Advertisement

“ಭಾರತ್‌ ಮಾತಾ ಕಿ ಜೈ” ಅಂತ ಘೋಷಣೆ ಕೂಗುವುದು ಅಪರಾಧವೇ? ಹೈಕೋರ್ಟ್‌ ಹೇಳಿದ್ದೇನು?

11:36 PM Sep 27, 2024 | Team Udayavani |

ಬೆಂಗಳೂರು: “ಭಾರತ್‌ ಮಾತಾ ಕಿ ಜೈ’ ಘೋಷಣೆಯು ಸಾಮರಸ್ಯವನ್ನು ಉತ್ತೇಜಿಸುತ್ತದೆಯೇ ಹೊರತು ವೈಷಮ್ಯ ಹರಡುವುದಿಲ್ಲ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್‌, ಮಸೀದಿ ಮುಂದೆ ಪ್ರತಿಭಟನೆ ನಡೆಸಿ “ಭಾರತ್‌ ಮಾತಾ ಕಿ ಜೈ’ (Bharat Mata Ki Jai) ಎಂದು ಘೋಷಣೆ ಕೂಗಿದ ಸಂಬಂಧ 2 ಧರ್ಮಗಳ ವಿರುದ್ಧ ದ್ವೇಷ ಹರಡುವ ಆರೋಪದ ಮೇಲೆ ಮಂಗಳೂರಿನ ಐವರು ಹಿಂದೂ ಕಾರ್ಯಕರ್ತರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ರದ್ದುಪಡಿಸಿದೆ.

Advertisement

ತಮ್ಮ ವಿರುದ್ಧದ ಪ್ರಕರಣ ರದ್ದುಪಡಿಸುವಂತೆ ಕೋರಿ ಮಂಗಳೂರಿನ ಸುರೇಶ್‌, ಎಂ. ವಿನಯ್‌ ಕುಮಾರ್‌, ಸುಭಾಷ್‌, ರಂಜನ್‌ ಅಲಿಯಾಸ್‌ ರಂಜಿತ್‌ ಮತ್ತು ಧನಂಜಯ ಅವರು ಸಲ್ಲಿಸಿದ್ದ ಅರ್ಜಿಯನ್ನು ಮಾನ್ಯ ಮಾಡಿರುವ ನ್ಯಾ| ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಆದೇಶ ನೀಡಿದೆ.

ಈ ಪ್ರಕರಣ ಅರ್ಜಿದಾರರು ಹೂಡಿದ್ದ ಪ್ರಕರಣಕ್ಕೆ ಪ್ರತಿಯಾಗಿ ಹೂಡಿದ್ದ ಪ್ರಕರಣವಾಗಿದೆ, ಇದರಲ್ಲಿ ಸೆಕ್ಷನ್‌ 153ಎ ಅನ್ವಯವಾಗುವ ಒಂದೇ ಒಂದು ಅಂಶವೂ ಇಲ್ಲ. ವಾಸ್ತವವಾಗಿ ಧರ್ಮ, ಭಾಷೆ ಸೇರಿದಂತೆ ನಾನಾ ಅಂಶಗಳನ್ನು ಮುಂದಿಟ್ಟುಕೊಂಡು ಬೇರೆ ಬೇರೆ ಗುಂಪುಗಳ ನಡುವೆ ದ್ವೇಷ ಭಾವನೆ ಮೂಡಿಸುವ ಘಟನೆ ನಡೆದಿರ ಬೇಕಾಗುತ್ತದೆ. ಆದರೆ ಇಲ್ಲಿ ಅಂತಹ ಘಟನೆ ನಡೆದಿಲ್ಲ. ಈ ಪ್ರಕರಣ ಐಪಿಸಿ ಸೆಕ್ಷನ್‌ 153ರ ದುರ್ಬಳಕೆಗೆ ತಾಜಾ ಉದಾಹರಣೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಇದು ದೂರು-ಪ್ರತಿದೂರಿನ ಪ್ರಕರಣ, ಅರ್ಜಿ ದಾರರು ಕೇವಲ ಭಾರತ್‌ ಮಾತಾ ಕಿ ಜೈ ಎಂದು ಘೋಷಣೆ ಕೂಗಿದ್ದಾರೆ ಹಾಗೂ ಪ್ರಧಾನಮಂತ್ರಿ ಯನ್ನು ಹೊಗಳಿದ್ದಾರೆ. ದೂರಿನಲ್ಲೂ ಯಾವ ಅಂಶಗಳನ್ನೂ ಉಲ್ಲೇಖೀಸಿಲ್ಲ. ಹಾಗಾಗಿ ಪ್ರಕರಣ ರದ್ದು ಗೊಳಿಸಲಾಗುತ್ತಿದೆ ಎಂದು ನ್ಯಾಯಪೀಠ ಹೇಳಿದೆ.
ಸುಪ್ರೀಂಕೋರ್ಟ್‌ನ ಹಲವು ತೀರ್ಪುಗಳನ್ನು ಉಲ್ಲೇಖೀಸಿರುವ ನ್ಯಾಯಾಲಯ, ವಾಸ್ತವ ಅಂಶಗಳನ್ನು ಪರಿಗಣಿಸಿದರೆ ಭಾರತ್‌ ಮಾತಾ ಕಿ ಘೋಷಣೆ ಕೂಗಿರುವುದು ಕೇವಲ ಸಾಮರಸ್ಯ ಉತ್ತೇಜಿಸುತ್ತದೆಯೇ ಹೊರತು ದ್ವೇಷವನ್ನಲ್ಲ ಎಂದು ಹೇಳಿ ಪ್ರಕರಣವನ್ನು ರದ್ದುಗೊಳಿಸಿ ಆದೇಶ ನೀಡಿದೆ.

ಮಂಗಳೂರಿನ ಕೊಣಾಜೆ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಜೂ. 9ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಅಧಿಕಾರ ಸ್ವೀಕಾರ ಸಮಾರಂಭ ವೀಕ್ಷಣೆ ಬಳಿಕ ವಾಪಸಾಗುತ್ತಿದ್ದ ಕೆಲವರು “ಭಾರತ್‌ ಮಾತಾ ಕಿ ಜೈ’ ಎಂದು ಘೋಷಣೆ ಕೂಗಿದ್ದರು. ಅದನ್ನು ಪ್ರಶ್ನಿಸಿದವರನ್ನು ಬೆದರಿಸಲಾಗಿತ್ತು ಎಂದು ದೂರು ದಾಖಲಾಗಿತ್ತು. ಆರೋಪಿಗಳ ಪರವಾಗಿ ನ್ಯಾಯವಾದಿ ಅರುಣ್‌ಶ್ಯಾಂ ಪುತ್ತೂರು, ಸುಯೋಗ್‌ ಹೇರಳೆ ವಾದಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next