ಅಬುಧಾಬಿ: ಆರ್ಸಿಬಿ ವಿರುದ್ಧ ಮೆರೆದಾಡಿದ ಕೋಲ್ಕತಾ ನೈಟ್ರೈಡರ್ ಮತ್ತು ಚೆನ್ನೈ ಎದುರು ಮುಗ್ಗರಿಸಿದ ಮುಂಬೈ ಇಂಡಿಯನ್ಸ್ ಗುರುವಾರದ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ. ಮೇಲ್ನೋಟಕ್ಕೆ ಇದೊಂದು ಸಮಬಲರ ಸವಾಲ್ ಆಗಿ ಗೋಚರಿಸುತ್ತಿದೆ. ಆದರೆ ರೋಹಿತ್ ಪುನರಾಗ ಮನದಿಂದ ಮುಂಬೈಗೆ ಹೆಚ್ಚಿನ ಬಲ ಬಂದಿದೆ.
ರೋಹಿತ್ ಆಗಮನ:
ಫಿಟ್ನೆಸ್ ಸಮಸ್ಯೆಯಿಂದಾಗಿ ರೋಹಿತ್ ಶರ್ಮ ಚೆನ್ನೈ ಎದುರಿನ ಪಂದ್ಯದಿಂದ ಹೊರಗುಳಿದಿದ್ದರು. ಕೆಕೆಆರ್ ವಿರುದ್ಧ ತಂಡಕ್ಕೆ ಮರಳಲಿದ್ದು, ನಾಯಕತ್ವ ವಹಿಸಲಿದ್ದಾರೆ. ಕಳೆದ ಋತುವಿನಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಡಿ ಕಾಕ್, ಪೊಲಾರ್ಡ್, ಇಶಾನ್ ಕಿಶನ್, ಸೂರ್ಯಕುಮಾರ್ ಮರಳಿ ಲಯ ಕಂಡುಕೊಂಡರೆ ಮುಂಬೈಯನ್ನು ತಡೆಯುವುದು ಸುಲಭವಲ್ಲ.
ಕಿವೀಸ್ನ ಅವಳಿ ವೇಗಿಗಳಾದ ಟ್ರೆಂಟ್ ಬೌಲ್ಟ್-ಆ್ಯಡಂ ಮಿಲೆ°, ಯಾರ್ಕರ್ ಸ್ಪೆಷಲಿಸ್ಟ್ ಬುಮ್ರಾ, ರಾಹುಲ್ ಚಹರ್ ಮುಂಬೈ ಬೌಲಿಂಗ್ ವಿಭಾಗದ ಹೀರೋಗಳು. ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಪೂರ್ತಿ ಫಿಟ್ ಆಗದ ಕಾರಣ ಈ ಪಂದ್ಯದಲ್ಲಿಯೂ ಕಣಕ್ಕಿಳಿಯುವುದು ಅನುಮಾನ.
ಕೆಕೆಆರ್ ಬಲಿಷ್ಠ ಪಡೆ:
ಬಲಿಷ್ಠ ಆರ್ಸಿಬಿಗೆ ಹೀನಾಯ ಸೋಲುಣಿಸಿ ಆತ್ಮವಿಶ್ವಾಸ ಹೆಚ್ಚಿಸಿಕೊಂಡಿರುವ ಮಾರ್ಗನ್ ಸಾರಥ್ಯದ ಕೆಕೆಆರ್ ಬ್ಯಾಟಿಂಗ್-ಬೌಲಿಂಗ್ ವಿಭಾಗಗಳೆರಡರಲ್ಲೂ ಸಮರ್ಥವಾಗಿದೆ. ಯುವ ಆಟಗಾರರಾದ ಶುಭಮನ್ ಗಿಲ್, ಹೊಸತಾರೆ ವೆಂಕಟೇಶ್ ಅಯ್ಯರ್, ನಿತೀಶ್ ರಾಣಾ, ರಸೆಲ್, ಮಾರ್ಗನ್ ಬ್ಯಾಟಿಂಗ್ ಸರದಿಯ ಬಲಿಷ್ಠರು.
ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ, ರಸೆಲ್, ಸುನೀಲ್ ನಾರಾಯಣ್, ಪ್ರಸಿದ್ಧ್ ಕೃಷ್ಣ ಈಗಾಗಲೇ ಆರ್ಸಿಬಿ ವಿರುದ್ಧ ತಮ್ಮ ಬೌಲಿಂಗ್ ಅಸ್ತ್ರವನ್ನು ಯಶಸ್ವಿಯಾಗಿ ಪ್ರಯೋಗಿಸಿದ್ದಾರೆ. ಇವರ ಮುಂದಿನ ಟಾರ್ಗೆಟ್ ಮುಂಬೈ!