ಬೆಂಗಳೂರು: ಪ್ರತಿ ವರ್ಷದಂತೆ ಈ ವರ್ಷವೂ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ತನ್ನ ಪ್ರದರ್ಶನ ತೋರಲು ವಿಫಲವಾದ ಆರ್ಸಿಬಿ ಈ ಬಾರಿಯೂ ತನ್ನ ಕಪ್ ಗೆಲ್ಲುವ ಕನಸನ್ನು ಭಗ್ನಗೊಳಿಸಿದೆ. ಪ್ಲೇಆಫ್ಗೆ ಒಂದೇ ಮೆಟ್ಟಿಲು ಎಂಬಂತಿದ್ದ ಪಂದ್ಯದಲ್ಲಿ ಆರ್ಸಿಬಿ ಎಡವಿದರೂ ಈ ಪಂದ್ಯಾಕೂಟದ ಆರಂಭದಿಂದಲೂ ತನ್ನ ನಿರೀಕ್ಷಿತ ಮಟ್ಟದ ಆಟವನ್ನು ಪ್ರದರ್ಶಿಸುವಲ್ಲಿ ವಿಫಲವಾಗಿತ್ತು.
ಆರ್ಸಿಬಿ ಒಂದು ತಂಡವಾಗಿ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಿಲ್ಲವಾದರೂ ಆರ್ಸಿಬಿ ತಂಡದ ಬ್ಯಾಟ್ಸ್ಮ್ಯಾನ್ಗಳ ಪೈಕಿ ಪ್ರಚಂಡ ಫಾರ್ಮ್ನಲ್ಲಿದ್ದ ನಾಯಕ ಫಾಫ್, ಕೊಹ್ಲಿ ಮತ್ತು ಮ್ಯಾಕ್ಸಿ ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡುವ ಮೂಲಕ ಈ ಬಾರಿಯಾದರೂ ತಂಡ ಟ್ರೋಫಿ ಗೆಲ್ಲುವ ಕನಸು ಅಭಿಮಾನಿಗಳಲ್ಲಿ ಗರಿಗೆದರುವಂತೆ ಮಾಡಿದ್ದರು. ಬೌಲಿಂಗ್ ವಿಭಾಗದಲ್ಲಿ ಯಶಸ್ವಿ ಎನಿಸಿದ್ದು ಸಿರಾಜ್ ಮಾತ್ರ.
ಆದರೂ ತಂಡದ ಆಟಗಾರರ ಪೈಕಿ ಒಬ್ಬರಾಗಿರುವ ದಿನೇಶ್ ಕಾರ್ತಿಕ್ ಅವರು ಅಭಿಮಾನಿಗಳಿಗೆ ಭಾವನಾತ್ಮಕ ಪತ್ರವೊಂದನ್ನು ಬರೆದಿದ್ದಾರೆ. ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಅತ್ಯಂತ ನಿರಾಶಾದಾಯಕ ಪ್ರದರ್ಶನ ನೀಡಿದ್ದ ಡಿಕೆ ಅಭಿಮಾನಿಗಳಿಗೆ ತನ್ನ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.
ಈ ಋತುವಿನಲ್ಲಿ ಆರ್ಸಿಬಿ ಪರ ಒಟ್ಟು 13 ಪಂದ್ಯಗಳನ್ನಾಡಿರುವ ಡಿಕೆಯ ಬ್ಯಾಟ್ನಿಂದ ಸಿಡಿದಿದ್ದು ಕೇವಲ 140 ರನ್. ಸರಾಸರಿ ಕೇವಲ 11.67. ಮಿಡ್ ಆರ್ಡರ್ನಲ್ಲಿ ಸ್ಪೋಟಕ ಪ್ರದರ್ಶನ ನೀಡುವ ದಿನೇಶ್ ಕಾರ್ತಿಕ್ ಅವರ ಸತತ ವೈಫಲ್ಯವೇ ತಂಡಕ್ಕೆ ದೊಡ್ಡ ಹೊಡೆತ ನೀಡಿತ್ತು. ಪ್ಲೇಆಫ್ಗೂ ಹೆಜ್ಜೆಯಿಡದ ಆರ್ಸಿಬಿ ಟೂರ್ನಿಯಿಂದಲೇ ಹೊರಬಿದ್ದ ಬಳಿಕ ದಿನೇಶ್ ಕಾರ್ತಿಕ್ ಈ ಬಗ್ಗೆ ಹೇಳಿಕೊಂಡಿದ್ದಾರೆ.
Related Articles
ಈ ಕುರಿತು ತಮ್ಮ ಟ್ವಿಟರ್ ನಲ್ಲಿ ಬರೆದುಕೊಂಡಿರುವ ದಿನೇಶ್ ಕಾರ್ತಿಕ್ ʻನಮಗೆ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಿಲ್ಲ. ಹೀಗಾಗಿ ಫಲಿತಾಂಶ ನಮ್ಮ ಪರವಾಗಿರಲಿಲ್ಲ. ಕನಸನ್ನು ತಲುಪಲು, ನಾವು ಅದನ್ನು ಮತ್ತಷ್ಟು ಅನುಸರಿಸುವುದನ್ನು ಮುಂದುವರಿಸುತ್ತೇವೆ. ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ನಮ್ಮೊಂದಿಗಿದ್ದ ಎಲ್ಲಾ ಅಭಿಮಾನಿಗಲಿಗೆ ಧನ್ಯವಾದಗಳು. ನೀವೇ ನಮಗೆ ಸಂಪೂರ್ಣ ಜಗತ್ತುʼ ಎಂದು ಬರೆದುಕೊಂಡಿದ್ದಾರೆ.