Advertisement

ಮಹಿಳಾ ಐಪಿಎಲ್‌ ಆರಂಭ ಆಶಾದಾಯಕ ಬೆಳವಣಿಗೆ

10:51 PM Jan 25, 2023 | Team Udayavani |

“ಮಹಿಳಾ ಐಪಿಎಲ್‌ ಆರಂಭಿಸುವುದು ಕ್ರಿಕೆಟ್‌ನ ಅಭಿವೃದ್ಧಿಯ ದೃಷ್ಟಿಯಲ್ಲಿ ಅತ್ಯುತ್ತಮ ಬೆಳವಣಿಗೆ. ಎಲ್ಲವೂ ವಾಣಿಜ್ಯೀಕರಣದತ್ತ ಸಾಗುವಾಗ ಮಹಿಳಾ ಕ್ರಿಕೆಟ್‌ ಕೂಡ ಒಂದು ಉತ್ಪನ್ನವಾಗಿ ಮಾರುಕಟ್ಟೆಗೆ ತೆರೆದುಕೊಂಡಿರುವುದು ಅತೀ ಮಹತ್ವದ್ದು’ ಎಂಬುದು ಭಾರತೀಯ ಮಹಿಳಾ ಕ್ರಿಕೆಟ್‌ ತಂಡದ ಮಾಜಿ ನಾಯಕಿ, ಮೂಲತಃ ಮಂಗಳೂರಿನವರಾದ ಮಮತಾ ಮಾಬೆನ್‌ ಅಭಿಮತ.

Advertisement

1993ರ ವಿಶ್ವಕಪ್‌ನಲ್ಲಿ ಮಹಿಳಾ ತಂಡವನ್ನು ಪ್ರತಿನಿಧಿಸಿದ್ದ ಮಮತಾ ಮಾಬೆನ್‌, 1993ರಿಂದ 2004ರ ನಡುವೆ 4 ಟೆಸ್ಟ್‌, 40 ಏಕದಿನ ಪಂದ್ಯ ಗಳನ್ನು ಆಡಿದ್ದಾರೆ. 2003-04ರಲ್ಲಿ ತಂಡದ ನಾಯಕಿಯಾದರು. ನಿವೃತ್ತಿಯ ಬಳಿಕ ಬಾಂಗ್ಲಾದೇಶ ಮತ್ತು ಚೀನ ಮಹಿಳಾ ಕ್ರಿಕೆಟ್‌ ತಂಡಗಳ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದಾರೆ. ಮಂಗಳೂರಿನ ಬಲ್ಮಠದಲ್ಲಿರುವ ತವರು ಮನೆಗೆ ಭೇಟಿ ನೀಡಿದ್ದ ಅವರು “ಉದಯವಾಣಿ’ ಜತೆ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು.

ಮಹಿಳಾ ಐಪಿಎಲ್‌ ಇಂದಿನ ಅಗತ್ಯ
“ಇಂದು ಕ್ರೀಡೆಗಳು ಮಾರುಕಟ್ಟೆಯಲ್ಲಿ ಉತ್ಪನ್ನಗಳಾಗಿ ಮಹತ್ವ ಪಡೆಯುತ್ತಿವೆ. ಮಹಿಳಾ ಕ್ರಿಕೆಟಿಗರಿಗೆ ಈ ಅವಕಾಶ ತಡವಾಗಿ ಯಾದರೂ ಸಿಗುತ್ತಿರುವುದು ಕ್ರೀಡೆಯ ಬೆಳ ವಣಿಗೆಯಲ್ಲಿ ಆಶಾದಾಯಕ ಬೆಳವಣಿಗೆ. ಮಹಿಳೆಯರ ಕ್ರೀಡೆಗಳಿಗೆ ಸಂಬಂಧಿಸಿ ಬಾಸ್ಕೆಟ್‌ ಬಾಲ್‌ ಬಳಿಕ ದ್ವಿತೀಯ ಶ್ರೀಮಂತ ಲೀಗ್‌ ಆಗಿ ಮಹಿಳಾ ಐಪಿಎಲ್‌ ಗುರುತಿಸಿಕೊಳ್ಳಲಿದೆ. ಇದು ಇಂದಿನ ಅಗತ್ಯವೂ ಆಗಿದೆ’.

ನಂ.1 ತಂಡವಾಗುವ ಭರವಸೆ
“ಭಾರತೀಯ ಮಹಿಳಾ ಕ್ರಿಕೆಟ್‌ ತಂಡ ಸದ್ಯ ವಿಶ್ವ ರ್‍ಯಾಂಕಿಂಗ್‌ನಲ್ಲಿ 4ನೇ ಸ್ಥಾನ ದಲ್ಲಿದೆ. ನಂ.1 ಆಗುವ ಎಲ್ಲ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲೇ ಆ ಸ್ಥಾನದಲ್ಲಿರುವ ಭರವಸೆ ನನಗಿದೆ’.

“ನಾವು ಆಡುತ್ತಿದ್ದ ಕಾಲದಲ್ಲಿದ್ದ ಮೂಲಭೂತ ಸೌಲಭ್ಯಗಳನ್ನು ಹೋಲಿಸಿದರೆ ಈಗ ಕ್ರಿಕೆಟಿಗರಿಗೆ ಸಿಗುತ್ತಿರುವ ಸೌಲಭ್ಯಗಳ ಪ್ರಮಾಣ ಅಗಾಧ. ಹಿಂದೆ ಟಿ20 ಇರಲಿಲ್ಲ. ಈಗಿನಂತೆ ಕ್ರಿಕೆಟಿಗರಿಗೆ ಎಕ್ಸ್‌ಪೋಶರ್‌ ಸಿಗುತ್ತಿರಲಿಲ್ಲ. ಈಗ ಎಲ್ಲವೂ ಬದ ಲಾಗಿದೆ. ಅತ್ಯುತ್ತಮ ತರಬೇತುದಾರೂ ಸಿಗುತ್ತಿದ್ದಾರೆ’.

Advertisement

ಗ್ರಾಮಾಂತರದಲ್ಲೂ ಬೆಳೆಯಬೇಕು
“ಕ್ರಿಕೆಟ್‌ ಗ್ರಾಮಾಂತರ ಮಟ್ಟದಲ್ಲಿಯೂ ಹೆಚ್ಚಿನ ಉತ್ತೇಜನ ಪಡೆದುಕೊಳ್ಳಬೇಕು. ನಗರ ಕೇಂದ್ರೀಕೃತವಾಗಿ ಕ್ರಿಕೆಟ್‌ ಬಹಳಷ್ಟು ಬೆಳೆದಿದೆ. ಗ್ರಾಮೀಣ ಮಟ್ಟದಲ್ಲಿ ಸೂಕ್ತ ತರಬೇತಿ, ಮಾರ್ಗದರ್ಶನ ದೊರಕಿದಾಗ ಇನ್ನಷ್ಟು ಮಹಿಳಾ ಕ್ರಿಕೆಟ್‌ ಪ್ರತಿಭೆಗಳು ಬೆಳಕಿಗೆ ಬರಲು ಸಾಧ್ಯವಾಗಲಿದೆ. ಈ ಕಾರ್ಯ ಆಗಬೇಕಾಗಿದೆ’.

ಕ್ರೀಡೆಯಿಂದ
ಮಾನಸಿಕ ದೃಢತೆ
“ಈಗಿನ ಅಂಕ ಗಳಿಕೆಯ ಜಿದ್ದಿನಲ್ಲಿ ವಿಫ‌ಲರಾಗಿ ಜೀವನದಲ್ಲಿ ಜಿಗುಪ್ಸೆಗೊಂಡು ಯುವಜನರು ಆತ್ಮಹತ್ಯೆಯ ಹಾದಿ ತುಳಿಯುತ್ತಿರುವುದು ಹೆಚ್ಚುತ್ತಿದೆ. ಆದರೆ ಕ್ರೀಡೆಗಳಲ್ಲಿ ತೊಡಗಿಕೊಂಡವರಲ್ಲಿ ಇಂತಹ ಪರಿಸ್ಥಿತಿ ಸೃಷ್ಟಿಯಾಗದು. ಕ್ರೀಡೆ ನಮ್ಮಲ್ಲಿ ಆತ್ಮವಿಶ್ವಾಸ ಮೂಡಿಸುತ್ತದೆ. ಸವಾಲನ್ನು ಎದುರಿಸಲು ಮಾನಸಿಕ, ದೈಹಿಕ ದೃಢತೆ ಒದಗಿಸಿ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಸೆôರ್ಯ ಬೆಳೆಸುತ್ತದೆ. ಕ್ರೀಡೆಯನ್ನೇ ವೃತ್ತಿಯನ್ನಾಗಿಸಬೇಕೆಂದು ನಾನು ಹೇಳಲಾರೆ. ಆದರೆ ಶಾಲಾ ಹಂತದಲ್ಲಿಯೇ ಮಕ್ಕಳಿಗೆ ಸ್ಪರ್ಧಾತ್ಮಕ ಕ್ರೀಡೆಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಇದಕ್ಕೆ ಪೋಷಕರೂ ಹೆಚ್ಚಿನ ಗಮನ ಹರಿಸಬೇಕು’ ಎನ್ನುವುದು ಮಮತಾ ಮಾಬೆನ್‌ ಅವರ ಸಲಹೆ.

-ಸತ್ಯಾ ಕೆ.

Advertisement

Udayavani is now on Telegram. Click here to join our channel and stay updated with the latest news.

Next