Advertisement

 Anganwadi workers: ಅಂಗನವಾಡಿ ಕಾರ್ಯಕರ್ತೆಯರ ಪದೋನ್ನತಿಯಲ್ಲಿ ಅಕ್ರಮ!

05:32 PM Oct 23, 2023 | Team Udayavani |

ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆಯರ ಸ್ಥಾನಗಳಿಗೆ ಪದೋನ್ನತಿ ನೀಡುವ ವಿಚಾರದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ನಿಯಮವಾಳಿಗಳನ್ನು ಉಲ್ಲಂಘಿಸಿ ಬೇಕಾದವರಿಗೆ ಪದೋನ್ನತಿ ಕೊಡಲು ಅಕ್ರಮವೆಸಗಿದ್ದಾರೆಂಬ ಆರೋಪ ಕೇಳಿ ಬರುತ್ತಿದೆ.

Advertisement

ತಮಗೆ ಬೇಕಾದವರಿಗೆ ಪದೋನ್ನತಿ ಕಲ್ಪಿಸಲು ಭರಪೂರ ಸಹಾಯ ಮಾಡಿರುವ ಇಲಾಖೆ ಅಧಿಕಾರಿಗಳು ಸ್ಥಳೀಯರಿಗೆ ಆದ್ಯತೆ ಕೊಡುವ ಬದಲು ಹುದ್ದೆಗಾಗಿಯೆ ವಾಸಸ್ಥಳ ಹಾಗೂ ಆಧಾರ್‌ ಕಾರ್ಡ್‌ ತಿದ್ದುಪಡಿ ಮಾಡಿಸಿಕೊಂಡ ಬಂದವರಿಗೆ ಪದೋನ್ನತ್ತಿ ಕಲ್ಪಿಸಿರುವುದು ಸಾಕಷ್ಟು ಚರ್ಚೆ ಹಾಗೂ ಅನುಮಾನಕ್ಕೆ ಕಾರಣವಾಗಿದೆ.

ಜಿಲ್ಲೆಯಲ್ಲಿ ಚಿಂತಾಮಣಿ, ಗುಡಿಬಂಡೆ, ಶಿಡ್ಲಘಟ್ಟ, ಗೌರಿಬಿದನೂರು ಸೇರಿದಂಯತೆ ಒಟ್ಟು 22 ಮಂದಿ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದಿರುವ ಆಯ್ಕೆ ಸಮಿತಿ ಸಭೆಯಲ್ಲಿ ಪದೋನ್ನತಿ ನೀಡಿದ್ದು, ಆ ಪೈಕಿ ಚಿಂತಾಮಣಿ ತಾಲೂಕಿನಲ್ಲಿ 7 ಮಂದಿಗೆ ಹಾಗೂ ಶಿಡ್ಲಘಟ್ಟದಲ್ಲಿ ಒಬ್ಬರಿಗೆ ಅಕ್ರಮವಾಗಿ ದಾಖಲೆಗಳನ್ನು ತಿದ್ದುಪಡಿ ಮಾಡಿ ಅಂಗನವಾಡಿ ಕಾರ್ಯಕರ್ತೆಯರ ಸ್ಥಾನಗಳಿಗೆ ಪದೋನ್ನತಿ ಕೊಟ್ಟಿದ್ದು ಪದೋನ್ನತಿ ಕೊಡಲು ಅನುಸರಿಸಬೇಕಾದ ಮಾನದಂಡಗಳನ್ನು ಗಾಳಿ ತೂರಿ ಆಯ್ಕೆ ಸಮಿತಿ ಅರ್ಹರಿಗೆ ಕೊಡುವ ಬದಲು ತಮಗೆ ಬೇಕಾದವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಅರ್ಹರಿದ್ದರೂ ಪರಿಗಣಿಸಿಲ್ಲ: 3 ಕಿ. ಮೀ ವ್ಯಾಪ್ತಿಯಲ್ಲಿ ಅರ್ಹರು ಇದ್ದರೆ ಪರಿಗಣಿಸಬೇಕು, ಆದರೆ ಇಲಾಖೆ ಅಧಿಕಾರಿಗಳು ಯಾವ ಉದ್ದೇಶಕ್ಕೋ ಏನು ಅರ್ಹರಿದ್ದರೂ ಕೆಲವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಅವರ ವಾಸ ಗ್ರಾಮೀಣ ಭಾಗದಲ್ಲಿದ್ದರೂ ನಗರ ಭಾಗದಲ್ಲಿ ಆಧಾರ್‌ ಹಾಗೂ ವಾಸಸ್ಥಳ ಪ್ರಮಾಣ ಪತ್ರ ವಿತರಿಸಿ ಪದೋನ್ನತಿಗೆ ಸಹಕಾರ ಮಾಡಿದ್ದಾರೆ. ಈ ಬಗ್ಗೆ ತನಿಖೆ ಆಗಬೇಕು, ಪಾರರ್ಶಕವಾಗಿ ಪದೋನ್ನತಿ ಕಲ್ಪಿಸಬೇಕೆಂಬ ಆಗ್ರಹ ಜಿಲ್ಲೆಯ ಅಂಗನವಾಡಿ ನೌಕರರ ಸಂಘದಿಂದ ಪದಾಧಿಕಾರಿಗಳಿಂದ ಕೇಳಿ ಬರುತ್ತಿದೆ. ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಸೂಕ್ತ ತನಿಖೆ ನಡೆಸುವುದು ಅಗತ್ಯವಾಗಿದೆ.

ಮಹಿಳಾ ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಹೇಳಿದ್ದೇನು?: ಪದೋನ್ನತಿಯಲ್ಲಿ ಆಗಿರುವ ಅಕ್ರಮಗಳ ಆರೋಪದ ಕುರಿತು ಉದಯವಾಣಿಗೆ ಪ್ರತಿಕ್ರಿಯೆ ನೀಡಿದ ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಅಶ್ವತ್ಥಮ್ಮ, ಇಲಾಖೆ ಮಾರ್ಗಸೂಚಿ ಹಾಗೂ ಮಾನದಂಡಗಳ ಆಧಾರದ ಮೇಲೆ ನಾವು ಅಂಗನವಾಡಿ ಸಹಾಯಕಿಯರಿಗೆ ಹಾಗೂ ಕಾರ್ಯಕರ್ತೆಯರ ಸ್ಥಾನಗಳಿಗೆ ಪದೋನ್ನತಿಗೆ ಕ್ರಮ ವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.

Advertisement

ಅಂಗನವಾಡಿ ಕಾರ್ಯಕರ್ತೆಯರಿಗೆ ಪದೋನ್ನತಿ ಕೊಡುವ ಸಂದರ್ಭದಲ್ಲಿ ಅಧಿಕಾರಿಗಳು ಸಂಪೂರ್ಣವಾಗಿ ಮಾನದಂಡಗಳನ್ನು ಸರಿಯಾಗಿ ಪಾಲಿಸದೇ ತಮಗೆ ಬೇಕಾದವರಿಗೆ ಆಧಾರ್‌ ಕಾರ್ಡ್‌ ತಿದ್ದುಪಡಿ ಹಾಗು ವಾಸಸ್ಥಳ ಪ್ರಮಾಣ ಪತ್ರಗಳನ್ನು ತಿದ್ದಿ ಪದೋನ್ನತಿ ಕೊಟ್ಟಿದ್ದಾರೆ. ಜಿಲ್ಲೆಯ ಪೈಕಿ ಚಿಂತಾಮಣಿಯಲ್ಲಿ ಸಾಕಷ್ಟು ಅಕ್ರಮಗಳು ಆಗಿವೆ. ಈ ಬಗ್ಗೆ 7 ಪ್ರಕರಣಗಳಲ್ಲಿ ದಾಖಲೆಗಳು ತಿದ್ದುಪಡಿ ಆಗಿವೆ. ಈ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಈಗಾಗಲೇ ಈ ಕುರಿತು ಮನವಿ ಸಲ್ಲಿಸಿದ್ದೇವೆ. – ಲಕ್ಷ್ಮೀದೇವಮ್ಮ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ

–  ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next