Advertisement

ಕಮಲದ ಭದ್ರಕೋಟೆ ಧಾರವಾಡದಲ್ಲಿ “ಹಸ್ತ”ಕ್ಷೇಪ

08:24 PM May 05, 2023 | Team Udayavani |

ರಾಜ್ಯದಲ್ಲಿ ಬಿಜೆಪಿಯ ಮೂಲ ನೆಲೆ ಜನಸಂಘ. ಅದರ ಮೂಲಬೇರು ಧಾರವಾಡ ಜಿಲ್ಲೆಯ ಹುಬ್ಬಳ್ಳಿ. ಈ ನೆಲದಲ್ಲಿಯೇ ಆರಂಭಗೊಂಡ ಬಿಜೆಪಿ ಜಯಘೋಷ ದಕ್ಷಿಣ ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆ ಆಗುವವರೆಗೂ ಮುನ್ನಡೆಯಿತು. ಬಿಜೆಪಿ ಭದ್ರಕೋಟೆ ಎನಿಸಿಕೊಂಡ ಧಾರವಾಡ ಜಿಲ್ಲೆಯ ಸೆಂಟ್ರಲ್‌ ಕ್ಷೇತ್ರ ರಾಜ್ಯದ ಪ್ರತಿಷ್ಠಿತ ಚುನಾವಣಾ ಅಖಾಡವಾಗಿ ಹೊರಹೊಮ್ಮಿದೆ. ಮಾಜಿ ಸಿಎಂ, ಲಿಂಗಾಯತ ಮುಖಂಡ ಜಗದೀಶ ಶೆಟ್ಟರ್‌ ಕಾಂಗ್ರೆಸ್‌ ಸೇರಿದ್ದು, ಇದೀಗ ಕಮಲದ ಭದ್ರಕೋಟೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗಿದೆ. ಇದು ಜಿಲ್ಲೆಯ ಇತರ ಕ್ಷೇತ್ರಗಳ ಮೇಲೆ ಎಷ್ಟು ಪ್ರಭಾವ ಬೀರುತ್ತದೆ ಎಂಬುದು ಮೇ 13ರಂದು ಗೊತ್ತಾಗಲಿದೆ.

Advertisement

ಹು-ಧಾ ಸೆಂಟ್ರಲ್‌
ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದಲ್ಲಿ ಮಾಜಿ ಸಿಎಂ ಜಗದೀಶ ಶೆಟ್ಟರ್‌ ಬಿಜೆಪಿಗೆ ಠಕ್ಕರ್‌ ಕೊಟ್ಟಿದ್ದು, ರಾಜ್ಯಾದ್ಯಂತ ಸಂಚಲನ ಮೂಡಿಸಿದೆ. ಅದರಲ್ಲೂ ಬಿಜೆಪಿಯ ಭದ್ರಕೋಟೆ, ಜನಸಂಘದ ಮೂಲ ನೆಲದಲ್ಲಿಯೇ ಕಾಂಗ್ರೆಸ್‌ ಹಸ್ತಕ್ಷೇಪ ಮಾಡಿದ್ದು ಸಹಜವಾಗಿಯೇ ಜಿಲ್ಲೆಯ ಮತ್ತು ಅಕ್ಕಪಕ್ಕದ ಜಿಲ್ಲೆಯ ಕ್ಷೇತ್ರಗಳ ಮೇಲೂ ಪ್ರಭಾವ ಬೀರುವಂತಾಗಿದೆ. ಶ್ರಮಜೀವಿ ಮತ್ತು ಸಂಘಟನಾ ಚತುರ ಮಹೇಶ ಟೆಂಗಿನಕಾಯಿ ಕೂಡ ಶೆಟ್ಟರ್‌ಗೆ ಠಕ್ಕರ್‌ ಕೊಡುವಷ್ಟು ಶಕ್ತಿವಂತ ಆಗಿದ್ದು, ಈ ಕ್ಷೇತ್ರದ ರಣಕಣದ ಧಗೆ ದೆಹಲಿ ಅಂಗಳಕ್ಕಷ್ಟೇ ಅಲ್ಲ, ರಾಜ್ಯ ಮತ್ತು ರಾಷ್ಟ್ರೀಯ ಮಾಧ್ಯಮಗಳಲ್ಲಿ ಹರಿದಾಡುವಂತೆ ಮಾಡಿದೆ. ಇದು ಸೈದ್ಧಾಂತಿಕ ಅಳಿವು-ಉಳಿವಿನ ಹೋರಾಟವೆಂದೆ ಬಿಂಬಿತವಾಗಿದ್ದು ಕೈ-ಕಮಲ ಪಡೆಗಳು ವಿಪರೀತವಾಗಿ ತಮ್ಮ ಶ್ರಮವನ್ನು ಈ ಕ್ಷೇತ್ರಕ್ಕೆ ಹಾಕುತ್ತಿವೆ. ಇಲ್ಲಿ ಶೆಟ್ಟರ್‌ ವರ್ಸಸ್‌ ಕಟ್ಟರ್‌ ಬಿಜೆಪಿಗರ ಮಧ್ಯೆ ಭಾರಿ ಪೈಪೋಟಿ ಏರ್ಪಟ್ಟಿದೆ. ಇತರರು ಇಲ್ಲಿ ಸದ್ಯಕ್ಕೆ ನಗಣ್ಯ.

ಧಾರವಾಡ ಗ್ರಾಮೀಣ
ಲಿಂಗಾಯತ ನಾಯ ಕ ವಿನಯ ಕುಲಕರ್ಣಿ ಈ ಬಾರಿ ಕ್ಷೇತ್ರದ ಹೊರಗಡೆ ಇದ್ದುಕೊಂಡೇ ರಣಕಣದಲ್ಲಿ ತೊಡೆ ತಟ್ಟಿದ್ದಾರೆ. ಬಿಜೆಪಿಯಿಂದ ಹಾಲಿ ಶಾಸಕ ಪಾಳೆಗಾರಿಕೆ ವಂಶದ ಅಮೃತ ದೇಸಾಯಿ ಕಮಲ ಹಿಡಿದು ಕಣಕ್ಕಿಳಿದಿದ್ದಾ ರೆ. ಯೋಗೀಶಗೌಡ ಕೊಲೆ ಪ್ರಕರಣವನ್ನಿಟ್ಟುಕೊಂಡು ಕಳೆದ ಬಾರಿ ಬಿಜೆಪಿ ಇಲ್ಲಿ ಜಯ ಗಳಿಸಿತ್ತು. ಆದರೆ ಈ ಬಾರಿ ಅಮೃತ ದೇಸಾಯಿ ವಿರುದ್ಧ ಜನ ಮುನಿಸಿಕೊಂಡಂತೆ ಕಾಣಿಸುತ್ತಿದ್ದು, ಕ್ಷೇತ್ರದ ಹೊರಗಡೆ ಬಿಡಾರ ಹೂಡಿರುವ ವಿನಯ್‌, ಅಲ್ಲಿಂದಲೇ ಕ್ಷೇತ್ರದಲ್ಲಿ ಮನೆಗೊಬ್ಬ ವಿನಯ ಕುಲಕರ್ಣಿ ಕಣದಲ್ಲಿ ಕೆಲಸ ಮಾಡುವಂತೆ ಕರೆ ನೀಡಿದ್ದು, ಅನುಕಂಪವಾಗಿ ಪರಿವರ್ತನೆಯಾಗಿದೆ. ತವಣಪ್ಪ ಅಷ್ಟಗಿ ಮರಳಿ ಕಾಂಗ್ರೆಸ್‌ ಸೇರಿದ್ದು, ಜಗದೀಶ ಶೆಟ್ಟರ್‌ ಕೈ ಕುಲುಕಿದ್ದು ಕೂಡ ವಿನಯ್‌ಗೆ ಈ ಬಾರಿ ಮತ್ತಷ್ಟು ಬಲ ಬಂದಂತಾಗಿದೆ. ಒಂದು ಲಕ್ಷ ಲಿಂಗಾಯತ ಮತದಾರರಿದ್ದು, ಪಂಚಮಸಾಲಿಗಳೇ ಅರ್ಧದಷ್ಟಿದ್ದಾರೆ. ಇಲ್ಲಿ ಮಂಜುನಾಥ ಹಗೆದಾರ ತೆನೆಹೊತ್ತು ಕಣದಲ್ಲಿದ್ದು, ಆಟಕ್ಕುಂಟು ಲೆಕ್ಕಕ್ಕಿಲ್ಲದಂತೆ ಇದ್ದಾರೆ. ಹೀಗಾಗಿ ಧಾರವಾಡ ಗ್ರಾಮೀಣದಲ್ಲಿ ಪಾಳೆಗಾರರ ಮಧ್ಯೆ ಫೈಟ್‌ ಜೋರಾಗಿಯೇ ನಡೆಯುತ್ತಿದೆ.

ನವಲಗುಂದ
ಕಂಬಳಿ ಹಾಸಿ ಕುಳಿತುಕೊಳ್ಳುತ್ತಿದ್ದವರ “ಕೈ’ ಬಲಪಡಿಸಿದ ಭದ್ರಕೋಟೆಯಾಗಿದ್ದ ನವಲಗುಂದ ಕ್ಷೇತ್ರದಲ್ಲಿ ಕಮಲ ಅರಳಿದ್ದು ಒಂದು ವಿಸ್ಮಯದ ಕತೆ. ಆದರೆ ಹಾಲಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಕಮಲ ಹಿಡಿದು ಕಣಕ್ಕಿಳಿದರೆ, ಮಾಜಿ ಶಾಸಕ ಎನ್‌.ಎಚ್‌.ಕೋನರಡ್ಡಿ ತೆನೆಯ ಹೊರೆ ಕೆಳಗಿಳಿಸಿ ಕೈ ಹಿಡಿದು ಟಿಕೆಟ್‌ ಪಡೆದಿದ್ದಾರೆ. ಇಲ್ಲಿ ವಿನೋದ ಅಸೂಟಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯಲು ಸಜ್ಜಾದಾಗ ಬಿಜೆಪಿ ಕಿಲಕಿಲ ನಕ್ಕಿತ್ತು. ಆದರೆ ಅಸೂಟಿಗೆ ಟಗರು (ಸಿದ್ದರಾಮಯ್ಯ) ಗುಟರ್‌ ಹಾಕಿದ್ದಕ್ಕೆ ಕಣದಿಂದ ಕಾಲು ಕಿತ್ತರು. ಅಲ್ಲದೇ ಮಾಜಿ ಸಚಿವ ಕೆ.ಎನ್‌.ಗಡ್ಡಿ ಕುರುಬ ಸಮಾಜದ ಮುಖಂಡರೂ ಆಗಿದ್ದು, ಜೆಡಿಎಸ್‌ನ ತೆನೆ ಹೊತ್ತು ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಹೀಗಾಗಿ ಕೋನರಡ್ಡಿ ತ್ರಿಕೋನ ಸ್ಪರ್ಧೆಯ ಜಾಲದಲ್ಲಿ ಸಿಲುಕಿದ್ದು, ಬಿಜೆಪಿ ಅಭಿವೃದ್ಧಿ ಜಪ ಮಾಡಿದರೆ, ಕೋನರಡ್ಡಿ ಮಹದಾಯಿ ಅನ್ಯಾಯವನ್ನು ಸಾರಿ ಹೇಳುತ್ತಿದ್ದಾರೆ.

ಕಲಘಟಗಿ
ಬಣ್ಣದ ತೊಟ್ಟಿಲು ಸಿದ್ಧಗೊಳ್ಳುವ ಕಲಘಟಗಿಯಲ್ಲಿ ಈ ಬಾರಿ ಗಣಿಧಣಿ ಸಂತೋಷ ಲಾಡ್‌ ಮತ್ತೂಮ್ಮೆ ಅಬ್ಬರಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸೋಲುಂಡಿದ್ದ ಅವರು ಸಂಘಟನಾತ್ಮಕವಾಗಿ ಮತ್ತೆ ಒಂದೊಂದೇ ಮೆಟ್ಟಿಲು ಏರಿ ಇದೀಗ ಸದ್ದು ಮಾಡುತ್ತಿದ್ದಾರೆ. ಕೈ ಅಭ್ಯರ್ಥಿಯಾಗುತ್ತೇನೆ ಎಂದು ಕ್ಷೇತ್ರದಲ್ಲಿ ಸಾವಿರಾರು ಕುಕ್ಕರ್‌ ಹಂಚಿದ್ದ ನಾಗರಾಜ್‌ ಛಬ್ಬಿ ಅವರಿಗೆ ಠಕ್ಕರ್‌ ಕೊಟ್ಟಿದ್ದ ಸಂತೋಷ್‌ ಲಾಡ್‌ ಕೈ ಟಿಕೆಟ್‌ ತಾವೇ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ರಾತ್ರೋರಾತ್ರಿ ದೆಹಲಿ ವಿಮಾನ ಏರಿದ ಛಬ್ಬಿ ಹಠಕ್ಕೆ ಬಿದ್ದು ಕಮಲದ ಟಿಕೆಟ್‌ನೊಂದಿಗೆ ಕಣಕ್ಕಿಳಿದಿದ್ದಾರೆ. ಇಬ್ಬರ ಮಧ್ಯೆಯೂ ಕದನ ಜೋರಾಗಿಯೇ ಇದೆ. ಕ್ಷೇತ್ರದಲ್ಲಿ 85 ಸಾವಿರಕ್ಕೂ ಅಧಿಕ ಲಿಂಗಾಯತ ಮತಗಳಿದ್ದು, ಬಿಜೆಪಿ ಕಳೆದ ಬಾರಿಯಂತೆ ಇವುಗಳ ಕ್ರೋಡೀಕರಣಕ್ಕೆ ಒತ್ತು ನೀಡುತ್ತಿದೆ. ಆದರೆ ಮರಾಠಾ ಸಮುದಾಯದ ಲಾಡ್‌ ಎಲ್ಲಾ ಸಮುದಾಯಗಳೊಂದಿಗೆ ಉತ್ತಮ ಬಾಂಧವ್ಯ ಹೊಂದುವ ಮೂಲಕ ಮುಂದಡಿ ಇಟ್ಟಿದ್ದು, ಇಬ್ಬರೂ ರಣಕಣದಲ್ಲಿ ಜೋರು ಸೆಣಸಾಟ ನಡೆಸುತ್ತಿದ್ದಾರೆ.

Advertisement

ಕುಂದಗೋಳ
ಕುಸುಮಾವತಿ ಶಿವಳ್ಳಿ ಕಾಂಗ್ರೆಸ್‌ನಿಂದ ಮತ್ತೂಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಬಿಜೆಪಿಗೆ ಇಲ್ಲಿ ಬಂಡಾಯದ ಬಿಸಿ ತಟ್ಟಿದೆ. ಮಾಜಿ ಶಾಸಕ ಎಸ್‌.ಐ. ಚಿಕ್ಕನಗೌಡರ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಬಿಜೆಪಿಯ ಹೊಸಮುಖ ಎಂ.ಆರ್‌.ಪಾಟೀಲರಿಗೆ ಕೊಂಚ ಸಂಕಷ್ಟ ತಂದೊಡ್ಡಬಹುದು. ಒಂದು ವೇಳೆ ಈ ಇಬ್ಬರು ಸಮಬಲದ ಕಾದಾಟ ಮಾಡಿದರೆ ಮತ್ತೆ ಇಲ್ಲಿ ಕೈ ಮೇಲುಗೈ ಸಾಧಿಸುವ ಸಾಧ್ಯತೆ ಇದೆ. ಕ್ಷೇತ್ರದಲ್ಲಿ ಲಿಂಗಾಯತರೇ ಅಧಿಕ ಸಂಖ್ಯೆಯಲ್ಲಿದ್ದರೂ ಕುರುಬರು ನಿರ್ಣಾಯಕ ಸ್ಥಾನದಲ್ಲಿದ್ದಾರೆ. ಕುಸುಮಾವತಿ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದು, ರಣಕಣದಲ್ಲಿ ಅವರು ಕೂಡ ಜೋರು ಸದ್ದು ಮಾಡುತ್ತಿದ್ದಾರೆ.

ಹು-ಧಾ ಪಶ್ಚಿಮ
ವಿದ್ಯಾಕಾಶಿ, ಪ್ರಜ್ಞಾವಂತರು, ಸಾಹಿತಿಗಳು, ಸಾಂಸ್ಕೃತಿಕ ದಿಗ್ಗಜರು ಇರುವ ಈ ಕ್ಷೇತ್ರದಲ್ಲಿ ಸತತ ಕಮಲ ಅರಳುತ್ತಲೇ ಬಂದಿದ್ದು, ಈ ಬಾರಿಯೂ ಕಮಲದ್ದೇ ಹವಾ ಜೋರಾಗಿ ಸಾಗಿದೆ. ಶಾಸಕ ಅರವಿಂದ ಬೆಲ್ಲದ ಮಾಡಿದ ಅಭಿವೃದ್ಧಿ ಕಾರ್ಯಗಳು ಹೆಚ್ಚು ಪ್ರಚಾರದಲ್ಲಿದ್ದು, ಬಿಜೆಪಿಯ ಸಂಘಟನಾ ಬಲ ಬೆಲ್ಲದ ಬೆನ್ನಿಗಿದೆ. ಇತ್ತ ಕೈನಿಂದ ಮೋಹನ ಲಿಂಬಿಕಾಯಿ ಸ್ಪರ್ಧೆ ಮಾಡುತ್ತಾರೆ ಎಂಬ ಮಾತುಗಳು ಕೇಳಿ ಬರುತ್ತಿದ್ದಂತೆ ಬಂಡಾಯವೆದ್ದಿದ್ದ ಕಾಂಗ್ರೆಸ್‌ನ 10ಕ್ಕೂ ಹೆಚ್ಚು ಮುಖಂಡರು ಚೆಲ್ಲಾಪಿಲ್ಲಿಯಾಗಿದ್ದಾರೆ. ಬ್ರಾಹ್ಮಣ ಸಮುದಾಯದ ದೀಪಕ್‌ ಚಿಂಚೋರೆಗೆ ಕಾಂಗ್ರೆಸ್‌ ಟಿಕೆಟ್‌ ನೀಡಿದ್ದು, ಜೆಡಿಎಸ್‌ನಿಂದ ಗುರುರಾಜ ಹುಣಸಿಮರದ ಕಣದಲ್ಲಿದ್ದಾರೆ. ಇಲ್ಲಿಯೂ 80 ಸಾವಿರಕ್ಕೂ ಅಧಿಕ ಲಿಂಗಾಯತರಿದ್ದು, ಅಲ್ಪಸಂಖ್ಯಾತರು 40 ಸಾವಿರದಷ್ಟಿದ್ದಾರೆ. ಬೆಲ್ಲದ್‌ ಕುಟುಂಬ ಇಲ್ಲಿ 30 ವರ್ಷಗಳಿಗೂ ಅಧಿಕ ಕಾಲ ಆಳ್ವಿಕೆ ಮಾಡಿದೆ.

ಹು-ಧಾ ಪೂರ್ವ(ಮೀಸಲು)
ಇಲ್ಲಿ ಹ್ಯಾಟ್ರಿಕ್‌ ಗೆಲುವಿನ ಕನಸು ಕಾಣುತ್ತಿರುವ ಹಾಲಿ ಶಾಸಕ ಕಾಂಗ್ರೆಸ್‌ ಅಭ್ಯರ್ಥಿ ಪ್ರಸಾದ್‌ ಅಬ್ಬಯ್ಯ, ಈ ಬಾರಿಯೂ ಕಣದಲ್ಲಿದ್ದಾರೆ. ಬಿಜೆಪಿ ಟಿಕೆಟ್‌ ವಂಚಿತ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದು, ಬಿಜೆಪಿಯಿಂದ ಡಾ|ಕ್ರಾಂತಿಕಿರಣ ಅಖಾಡಕ್ಕೆ ಧುಮುಕಿದ್ದಾರೆ. ಮೀಸಲು ಕ್ಷೇತ್ರವಾಗಿರುವ ಇಲ್ಲಿ 80 ಸಾವಿರದಷ್ಟು ಲಿಂಗಾಯತರಿದ್ದಾರೆ. ಇನ್ನುಳಿದಂತೆ ಅಹಿಂದ ಮತಗಳೇ ನಿರ್ಣಾಯಕವಾಗಿವೆ.

~ ಬಸವರಾಜ್‌ ಹೊಂಗಲ್‌

Advertisement

Udayavani is now on Telegram. Click here to join our channel and stay updated with the latest news.

Next