಶಗಳು, ತಮ್ಮ ಜನಸಂಖ್ಯೆಗೆ ಪದೇ ಪದೆ ಡೋಸ್‌ ನೀಡುವುದಕ್ಕಿಂತ, ತಮ್ಮಲ್ಲಿರುವ ಡೋಸ್‌ಗಳನ್ನು ಬಡದೇಶಗಳಿಗೆ ಪೂರೈಸಬೇಕು. ಈ ವಿಚಾರದಲ್ಲಿ ಎಲ್ಲರೂ ಒಗ್ಗೂಡಿದರೆ ಮಾತ್ರ ಕೊರೊನಾ ನಿರ್ಮೂಲನೆ ಮಾಡಬಹುದು ಎಂದು ಹೇಳುತ್ತದೆ.

2022ರಲ್ಲೇ ಅಂತ್ಯ
ಕೊರೊನಾ 2022ರಲ್ಲೇ ಸಂಪೂರ್ಣ ನಿಯಂತ್ರಣಕ್ಕೆ ಬರಬಹುದು ಎಂಬ ಆಶಾಭಾವ ವಿಶ್ವ ಆರೋಗ್ಯ ಸಂಸ್ಥೆಯದ್ದು. ಈ ವರ್ಷ ಎಲ್ಲರೂ ಮನಸ್ಸು ಮಾಡಿದರೆ ಮಾತ್ರ, ಕೊರೊನಾಕ್ಕೆ ಅಂತ್ಯ ಹಾಡಬಹುದು. ಈ ವರ್ಷ ಆಗಲಿಲ್ಲವೆಂದಾದರೆ ಮುಂದೆಂದೂ ಅದನ್ನು ನಿಯಂತ್ರಿಸಲಾಗದು ಎಂದಿದೆ. ನಿಮ್ಮಲ್ಲಿನ ಹೆಚ್ಚುವರಿ ಲಸಿಕೆಯನ್ನು ಬಡ ದೇಶಗಳಿಗೆ ರವಾನಿಸಿ ಎಂಬುದು ಡಬ್ಲ್ಯುಎಚ್‌ಒ ಕೋರಿಕೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next