Advertisement

ಐಪಿಎಲ್‌ 12: ವಿವಾದಗಳ ನಡುವೆಯೂ ಸಂಭ್ರಮದ ತೆರೆ…

03:12 AM May 13, 2019 | Sriram |

ನೋವು ಮರೆತ ರಾಹುಲ್‌, ಹಾರ್ದಿಕ್‌
ಐಪಿಎಲ್‌ ಆರಂಭಕ್ಕೂ ಮುನ್ನ ಹಾರ್ದಿಕ್‌ ಪಾಂಡ್ಯ ಹಾಗೂ ಕೆ.ಎಲ್‌. ರಾಹುಲ್‌ ಭಾರೀ ಅವಮಾನಕ್ಕೆ ಸಿಲುಕಿದ್ದರು. ಟೀವಿ ಶೋನಲ್ಲಿ ಮಹಿಳೆಯರ ಬಗ್ಗೆ ಅಸಭ್ಯ ಹೇಳಿಕೆ ನೀಡಿ ನಿಷೇಧಕ್ಕೊಳಗಾಗಿದ್ದರು. ಐಪಿಎಲ್‌ನಲ್ಲಿ ಇಬ್ಬರೂ ಆಡಿದ ರೀತಿ ಎಲ್ಲವನ್ನೂ ಮರೆಸಿತು. ಪಂಜಾಬ್‌ ಪರ ಆಡಿದ ರಾಹುಲ್‌ 14 ಪಂದ್ಯಗಳಲ್ಲಿ 593 ರನ್‌ ಗಳಿಸಿ ಮೆರೆದರು. ಮುಂಬೈ ಪರ ಆಡಿದ ಹಾರ್ದಿಕ್‌ ಬೌಲಿಂಗ್‌, ಬ್ಯಾಟಿಂಗ್‌ ಎರಡರಲ್ಲೂ ಅದ್ಭುತ ಸಾಧನೆ ಮಾಡಿದರು.

Advertisement

ನಿಷೇಧಮುಕ್ತ ವಾರ್ನರ್‌, ಸ್ಮಿತ್‌
ಸಮಕಾಲೀನ ಕ್ರಿಕೆಟ್‌ನ ಶ್ರೇಷ್ಠ ಆಟಗಾರರಲ್ಲಿ ಒಬ್ಬರಾಗಿರುವ ಆಸ್ಟ್ರೇಲಿಯದ ಡೇವಿಡ್‌ ವಾರ್ನರ್‌, ಸ್ಟೀವ್‌ ಸ್ಮಿತ್‌ ಕಳೆದ ವರ್ಷ ಚೆಂಡು ವಿರೂಪಗೊಳಿಸಿ ಒಂದು ವರ್ಷ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿಷೇಧಕ್ಕೊಳಗಾಗಿದ್ದರು. ಐಪಿಎಲ್‌ ಆಡುತ್ತಿರುವಾಗ ಅವರ ನಿಷೇಧವೂ ಮುಗಿಯಿತು. ಇಬ್ಬರೂ ಅದ್ಭುತವಾಗಿ ಆಡಿ ಮತ್ತೆ ಆಸ್ಟ್ರೇಲಿಯ ತಂಡಕ್ಕೆ ವಾಪಸಾದರು.

ಮಿಂಚಿದ
ಕರ್ನಾಟಕದ ತಾರೆಗಳು
ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಸ್ಥಾನ ಸಿಗಲಿಲ್ಲವಾದರೂ ರಾಜ್ಯದ ಕ್ರಿಕೆಟಿಗರ ಬೇರೆ ಬೇರೆ ತಂಡಗಳಲ್ಲಿ ಆಡಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಬಲ ಸಂದೇಶ ರವಾನಿಸಿದರು. ಪಂಜಾಬ್‌ ಪರ ಕೆ.ಎಲ್‌. ರಾಹುಲ್‌ 593, ಮಾಯಾಂಕ್‌ ಅಗರ್ವಾಲ್‌ 332 ರನ್‌ ಗಳಿಸಿದರು. ಮನೀಷ್‌ ಪಾಂಡೆ ಹೈದರಾಬಾದ್‌ ಪರ 344 , ರಾಬಿನ್‌ ಉತ್ತಪ್ಪ ಕೋಲ್ಕತಾ ಪರ 282 ರನ್‌ ಗಳಿಸಿದರು. ರಾಜಸ್ಥಾನ್‌ ಪರ ಬೌಲಿಂಗ್‌ ಮಾಡಿದ ಶ್ರೇಯಸ್‌ ಗೋಪಾಲ್‌ 20 ವಿಕೆಟ್‌ ಪಡೆದು ಐಪಿಎಲ್‌ನ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರೆನಿಸಿಕೊಂಡರು.

ಐಪಿಎಲ್‌ ಸಂದಿಗ್ಧಗಳು
1 ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೇ ಸ್ಥಾನವಿಲ್ಲದ ಪರಿಸ್ಥಿತಿ. ದೇವದತ್‌ ಪಡಿಕ್ಕಲ್‌ ಎಂಬ ಏಕೈಕ ಆಟಗಾರನನ್ನು ಸೇರಿಸಿಕೊಂಡರೂ ಕೂಟದಲ್ಲಿ ಒಮ್ಮೆಯೂ ಅವರಿಗೆ ಅವಕಾಶ ಸಿಗಲಿಲ್ಲ. ಐಪಿಎಲ್‌ ನಿಯಮಗಳ ಪ್ರಕಾರ ಇದು ಸರಿ. ಆದರೆ ಕರ್ನಾಟಕದ ಜನತೆಯ ಭಾವನೆಗಳು ಇದನ್ನು ಸ್ವೀಕರಿಸಲಿಲ್ಲ.
2 ಈ ಬಾರಿಯಾದರೂ ಬೆಂಗಳೂರು ಕಿರೀಟ ಗೆಲ್ಲುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತು. ಆದರೆ ಮತ್ತೆ ಕಳಪೆಯಾಟವಾಡಿ ಲೀಗ್‌ನಲ್ಲೇ ಹೊರಹೋಯಿತು. ತಂಡದಲ್ಲಿ ಬರೀ ದಿಗ್ಗಜರೇ ಇದ್ದರೂ ಯಾವ ಕಾರಣಕ್ಕೆ ಸೋಲುತ್ತಿದ್ದಾರೆ ಎಂಬುದೇ ಇನ್ನೂ ಅರ್ಥವಾಗಿಲ್ಲ.
3 ಡೆಲ್ಲಿ ಡೇರ್‌ ಡೆವಿಲ್ಸ್‌ ತಂಡ “ಡೆಲ್ಲಿ ಕ್ಯಾಪಿಟಲ್ಸ್‌’ ಎಂದು ಹೆಸರು ಬದಲಾಯಿಸಿಕೊಂಡ ಅನಂತರ ಅದರ ಪ್ರದರ್ಶನವೇನೋ ಬದಲಾಯಿತು. ಲೀಗ್‌ ಹಂತದಲ್ಲಿ ಅಮೋಘವಾಗಿ ಆಡಿ 9 ಪಂದ್ಯ ಗೆದ್ದು, ಚೆನ್ನೈ, ಮುಂಬೈ ಜತೆಗೆ ಸರಿಸಮನಾಯಿತು. ಆದರೆ ಪ್ಲೇ ಆಫ್ನಲ್ಲಿ ಹೀನಾಯವಾಗಿ ಆಡಿ ಮುಗ್ಗರಿಸಿತು.
4ಕೂಟ ಮುಕ್ತಾಯದ ಹಂತಕ್ಕೆ ಬರುತ್ತಿದ್ದಂತೆ ವಿದೇಶೀ ದಿಗ್ಗಜರು ಒಬ್ಬೊಬ್ಬರಾಗಿ ತವರಿಗೆ ಹಿಂದಿರುಗಿದರು. ಅಲ್ಲಿಯವರೆಗೆ ಪ್ರಬಲವಾಗಿದ್ದ ಹೈದರಾಬಾದ್‌, ಡೆಲ್ಲಿ ಇದ್ದಕ್ಕಿದ್ದಂತೆ ಕುಸಿದು ಹೋದವು. ಪ್ರಶಸ್ತಿ ಗೆಲ್ಲಬಲ್ಲ ತಂಡ ಹತಾಶವಾಗಿ ಕೈಚೆಲ್ಲುವುದನ್ನು ಅನಿವಾರ್ಯವಾಗಿ ಅಭಿಮಾನಿಗಳು ಒಪ್ಪಿಕೊಳ್ಳಬೇಕಾಯಿತು.

Advertisement

Udayavani is now on Telegram. Click here to join our channel and stay updated with the latest news.

Next